ನನ್ನೂರ ಚರಿತ್ರೆ

ಕೊಳ್ಳೇಗಾಲ ಶರ್ಮ

ನಾನು ಚಿಕ್ಕವನಾಗಿದ್ದಾಗ, ಕೊಳ್ಳೇಗಾಲ ತಾಲೂಕು ಎಂದರೆ ಬಲು ಹಿಂದುಳಿದ ನಾಡು ಎನ್ನುವ ಅನಿಸಿಕೆ ಇತ್ತು. ಸರ್ಕಾರಿ ದಾಖಲೆಗಳಲ್ಲೂ ಅದು ಬಲು ಹಿಂದುಳಿದ, ಅಥವಾ ಅಭಿವೃದ್ದಿ ಆಗದ ತಾಲೂಕು ಎಂದೇ ಇತ್ತು. ನಾನು ಹುಟ್ಟುವುದಕ್ಕೂ ಕೆಲವೇ ವರ್ಷಗಳ ಹಿಂದಷ್ಟೆ ಅಂದರೆ 1956ರಲ್ಲಿ ಕರ್ನಾಟಕಕ್ಕೆ ಸೇರ್ಪಡೆಯಾಗಿತ್ತು. ಅದುವರೆವಿಗೂ ಅದು ತಮಿಳುನಾಡಿನ, ಅಂದರೆ ಅಂದಿನ ಮದರಾಸು ರಾಜ್ಯದ, ಕೊಯಂಬತ್ತೂರು ಜಿಲ್ಲೆಯ ಅಂಗವಾಗಿತ್ತು. ನಾನು ಎರಡನೆಯದೋ, ಮೂರನೆಯದೋ ತರಗತಿಯಲ್ಲಿ ಇದ್ದಾಗ ನನಗೆ ಈ ವಿಷಯ ತಿಳಿದಾಗ ಬೆರಗಾಗಿದ್ದೆ. ತಮಿಳು ನಾಡಿನಿಂದ ಕನ್ನಡ ನಾಡಿಗೆ ಬಂದಿದ್ದೆವು ಎಂಬುದೇ ದೊಡ್ಡ ಖುಷಿಯ ವಿಷಯ ಎನಿಸಿತ್ತು. ಮೊನ್ನೆ ಅದಕ್ಕೂ ಹೆಚ್ಚಿನ ಖುಷಿಯ ವಿಷಯ ತಿಳಿಯಿತು. ಇನ್ನೂ ಖುಷಿಯಾಗಿದೆ. ಆಫ್ರಿಕಾಗೆ ಬಲು ಹತ್ತಿರದಲ್ಲಿ ಇತ್ತಂತೆ ನಮ್ಮ ಕೊಳ್ಳೇಗಾಲ.

ಕಿವಿಗೆ ಹೂವು ಇಡಬೇಡ ಎಂದಿರಾ? ಇಲ್ಲ ಸ್ವಾಮಿ. ಇದು ಸತ್ಯ. ನಾವು ಈಗ ಭಾರತದಲ್ಲಿ ಕರ್ನಾಟಕ ಎನ್ನುವ ರಾಜ್ಯದಲ್ಲಿ, ಪಶ್ಚಿಮ ಘಟ್ಟಗಳ ಒಂದು ಕೊನೆಯಲ್ಲಿ ಕಾಣುವ ಕೊಳ್ಳೇಗಾಲ ಎನ್ನುವ ಸ್ಥಳ ಒಂದಾನೊಂದು ಕಾಲದಲ್ಲಿ ಬೇರೆಯದೇ ಭೂ ಖಂಡಗಳ ಜೊತೆಗೆ ಬೆಸೆದುಕೊಂಡಿತ್ತಂತೆ. ಹೀಗನ್ನುತ್ತದೆ ಭೂವಿಜ್ಞಾನ. ಇದು ಹತ್ತು, ನೂರು ವರ್ಷಗಳ ಚರಿತ್ರೆಯಲ್ಲ. ಕೋಟ್ಯಂತರ ವರ್ಷಗಳ ಚರಿತ್ರೆ. ನಾನು ಈಗ ನನ್ನ ತವರು ಎನ್ನುವ ಕೊಳ್ಳೇಗಾಲ ಎನ್ನುವ ನೆಲ ಆಗ ಎಲ್ಲಿ ಇತ್ತು, ಹೇಗಿತ್ತು ಎನ್ನುವ ಕುತೂಹಲ ಚರಿತ್ರೆಯನ್ನು ಡೈನೊಸಾರ್ ಡಾಟ್‌ ಆರ್ಗ್‌ ಎನ್ನುವ ಜಾಲತಾಣದಲ್ಲಿ ನೋಡಬಹುದು. ಈ ಜಾಲತಾಣದಲ್ಲಿ ಭೂಮಿಯ ವಿಕಾಸದ ಬಗ್ಗೆ ನಮಗೆ ತಿಳಿದಿರುವ ಮಾಹಿತಿಯನ್ನೆಲ್ಲ ಸಂಗ್ರಹಿಸಿ, ಅದಕ್ಕೆ ಅನುಗುಣವಾಗಿ ಭೂಗೋಳದ ಚಿತ್ರ ಕಾಣುವಂತೆ ಮಾಡಿದ್ದಾರೆ. ಅಂದರೆ ಒಂದು ಕೋಟಿ ವರ್ಷಗಳ ಹಿಂದೆ ಭೂಮಿ ಹೇಗಿತ್ತು ಎನ್ನುವ ಚಿತ್ರಣ ದೊರೆಯುತ್ತದೆ. ಆ ಭೂಗೋಳದಲ್ಲಿ ನಮ್ಮೂರನ್ನೂ ಹುಡುಕಬಹುದು. ಅರ್ಥಾತ್‌, ಇಂದು ನಾನು ನನ್ನೂರು ಎಂದು ಕರೆಯುವ ನೆಲ, ಅಂದು ಎಲ್ಲಿತ್ತು ಎನ್ನುವುದು ತಿಳಿಯುತ್ತದೆ.

ನಮ್ಮೂರು ಎಲ್ಲಿತ್ತು ಅಂದರೆ ಏನರ್ಥ ಎಂದಿರಾ? ಈ ಭೂಮಿ ನಾವು ಇಂದು ನೋಡುವ ಹಾಗೆ ಹಿಂದೆ ಇರಲಿಲ್ಲ ಎನ್ನುವುದು ಗೊತ್ತಷ್ಟೆ. ಹಾಗೆಯೇ ಈ ಭೂಮಿಯ ಮೇಲೆ ನಾವು ಇಂದು ಗುರುತಿಸುವ ವಿವಿಧ ಸ್ಥಳಗಳ ಸ್ಥಾನವೂ ಇಂದಿನಂತೆ ಅಂದು ಇರಲಿಲ್ಲ. ಇಂದು ಇರುವಲ್ಲಿಯೇ ಲಕ್ಷ ವರ್ಷಗಳ ನಂತರ ಇರುವುದಿಲ್ಲ. ಏಕೆಂದರೆ ಭೂಮಿಯ ಮೇಲೆ ನಾವು ನೆಲ ಎಂದು ಗುರುತಿಸುವ ಪದರವಿದೆಯಲ್ಲ, ಅದು ಸದಾ ಚಲಿಸುತ್ತಲೇ ಇರುತ್ತದೆ. ಅದರ ಕೆಳಗೆ ಬಲು ಬಿಸಿಯಾದ ದ್ರವವಿದೆ. ಆ ದ್ರವದ ಮೇಲೆ ಹಾಲು ಕೆನೆಗಟ್ಟಿದಾಗ ಇರುವ ಪದರದಂತೆ ಒಂದು ಪದರ ಗಟ್ಟಿಯಾಗಿದೆ. ಆ ಪದರವೇ ನಾವು ತುಳಿದಾಡುವ, ಅಡ್ಡಾಡುವ, ಓಡಾಡುವ ನೆಲ. ಇಂತಹ ಹಲವಾರು ಪದರಗಳು ತೇಲಾಡುತ್ತಿವೆ.ಇವನ್ನೆಲ್ಲ ಭೂಫಲಕಗಳು ಅರ್ಥಾತ್‌ ಟೆಕ್ಟಾನಿಕ್‌ ಪ್ಲೇಟ್‌ ಎಂದು ಭೂವಿಜ್ಞಾನಿಗಳು ಹೆಸರಿಸಿದ್ದಾರೆ. ಈ ಫಲಕಗಳು ಹೀಗೆ ತೇಲುತ್ತಾ, ಕೆನೆಯ ಚೂರುಗಳಂತೆಯೇ ಒಂದಿನ್ನೊಂದನ್ನು ದೂಡುತ್ತಲೋ, ಒಂದಿನ್ನೊಂದರಿಂದ ದೂರ ಸರಿಯುತ್ತಲೋ ಇರುತ್ತವೆ. ಕೆಲವೊಮ್ಮೆ ಒಂದರ ಜೊತೆಗೆ ಇನ್ನೊಂದು ಬೆಸೆದುಕೊಳ್ಳಲೂ ಬಹುದು. ಕೆಲವೊಮ್ಮೆ ಒಂದು ಎರಡಾಗಿ ಬಿರುಕು ಒಡೆಯಲೂ ಬಹುದು.

ನಾವು ಇಂದು ಬರೆಯುವ ವಿವಿಧ ಭೂಖಂಡಗಳ ನಕ್ಷೆ ಈ ರೀತಿಯಲ್ಲಿ ರೂಪುಗೊಂಡಿದೆ ಎನ್ನುವುದು ವಿಜ್ಞಾನಿಗಳ ವಾದ. ಪ್ಲೇಟ್‌ ಟೆಕ್ಟಾನಿಕ್ಸ್‌ ಎನ್ನುವ ಈ ಪರಿಕಲ್ಪನೆಯ ಪ್ರಕಾರ ನಾವು ಇಂದು ಇರುವ ಭರತಖಂಡ ಹಿಂದೊಮ್ಮೆ ಆಫ್ರಿಕಾ ಖಂಡದ ಭಾಗವಾಗಿತ್ತು. ಅದೊಂದು ದೊಡ್ಡ ಭೂಖಂಡವಾಗಿತ್ತು. ಈ ಖಂಡ ಚೂರು, ಚೂರಾಗಿ ಒಡೆದು ಬೇರೆಯಾಯಿತು. ಅಂತಹ ಚೂರುಗಳಲ್ಲಿ ಒಂದು ಉತ್ತರಕ್ಕೆ ಸರಿಯುತ್ತಾ ಯೂರೇಶಿಯಾ ಎನ್ನುವ ಇನ್ನೊಂದು ಭಾರೀ ಖಂಡದ ಜೊತೆಗೆ ಘಟ್ಟಿಸಿತು. ಅದರ ಜೊತೆಗೆ ಬೆಸೆದುಕೊಂಡಿತು. ಇಂದಿನ ಭಾರತವಾಯಿತು. ಹೀಗೆ ಇದು ಘಟ್ಟಿಸಿದ ಸ್ಥಳದಲ್ಲಿ ಮಡಚಿಕೊಂಡ ಕೆನೆಪದರಗಳೇ ಈಗಿನ ಹಿಮಾಲಯ.

ಡೈನೊಸಾರ್ ಪಿಕ್ಷರ್ಸ್‌ ‌ ಆರ್ಗ್‌ ಜಾಲತಾಣದಲ್ಲಿ ಈ ಚರಿತ್ರೆಯನ್ನು ಬಿಂಬಿಸುವ ಭೂಗೋಳಗಳಿವೆ. ಇಂದು ನಾವು ಗುರುತಿಸುವ ವಿವಿಧ ಭೂ ಪ್ರದೇಶಗಳ ಹೆಸರನ್ನು ಹಾಕಿದರೆ, ವಿವಿಧ ಕಾಲಘಟ್ಟದಲ್ಲಿ ಅದು ಎಲ್ಲಿತ್ತು ಎಂದು ಇದು ತೋರಿಸುತ್ತದೆ. ಈ ಚಿತ್ರದಲ್ಲಿ ನೀವು ನೋಡುವುದು ನಮ್ಮ ಕೊಳ್ಳೇಗಾಲ ಇದ್ದ ಸ್ಥಾನ. ಚಾಮರಾಜನಗರ ಜಿಲ್ಲೆಯಲ್ಲಿರುವ ಕೊಳ್ಳೇಗಾಲ ಇಲ್ಲಿ ಕೆಂಪು ಚುಕ್ಕಿಯಾಗಿ ತೋರುತ್ತಿದೆ. ಎರಡು ಕೋಟಿ ವರ್ಷಗಳು ಅಥವಾ ಇಪ್ಪತ್ತು ಮಿಲಿಯನ್‌ ವರ್ಷಗಳ ಹಿಂದೆ. ಅದಾಗಲೇ ಭಾರತ ಖಂಡ ರೂಪುಗೊಂಡಾಗಿತ್ತು. ಆದರೆ ನಮ್ಮೂರಿನಲ್ಲಿ ಜನಗಳೇ ಇರಲಿಲ್ಲ. ಏಕೆಂದರೆ ಆಗಿನ್ನೂ ಮನುಷ್ಯರು ಹುಟ್ಟಿರಲೇ ಇಲ್ಲ! ಏನಿದ್ದರೂ ಕೆಲವು ಸ್ತನಿಗಳೂ, ಹಕ್ಕಿಗಳೂ ಇದ್ದುವು.

ಎರಡು ಕೋಟಿ ವರ್ಷಗಳ ಹಿಂದೆ ಕೊಳ್ಳೇಗಾಲ ಇದ್ದ ಜಾಗ

ಅದಕ್ಕೂ ಹಿಂದೆ ಹೇಗಿತ್ತು? ಎಲ್ಲಿತ್ತು ನಮ್ಮೂರು? ಇದೋ ಐದು ಕೋಟಿ ವರ್ಷಗಳ ಹಿಂದೆ ನಮ್ಮ ಕೊಳ್ಳೇಗಾಲ ಇದ್ದ ಸ್ಥಿತಿ. ಆಗ ಕೈಲಾಸ ಪರ್ವತ ಹಾಗೂ ಹಿಮಾಲಯ ಇನ್ನೂ ಹುಟ್ಟಿರಲಿಲ್ಲ. ಕೆಲವು ಕೋಟಿ ವರ್ಷಗಳ ಹಿಂದೆ ಉಲ್ಕೆಗಳು ಬಂದು ಭೂಮಿಯನ್ನು ಬಡಿದ ಕಾರಣವಾಗಿ ಇಲ್ಲಿದ್ದ ದೈತ್ಯ ಡೈನೋಸಾರುಗಳೆಲ್ಲವೂ ನಾಶವಾಗಿದ್ದುವು. ಹಕ್ಕಿಗಳು, ಸ್ತನಿಗಳು ಭೂಮಿಯಲ್ಲಿ ಕಾಣಿಸಿಕೊಂಡಿದ್ದುವು.

ಐದು ಕೋಟಿ ವರ್ಷಗಳ ಹಿಂದೆ ಕೊಳ್ಳೇಗಾಲ ಇದ್ದ ಸ್ಥಳ. ಈ ಕಾಲವನ್ನು ಟರ್ಶಿಯರಿ ಕಲ್ಪ ಎನ್ನುತ್ತಾರೆ.

ಅದಕ್ಕೂ ಹಿಂದೆ ಅಂದರೆ ಸುಮಾರು 17 ಕೋಟಿ ವರ್ಷಗಳ ಹಿಂದೆ ಭೂಮಿ ಈಗಿನಷ್ಟು ಹಿತವಾಗಿರಲಿಲ್ಲ. ಹವೆ ಬಲು ಬಿಸಿಯಾಗಿತ್ತು. ಹಾಂ. ನಮ್ಮ ಭರತ ಖಂಡ ಹೆಚ್ಚೂ ಕಡಿಮೆ ಆಫ್ರಿಕಾ ಖಂಡಕ್ಕೇ ಸೇರಿಬಿಟ್ಟಿತ್ತು ಎನ್ನಬಹುದು. ಮಡಗಾಸ್ಕರ್‌ ದ್ವೀಪ ಸಮೂಹಗಳು ಈಗ ಇರುವ ಕೇರಳಾಗೆ ಬಲು ಹತ್ತಿರದಲ್ಲಿ ಇದ್ದುವು. ಯಾವ ದೇಶ? ಯಾವ ಸೀಮೆ ಎನ್ನೋಣವೇ? ಅದು ಡೈನೋಸಾರುಗಳ ಕಾಲ. ಹಾಂ. ನಮ್ಮ ಮರಡೀ ಗುಡ್ಡದ ಮೇಲೂ ಡೈನೋಸಾರುಗಳು ಓಡಾಡುತ್ತಿದ್ದಿರಬಹುದು ಎಂದು ಊಹಿಸಿಕೊಳ್ಳುವುದೇ ಎಷ್ಟು ವಿಸ್ಮಯಕರವಾದ ವಿಷಯ!

ಹದಿನೇಳು ಕೋಟಿ ವರ್ಷಗಳು ಅಥವಾ ನೂರಾಎಪ್ಪತ್ತು ಮಿಲಿಯನ್‌ ವರ್ಷಗಳ ಹಿಂದೆ ನಮ್ಮೂರು ಇಲ್ಲಿತ್ತು. ಹೆಚ್ಚೂ ಕಡಿಮೆ ಆಫ್ರಿಕಾ ಖಂಡದ ಜೊತೆಗೆ ಬೆಸೆದುಕೊಂಡು ಬಿಟ್ಟಿತ್ತು.

ಇನ್ನೂ ಹಿಂದೆ ನಮ್ಮ ಭರತ ಖಂಡವೇ ಇರಲಿಲ್ಲ. ಇದೋ ಮೂವತ್ತು ಕೋಟಿ ವರ್ಷಗಳ ಹಿಂದೆ ನಮ್ಮ ಭೂಮಿಯ ನಕ್ಷೆ. ಹೀಗಿತ್ತು. ಉಸಿರಾಡಲು ಆಮ್ಲಜನಕವಿತ್ತು. ಆದರೆ ಹೆಚ್ಚಿನ ಭಾಗವನ್ನೆಲ್ಲ ಮೋಡಗಳೇ ಆವರಿಸಿಕೊಂಡಿದ್ದುವು. ಹಸಿರು ಗಿಡಗಳು ಇದ್ದುವು. ಹೂಗಳು ಇರಲಿಲ್ಲ! ಇದ್ದುದೆಲ್ಲ ಜರೀಗಿಡಗಳು, ಪಾಚಿ ಹಾಗೂ ಇತರೆ ಸಸ್ಯಗಳು. ಕೆಲವು ಕೀಟಗಳು ಇದ್ದುವು. ಹಾವು, ಹಲ್ಲಿಗಳು ಇದ್ದುವು. ಕೀಟಗಳೂ ಬಲು ದೈತ್ಯವಾಗಿದ್ದುವು. ಮನುಷ್ಯ ಇದ್ದಿರಲು ಸಾಧ್ಯವೇ ಇಲ್ಲ! ಆಗ ನಮ್ಮ ಕೊಳ್ಳೇಗಾಲ ಆಫ್ರಿಕಾದ ಜೊತೆಗೇ ಬೆಸೆದುಕೊಂಡು ಬಿಟ್ಟಿತ್ತು. ಭಾರತವೂ ಇರಲಿಲ್ಲ. ಮಹಾಭಾರತವೂ ಇರಲಿಲ್ಲ!

ಇದೋ ಈ ಕಾಲದಲ್ಲಿ ನಿಮ್ಮೂರು ಎಲ್ಲಿತ್ತು ಎಂದು ನೋಡಬೇಕೇ? ಹಾಗಿದ್ದರೆ ಇದೋ ಈ ಜಾಲತಾಣದಲ್ಲಿ ಇರುವ ನಕ್ಷೆಯನ್ನು ನೋಡಿ. ಇದು ಇಂಟರಾಕ್ಟಿವ್‌ ನಕ್ಷೆ. ನೀವು ಕೊಟ್ಟ ಮಾಹಿತಿಗೆ ತಕ್ಕಂತೆ ಉತ್ತರವನ್ನು ಒದಗಿಸುತ್ತದೆ. ಪ್ರಯತ್ನಿಸಿ. http://dinosaurpictures.org/ancient-earth#0

ಇದನ್ನು ನೋಡಿದಾಗ ಈ ಸೀಮೆಗಳು, ಸಂಸ್ಕೃತಿ ಎಲ್ಲವೂ ಎಷ್ಟು ಕೃತಕ ಎನ್ನಿಸುವುದಿಲ್ಲವೇ?

ಚಿತ್ರಗಳ ಕೃಪೆ: http://dinosaurpictures.org/ancient-earth#0

Published in: on ಸೆಪ್ಟೆಂಬರ್ 28, 2020 at 7:09 ಅಪರಾಹ್ನ  Comments (1)  

ಹೊಸ್ತಿಲು ಮೆಟ್ಟಿದ ಉಮ್ಮತ್ತಿ

ಕಳೆದ ತಿಂಗಳು ಮೈಸೂರಿನಲ್ಲಿ ಒಂದು ವಿಚಾರ ಸಂಕಿರಣದಲ್ಲಿ ಹೀಗೊಂದು ಚರ್ಚೆ ನಡೆದಿತ್ತು. ಸಂಪ್ರದಾಯ ಅಥವಾ ಪರಂಪರೆ ಮತ್ತು ವಿಜ್ಞಾನ. ಬೆಂಗಳೂರಿನ ನೆಹರೂ ತಾರಾಲಯದ ನಿವೃತ್ತ ನಿರ್ದೇಶಕಿ ಡಾ. ಬಿ. ಎಸ್.‌ ಶೈಲಜಾ, ಕರ್ನಾಟಕದ ಹಳೆದ ಸಾಹಿತ್ಯದಲ್ಲಿ ಹಾಗೂ ಶಿಲಾಶಾಸನಗಳಲ್ಲಿ ಆಗಸದಲ್ಲಿ ನಡೆಯುವ ಹಲವು ವಿದ್ಯಮಾನಗಳನ್ನು ಅಂದಿನ ಜನರು ಗಮನಿಸಿ, ದಾಖಲಿಸಿದ್ದರು ಎನ್ನುವುದಕ್ಕೆ ಪುರಾವೆಗಳು ಸಿಗುತ್ತವೆ ಎಂದು ವಿವರಿಸಿದ್ದರು. ಇದು ಅಂದು ಅವರು ಈ ವಿದ್ಯಮಾನಗಳನ್ನು ಕಂಡಿದ್ದರ ಕುರುಹಷ್ಟೇಯೋ, ಅಥವಾ ಅವುಗಳೇಕೆ ಆಗುತ್ತವೆ ಎನ್ನುವುದನ್ನು ನಮ್ಮ ಪೂರ್ವಜರು ತಿಳಿದಿದ್ದರೋ ಎನ್ನುವುದನ್ನು ಸ್ಪಷ್ಟ ಪಡಿಸುವುದಿಲ್ಲ ಎಂದೂ ಹೇಳಿದ್ದರು.

ಇದೇ ಸಭೆಯಲ್ಲಿ ಬೆಂಗಳೂರಿನ ಟ್ರಾನ್ಸ್‌ ಡಿಸಿಪ್ಲಿನರಿ ವಿಶ್ವವಿದ್ಯಾನಿಲಯದ ವಿಜ್ಞಾನಿ ಡಾ. ಬಿ. ಎಸ್.‌ ಸೋಮಶೇಖರ್‌ ಮಾತನಾಡಿ ಮತ್ತೊಂದು ಸ್ವಾರಸ್ಯಕರವಾದ ಪ್ರಶ್ನೆಯನ್ನು ಮುಂದಿಟ್ಟಿದ್ದರು. ನಾವು ಜಾನಪದದಲ್ಲಿಯೂ, ನಮ್ಮ ನಿತ್ಯ ಜೀವನದಲ್ಲಿಯೂ ಪಾಲಿಸಿಕೊಂಡು ಬರುತ್ತಿರುವ ಹಲವು ರೂಢಿಗತ ನಡವಳಿಕೆಗಳು ಬಹುಶಃ ಪರಿಸರಪ್ರಜ್ಞೆಯನ್ನೋ, ವೈದ್ಯಕೀಯ ಅರಿವನ್ನೋ ಮೂಡಿಸುವ ಕಲಿಕೆಯ ವಿಧಾನಗಳಾಗಿದ್ದಿರಬಹುದೋ? ಅವನ್ನು ನಾವು ಈಗ ಮರೆತು ಕೇವಲ ರೂಢಿಗತ ಆಚರಣೆಯನ್ನಾಗಿಸಿಬಿಟ್ಟಿದ್ದೇವೆಯೋ? ಇದು ಅವರ ಪ್ರಶ್ನೆ. ಇದಕ್ಕೆ ಅವರು ಹಲವು ಬುಡಕಟ್ಟು ಜನಾಂಗಗಳಲ್ಲಿ ನಿತ್ಯ ಜೀವನದಲ್ಲಿ ಬಳಸದ ಹಣ್ಣು, ಹಂಪಲು, ಸೊಪ್ಪು, ಸದೆಗಳನ್ನು ಕೆಲವು ವಿಶೇಷ ಹಬ್ಬ, ಹರಿದಿನ ಅಥವಾ ಆಚರಣೆಗಳಲ್ಲಿಯಷ್ಟೆ ಬಳಸುತ್ತಾರೆ ಎನ್ನುವುದನ್ನು ಉದಾಹರಣೆಯಾಗಿ ಕೊಟ್ಟಿದ್ದರು. ಈ ಹಣ್ಣು, ಹಂಪಲು, ಸೊಪ್ಪಿನಲ್ಲಿ ಯಾವುದೋ ವಿಶೇಷ ಗುಣವಿದೆ. ಅದನ್ನು ಹೀಗೆ ಆಚರಣೆಯ ಅಂಗವಾಗಿಸಿಬಿಟ್ಟರೆ ಅವನ್ನು ಸಂರಕ್ಷಿಸುವ ಹೊಣೆ ಸಮುದಾಯದ ಮೇಲಿರುತ್ತದೆ ಎನ್ನುವುದರಿಂದ ಹೀಗಾಗಿರಬಹುದೋ ಎನ್ನುವ ತರ್ಕವನ್ನು ಮುಂದಿಟ್ಟರು.

ಸಂಪ್ರದಾಯ ಹಾಗೂ ವಿಜ್ಞಾನದ ವಿಷಯ ಬಂದಾಗ ಈ ತಾಕಲಾಟ ಇದ್ದಿದ್ದೇ. ಆಚರಣೆಗಳು ನಿಜಕ್ಕೂ ಅರ್ಥವತ್ತಾದ ನಡವಳಿಕೆಗಳೋ, ಅಥವಾ ನಾವು ಅವನ್ನು ಕೇವಲ ಅನೂಚಾನವಾಗಿ ಪಾಲಿಸಿಕೊಂಡು ಬಂದಿದ್ದರಿಂದ ಅವಕ್ಕೆ ಒಂದು ಸಮಜಾಯಿಸಿ ಕೊಡುತ್ತಿದ್ದೇವೆಯೋ? ಅವು ಅರ್ಥವತ್ತಾದ ನಡವಳಿಕೆಗಳಾಗಿದ್ದರೆ ಅವುಗಳಲ್ಲಿದ್ದ ವಿಜ್ಞಾನವನ್ನೋ, ತಿಳಿವನ್ನೋ ನಾವು ಮರೆತಿರಬಹುದು. ಅವು ಕೇವಲ ರೂಢಿಗತವಾಗಿ ಬಂದಿದ್ದರೆ ಬಹುಶಃ ಕೇವಲ ಮೌಢ್ಯಗಳಿರಬಹುದು.  ಈ ಗೊಂದಲ ಏಕೆ ಎಂದರೆ ಇಂದಿಗೂ ಸಮಾಜಶಾಸ್ತ್ರಜ್ಞರು ಪಾರಂಪರಿಕ ನಡವಳಿಕೆಗಳಲ್ಲಿ ಒಂದು ಜ್ಞಾನ ಪರಂಪರೆ ಇದೆ. ಅದು ಇಂದಿನ ವಿಜ್ಞಾನದ ಪ್ರಯೋಗ, ಪರೀಕ್ಷೆ ವಿಧಾನಗಳಂತಲ್ಲ. ಹಾಗಂತ ಅವನ್ನು ಕಡೆಗಣಿಸಬಾರದು ಎಂದು ವಾದಿಸುತ್ತಾರೆ. ಇದೇ ತರ್ಕವನ್ನು ಮುಂದಿಟ್ಟುಕೊಂಡು ವಿಜ್ಞಾನದ ದೃಷ್ಟಿಯಲ್ಲಿ ಅರ್ಥಹೀನವಾದ ಹಲವು ನಡವಳಿಕೆಗಳಲ್ಲಿ ಸಂಪ್ರದಾಯಸ್ತರುWhatsApp Image 2020-04-07 at 10.22.34 AM ಹಲವು ಅರ್ಥ ಹುಡುಕಲು ಹೊರಡುವುದೂ ಉಂಟು.

ಮಾನವ ಶಾಸ್ತ್ರಜ್ಞರ ಪ್ರಕಾರ ಇಂತಹ ಹಲವು ಆಚರಣೆಗಳು ಕೇವಲ ಕಲ್ಟ್‌ ನಡವಳಿಕೆಗಳು. ಅರ್ಥಾತ್‌, ಯಾರೋ ಏಕೋ ಮಾಡಿದವನ್ನು ಉಳಿದವರು ಮಕ್ಕಿಕಾಮಕ್ಕಿ ನಕಲು ಮಾಡಿ, ಹಾಗೆಯೇ ಅದು ಸಮುದಾಯದಲ್ಲೆಲ್ಲ ಹರಡಿಕೊಂಡು ಬಿಟ್ಟಂತಹ ನಡವಳಿಕೆಗಳೂ ಇರಬಹುದು. ಇಂತಹ ನೂರಾರು ಉದಾಹರಣೆಗಳನ್ನು ಕೊಡಬಹುದು. ಉದಾಹರಣೆಗೆ,  ಹಬ್ಬದ ದಿನ ತೋರಣ ಕಟ್ಟುವುದು, ಕತ್ತಲಾದ ಮೇಲೆ ಮನೆ ಗುಡಿಸಬಾರದು ಎನ್ನುವುದು, ಕೆಲವೆಡೆ ಒಂಟಿ ದೀಪವನ್ನು ಹಚ್ಚಬಾರದು ಎನ್ನುವುದೂ ಉಂಟು. ಮುಂಬಾಗಿಲ ಮೇಲೆ ದೃಷ್ಟಿ ಬೊಂಬೆ ನೇತು ಹಾಕುವುದು, ನಿಂಬೆ-ಮೆಣಸಿನಕಾಯಿಯನ್ನು ನೇತುಹಾಕುವುದು, ಬ್ರಾಹ್ಮಣರು ಶೌಚಕ್ಕೆ ಹೋಗುವಾಗ ಜನಿವಾರವನ್ನು ಕಿವಿಯ ಸುತ್ತ ಸುತ್ತಿಕೊಂಡು ಹೋಗುವುದು, ಶ್ರಾದ್ಧದ ವೇಳೆ ಹೆಂಗಸರು ಅಲ್ಲಿ ಇರಬಾರದು ಎನ್ನುವುದು ಇತ್ಯಾದಿ, ಇತ್ಯಾದಿ. ಇವು ಆಚರಣೆಗಳು ನಿಜ. ಆದರೆ ಮೌಢ್ಯಗಳೋ, ಮರೆತ ಅರಿವಿನ ಪ್ರಜ್ಞೆಯೋ? ಇದನ್ನು ತೀರ್ಮಾನಿಸುವುದು ಕಷ್ಟ. ಏಕೆಂದರೆ ಇಂತಹ ನಡವಳಿಕೆಗಳು ಹುಟ್ಟಿದ ಬಗ್ಗೆ, ಅವು ವಿಕಾಸವಾದ ಬಗ್ಗೆ ದಾಖಲೆಗಳು ಸಿಗುವುದು ಕಷ್ಟ.

ಅಂತಹ ಒಂದು ಉದಾಹರಣೆ ಮೊನ್ನೆ ಸಿಕ್ಕಿದ್ದರಿಂದಾಗಿ ಈ ಲೇಖನ. ಕೊರೊನಾ ಊರ ಬಾಗಿಲನ್ನೇ ಬಡಿದು, ಎಲ್ಲರನ್ನೂ ಮನೆಯೊಳಗೆ ಕುಳ್ಳಿರಿಸಿರುವಾಗ ಈ ಚಿತ್ರವನ್ನು ಡಾ. ಮೋಹನ್‌ ತಂಬಡ್‌ ಕಳಿಸಿದರು. ಇದೇ ಚಿತ್ರ ಶ್ರೀ ಎಲ್.‌ ಸಿ. ನಾಗರಾಜರ ಫೇಸ್‌ ಬುಕ್‌ ಪುಟದಲ್ಲಿಯೂ ಚರ್ಚೆಗೆ ಒಳಗಾಗಿತ್ತು. ಇದು ನಮ್ಮ, ನಿಮ್ಮ ಮನೆಯ ಸುತ್ತಮುತ್ತಲಿನ ಬೇಲಿಯಲ್ಲಿ ಕಾಣುವ ಒಂದು ಕಳೆಗಿಡದ ಕಾಯಿ. ಇದು ತರಕಾರಿಗೂ ಯೋಗ್ಯವಲ್ಲ. ಇದನ್ನು ಕೆಲವೆಡೆ ಉಮ್ಮತ್ತಿಕಾಯಿ ಎಂದು ಕೆಲವೆಡೆ ಹೇಳುತ್ತಾರೆಂದು ನಾಗರಾಜ್‌ ಬರೆದಿದ್ದರು. ವೈಜ್ಞಾನಿಕವಾಗಿ ಇದನ್ನು ದತೂರ ಸ್ಟ್ರಾಮೋನಿಯಂ (Datura stramonium) ಅಥವಾ ದತೂರ ಮೆಟೆಲ್‌ (Datura metel) ವಿಶೇಷ ಎಂದರೆ ಈಗ ಕೊರೊನಾ ಭೀತಿಯ ಸಮಯದಲ್ಲಿ ನಡೆದ ಯುಗಾದಿ ಹಬ್ಬದಲ್ಲಿ ಮನೆಯ ಮುಂದೆ ಕಟ್ಟುವ ಮಾವಿನ ತಳಿರು ತೋರಣದಲ್ಲಿ ಈ ಕಾಯಿಯನ್ನೂ ಸೇರಿಸಿ ಕೆಲವರು ಕಟ್ಟಿದರಂತೆ. ಇದು ಕೊರೊನಾದಂತೆಯೇ ಕಾಣುವುದರಿಂದಾಗಿ, ಕೊರೊನಾವನ್ನು ದೂರವಿರಿಸಲಿ ಎನ್ನುವ ಪ್ರಾರ್ಥನೆಯೊಂದಿಗೆ ಇದನ್ನು ಕಟ್ಟಿದರು ಎಂದು ಚಿತ್ರಗಳು ಬಂದವು. ಇದನ್ನು ಮೊದಲು ಮಾಡಿದವರು ಹಾಗೆ ನಂಬಿಕೆ ಇಟ್ಟುಕೊಂಡು ಮಾಡಿದರೋ, ಅಥವಾ ತಮಾಷೆಗೆ ಮಾಡಿದರೋ ಗೊತ್ತಿಲ್ಲ. ಆದರೆ ಹಲವರು ಇದನ್ನು ಪಾಲಿಸಿದರು ಎನ್ನುವುದನ್ನೂ ಕೇಳಿದೆವು. ಅರ್ಥಾತ್‌, ಮಾನವಶಾಸ್ತ್ರಜ್ಞರು ಹೇಳುವ ರೀತಿಯಲ್ಲಿ ಇದು ಒಂದು ಕಲ್ಟ್‌ ಆಚರಣೆಯಾಗಿ ಬದಲಾಯಿತು. ಈ ಆಚರಣೆ ಮುಂದುವರೆಯುತ್ತದೆಯೋ ಇಲ್ಲವೋ ಬಲ್ಲವರಿಲ್ಲ. ಆದರೆ ಹೀಗೆ ಆಚರಣೆಗಳು ಉದ್ಭವಿಸಬಲ್ಲುವು ಎನ್ನುವುದಕ್ಕೆ ಒಂದು ಜೀವಂತ ಉದಾಹರಣೆಯಂತೂ ಸಿಕ್ಕಿತು.

ಸ್ವಾರಸ್ಯವೆಂದರೆ ಈ ಆಚರಣೆಯಲ್ಲಿ ಏನೂ ಅರ್ಥವಿಲ್ಲ ಎನಿಸಿದರೆ ಜನ ಇದನ್ನು ನಿಲ್ಲಿಸಿಬಿಡುವರೇ? ಮುಂದುವರೆಸುವರೇ? ಅಥವಾ ಇನ್ನೊಂದು ಐವತ್ತು ವರ್ಷ ಇದೇ ಆಚರಣೆ ಮುಂದುವರೆದಿದ್ದರೆ, ಅಂದಿನವರು ಇದನ್ನು ಹೇಗೆ ಅರ್ಥೈಸಬಹುದು? ಇದು ಏಕೆ ಬಂದಿತು ಎನ್ನುವುದರ ಮೂಲ ಹಿಡಿಯುವರೋ ಅಥವಾ ಈ ಉಮ್ಮತ್ತಿ ಕಾಯಿಯಲ್ಲಿ ಇದ್ದ ಏನೋ ಅಂಶ ನಮಗೆ ತಿಳಿದಿಲ್ಲ. ನಮ್ಮ ಪೂರ್ವಜರಿಗೆ ತಿಳಿದಿತ್ತು. ಅದರಿಂದಾಗಿಯೇ ಅದನ್ನು ಬಳಸಿದ್ದರು ಎನ್ನಬಹುದೋ? ಅಂದ ಹಾಗೆ ಈ ಕಾಯಿಯ ಬೀಜ ಉನ್ಮತ್ತರನ್ನಾಗಿ ಮಾಡುತ್ತದೆ ಎನ್ನುವುದರಿಂದಾಗಿ ಇದನ್ನು ಉಮ್ಮತ್ತಿ ಕಾಯಿ ಎನ್ನುತ್ತಾರೆ ಎಂದು ಗೆಳೆಯ ಕೃಷ್ಣಪ್ರಸಾದ್‌ ಹೇಳಿದರು. ಇದು ಬೇಧಿಯನ್ನೂ ಉಂಟು ಮಾಡುತ್ತದಂತೆ. ಗೂರಲು ಕಡಿಮೆ ಮಾಡುವ ಗುಣವೂ ಇದಕ್ಕೆ ಇದೆ ಎಂದು ಆಯುರ್ವೇದದಲ್ಲಿ ಹೇಳಿದ್ದಾರೆ ಎಂದು ಎಲ್‌ ಸಿ ನಾಗರಾಜರ ಪುಟದಲ್ಲಿ ಯಾರೋ ದಾಖಲಿಸಿದ್ದಾರೆ. . ಬಿ.ಎಸ್‌.ಸೋಮಶೇಖರ್‌ ಅವರ ಪ್ರಕಾರ ಕೊಳ್ಳೇಗಾಲ ಮತ್ತು ಮಳವಳ್ಳಿಯ ಕಡೆ ಅಸ್ತಮಾ ಇರುವವರಿಗೆ ಇದರ ಎಲೆಯನ್ನು ಸುರುಳಿ ಸುತ್ತಿ ಹೊಗೆ ಸೇದಲು ಕೊಡುವುದೂ ಉಂಟು. ಇವೆಲ್ಲವೂ ನಿಜವಾಗಿದ್ದರೆ, ಅಂದರೆ ನಿಜಕ್ಕೂ ಚಿಕಿತ್ಸಕ ವಿಧಾನಗಳಾಗಿದ್ದರೆ,  ಬಹುಶಃ ಮುಂದೆ ೨೦೮೦ರಲ್ಲಿ ಯಾರಾದರೂ ಸಂಶೋಧನೆ ನಡೆಸಿ, ಈ ಉಮ್ಮತ್ತಿ ಕಾಯಿ ಕೊರೊನಾಗೆ ಚಿಕಿತ್ಸೆಯಾಗಿದ್ದಿರಬೇಕು. ಹಾಗಾಗಿ ಅದನ್ನು ಕಾಪಾಡಿಕೊಳ್ಳಿ ಎಂದು ಈ ನಡವಳಿಕೆ ಬಂದಿರಬೇಕು ಎಂದು ತರ್ಕಿಸಲೂ ಬಹುದು. ಅದ್ಯಾವುದೂ ಇಲ್ಲದೆಯೂ ಒಂದು ಆಚರಣೆ, ಮೌಢ್ಯ, ಸಾಮುದಾಯಿಕ ವಿಧಿಯಾಗಿಬಿಡಬಹುದು ಎನ್ನುವುದಕ್ಕೆ ಈ ಉಮ್ಮತ್ತಿ ಕಾಯಿ ತೋರಣವನ್ನೇರಿದ್ದು ಒಳ್ಳೆಯ ಉದಾಹರಣೆ.

ನಮ್ಮ ಆಚರಣೆಗಳೆಲ್ಲವೂ ಹೀಗೇ ಎನ್ನಲಾರೆ. ಆದರೆ ಈ ಸಾಧ್ಯತೆ ಬಲು ಸರಳವಾದ ವಿವರಣೆ. ಐನ್ಸ್ಟೀನ್‌ ಹೇಳಿಲ್ಲವೇ? “ಯಾವುದಾದರೂ ಪ್ರಶ್ನೆಗೆ ಇರುವ ಅತಿ ಸರಳ ವಿವರಣೆಯೇ ಅದರ ಅತ್ಯುತ್ತಮ ವಿವರಣೆ.” ಆಚರಣೆಗಳಿಗೆ ಇಲ್ಲ, ಸಲ್ಲದ ವೈಜ್ಞಾನಿಕ ವಿವರಣೆಗಳನ್ನು ಕೊಡುವ ಮುನ್ನ ಈ ಸರಳ ಸಾಧ್ಯತೆಯನ್ನೂ ಗಮನಿಸುವುದು ಒಳ್ಳೆಯದು ಅಲ್ಲವೇ?

Published in: on ಏಪ್ರಿಲ್ 7, 2020 at 5:50 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಭಯಂಕರ ಶೀರ್ಷಿಕೆ

ಬಾಳು ಕಹಿಯಾಗಿಸುವ ಬಿಳಿವಿಷ ಎನ್ನುವ ಭಯಂಕರ ಶೀರ್ಷಿಕೆಯನ್ನು ಕೊಟ್ಟಿರುವ ಈ ಲೇಖನವನ್ನು ಒಮ್ಮೆ ಓದಿ. ಹಾಂ. ನಿಧಾನವಾಗಿ ಓದಿ. ಬಹುಶಃ ಹತ್ತನೆಯ ತರಗತಿಯನ್ನು ಪಾಸು ಮಾಡಿರುವ ಯಾವ ವಿದ್ಯಾರ್ಥಿಯೂ ಕೂಡ ಈ ಲೇಖನದಲ್ಲಿ ಇರುವ ಅಂಶಗಳಲ್ಲಿ ಹಲವು ನ್ಯೂನತೆಗಳಿವೆ ಎಂದು ಕಂಡುಕೊಳ್ಳಬಲ್ಲ. ಇದು ಸಹಸ್ರಾರು ಓದುಗರಿಗೆ ವಿಷಯವನ್ನು ತಿಳಿಸುವ ಸಂಪಾದಕರಿಗೆ ತಿಳಿಯಲಿಲ್ಲವೆಂದರೆ ಅದನ್ನು ಬೇಜವಾಬುದಾರಿ ಎನ್ನದೇ ಇನ್ನೇನನ್ನಬಹುದು ಎಂದು ಪದವನ್ನು ಹುಡುಕುತ್ತಿದ್ದೇನೆ.

ಸಕ್ಕರೆ ಒಳಿತೋ, ಕೆಡುಕೋ ಎನ್ನುವ ಪ್ರಶ್ನೆ ಬಿಡಿ. ಸಕ್ಕರೆಯನ್ನು ಕೆಡುಕು ಎಂದು ತೋರಿಸಲೇ ಬೇಕು ಎನ್ನುವ ಹಠದಲ್ಲಿ ತಪ್ಪು ಮಾಹಿತಿಗಳನ್ನು ನೀಡಿರುವ ಸಂಗತಿ ಇದು. ಸಾರ್ವಜನಿಕರಿಗೆ ನೀಡುವ ಮಾಹಿತಿ ಹೇಗಿರಬಾರದು ಎನ್ನುವುದಕ್ಕೆ ಉದಾಹರಣೆ.

ಒಂದೊಂದಾಗಿ ವಿಷಯವನ್ನು ಗಮನಿಸೋಣ.

  1. ಸಕ್ಕರೆ ಉತ್ಪಾದಿಸುವಾಗ ಸರ್ವಾಧಿಕ ಪ್ರಮಾಣದಲ್ಲಿ ಗಂಧಕವನ್ನು ಉಪಯೋಗಿಸಲಾಗುತ್ತ;ದೆ. ಗಂಧಕವನ್ನು ಬಾಂಬು ತಯಾರಿಸಲು, ಸಿಡಿಮದ್ದು ಅಥವಾ ಪಟಾಕಿ ತಯಾರಿಸಲು ಬಳಸುತ್ತಾರೆ. ಅದೊಂದು ರಾಸಾಯನಿಕ ವಸ್ತುವಾಗಿದೆ. ಗಂಧಕವು ಅತ್ಯಂತ ಜಡ ಪದಾರ್ಥವಾಗಿದ್ದು, ಒಮ್ಮೆ ಶರೀರದೊಳಗೆ ಸೇರಿದರೆ ಸುಲಭವಾಗಿ ಹೊರಬೀಳದು.

ರಾಸಾಯನಿಕ ಎನ್ನುವ ಹೆಸರು ಇರುವ ಮಾತ್ರಕ್ಕೇ ಅದು ಕೆಡುಕೇ? ನೀರೂ ಒಂದು ರಾಸಾಯನಿಕವೇ ಅಲ್ಲವೇ? ಹಾಗೆಯೇ ಉಪ್ಪು ಕೂಡ ರಾಸಾಯನಿಕವೇ. ಇದು ಬಲು ಸಾಮಾನ್ಯವಾದ ಸಂದೇಹ.

ಇನ್ನು ಸಕ್ಕರೆ ಎನ್ನುವುದು ಶುದ್ಧ ಶುಕ್ರೋಸ್ ಎನ್ನುವ ರಾಸಾಯನಿಕ ಎಂಬುದನ್ನು ಹತ್ತನೆಯ ತರಗತಿಯಲ್ಲಿಯೇ ಕಲಿತಿದ್ದೇವೆ. ಅಪ್ಪಟ ಸಕ್ಕರೆಯಲ್ಲಿ ಕೇವಲ ಕಾರ್ಬನ್ನು, ಹೈಡ್ರೋಜನ್ನು ಮತ್ತು ಆಕ್ಸಿಜನ್ನು ಮಾತ್ರ ಇರುತ್ತವೆ. ಗಂಧಕದ ಅಣುವೂ ಇರುವುದಿಲ್ಲ. ಈ ವಾಸ್ತವಾಂಶವನ್ನು ಲೇಖನ ಧ್ವನಿಸುತ್ತಿಲ್ಲ. ಸಕ್ಕರೆಯಲ್ಲಿ ಗಂಧಕ ಕಲಬೆರಕೆಯಾಗಿ ಉಳಿಯಬಹುದೇ ಹೊರತು ಅಂಗವಾಗಿಯಲ್ಲ.

ಗಂಧಕವು ಜಡಪದಾರ್ಥವಾಗಿದ್ದು… ಈ ಜಡ ಎನ್ನುವುದರ ಅರ್ಥವೇನೋ ಸ್ಪಷ್ಟವಿಲ್ಲ. ಸಕ್ಕರೆ ಜಡವಲ್ಲವೇ? ನೀರು? ಅದಿರಲಿ ನಮ್ಮ ದೇಹದ ಆರೋಗ್ಯಕ್ಕೆ ಅತ್ಯಂತ ಅವಶ್ಯಕವಾದ ಪ್ರೊಟೀನುಗಳಲ್ಲಿ ಇಪ್ಪತ್ತು ಅಮೈನೊ ಆಮ್ಲಗಳಿವೆ. ಅವುಗಳಲ್ಲಿ ಕೆಲವು ಗಂಧಕಾಮ್ಲಗಳು. ಇವು ಇಲ್ಲದೆ ನಮ್ಮ ದೇಹ ಆರೋಗ್ಯವಂತವಾಗಿರದು. ಉದಾಹರಣೆಗೆ, ಕ್ಯಾನ್ಸರ್ ಬೆಳೆವಣಿಗೆಯನ್ನು ತಡೆಗಟ್ಟುವ ದೇಹದ್ದೇ ನೈಸರ್ಗಿಕ ರಕ್ಷಣೋಪಾಯವಾದ ಗ್ಲುಟಾಥಯೋನ್ ಎನ್ನುವ ರಾಸಾಯನಿಕದ ಕ್ಷಮತೆಗೆ ಅದರಲ್ಲಿ ಗಂಧಕ ಇರುವುದೇ ಕಾರಣ. ಪ್ರತ್ಯಾಕ್ಸೀಕಾರಕಗಳು ಅಥವಾ ಆಂಟಿ ಆಕ್ಸಿಡೆಂಟುಗಳು ಎಂದು ನಾವು ಹೇಳುವ ಹಲವಾರು ರಾಸಾಯನಿಕಗಳಲ್ಲಿ ಗಂಧಕ ಸಾಮಾನ್ಯ ಅಂಶ.

  1. ಗಂಧಕಾಂಶ ಹೆಚ್ಚಿರುವ ಸಕ್ಕರೆಯ ಸೇವನೆಯಿಂದ ಕೊಲೆಸ್ಟರಾಲ್ ಹೆಚ್ಚುತ್ತದೆ. ಕೊಲೆಸ್ಟರಾಲ್ ಹೆಚ್ಚಳದಿಂದ ಹೃದಯಾಘಾತ ಸಂಭವಿಸುತ್ತದೆ.

ಕೊಲೆಸ್ಟರಾಲ್ ನಮ್ಮ ದೇಹದಲ್ಲೇ ತಯಾರಾಗುವ ವಸ್ತು. ಇದು ಹೊರಗಿನಿಂದ ಬರುವುದಿಲ್ಲ. ಇದರ ತಯಾರಿಕೆಗೆ ಕೇವಲ ಸಕ್ಕರೆಯಷ್ಟೆ ಕಾರಣವಲ್ಲ. ಕೊಬ್ಬು ಸೇವನೆಯೂ ಕಾರಣ. ಶುಕ್ರೋಸನ್ನು ಸಕ್ಕರೆಯ ರೂಪದಲ್ಲಿಯಲ್ಲಿಯೋ, ಬೆಲ್ಲದ ರೂಪದಲ್ಲಿಯೋ ಅತಿಯಾಗಿ ಸೇವಿಸಿದರೆ (ಕರಗಿಸುವಷ್ಟು ವ್ಯಾಯಾಮ ಮಾಡದೆ ಕೂಡಿಸುತ್ತಲೇ ಇದ್ದರೆ) ಅವು ಕೊಬ್ಬಾಗಿ ಶೇಖರವಾಗುತ್ತವೆ ಎನ್ನುವುದು ಸತ್ಯ. ಆದರೆ ಇದು ಕೇವಲ ಸಕ್ಕರೆಗಷ್ಟೆ ಸೀಮಿತವಲ್ಲ. ಹಾಂ. ಸಕ್ಕರೆ ಸೇವನೆಯಿಂದಲೇ ಡಯಾಬಿಟೀಸ್ ಬರುತ್ತದೆ ಎನ್ನುವುದೂ ಸತ್ಯವಲ್ಲ. ಕೊಲೆಸ್ಟರಾಲ್ ಜಾಸ್ತಿಯಾದರೆ ಹೃದಯಾಘಾತ ಆಗುವ ಸಂಭವ ಹೆಚ್ಚು. ನಿಜ. ಆದರೆ ಸಕ್ಕರೆಯಿಂದಷ್ಟೆ ಕೊಲೆಸ್ಟರಾಲ್ ಜಾಸ್ತಿಯಾಗುತ್ತದೆ ಎನ್ನುವುದು ಸತ್ಯವಲ್ಲ.

  1. ಸಕ್ಕರೆಯಿಂದ ತಯಾರಿಸಿದ ಸಿಹಿತಿಂಡಿ ಸೇವನೆಯಿಂದ ದೇಹದ ತೂಕ ಹೆಚ್ಚಾಗುವುದು.

ದೇಹದ ತೂಕ ಹೆಚ್ಚುವುದಕ್ಕೆ ಅತಿಯಾದ ಕೊಬ್ಬಿನ ಸೇವನೆ, ವ್ಯಾಯಾಮದ ಕೊರತೆ ಮುಖ್ಯ ಕಾರಣಗಳು. ಕೆಲವು ಅನುವಂಶೀಯ ಗುಣಗಳೂ ಇದಕ್ಕೆ ಕಾರಣ. ಸಕ್ಕರೆಯನ್ನಷ್ಟೆ ದೂರುವುದು ತಪ್ಪಲ್ಲ.

  1. ಸಕ್ಕರೆ ತಯಾರಿಕೆಯಲ್ಲಿ ಇಪ್ಪತ್ತಮೂರಕ್ಕೂ ಹೆಚ್ಚು ರಾಸಾಯನಿಕಗಳನ್ನು ಬಳಸುವುದರಿಂದ… ಪಚನ ಶಕ್ತಿ ಕ್ಷೀಣಿಸುತ್ತದೆ.

ನಾವು ಸೇವಿಸುವ ಸಕ್ಕರೆಯಲ್ಲಿರುವುದು ಒಂದೇ ರಾಸಾಯನಿಕ. ತಯಾರಿಕೆಯಲ್ಲಿ ಏನೇ ಬಳಸಿರಲಿ, ದೇಹದೊಳಗೆ ಹೋಗುವುದು ಒಂದೇ ರಾಸಾಯನಿಕ. ಹಾಗೆ ನೋಡಿದರೆ ಬೆಲ್ಲದ ತಯಾರಿಕೆಯಲ್ಲಿಯೂ ರಾಸಾಯನಿಕಗಳನ್ನು ಬಳಸುತ್ತಾರೆ. ಜೊತೆಗೆ ಅದರಲ್ಲಿ ಶುಕ್ರೋಸಿನ ಜೊತೆಗೆ ಇನ್ನೂ ಹಲವು ರಾಸಾಯನಿಕಗಳು ಇರುತ್ತವೆ. ಹಾಗೆಂದು ಅದು ಸಕ್ಕರೆಗಿಂತಲು ಅಪಾಯಕಾರಿ ಎನ್ನೋಣವೇ?

  1. ಸಕ್ಕರೆಯೂ ಕ್ಯಾನ್ಸರ್ ಕಾರಕವಾಗಿದೆ. ಕ್ಯಾನ್ಸರಿನ ಜೀವಾಣುಗಳು ಸಕ್ಕರೆಯಿಲ್ಲದೆ ಇರಲಾರವು ಎಂದು ತಜ್ಞರು ಅಧ್ಯಯನದ ಮೂಲಕ ಸಾಬೀತು ಪಡಿಸಿದ್ದಾರೆ.

ಯಾವ ತಜ್ಞರು? ಯಾವಾಗ? ಕ್ಯಾನ್ಸರು ರೋಗಾಣುಗಳಿಂದ ಬರುವ ಖಾಯಿಲೆ ಅಲ್ಲ. ನಮ್ಮದೇ ಜೀವಕೋಶಗಳ ರೋಗಸ್ತ ಸ್ಥಿತಿ. ಅಂದ ಮೇಲೆ ನಮ್ಮ ದೇಹದಲ್ಲಿ ಇತರೆ ಕೋಶಗಳಿಗೆ ಒದಗುವ ಆಹಾರವನ್ನೇ ಅವು ಕೂಡ ಬಳಸುತ್ತವೆ. ಈ ಮೂಲ ಅಂಶವೂ ಸಂಪಾದಕರಿಗೆ ಹೊಳೆಯಲಿಲ್ಲವೇ? ಈ ಪ್ರಶ್ನೆ ಹೊಳೆದಿದ್ದರೆ ಬಹುಶಃ ಸಕ್ಕರೆ ಕ್ಯಾನ್ಸರುಕಾರಕ ಎನ್ನುವ ಮಾತಿನ ಬಗ್ಗೆ ಸಂದೇಹವೂ ಹುಟ್ಟುತ್ತಿತ್ತು.

  1. ರಕ್ತದಲ್ಲಿ ಟ್ರೈಗ್ಲಿಸರಿನ್ ಪ್ರಮಾಣ ಹೆಚ್ಚಾಗುವುದು…..

ಟ್ರೈಗ್ಲಿಸರೈಡುಗಳು ಕೊಬ್ಬು ಅಥವಾ ತೈಲದ ಒಂದು ಭಾಗ. ಕೊಬ್ಬು ದೇಹದಲ್ಲಿ ಜೀರ್ಣವಾದಾಗ ಇವು ಬಿಡುಗಡೆಯಾಗುತ್ತವೆ. ಶಕ್ತಿಯನ್ನು ಒದಗಿಸುತ್ತವೆ. ದೇಹದಲ್ಲಿ ಆಹಾರದಿಂದ ಶಕ್ತಿ ಒದಗದಿದ್ದಾಗ, ಟ್ರೈಗ್ಲಿಸರೈಡುಗಳು ಶಿಥಿಲವಾಗಿ ಗ್ಲುಕೋಸಿನ ರೂಪ ತಳೆದು ಶಕ್ತಿ ನೀಡುತ್ತವೆ. ನಾವು ಸೇವಿಸುವ ಆಹಾರ ಅಗತ್ಯಕ್ಕಿಂತಲೂ ಹೆಚ್ಚು ಗ್ಲುಕೋಸು ಒದಗಿಸಿದಾಗ ಆ ಹೆಚ್ಚುವರಿ ಗ್ಲೂಕೋಸು ದೇಹದಲ್ಲೇ ಸಂಗ್ರಹವಾಗುತ್ತದೆ. ಕೊಬ್ಬು ಹೆಚ್ಚು ಸೇವಿಸಿದರೆ ಬೊಜ್ಜಾಗಿಯೂ, ಸಕ್ಕರೆ ಹೆಚ್ಚಾದರೆ ಗ್ಲೈಕೋಜನ್ನಾಗಿಯೂ ಸಂಗ್ರಹವಾಗುತ್ತದೆ. ಇವು ಒಬ್ಬಿಬ್ಬರ ಅಧ್ಯಯನದಿಂದ ದೊರೆತ ಅಂಶಗಳಲ್ಲವೆನ್ನುವುದನ್ನು ಗಮನಿಸಿ. ಸಹಸ್ರಾರು ವಿಜ್ಞಾನಿಗಳು ದಶಕಗಳ ಕಾಲ ನಡೆಸಿದ ಸಂಶೋಧನೆಗಳಿಂದ ಪಡೆದ ಸಾರ. ಹಾಂ. ನಾವು ಸಾಮಾನ್ಯವಾಗಿ ಸಕ್ಕರೆ ಎನ್ನುವುದು ಸುಕ್ರೋಸು, ಸಕ್ಕರೆ ಖಾಯಿಲೆ ಎನ್ನುವುದು ರಕ್ತದಲ್ಲಿ ಗ್ಲುಕೋಸು ಅಂಶ ಹೆಚ್ಚಾಗಿ ಕಾಣುವ ಸ್ಥಿತಿ ಮತ್ತು ಆಹಾರದಲ್ಲಿ ಕೆಲೊರಿ ಎನ್ನುವುದು ಕೇವಲ ಅದರಲ್ಲಿರುವ ಕಾರ್ಬೊಹೈಡ್ರೇಟು (ಹಿಂದೆ ಇದನ್ನು ಶರ್ಕರ ಎನ್ನುತ್ತಿದ್ದರು) ಅಂಶದಿಂದಷ್ಟೆ ಅಲ್ಲ, ಕೊಬ್ಬು, ಪ್ರೊಟೀನುಗಳನ್ನೂ ಕೂಡಿಸಿ ಹೇಳುವ ಮಾತು.

ಒಟ್ಟಾರೆ ಈ ಲೇಖನ ಪತ್ರಿಕೆಯ ಬೇಜವಾಬುದಾರಿಯನ್ನು ಎತ್ತಿ ತೋರಿಸುತ್ತದೆ ಎನ್ನಬಹುದು. ಪತ್ರಿಕೋದ್ಯಮದ ಮೂಲ ತತ್ವಗಳಾದ ಯಾರು, ಏನು, ಹೇಗೆ, ಎಲ್ಲಿ, ಎಂದು, ಎಷ್ಟು ಎನ್ನುವ ಪ್ರಶ್ನೆಗಳನ್ನೇ ಕೇಳದೆ ಸಾರಾಸಗಟಾಗಿ ಅಭಿಪ್ರಾಯವನ್ನೇ ಪ್ರಕಟಿಸಿ, ಅದಕ್ಕೆ ಬೆದರಿಸುವ ಶೀರ್ಷಿಕೆಯನ್ನೂ ಹಾಕಿರುವುದು ನಿಜಕ್ಕೂ ಆಶ್ಚರ್ಯಕರ.

ಮಾಹಿತಿ ಸಂಗ್ರಹವೇ ಆಗಿದ್ದರೂ, ಅದರ ವಿಶ್ವಾಸಾರ್ಹತೆಯನ್ನು ಪರಿಶೀಲಿಸಬೇಕಲ್ಲವೇ? ಅಂದ ಹಾಗೆ ಯಾವ ವಿಜ್ಞಾನಿಯೂ ಒಬ್ಬ ತಜ್ಞನ ಮಾತನ್ನು ನಂಬುವುದಿಲ್ಲ. ತಜ್ಞನ ಮಾತನ್ನು ಬೆಂಬಲಿಸುವಂತಹ ಇನ್ನೂ ಹಲವು ಪುರಾವೆಗಳಿದ್ದರಷ್ಟೆ ಅದು ಸತ್ಯವೆಂದು ತಿಳಿಯುತ್ತದೆ ವಿಜ್ಞಾನ.

Published in: on ನವೆಂಬರ್ 3, 2018 at 5:15 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಕೀಟನಾಶಕಗಳೂ, ಕರಡಿ ಶಿಶ್ನಗಳೂ

ಯಾರಿಗೋ ಬಿಟ್ಟ ಬಾಣ ಇನ್ಯಾರಿಗೋ ತಗುಲಿತಂತೆ ಎನ್ನುವ ಮಾತು ಕೇಳಿದ್ದೇವೆ. ಪರಿಸರದ ವಿಷಯಕ್ಕೆ ಬಂದಾಗ ಈ ಮಾತು ಅಪ್ಪಟ ಸತ್ಯ. ಏನನ್ನೋ ಮಾಡಲು ಹೋಗಿ ಪರಿಸರದಲ್ಲಿ ಇನ್ನೇನನ್ನೋ ಕೆಡಿಸುವುದು ಸರ್ವೇ ಸಾಮಾನ್ಯವೇನೋ ಎಂದಾಗಿ ಬಿಟ್ಟಿದೆ. ವಾಸ್ತವವಾಗಿ ಪರಿಸರದ ಬಗ್ಗೆ ಕಾಳಜಿ ಬಂದಿದ್ದೇ ಈ ರೀತಿಯ ಗುರಿ ತಪ್ಪಿದ ಬಾಣದಿಂದ. 1960 ದಶಕದಲ್ಲಿ ಅಮೆರಿಕೆಯ ಪರಿಸರ ಪ್ರೇಮಿ ಪತ್ರಕರ್ತೆ ರಾಶೆಲ್ ಕಾರ್ಸನ್ ಸೈಲೆಂಟ್ ಸ್ಪ್ರಿಂಗ್ (ಮೌನ ವಸಂತ) ಎನ್ನುವ ಪುಸ್ತಕವನ್ನು ಬರೆದಳು. ಎರಡನೇ ಮಹಾಯುದ್ಧದ ನಂತರ ಅಮೆರಿಕೆಯಲ್ಲಿ ನಡೆದ ಕೃಷಿ ಕ್ರಾಂತಿಗೂ ವಸಂತ ಋತುವಿನಲ್ಲಿ ಸಾಮಾನ್ಯವಾಗಿ ಚಿಲಿಪಿಲಿಗುಟ್ಟುತ್ತಿದ್ದ ಹಕ್ಕಿಗಳ ಸಂಖ್ಯೆ ಕಡಿಮೆ ಆಗಿದ್ದಕ್ಕೂ ಈಕೆ ತಾಳೆ ಹಾಕಿದಳು. ಕೃಷಿಗಾಗಿ ಬಳಸುವ ರಾಸಾಯನಿಕಗಳು ಪರಿಸರವನ್ನು ಕಲುಷಿತಗೊಳಿಸಿ ತನ್ಮೂಲಕ ಹಕ್ಕಿಗಳ ಸಂತಾನೋತ್ಪತ್ತಿಯನ್ನೇ ಉಡುಗಿಸಿದೆ ಎನ್ನುವ ಸತ್ಯ ಆಗ ಬಯಲಾಯಿತು. ಹೀಗೆ ಆರಂಭವಾಯಿತು ಪರಿಸರವನ್ನು ಉಳಿಸಬೇಕೆನ್ನುವ ಮಹಾ ಹೋರಾಟ. ಈ ಹೋರಾಟ ಇನ್ನೂ ನಿಂತಿಲ್ಲ. ಹಾಗೆಯೇ ಪರಿಸರಕ್ಕೆ ಆಗುತ್ತಿರುವ ಘಾಸಿಯೂ ನಿಂತಿಲ್ಲ. ಇದರಿಂದಾಗಿ ಪರಿಸರದಲ್ಲಿರುವ ಜೀವಿಗಳಿಗೆ ಆಗುತ್ತಿರುವ ತೊಂದರೆಗಳೂ ನಿಂತಿಲ್ಲ. ಒಂದೆಡೆ ಪರಿಸರ ಮಾಲಿನ್ಯದಿಂದಾಗಿ ಮಾನವರ ಆರೋಗ್ಯ ಹದಗೆಡುತ್ತಿದೆ ಎನ್ನುವ ಕಾಳಜಿ ಹಾಗೂ ಮತ್ತೊಂದೆಡೆ ಈ ಪರಿಸರ ಮಾಲಿನ್ಯ ಇನ್ಯಾವ್ಯಾವ ಜೀವಿಗಳ ಮೇಲೆ ಹೇಗೆ ಅಡ್ಡ ಪರಿಣಾಮ ಬೀರುತ್ತಿದೆಯೋ ಎನ್ನುವ ಆತಂಕವೂ ಹೆಚ್ಚುತ್ತಿದೆ. ಈ ಆತಂಕಕ್ಕೆ ಇಂಬು ಕೊಡುವ ಎರಡು ಸುದ್ದಿಗಳು ಕಳೆದ ವಾರ ವಿಜ್ಞಾನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಸುವಿಗೆ ಕೊಟ್ಟ ಔಷಧ ರಣಹದ್ದುವಿಗೆ ವಿಷವಾಯಿತಂತೆ. ಹಾಗೆಯೇ ಎಲ್ಲೋ ಕೃಷಿಯಲ್ಲಿ ಬಳಸಿದ ಪುಟ್ಟ ಕೀಟಗಳನ್ನು ನಿಯಂತ್ರಿಸಲು ಬಳಸಿದ ಕೀಟವಿಷಗಳು ಇನ್ನೆಲ್ಲೋ ಇರುವ ದೈತ್ಯ ಕರಡಿಗಳನ್ನು ಸಂತಾನಹೀನರನ್ನಾಗಿ ಮಾಡುತ್ತಿರಬಹುದು ಎನ್ನುವ ಸುದ್ದಿ ಬಂದಿದೆ.

polar-bear-arctic-wildlife-snow-53425.jpeg

ಡೈಕ್ಲೊಫೆನಾಕ್ ಎನ್ನುವುದು ನೋವು ನಿವಾರಿಸುವ ಔಷಧ. ಮೂಳೆ ಮುರಿದರೋ, ಸ್ನಾಯು ಉಳುಕಿದರೋ, ತಲೆನೋವಿಗೋ, ಸಂಧಿವಾತಕ್ಕೋ ಇದನ್ನು ನಾವು ಬೇಕಾಬಿಟ್ಟಿ, ಯಾರ ಸಲಹೆಯನ್ನೂ ಕೇಳದೆಯೇ, ಬಳಸುತ್ತಿದ್ದೇವೆ. ಇದೇ ಔಷಧ ಹಾಗೂ ಇದರಂತಹುದೇ ನೋವು ಶಮನಕ ರಾಸಾಯನಿಕಗಳನ್ನು ಪಶುಪಾಲನೆಯಲ್ಲಿ ಬಳಸುತ್ತಾರೆ. ಹಸುಗಳಿಗೆ ನಮಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಇದನ್ನು ಚುಚ್ಚುತ್ತಾರೆ.  ಈ ಹಸುಗಳು ಸತ್ತಾಗ ರಣಹದ್ದುಗಳಿಗೆ ಆಹಾರವಾಗುತ್ತವಷ್ಟೆ. ಆಗ ಹಸುವಿನ ಮಾಂಸದೊಟ್ಟಿಗೆ ರಣಹದ್ದುಗಳ ದೇಹ ಸೇರಿದ ಔಷಧ ಅಲ್ಲೇ ಜೀರ್ಣವಾಗದೆ ಸಂಗ್ರಹವಾಗುತ್ತದೆಯಂತೆ. ಕ್ರಮೇಣ ಅದು ಮೂತ್ರಪಿಂಡಗಳನ್ನು ನಾಶ ಮಾಡಿ ರಣಹದ್ದುಗಳನ್ನು ಕೊಲ್ಲುತ್ತದೆ. ರಣಹದ್ದುಗಳಲ್ಲೇ ಹೀಗೇಕಾಗುತ್ತದೆ ಎಂದರೆ ಅದೊಂದು ಹಕ್ಕಿ. ಅದರಲ್ಲಿ ಮೂತ್ರ ತಯಾರಾಗುವುದಿಲ್ಲ. ಬದಲಿಗೆ ಯೂರಿಕ್ ಆಮ್ಲ ತಯಾರಾಗುತ್ತದೆ. ಈ ಯೂರಿಕ್ ಆಮ್ಲದ ತಯಾರಿಕೆಗೆ ಬೇಕಾದಂತಹ ಜೈವಿಕ ರಾಸಾಯನಿಕವನ್ನು ಡೈಕ್ಲೊಫೆನಾಕ್ ಮತ್ತು ಅದರಂತಹ ಔಷಧಗಳು ನಿಶ್ಶಕ್ತವನ್ನಾಗಿಸುತ್ತವೆ. ಹೀಗಾಗಿ ಯೂರಿಕ್ ಆಮ್ಲ ಮೂತ್ರಪಿಂಡದ ಕಲ್ಲಾಗುತ್ತದೆ. ಮೂತ್ರಪಿಂಡ ನಾಶವಾಗಿ ರಣಹದ್ದುಗಳು ಸಾವನ್ನಪ್ಪುತ್ತವೆ. ಈ ಕಾರಣದಿಂದಾಗಿ ಒಮ್ಮೆ ಲಕ್ಷಾಂತರ ಸಂಖ್ಯೆಯಲ್ಲಿ ಕಾಣುತ್ತಿದ್ದ ರಣಹದ್ದುಗಳು ಈಗ ನೂರಿನ್ನೂರರಷ್ಟು ಆಗಿವೆ. ಇವನ್ನು ನಾವು ಪ್ರೀತಿಯಿಂದ ಕಾಪಾಡಿಕೊಳ್ಳಬೇಕು ಎಂದು ಸೈನ್ಸ್ ಪತ್ರಿಕೆ ವರದಿ ಮಾಡಿತ್ತು.

ಇದೀಗ ಕೆಮಿಸ್ಟ್ರಿ ವರ್ಲ್ಡ್ ಪತ್ರಿಕೆ ಮತ್ತೊಂದು ಸುದ್ದಿ ಹೊತ್ತು ಬಂದಿದೆ. ಕೃಷಿಯಲ್ಲಿ ಬಳಸುವ ರಾಸಾಯನಿಕಗಳು ಧ್ರುವಕರಡಿಗಳಿಗೆ ಮರ್ಮಾಘಾತವಾಗುತ್ತಿವೆಯಂತೆ. ಹೌದು. ಮರ್ಮಾಘಾತವೇ ಸರಿ. ಏಕೆಂದರೆ ಈ ರಾಸಾಯನಿಕಗಳು ಧ್ರುವಕರಡಿಗಳ ಶಿಶ್ನಗಳನ್ನೇ ಮುರಿಯುತ್ತಿರಬಹುದು ಎಂದು ಗ್ರೀನ್ ಲ್ಯಾಂಡಿನ ವಿಜ್ಞಾನಿಗಳು ಸಂದೇಹಿಸಿದ್ದಾರಂತೆ. ಶಿಶ್ನಗಳೇ? ಅವು ಮುರಿಯುವುದು ಹೇಗೆ? ಶಿಶ್ನಗಳು ಎಂದರೆ ಮಾಂಸಲವಷ್ಟೆ ಎಂದಿರಲ್ಲವಾ? ನಿಜ. ಮಾನವರಲ್ಲಿ ಹಾಗೂ ಇನ್ನೂ ಹಲವು ಪ್ರಾಣಿಗಳಲ್ಲಿ ಶಿಶ್ನಗಳು ಕೇವಲ ಸ್ನಾಯುಗಳಿವೆ ಅಷ್ಟೆ. ಆದರೆ ಧ್ರುವಕರಡಿಗಳ ಶಿಶ್ನಗಳಲ್ಲಿ ಸ್ನಾಯುಗಳ ಜೊತೆಗೆ ಒಂದು ತೆಳುವಾದ ಮೂಳೆಯೂ ಇರುತ್ತದೆ. ರಾಸಾಯನಿಕಗಳ ಪ್ರಭಾವದಿಂದಾಗಿ ಈ ಮೂಳೆ ಮುರಿಯುವಷ್ಟು ಕೃಶವಾಗಿದೆಯಂತೆ. ಇವರು 1995 ರಿಂದ 2014 ರವರೆಗೆ ಧ್ರುವಪ್ರದೇಶದಲ್ಲಿದ್ದ ಕರಡಿಗಳ ಶಿಶ್ನಗಳ ಮೂಳೆಗಳನ್ನು ಎಲ್ಲೆಲ್ಲಿದ್ದವೋ ಅಲ್ಲಲ್ಲಿ ಪರೀಕ್ಷಿಸಿದ್ದಾರೆ. ಜೊತೆಗೆ ಅವಕಾಶ ದೊರೆತಾಗಲೆಲ್ಲ, ಮೂಳೆಗಳಲ್ಲದೆ ಉಳಿದ ದೇಹದ ಭಾಗಗಳನ್ನೂ ರಾಸಾಯನಿಕ ಪರೀಕ್ಷೆಗೆ ಒಳಪಡಿಸಿದ್ದಾರೆ. ಮತ್ತೂ ಒಂದು ಹೆಜ್ಜೆ ಮುಂದೆ ಸಾಗಿ ಈ ಕರಡಿಗಳು ಸಾಮಾನ್ಯವಾಗಿ ಇರುವ ನೆಲೆ, ಆ ನೆಲೆಗಳಲ್ಲಿ ಇರುವಂತಹ ರಾಸಾಯನಿಕ ಮಾಲಿನ್ಯದ ಮಟ್ಟವನ್ನು ಅಳೆದಿದ್ದಾರೆ. ಇವೆಲ್ಲವನ್ನೂ ಗಣಿತಸೂತ್ರಗಳ ಮೂಲಕ ತಾಳೆ ಹಾಕಿ, ಹೆಚ್ಚು ಕೀಟನಾಶಕಗಳ ಉಳಿಕೆ ದೇಹದಲ್ಲಿ ಇದ್ದಂತಹ ಕರಡಿಗಳ ಶಿಶ್ನಗಳ ಮೂಳೆಗಳು ಹೆಚ್ಚು ಶಿಥಿಲವಾಗಿದೆ ಎಂಬುದನ್ನೂ, ಹೆಚ್ಚು ಕೃಷಿ ಚಟುವಟಿಕೆ ಇರುವಂತಹ ಹಾಗೂ ತತ್ಪರಿಣಾಮವಾಗಿ ಹೆಚ್ಚು ಪರಿಸರ ಮಾಲಿನ್ಯವಿರುವಂತಹ ಪ್ರದೇಶಗಳಲ್ಲಿರುವ ಕರಡಿಗಳ ಶಿಶ್ನಮೂಳೆಯನ್ನೂ ಇತರೆ ಕರಡಿಗಳ ಶಿಶ್ನಮೂಳೆಗಳೂ ಎಷ್ಟು ಗಟ್ಟಿಯಾಗಿವೆ ಎಂದು ಹೋಲಿಸಿದ್ದಾರೆ. ಪರಿಸರ ಮಾಲಿನ್ಯ ಹೆಚ್ಚಿರುವೆಡೆಯ ಕರಡಿಗಳ ಶಿಶ್ನಗಳು ಹೆಚ್ಚೆಚ್ಚು ಕೃಷವಾಗಿದ್ದುವಂತೆ.

ಮನುಷ್ಯರಲ್ಲಿ ವಯಸ್ಸಾದ ಮೇಲೆ ಮೂಳೆಸವೆತ ಕಾಣಿಸಿಕೊಳ್ಳುತ್ತದಷ್ಟೆ. ಈ ಮೂಳೆಸವೆತ ಹೆಚ್ಚಿದ್ದಾಗ ಒಂದಿಷ್ಟು ತಟ್ಟಿದರೂ ಮೂಳೆ ಮುರಿಯುತ್ತದಷ್ಟೆ. ಮುಪ್ಪಾದವರ ಬವಣೆಯಲ್ಲಿ ಇದೂ ಒಂದು. ಧ್ರುವಕರಡಿಗಳಲ್ಲಿ ಯುವಕರಿಗೆ ಇದು ಬಲು ಬೇಗನೇ ಬರುತ್ತಿರಬಹುದು ಎಂದು ಅವುಗಳ ಮೂಳೆಗಳ ಅಧ್ಯಯನ ತಿಳಿಸುತ್ತದೆ. ಇವುಗಳ ಮೂಳೆಗಳ ಸರಾಸರಿ ಸಾಂದ್ರತೆ -1.44. ಮೂಳೆ ಸವೆತದ ಲಕ್ಷಣ ಇರುವ ಮೂಳೆಗಳ ಸಾಂದ್ರತೆ ಸಾಮಾನ್ಯವಾಗಿ -1.0ಕ್ಕಿಂತಲೂ ಕಡಿಮೆ ಇರುತ್ತದೆ. ಡಿಡಿಟಿ ಹಾಗೂ ಇತರೆ ಕೀಟನಾಶಕಗಳು ಉಳಿಕೆಗಳು ಕರಡಿಗಳ ದೇಹದಲ್ಲಿ ಬೇರೆ ಜೀವಿಗಳಲ್ಲಿರುವುದಕ್ಕಿಂತಲೂ ಹೆಚ್ಚು ಕಾಣಿಸಿದೆ. ಬಹುಶಃ ಇದುವೇ ಮೂಳೆ ಸವೆತಕ್ಕೆ ಕಾರಣವಿರಬಹುದು ಎಂದು ಅಧ್ಯಯನ ನಡೆಸಿದ ವಿಜ್ಞಾನಿ ಕ್ರಿಶ್ಚಿಯನ್ ಸೊನಿ ತಿಳಿಸಿದ್ದಾರೆ.

ಕರಡಿಗಳಲ್ಲೇ ಏಕೆ ಈ ಕೀಟನಾಶಕಗಳ ಅಂಶ ಹೆಚ್ಚಾಗಿದೆ ಎಂದು ನೀವು ಕೇಳಬಹುದು. ಜೀವಿವಿಜ್ಞಾನಿಗಳ ಪ್ರಕಾರ ಧ್ರುವ ಪ್ರದೇಶದಲ್ಲಿರುವ ಆಹಾರ ಸರಪಳಿಗಳಲ್ಲಿ ಕರಡಿಗಳೇ ಮೇಲ್ಪಂಕ್ತಿಯವು. ಅರ್ಥಾತ್, ಕರಡಿಗಳನ್ನು ತಿಂದು ಬದುಕುವ ಪ್ರಾಣಿಗಳು ಇಲ್ಲ. ಕೀಟನಾಶಕಗಳು ಆಹಾರ ಸರಪಳಿಯಲ್ಲಿ ಕೆಳಪಂಕ್ತಿಯಲ್ಲಿರುವ ಪ್ರಾಣಿಗಳಲ್ಲಿ ಕಡಿಮೆಯೂ, ಮೇಲ್ಪಂಕ್ತಿಯಲ್ಲಿರುವ ಪ್ರಾಣಿಗಳಲ್ಲಿ ಹೆಚ್ಚಾಗಿಯೂ ಸಂಗ್ರಹವಾಗುತ್ತವೆ. ಈ ವಿದ್ಯಮಾನವನ್ನು ಜೈವಿಕವರ್ಧನೆ (biomagnification) ಎಂದು ಕರೆಯುತ್ತಾರೆ. ಕರಡಿ ಸರಪಳಿಯ ಅತ್ಯುನ್ನತ ಸ್ಥಾನದಲ್ಲಿರುವದರಿಂದ ಅದು ತಿನ್ನುವ ಪ್ರಾಣಿಗಳಲ್ಲಿಯೂ ಹೆಚ್ಚೆಚ್ಚು ಉಳಿಕೆ ಇರುತ್ತದೆ. ಹೀಗಾಗಿ ಇದಕ್ಕೆ ಅಪಾಯ ಹೆಚ್ಚು. ರಣಹದ್ದುಗಳಿಗೂ ಇದೇ ಕಾರಣದಿಂದಲೇ ಅಪಾಯ ಹೆಚ್ಚು.

ಮೂಳೆ ಸವೆತಕ್ಕೂ ಸಂತಾನೋತ್ಪತ್ತಿಗೂ ಸಂಬಂಧವೇನು ಎಂದಿರಾ? ಧ್ರುವಕರಡಿಗಳ ಶಿಶ್ನಗಳಲ್ಲಿ ತೆಳು ಮೂಳೆಗಳಿವೆ. ಧ್ರುವಕರಡಿಗಳು ಕೂಡುವುದು ವರ್ಷದಲ್ಲಿ ಒಮ್ಮೆಯಷ್ಟೆ. ಆ ಸಮಯದಲ್ಲಿ ಗಂಡುಗಳು ಎಷ್ಟು ಹೆಣ್ಣುಗಳು ಸಿಗುತ್ತವೆಯೋ, ಎಷ್ಟೆಷ್ಟು ದೀರ್ಘಕಾಲ ಕೂಡಬಹುದೋ ಅಷ್ಟಷ್ಟು ಕೂಡಲು ಪ್ರಯತ್ನಿಸುತ್ತವೆ. ಇವು ಧ್ರುವಕರಡಿಗಳ ಉಳಿವಿಗೆ ಬಲು ಮುಖ್ಯ. ದೊರೆತ ಅಲ್ಪ ಅವಕಾಶದಲ್ಲಿಯೇ ಸಂತಾನೋತ್ಪತ್ತಿಯನ್ನು ಹೆಚ್ಚೆಚ್ಚು ಮಾಡಬಹುದು. ಇದಕ್ಕೆ ಅನುಕೂಲವಾಗಲೋ ಎನ್ನುವಂತೆ ಕರಡಿಗಳ ಶಿಶ್ನಗಳಲ್ಲಿ ಮೂಳೆಗಳಿವೆ.

ಶಿಶ್ನ ಹಾಗೂ ಯೋನಿಗಳ ವಿನ್ಯಾಸ ಪ್ರತಿಯೊಂದು ಜೀವಿಯ ಸಂತಾನೋತ್ಪತ್ತಿಯಲ್ಲಿಯೂ ಮುಖ್ಯ ಪಾತ್ರ ವಹಿಸುತ್ತದೆನ್ನುವುದನ್ನು ನಾವು ಮರೆಯುವ ಹಾಗಿಲ್ಲ. ಈ ಪ್ರಮುಖ ಅಂಗವೇ ಶಿಥಿಲವಾದರೆ? ಮೂಳೆಸವೆತದಿಂದಾಗಿ ಕರಡಿಗಳ ಶಿಶ್ನಗಳು ಮೃದುವಾಗುತ್ತವೆ. ದೀರ್ಘಕಾಲ ಕೂಡುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ. ಇದು ಅವುಗಳ ಸಂತಾನೋತ್ಪತ್ತಿಯನ್ನು ಬಾಧಿಸಬಹುದು ಎಂದು ಸೊನಿ ಊಹಿಸಿದ್ದಾರೆ. ಏರುತ್ತಿರುವ ತಾಪಮಾನ, ಕಡಿಮೆಯಾಗುತ್ತಿರುವ ಆಹಾರ ಹಾಗೂ ನೆಲೆ, ಮನುಷ್ಯನ ಕಾಟ ಇವುಗಳೂ ಕರಡಿಗಳ ಸಂಖ್ಯೆ ಕ್ಷೀಣಿಸುವುದಕ್ಕೆ ಕಾರಣ ಎನ್ನುತ್ತಾರೆ ಪರಿಸರ ವಿಜ್ಞಾನಿಗಳು. ಇವುಗಳಿಗಾದರೂ ಹೇಗಾದರೂ ಒಗ್ಗಿಕೊಳ್ಳಬಹುದು. ಆದರೆ ಸಂತಾನೋತ್ಪತ್ತಿಗೆ ಅವಶ್ಯಕವಾದ ಶಿಶ್ನವೇ ಶಿಥಿಲವಾದರೆ ಎನ್ನುವುದೇ ಇವರ ಪ್ರಶ್ನೆ. ಅಲ್ಲವೇ?

ಕೀಟಗಳಿಗೆ ಬಿಟ್ಟ ಬಾಣ ಹೀಗೆ ಪಾಪ ಕರಡಿಗಳ ಮರ್ಮಾಂಗಕ್ಕೇ ತಾಗುತ್ತಿರುವುದು ವಿಧಿಯ ವಿಚಿತ್ರ ಎನ್ನೋಣವೋ, ಮಾನವನ ಅಜ್ಞಾನದ ಕುರುಹು ಎನ್ನೋಣವೋ?

ಕೊಳ್ಳೇಗಾಲ ಶರ್ಮ

 

ಆಕರ: T Daugaard-Petersen et al, Environ. Int., 2018, 114, 212 DOI: 10.1016/j.envint.2018.02.022)

  1. Inga Vesper, Persistant pollutants push polar bear penises to breaking point, Chemistry World, 20 March 2018

 

Published in: on ಮಾರ್ಚ್ 23, 2018 at 6:18 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಜಾಣಸುದ್ದಿ

ವಿಜ್ಞಾನ, ವಿಚಾರ, ವಿಸ್ಮಯಗಳಿಗೆ ಮೀಸಲಾದ ಧ್ವನಿಪತ್ರಿಕೆ. ಪ್ರತಿವಾರ, ಹೊಸ ಜ್ಞಾನ.

ಸಂಚಿಕೆ 2, ಸೆಪ್ಟೆಂಬರ್ 16, 2017

ಸೊನ್ನೆಗೆಷ್ಟು ವಯಸ್ಸು?

ಇದೇನಿದು ಪ್ರಶ್ನೆ ಎನ್ನಬೇಡಿ. ಸೊನ್ನೆಯನ್ನು ಭಾರತೀಯ ಗಣಿತಜ್ಞರು ಕಂಡು ಹಿಡಿದರು ಎನ್ನುವುದು ನಮಗೆಲ್ಲ ತಿಳಿದ ಸಂಗತಿ. ಸೊನ್ನೆ ಅಥವಾ ಶೂನ್ಯ ಎನ್ನುವ ಯಾವುದೇ ಬೆಲೆಯಿಲ್ಲದ ಅಂಕಿಯನ್ನು ಸಂಖ್ಯೆಗಳಲ್ಲಿ ಬಳಸುವ ವಿಧಾನವನ್ನು ಜಾರಿಗೆ ತಂದು ಜಗತ್ತಿಗೆ ಅಮೂಲ್ಯ ಕೊಡುಗೆಯನ್ನು ನೀಡಿದ್ದು ಭಾರತೀಯರ ಹೆಗ್ಗಳಿಕೆ. ಆದರೆ ಇದನ್ನು ಕಂಡು ಹಿಡಿದಿದ್ದು ಯಾವಾಗ?

ಈ ಪ್ರಶ್ನೆಗೆ ಖಚಿತವಾದ ಉತ್ತರವನ್ನು ಇದುವರೆವಿಗೂ ನೀಡಲಾಗಿರಲಿಲ್ಲ. ಸೊನ್ನೆಯನ್ನು ಸುಮಾರು ಸಾವಿರದೈನೂರು ಹಿಂದೆ ಬಳಸಲಾಗಿತ್ತು ಎಂದು ಅಂದಾಜಿಸಲಾಗಿತ್ತು. ಈ ಅಂದಾಜಿಗೆ ಮೂಲ ಭಾರತದ ಪುರಾತನ ಗಣಿತ ಕೃತಿಗಳಲ್ಲಿ ಅದರ ಉಲ್ಲೇಖ ಹಾಗೂ ಇದನ್ನು ಆಧರಿಸಿ ಪಾಶ್ಚಾತ್ಯ ಕೃತಿಗಳಲ್ಲಿ ಕಂಡ ಉಲ್ಲೇಖಗಳು. ಈ ಉಲ್ಲೇಖಗಳಿಗೆ ಹಿಂದೆಯೇ ಸೊನ್ನೆಯ ಸೃಷ್ಟಿಯಾಗಿರಬೇಕು ಎಂದಷ್ಟೆ ಅಂದಾಜು ಮಾಡಲು ಸಾಧ್ಯವಾಗಿತ್ತು.

ಸೊನ್ನೆಗೆ ಮುನ್ನ ಗಣಿತ ಇರಲಿಲ್ಲವೆನ್ನಬೇಡಿ. 3000 ವರ್ಷಗಳ ಹಿಂದೆಯೇ ಬೆಬಿಲೋನಿಯನ್ನರು ಹಾಗೂ ಮಾಯನ್ನರು ಗಣಿತವನ್ನು ಬಳಸುತ್ತಿದ್ದರು. ಭಾರತ, ಚೀನಾಗಳಲ್ಲಿಯೂ ಗಣಿತವನ್ನು ಕಲಿಸುತ್ತಿದ್ದರು, ಬಳಸುತ್ತಿದ್ದರು. ಆದರೆ ಸೊನ್ನೆ ಎನ್ನುವ ಅಂಕಿಯ ಬಳಕೆ ಇರಲಿಲ್ಲ. ಇದರಿಂದಾಗಿ ಮಾಯನ್ನರು ಬರೆದ ದಾಖಲೆಗಳಲ್ಲಿ 12, 102 ಹಾಗೂ 1200 ಎಲ್ಲವೂ ಒಂದೇ ರೀತಿ ಕಾಣುತ್ತಿದ್ದುವು. ಕಾಲಾಂತರದಲ್ಲಿ ಈ ಸಂಖ್ಯೆಗಳನ್ನು ಸರಿಯಾಗಿ ಬರೆಯಲು ಅಂಕೆಗಳಿಲ್ಲದ ಸ್ಥಾನದಲ್ಲಿ ಖಾಲಿ ಜಾಗೆಯನ್ನು ಬಿಟ್ಟು ಬರೆಯುವ ಪದ್ಧತಿ ಇತ್ತು. ಇಂತಹ ಖಾಲಿ ಸ್ಥಾನಗಳನ್ನು ಪಿಂಗಳ ಮುನಿ ಶೂನ್ಯ ಎಂದು ಹೆಸರಿಸಿದ್ದ.

ಹೀಗೆ ಏನೂ ಇಲ್ಲದ ಕಡೆಗೆ ಸೊನ್ನೆ ಎನ್ನುವ ಅಂಕೆಯನ್ನು ಬರೆಯುವ ಪದ್ಧತಿ ಬಂದಿದ್ದು ಕ್ರಿಸ್ತಶಕ 628ರ ಸುಮಾರಿನಲ್ಲಿ ಬ್ರಹ್ಮಗುಪ್ತನು ಬರೆದ ಬ್ರಹ್ಮಪುಟಸಿದ್ಧಾಂತದಲ್ಲಿ ಇರುವ ಉಲ್ಲೇಖದಿಂದ ಅಂದಾಜಿಸಿದ್ದಾರೆ. ಆದರೆ ಇದೀಗ ಲಂಡನ್ನಿನ ವಸ್ತು ಸಂಗ್ರಹಾಲಯದಲ್ಲಿರುವ ತಾಳೆಪತ್ರವೊಂದು ಸೊನ್ನೆ ಇನ್ನೂ ಹಳೆಯದು ಎಂದು ತೋರಿಸಿದೆ.

ಬನಸ್ಥಲಿ ತಾಳೆಪತ್ರ ಎನ್ನುವ ಈ ದಾಖಲೆ ಇಂದಿನ ಪಾಕಿಸ್ತಾನದ ಪೆಶಾವರ ಪ್ರಾಂತ್ಯದಲ್ಲಿರುವ ಬನಸ್ಥಲಿ ಎನ್ನುವ ಹಳ್ಳಿಯಲ್ಲಿ ಸುಮಾರು 1881ರಲ್ಲಿ ದೊರಕಿತ್ತು. ಇದರ ಹತ್ತಾರು ಹಾಳೆಗಳಲ್ಲಿ ಅಲ್ಲಲ್ಲಿ ಇಂಗ್ಲೀಷಿನ ಪ್ಲಸ್ ನಂತಹ ಚಿಹ್ನೆ ಇತ್ತು. ಸಂಖ್ಯೆಗಳಲ್ಲಿರುವ ಖಾಲಿ ಜಾಗೆಯನ್ನು ಭರ್ತಿ ಮಾಡಲು ಇದನ್ನು ಬಳಸಿದ್ದರು.  ಅಂದಿನ ವರ್ತಕರಿಗೆ ಗಣಿತದ ಪಾಠಗಳನ್ನು ತಿಳಿಸಿಕೊಡಲು ಬಹುಶಃ ಈ ತಾಳೆಪತ್ರವನ್ನು ಬಳಸಿದ್ದರು ಎಂದು ಊಹಿಸಲಾಗಿದೆ. ಇದರಲ್ಲಿ ಗಣಿತದ ಹಲವು ಪಾಠಗಳಿದ್ದುವು. ಆದರೆ ಇವು ಯಾವ ಕಾಲದವು ಎಂದು ನಿಷ್ಕರ್ಷೆ ಮಾಡಲಾಗಿರಲಿಲ್ಲ.

Bakhshalidoc2

ಬನಸ್ಥಲಿ ತಾಳೆಪತ್ರ: After the Guardian

ಪುಡಿ ಪುಡಿಯಾಗಿ ಉದುರುತ್ತಿರುವ ಈ ದಾಖಲೆಯನ್ನು ಇತ್ತೀಚೆಗೆ ರೇಡಿಯೊಕಾರ್ಬನ್ ಡೇಟಿಂಗ್ ತಂತ್ರದಿಂದ ಪರೀಕ್ಷಿಸಲಾಯಿತು. ಈ ತಂತ್ರದಲ್ಲಿ ಯಾವುದೇ ವಸ್ತುವಿನಲ್ಲಿರುವ ಕಾರ್ಬನ್ 12 ಮತ್ತು ಕಾರ್ಬನ್ 14 ರ ನಡುವಣ ಪರಿಮಾಣವನ್ನು ಪತ್ತೆ ಮಾಡಬಹುದು. ಕಾರ್ಬನ 14ರಿಂದಲೇ ಕಾರ್ಬನ್ 12 ಉತ್ಪತ್ತಿಯಾಗುತ್ತದೆ. ಹೀಗಾಗಿ ಸುಲಭವಾಗಿ ಆ ವಸ್ತು ಎಷ್ಟು ಹಳೆಯದು ಎಂದು ಊಹಿಸಬಹುದು. ಪರೀಕ್ಷೆಗಳ ನಂತರ ಈ ಹಾಳೆಗಳಲ್ಲಿ ಸೊನ್ನೆಯ ಉಲ್ಲೇಖವಿರುವ ಒಂದು ಪುಟ ಕ್ರಿಸ್ತಶಕ 200ರ ಸುಮಾರಿನದ್ದು ಎಂದು ಖಾತ್ರಿ ಪಡಿಸಿದೆ. ಅರ್ಥಾತ್, ಸೊನ್ನೆಯ ಬಳಕೆ ನಾವು ತಿಳಿದಿದ್ದಕ್ಕಿಂತಲೂ 500 ವರ್ಷ ಹಿಂದೆಯೇ ಆಗಿತ್ತು.

ಇನ್ನೂ ಹಿಂದೆ ಸೊನ್ನೆಯ ಬಳಕೆ ಆಗಿದ್ದಿರಬಹುದು. ಆದರೆ ಅದಕ್ಕೆ ದಾಖಲೆ ಸಿಗುವವರೆಗೂ ಇದುವೇ ಸೊನ್ನೆ ಎನ್ನುವ ಅಂಕಿಯ ಅಥವಾ ಶೂನ್ಯದ ಸಂಕೇತದ ಮೊದಲ ವೃತ್ತಾಂತ ಎನ್ನಬಹುದು. ಬನಸ್ಥಲಿ ತಾಳೆಪತ್ರವನ್ನು ಇಂಗ್ಲೆಂಡಿನ ಬೋಡಿಯನ್ ಗ್ರಂಥಾಲಯ ಅಕ್ಟೋಬರ್ 4 ರಿಂದ ನಡೆಯಲಿರುವ ವಸ್ತುಪ್ರದರ್ಶನವೊಂದರಲ್ಲಿ ಸಾರ್ವಜನಿಕರ ವೀಕ್ಷಣೆಗಾಗಿ ಇಡಲಿದೆ.

ಹೆಚ್ಚಿನ ಓದಿಗೆ: https://www.theguardian.com/science/2017/sep/14/much-ado-about-nothing-ancient-indian-text-contains-earliest-zero-symbol

ಚುಟುಕು ಚುರುಮುರಿ

ಪತಂಗ – ಚಿಟ್ಟೆ

ನಿಲ್ಲು ನಿಲ್ಲೇ ಪತಂಗ ಅನ್ನುವ ಹಾಡು ಕೇಳಿದ್ದೀರಿ. ಹಾಗೆಯೇ ಚಿಟ್ಟೆ, ಚಿಟ್ಟೆ ಬಣ್ಣದ ಚಿಟ್ಟೆ ಹಾಡನ್ನೂ ಹಾಡಿದ್ದೀರಿ. ಪತಂಗ ಮತ್ತು ಚಿಟ್ಟೆಗಳಲ್ಲಿ ಏನು ವ್ಯತ್ಯಾಸ? ಬಣ್ನವೇ? ಸಾಮಾನ್ಯವಾಗಿ ನಾವು ಕನ್ನಡದಲ್ಲಿ ಪತಂಗ ಮತ್ತು ಚಿಟ್ಟೆ ಎರಡನ್ನೂ ಚಿಟ್ಟೆ ಎಂದೇ ಕರೆದು ಬಿಡುತ್ತೇವೆ. ಆದರೆ ವಿಜ್ಞಾನಿಗಳು ಇವುಗಳ ಮಧ್ಯೆ ಇರುವ ಸೂಕ್ಷ್ಮ ವ್ಯತ್ಯಾಸವನ್ನು ಗುರುತಿಸುತ್ತಾರೆ.

ನಮ್ಮ ಕಣ್ಣಿಗೆ ಎದ್ದು ತೋರುವ ಎರಡು ವ್ಯತ್ಯಾಸಗಳಿಂದ ಚಿಟ್ಟೆ ಮತ್ತು ಪತಂಗಗಳನ್ನು ಗುರುತಿಸಬಹುದು. ಪತಂಗಗಳ ಮೀಸೆ ಯಾವಾಗಲೂ ಹಕ್ಕಿಯ ಗರಿಗಳ ಹಾಗೆ ಕಾಣುತ್ತದೆ. ಚಿಟ್ಟೆಯ ಮೀಸೆ ಉದ್ದ ದಾರದ ತುದಿಯಲ್ಲಿ ಗಂಟು ಇದ್ದಂತೆ ತೋರುತ್ತದೆ. ಚಿಟ್ಟೆಗಳು ಕುಳಿತಾಗ ರೆಕ್ಕೆಗಳನ್ನು ನೀಟಾಗಿ ಮಡಚಿಕೊಂಡು ಕುಳಿತುಕೊಳ್ಳುತ್ತವೆ. ಪತಂಗಗಳು ರೆಕ್ಕೆಗಳನ್ನು ಬೆನ್ನ ಮೇಲೆ ವಿಶಾಲವಾಗಿ ಹರಡಿಕೊಂಡು ಕುಳಿತುಕೊಳ್ಳುತ್ತವೆ. ಇವು ಸಾಮಾನ್ಯ ನಿಯಮಗಳು. ನಿಸರ್ಗದಲ್ಲಿ ಎಲ್ಲ ನಿಯಮಗಳಿಗೂ ಅಪವಾದಗಳಿದ್ದೇ ಇರುತ್ತವೆ ಎನ್ನುವುದನ್ನು ಮರೆಯಬೇಡಿ.

ಒಂದು ಸ್ವಾರಸ್ಯವೆಂದರೆ ಹಾರುವ ಚಿಟ್ಟೆಯಾಗಲಿ, ಪತಂಗವಾಗಲಿ ಆಹಾರ ಸೇವಿಸುವುದಿಲ್ಲ ಹೆಚ್ಚೆಂದರೆ ಒಂದಿಷ್ಟು ಮಕರಂದ ಕುಡಿಯಬಹುದು. ಅವುಗಳ ಹಾರಾಟದ ಒಂದೇ ಗುರಿ ಸಂಗಾತಿಯನ್ನು ಹುಡುಕಿ, ಮೊಟ್ಟೆಯಿಡುವುದು. ಅಷ್ಟೆ.

ಹಗ್ಗ ಸೆಳೆ, ದೀಪ ಹಚ್ಚು

ಬಾವಿಯಿಂದ ನೀರು ಸೇದುವುದನ್ನು ನೋಡಿರಬೇಕಲ್ಲ. ಈಗಲೂ ಕೆಲವು ಹಳ್ಳಿಗಳಲ್ಲಿ ರಾಟೆ, ಹಗ್ಗಗಳನ್ನು ಉಪಯೋಗಿಸಿ ಬಾವಿಯಿಂದ ನೀರನ್ನು ಮೇಲೆತ್ತುವ ಪದ್ಧತಿ ಇದೆ. ಇದೇ ರೀತಿಯಲ್ಲಿ ರಾಟೆ, ಹಗ್ಗಗಳನ್ನು ಬಳಸಿ ವಿದ್ಯುತ್ ದೀಪಗಳನ್ನು ಉರಿಸುವ ಉಪಾಯವನ್ನು ಗ್ರಾವಿಟಿ ಲೈಟ್ ಫೌಂಡೇಶನ್ ಸಂಸ್ಥೆ ಹುಡುಕಿದೆ. ಸುಮಾರು ಇಪ್ಪತ್ತು ನಿಮಿಷಗಳ ಕಾಲ ಬೆಳಕನ್ನು ಪಡೆಯಲು ನೀವು ಮಾಡಬೇಕಾಗಿದ್ದು ಇಷ್ಟೆ. ದೀಪದ ಜೊತೆಗಿರುವ ಹಗ್ಗವನ್ನು ಸೆಳೆದು, ನೆಲದ ಮೇಲಿರುವ ಭಾರವನ್ನು ಸೂರಿಗೆ ಏರಿಸಿ ಬಿಡುವುದು. ಅಷ್ಟೆ.

gravitylight

ಗ್ರಾವಿಟಿ ಲೈಟ್ ರಾಟೆ

ಸುಮಾರು ಹನ್ನೆರಡು ಕಿಲೋ ತೂಕದ ಭಾರವನ್ನು ಎಳೆದು ಸೂರು ಮುಟ್ಟಿಸಿ ಬಿಟ್ಟರೆ ಸಾಕು. ಅದು ತನ್ನ ತೂಕದ ಭಾರದಿಂದಲೇ ಕೆಳಗೆ ಇಳಿಯುತ್ತದೆ. ಆದರೆ ದಿಢೀರನೆ ಕೆಳಗೆ ಬೀಳದ ಹಾಗೆ ರಾಟೆಯಲ್ಲಿ ವಿಶೇಷ ಗಿಯರುಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಗಿಯರುಗಳು ಮೇಲೇರಿದ ತೂಕ ಧಬಕ್ಕನೆ ಕೆಳಗೆ ಬೀಳದಂತೆ ನಿಧಾನವಾಗಿ ಕೆಳಗೆ ಇಳಿಸುವುದಷ್ಟೆ ಅಲ್ಲ, ಜೊತೆ, ಜೊತೆಗೇ ಪುಟ್ಟ ಡೈನಾಮೋವೊಂದನ್ನೂ ತಿರುಗಿಸುತ್ತವೆ. ಈ ಡೈನಾಮೋ ಉತ್ಪಾದಿಸುವ ವಿದ್ಯುತ್ತು ದೀಪವನ್ನು ಬೆಳಗಿಸುತ್ತದೆ.

ಅಯ್ಯೋ ಇಷ್ಟೆಲ್ಲ ಕಷ್ಟ ಪಡಬೇಕೆ ಎನ್ನಬೇಡಿ. ನೀವು ಕೊಳ್ಳಬೇಕಾಗಿರುವುದು ದೀಪ ಹಾಗೂ ಅದಕ್ಕೆ ಜೋಡಿಸಿರುವ ರಾಟೆಯನ್ನು ಅಷ್ಟೆ. ತೂಕಕ್ಕೆ ನಿಮಗಿಷ್ಟ ಬಂದ ವಸ್ತುವನ್ನು ಚೀಲದಲ್ಲಿ ಹಾಕಿ ಕೊಕ್ಕೆಗೆ ನೇತು ಬಿಡಬಹುದು. ರಾಟೆಯ ವಿನ್ಯಾಸ ಹೇಗಿದೆ ಎಂದರೆ ನೀವು ಇಪ್ಪತ್ತು ಕಿಲೋ ತೂಕವನ್ನು ಎತ್ತುತ್ತಿದ್ದರೂ ಅದು ಕೇವಲ ಮೂರು ಕಿಲೋನಂತೆ ಭಾಸವಾಗುತ್ತದೆ. ತೂಕ ಸೂರಿನಿಂದ ಕೆಳಗೆ ಇಳಿಯಲು ಸುಮಾರು 20 ನಿಮಿಷಗಳು ಬೇಕು. ತದನಂತರ ಮತ್ತೊಮ್ಮೆ ರಾಟೆ ಸೇದಿದರೆ ಸಾಕು.

ಹಳೆಯ ಗಡಿಯಾರದಲ್ಲಿರುವ ಸ್ಪ್ರಿಂಗು ಗಿಯರು ವ್ಯವಸ್ಥೆಯನ್ನೇ ಬಳಸಿಕೊಂಡು ನಿಧಾನವಾಗಿ ಕೆಳಗಿಳಿಯುವ ತೂಕದ ರಾಟೆಯನ್ನು ಗ್ರಾವಿಟಿ ಲೈಟ್ ರೂಪಿಸಿದೆ. ಈ ರಾಟೆಯನ್ನು ಕೊಂಡೊಯ್ದರೆ ಸಾಕು, ದಟ್ಟ ಕಾಡಿನಲ್ಲೂ, ಕಲ್ಲು ಮಣ್ಣು ತುಂಬಿದ ಚೀಲವನ್ನು ಮೇಲೆತ್ತಿ ಬೆಳಕನ್ನು ಒದಗಿಸಿಕೊಳ್ಳಬಹುದು.

ಆಹಾ. ವ್ಯಾಯಾಮದ ಜೊತೆಗೆ ಉಚಿತವಾಗಿ ಬೇಕೆಂದ ಕಡೆ ಬೆಳಕು ಸಿಕ್ಕ ಹಾಗೆ ಅಲ್ಲವೇ?

https://gravitylight.org/how-it-works/

ಮಾಸದ ಬಣ್ಣ

ನವಿಲಿನ ಗರಿಯಂತಹ, ಚಿಟ್ಟೆಯ ರೆಕ್ಕೆಯಂತಹ ಬಣ್ಣದ ಬಟ್ಟೆಗಳಿದ್ದರೆ ಎಷ್ಟು ಚೆನ್ನ ಎಂದು ಕನಸು ಕಂಡಿದ್ದಿರಾ? ಇದೋ. ಶೀಘ್ರವೇ ಈ ಕನಸೂ ನನಸಾಗಬಹುದು. ಚಿಟ್ಟೆ, ನವಿಲಿನ ಬಣ್ಣಗಳಂತೆಯೇ ಗಾಳಿ, ಬೆಳಕಿಗೆ ಮಾಸದ ಮಿರು, ಮಿರುಗುವ ಬಣ್ಣವನ್ನು ತಯಾರಿಸಬಹುದಂತೆ.

ಅಮೆರಿಕೆಯ ಅಕ್ರಾನ್ ವಿಶ್ವವಿದ್ಯಾನಿಲಯದ ವಿಜ್ಞಾನಿ ಆಲಿ ಧಿನೋಜವಾಲಾ ನಾರ್ಥ್ ವೆಸ್ಟರ್ನ ವಿಶ್ವವಿದ್ಯಾನಿಲಯ ಹಾಗೂ ಕೆಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿಜ್ಞಾನಿಗಳ ಜೊತೆಗೂಡಿ ಹೀಗೊಂದು ಉಪಾಯವನ್ನು ರೂಪಿಸಿದ್ದಾರೆ. ನಮ್ಮ ಚರ್ಮ ಹಾಗೂ ಕೂದಲನ್ನು ಕಪ್ಪಗಿರಿಸುವ ಬಣ್ಣದ ರಾಸಾಯನಿಕವನ್ನೇ ಜಾಣತನದಿಂದ ಚಿಟ್ಟೆ, ನವಿಲಿನ ಗರಿಯಂತೆ ಬಣ್ಣಬಣ್ಣವನ್ನು ಸೂಸುವಂತೆ ಮಾಡಿದ್ದಾರೆ.

ಚಿಟ್ಟೆಯ ರೆಕ್ಕೆ ಹಾಗೂ ನವಿಲಿನ ಗೆರೆಗಳು ಬಣ್ಣವನ್ನು ಸೂಸುವುದಕ್ಕೆ ಕಾರಣ ಅವುಗಳ ರಚನೆ. ಈ ಸೂಕ್ಷ್ಮರಚನೆಯಿಂದಾಗಿ ಅವುಗಳ ಮೇಲೆ ಬಿದ್ದ ಬೆಳಕು ನೀರಿನ ಮೇಲೆ ಹರಡಿದ ಎಣ್ಣೆಯ ಪದರದಂತೆಯೇ ಬೆಳಕನ್ನು ಪ್ರತಿಫಲಿಸುತ್ತದೆ. ಪ್ರತಿಫಲಿಸುವ ಬೆಳಕಿನ ವಿವಿಧ ಅಂಗಗಳು ಜೊತೆಗೂಡಿಯೋ, ಒಂದಿನ್ನೊಂದನ್ನು ಕಳೆಯುವುದರಿಂದಲೋ, ಕೆಲವು ಬಣ್ಣಗಳಷ್ಟೆ ಗಾಢವಾಗಿ ತೋರ್ಪಡುತ್ತವೆ. ಇದನ್ನು ವ್ಯತೀಕರಣ ಕ್ರಿಯೆ ಎನ್ನುತ್ತಾರೆ.

ನಮ್ಮ ಚರ್ಮ ಹಾಗೂ ಕೂದಲಿಗೆ ಕಪ್ಪು ಬಣ್ಣ ಕೊಡುವ ಮೆಲಾನಿನ್ ಎನ್ನುವ ರಾಸಾಯನಿಕವನ್ನು ಅತಿ ಸೂಕ್ಷ್ಮ ಗಾತ್ರದ ಸಿಲಿಕಾ ಹರಳುಗಳೊಳಗೆ ಕೂರಿಸಿ ವಿಶೇಷ ಗುಂಡುಗಳನ್ನು ಆಲಿ ಧಿನೋಜವಾಲಾ ಸೃಷ್ಟಿಸಿದ್ದಾರೆ. ಸಿಲಿಕಾದ ಗುಂಡುಗಳೊಳಗೆ ಹೊಕ್ಕು ಮರಳಿ ಪುಟಿದು ಬರುವ ಬೆಳಕು ವ್ಯತೀಕರಣಗೊಂಡು ಮಿರುಗುವ ಬಣ್ಣಗಳು ಸೃಷ್ಟಿಯಾಗುತ್ತವೆಯಂತೆ. ಕೃತಕವಾಗಿ ಸೃಷ್ಟಿಸಿದ ಮೆಲಾನಿನ್ ಮತ್ತು ಸಿಲಿಕಾದ ಹರಳುಗಳನ್ನಷ್ಟೆ ಬಳಸಿದರೂ, ಬೇಕೆಂದ ಬಣ್ನವನ್ನು ಸೃಷ್ಟಿಸುವುದು ಸಾಧ್ಯ ಎಂದು ಇವರು ಪರೀಕ್ಷೆಗಳ ಮೂಲಕ ಖಚಿತ ಪಡಿಸಿಕೊಂಡಿದ್ದಾರೆ.

ಇನ್ನು ಈ ಸೂಕ್ಷ್ಮ ಹರಳುಗಳನ್ನು ಬಟ್ಟೆಯ ಮೇಲೆ ಹಚ್ಚುವುದಷ್ಟೆ ಉಳಿದಿರುವುದು. ಬಣ್ಣ, ಬಣ್ಣದ ಮಿರುಗುವ ಬಟ್ಟೆ ಸಿದ್ಧ. ರಾಸಾಯನಿಕ ಬಣ್ಣಗಳಂತೆ ಇದು ಬಿಸಿಲಿಗೂ, ತಾಪಕ್ಕೂ ಮಾಸುವುದಿಲ್ಲ ಎನ್ನುವುದು ಒಂದು ಲಾಭ. ಬೋನಸ್ ಸಂಗತಿ ಎಂದರೆ, ಒಗೆದಾಗ ರಾಸಾಯನಿಕ ಬಣ್ಣಗಳಂತೆ ನೀರಿಗೆ ವಿಷ ಲೋಹಗಳನ್ನು ಕೂಡಿಸಿ ಮಲಿನಗೊಳಿಸುವುದಿಲ್ಲ. ಇದರ ವೀಡಿಯೋವನ್ನು ಇಲ್ಲಿ ನೋಡಿ

ಹೆಚ್ಚಿನ ಓದಿಗೆ: http://www.sciencemag.org/news/2017/09/new-dyes-don-t-fade-are-made-same-molecule-colors-your-skin

ಜಾಣ ನುಡಿ

“ಇಡೀ ಗಣಿತ ವಿಜ್ಞಾನಕ್ಕೆ ಸೊನ್ನೆಯೇ ಆಧಾರ. ಗಣಿತದಲ್ಲಿ ಯಾವುದೇ ಮೌಲ್ಯವನ್ನು ನಿರ್ಧರಿಸುವುದೂ ಸೊನ್ನೆಯೇ.”

– ಜರ್ಮನ್ ಪ್ರಕೃತಿ ವಿಜ್ಞಾನಿ ಲೊರೆಂಜ್

(ಇದು ಜಾಣಸುದ್ದಿ ಧ್ವನಿಪತ್ರಿಕೆಯ ಎರಡನೆಯ ಸಂಚಿಕೆಯಲ್ಲಿ ಪ್ರಕಟವಾಗಿರುವ ಸುದ್ದಿಗಳ ಪಾಠ. ಸುದ್ದಿ ಕೇಳಬೇಕೆನ್ನುವವರು ಅಥವಾ ಹೆಚ್ಚಿನ ವಿವರ ಹಾಗೂ ಪ್ರಶ್ನೆಗಳಿದ್ದರೆ 9886640328 ನಂಬರಿಗೆ ಮೆಸೇಜು ಮಾಡಿ. ವಾಟ್ಸಪ್ಪಿನಲ್ಲಿ ಧ್ವನಿಪತ್ರಿಕೆಯನ್ನು ಕಳಿಸುವೆವು)

Published in: on ಸೆಪ್ಟೆಂಬರ್ 17, 2017 at 5:22 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಮತ್ತೊಂದಿಷ್ಟು ಕಾಮನ್ಸೆನ್ಸ್

ನಾನು‌ವಿಜ್ಞಾನ ಬರೆಹಗಾರನಾದಾಗ ನನ್ನ ಬಾಸ್ ಹಾಗೂ ಆ ಕ್ಷೇತ್ರದಲ್ಲಿ ನನಗೆ ಪ್ರೇರಣಾರೂಪರಾಗಿದ್ದ ಜಿ.ಪಿ. ಫೋಂಡ್ಕೆ ಒಂದು ಮಾತು ಹೇಳುತ್ತಿದ್ದರು. ಬರೆಯುವಾಗ ಉತ್ಸಾಹದಲ್ಲಿ ಉಪಮೆಗಳನ್ನು ಬಳಸುತ್ತೇವಷ್ಟೆ. ಅವು ನಾವಂದುಕೊಂಡ ಅರ್ಥವನ್ನೇ ಕೊಡುತ್ತವೋ ಇಲ್ಲವೋ ಎನ್ನುವುದನ್ನು ಪರಿಶೀಲಿಸಿ ಬಳಸಬೇಕು. ಮಿಶ್ರ ಉಪಮೆಗಳು,  ಬಗ್ಗೆ ಎಚ್ಚರಿಕೆ ಎಂದಿದ್ದರು. 

ಮೂವತ್ತು ವರ್ಷಗಳ ಹಿಂದೆ ಈ ಮಾತು ಅಷ್ಟು ಅರ್ಥವಾಗಿರಲಿಲ್ಲ. ಈಗ ಅರ್ಥವಾಗುತ್ತಿದೆ. ಅದರಲ್ಲೂ ಫೇಸ್ಬುಕ್ ಮತ್ತು ವಾಟ್ಸಾಪ್ವ ಸಾಹಿತ್ಯದಲ್ಲಿ ಕಾಣುವ ಇನ್ಸ್ಟಂಟ್ ಸೃಜನಶೀಲತೆ ಈ ಮಾತನ್ನು ಮತ್ತೆ ಮತ್ತೆ ನೆನಪಿಸುತ್ತದೆ.

ಮೊನ್ನೆ ಯಾರೋ ಇನ್ಯಾರನ್ನೋ ಫೇಸ್ಬುಕ್ಕಿನಲ್ಲಿ ಹಳಿದಿದ್ದರು. ಈ ಸಾಮಾಜಿಕ ಸಂವಹನ ಮಾಧ್ಯಮ ಗಳು “ಹಳಿಯುವ ಮಾಧ್ಯಮ” (ಟ್ರಾಲ್) ಗಳಾಗಿ ಏಕೆ ಬದಲಾದವೋ ಗೊತ್ತಿಲ್ಲ. ಹೀಗೇ ಒಬ್ಬರು ಹಳಿದಿದ್ದರು : ಆ “ಮಹಾತ್ಮ ಹೂಸಿದಷ್ಟು ಇವನು ಉಸಿರೂ ಆಡಿರಲಿಕ್ಕಿಲ್ಲ.”

ಮಹಾತ್ಮ ಮತ್ತು ಇವನ ವಯಸ್ಸು ಮತ್ತು ಅನುಭವವನ್ನು ಕುರಿತೋ ಮಹಾತ್ಮನ ಹೂಸಿನ ಮೌಲ್ಯವೂ ಇವನ ಉಸಿರಿಗಿಲ್ಲ ಎಂತೋ ಅರ್ಥೈಸಿಕೊಳ್ಳಬಹುದು ಎಂದುಕೊಂಡಿದ್ದೇನೆ‌. 

ಆದರೆ ವಿಜ್ಞಾನ ಮತ್ತು ಕಾಮನ್ಸೆನ್ಸ್ ನನಗೆ ಹಾಗೆ ಅರ್ಥೈಸಿಕೊಳ್ಳಲು ಬಿಡಲೇ ಇಲ್ಲ. ನಾವು ಸದಾ ಹೂಸುವುದಿಲ್ಲವಷ್ಟೆ. ಹೆಚ್ಚೆಂದರೆ ಶೌಚಕ್ಕೆ ಹೋದಾಗ, ಹೊಟ್ಟೆ ಕೆಟ್ಟಿದ್ದಾಗ ಅಥವಾ ಹೊಟ್ಟೆ ಬಿರಿಯ ತಿಂದಾಗಷ್ಟೆ ಹೂಸುವುದು ಸಹಜ. 

ಒಂದು ಅಂದಾಜಿನ ಪ್ರಕಾರ ದಿನಕ್ಕೆ ಹದಿನೈದರಿಂದ ಇಪ್ಪತ್ತು ಬಾರಿ (ಇದು ಗರಿಷ್ಟ) ಹೂಸಬಲ್ಲೆವಂತೆ. ಅದೇ ಉಸಿರಾಟ? ನಿಮಿಷಕ್ಕೆ ಹನ್ನೆರಡರಿಂದ ಹದಿನೈದು. ಹೆಚ್ಚಾದರೂ ಕಷ್ಟ. ಕಡಿಮೆಯಾದರೂ ಕಷ್ಟ. 

ಈ ಲೆಕ್ಕದ ಪ್ರಕಾರ ಒಂದು ವರುಷದ ಮಗು ಅಂದರೆ 7,358,400 ಬಾರಿ ಉಸಿರಾಡುವುದು ಎಂದರ್ಥ. ಆ ಮಗು ಹೂಸುವುದು 5110 ಬಾರಿ. ಅಂದರೆ ಒಂದು ವರ್ಷದ ಮಗುವಿನ ಉಸಿರಾಟಕ್ಕಿಂತ ಹೆಚ್ಚು ಹೂಸಬೇಕು ಎಂದರೆ ಆ ಮಹಾತ್ಮ ಗಂಟೆಗೆ 900 ಬಾರಿ ಹೂಸ ಬೇಕು? ಎಂಥಾ ಹೊಟ್ಟೆಯೋ? ಅಥವಾ ಅಂತಹ ಭೋಜನವೋ ಅಂತ ಅಚ್ಚರಿಯಾಗುತ್ತದೆ.

ಅದು ಸಂಖ್ಯೆಯ ಬಗ್ಗೆ ಹೇಳಿದ್ದಲ್ಲ ಪರಿಣಾಮದ ಬಗ್ಗೆ ಎಂದೇ ಇಟ್ಟುಕೊಳ್ಳೋಣ. ಉಸಿರು ನೆರೆಯವರ ಮೇಲೆ ಉಂಟು ಮಾಡುವ ಪರಿಣಾಮಕ್ಕಿಂತ ಹೂಸಿನ ಪರಿಣಾಮ ಗೊತ್ತಿದ್ದದ್ದೇ! ಸಹಜವಾದ ಹೂಸಿನ ಪರಿಣಾಮವೇ ತಾಳಿಕೊಳ್ಳುವುದು ಕಷ್ಟ. ಇನ್ನು ಉಸಿರಾಟಕ್ಕಿಂತ ಮಿಗಿಲಾದ ಹೂಸಿನ ಆರ್ಭಟ! ದೇವರೇ!!

ಈ ವಿಶಿಷ್ಟ ಹೋಲಿಕೆ ದೈವಾಂಶ ಸಂಭೂತರಾದ ಮಹಾತ್ಮ ಹಾಗೂ ಪಾಮರರಾದ ನಮ್ಮಂಥವರ ನಡುವಿನ ವ್ಯತ್ಯಾಸವನ್ನು ತೋರಿಸುತ್ತದಂತೆ. ಗಂಟೆಗೆ 900 ಬಾರಿ ಹೂಸುವ ಭಾಗ್ಯ ನನಗಂತೂ ಬೇಡ.

ಅಂದ ಹಾಗೇ ಇದರಿಂದ ಪ್ರೇರಣೆ ಪಡೆದು ಉಚ್ಚಿಕೊಳ್ಳುವಷ್ಟೂ ಉಗುಳುವುದಿಲ್ಲ ಎಂತಲೋ, ಸ್ಖಲಿಸಿದಷ್ಟೂ ಸಿಂಬಳ ಸೀಂಟಿಲ್ಲ ಎಂತಲೋ ಹೋಲಿಕೆಗಳನ್ನು ಯಾರೂ ರೂಪಿಸುವುದಿಲ್ಲ ಎಂದುಕೊಂಡಿದ್ದೇನೆ.

Published in: on ಸೆಪ್ಟೆಂಬರ್ 1, 2017 at 3:24 ಅಪರಾಹ್ನ  Comments (1)  

ಜೀನ್ ತಿದ್ದುವಿಕೆ

IMG_20170830_0002IMG_20170830_0003IMG_20170830_0004IMG_20170830_0005IMG_20170830_0006IMG_20170830_0007

Published in: on ಆಗಷ್ಟ್ 30, 2017 at 2:30 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಲಾರ್ಸೆನ್ ಸಿ

Published in: on ಆಗಷ್ಟ್ 24, 2017 at 10:40 ಫೂರ್ವಾಹ್ನ  Comments (2)  

ವಿಕಾಸದ ವೀಕ್ಷಣೆ

ನಮ್ಮ ಕಣ್ಣೆದುರಲ್ಲೇ ವಿಕಾಸ ಜರುಗುತ್ತಿದೆಯೇ? ನೋಡನೋಡುತ್ತಿದ್ದಂತೆಯೇ ಹೊಸ ಜೀವಿಯ ಉಗಮವಾಗಬಹುದೇ? ಏಕಿಲ್ಲ? ಹೊಸದೊಂದು ಸಮುದ್ರದ ಹಾವು ಉಗಮವಾಗಿರುವ ಬಗ್ಗೆ ಇತ್ತೀಚೆಗೆ ಕರೆಂಟ್ ಬಯಾಲಜಿ ಪತ್ರಿಕೆ ವರದಿ ಮಾಡಿದೆ.

ಹೊಸ ಪ್ರಬೇಧದ ಉಗಮ ಎಂದರೇನು ಎಂದಿರಾ? ಹೌದು. ಇಡೀ ಜೀವಿವಿಜ್ಞಾನಕ್ಕೆ ಹೊಸ ತಿರುವು ನೀಡಿದ ವಿಕಾಸವಾದ ಎನ್ನುವ ತತ್ವದ ಅಡಿಗಲ್ಲೇ ಹೊಸ ಪ್ರಬೇಧದ ಉಗಮ. ವಿಕಾಸವಾದದ ಬಗ್ಗೆ ಕೇಳಿದ್ದೀರಲ್ಲ? ಮಂಗನಿಂದ ಮಾನವನಾದ ಎನ್ನುವ ಪ್ರಸಿದ್ಧ ಹೇಳಿಕೆಯೂ ಗೊತ್ತಿರಬೇಕು. ಅದನ್ನು ನಾವು ಎಷ್ಟೋ ಬಾರಿ ತಪ್ಪಾಗಿ ಅರ್ಥೈಸಿರುವುದೂ ಉಂಟು. ಎಷ್ಟೋ ಮಂದಿ ವಿಕಾಸ ಎಂದರೆ ಅದು ವಿದ್ವಾಂಸರ ಹೊಸದೊಂದು ತರ್ಕ. ಅದಕ್ಕೂ ನಮ್ಮ ಬದುಕಿಗೂ ಸಂಬಂಧವಿಲ್ಲ ಎನ್ನುವಂತೆ ನಿರಾಳವಾಗಿ ಇರುವುದೂ ಉಂಟು. ಬಹುಶಃ ಎಲ್ಲ ವಿಜ್ಞಾನಗಳೂ ಅಷ್ಟೆ. ವಿಜ್ಞಾನಿಗಳಿಗಷ್ಟೆ ಅದು ನೈಜ, ವಾಸ್ತವ. ಉಳಿದವರಿಗೆ ಅದು ಭ್ರಮೆ, ತರ್ಕ, ಸಿದ್ಧಾಂತ. ಇನ್ನು ಕೆಲವರಿಗಂತೂ ನವೀನ ವಿಜ್ಞಾನದ ತತ್ವಗಳು ರಾಜಕೀಯ ಸಿದ್ಧಾಂತಗಳೇ ಸರಿ.

ವಿಕಾಸವಾದದ ವಿಷಯದಲ್ಲಿಯಂತೂ ಇಂತಹ ಅನಿಸಿಕೆಗಳು ಇನ್ನೂ ಪ್ರಬಲ. ಏಕೆಂದರೆ ವಿಕಾಸವಾದ ಕೇವಲ ಯಾವುದೋ ನಿರ್ಜೀವ ವಸ್ತುವಿನ ಹುಟ್ಟು, ಸಾವಿನ ಬಗ್ಗೆ ತರ್ಕಿಸುವುದಿಲ್ಲ. ಅದು ಮಾನವ ಹಾಗೂ ಅವನೊಂದಿಗೆ ಇರುವ ಜೀವಿಗಳ ನಡುವಿನ ಸಂಬಂಧಕ್ಕೆ ಹೊಸದೊಂದು ಅರ್ಥವನ್ನು ಸೃಷ್ಟಿಸಿದೆ. ಹೀಗಾಗಿಯೇ ವಿಕಾಸವಾದ ಎಂದರೆ ಎಷ್ಟೋ ಧರ್ಮಗಳು ಉರಿದು ಬೀಳುವುದುಂಟು. ಇಂದಿಗೂ ಅಮೆರಿಕೆಯ ಹಲವು ರಾಜ್ಯಗಳಲ್ಲಿ ವಿಕಾಸವಾದವನ್ನು ಬೋಧಿಸುವುದು ತಪ್ಪು ಎಂದು ಭಾವಿಸುತ್ತಾರೆ.

ಇದಕ್ಕೆ ಕಾರಣಗಳಲ್ಲಿ ಪ್ರಮುಕವಾದದ್ದು ವಿಕಾಸವಾದ ಎನ್ನುವುದು ಮಾನವನ ವಿಕಾಸದ ಬಗ್ಗೆ ವಿವಿಧ ಧರ್ಮಗಳಲ್ಲಿ ಬೇರೂರಿರುವ ನಂಬಿಕೆಗಳಿಗೆ ಸಂಪೂರ್ಣ ವಿರುದ್ಧವಾಗಿದೆ. ಅದಕ್ಕಿಂತಲೂ ಮುಖ್ಯವಾಗಿ ವಿಕಾಸ ಎನ್ನುವುದು ನಮ್ಮ, ನಿಮ್ಮ ಜೀವನಕಾಲದಲ್ಲಿ ಆಗುವಂಥದ್ದಲ್ಲ. ಹಲವು ನೂರು ವರ್ಷಗಳೂ ಅಲ್ಲ. ಹಲವಾರು ಲಕ್ಷ ವರ್ಷಗಳ ಅವಧಿಯಲ್ಲಿ ನಡೆಯುವ ಘಟನೆ ಎನ್ನುವುದು ಮತ್ತೊಂದು ಅಂಶ. ಹೆಚ್ಚೆಂದರೆ ಬೆಕ್ಟೀರಿಯಾ, ಬೂಸುಗಳಂತಹ ಸೂಕ್ಷ್ಮ ಜೀವಿಗಳಲ್ಲಿ ಹಾಗೂ ಸೊಳ್ಳೆ, ಹಣ್ಣು ನೊಣಗಳಂತಹ ಕೀಟಗಳಲ್ಲಿ ನಮ್ಮ ಜೀವಿತಕಾಲದಲ್ಲಿಯೇ ಹೊಸ ಪ್ರಬೇಧಗಳು ಕಾಣಿಸಿಕೊಂಡು ವಿಕಾಸದ ಪ್ರಕ್ರಿಯೆ ನಡೆಯುತ್ತಿರುವುದಕ್ಕೆ ಉದಾಹರಣೆಗಳಿವೆಯಾದರೂ, ಇವು ನಮ್ಮೆಲ್ಲರ ಅಳವಿಗೆ, ಸಂವೇದನೆಗೆ ನಿಲುಕದ ಸಂಗತಿಗಳಾಗಿರುವುದರಿಂದ ಕೇವಲ ವಿಜ್ಞಾನಿಗಳ ತರ್ಕ ಎಂದಷ್ಟೆ ನಂಬುತ್ತೇವೆ. ಕೀಟಗಳು, ಸೂಕ್ಷ್ಮಜೀವಿಗಳು ಹಾಗೂ ಬೂಸುಗಳಲ್ಲಿ ಕಾಣುವ ಉದಾಹರಣೆಗಳಂತೆ ಇತರೆ ದೊಡ್ಡ ಜೀವಿಗಳಲ್ಲಿ ಇವನ್ನು ಕಾಣಲಾಗಿರಲಿಲ್ಲ. ಈಗ ಹಾವಿನಂತಹ ಪ್ರಾಣಿಯಲ್ಲಿಯೂ ನಮ್ಮ ಜೀವನಕಾಲದಲ್ಲಿಯೇ ವಿಕಾಸ ನಡೆದಿರುವ ಉದಾಹರಣೆ ದೊರಕಿದೆ.

ವಿಕಾಸ ಎಂದರೆ ಮಂಗನಂಥ ಜೀವಿಯಿಂದ ಮಾನವನಂತಹ ಮತ್ತೊಂದು ಜೀವಿಯ ಉದ್ಭವ ಆಗುವುದು ಎನ್ನುವುದು ಉತ್ಪ್ರೇಕ್ಷೆ. ವಿಜ್ಞಾನಿಗಳ ಪ್ರಕಾರ ವಿಕಾಸ ಎಂದರೆ ಹೊಸದೊಂದು ಪ್ರಬೇಧದ ಜೀವಿಯ ಉಗಮ. ಪ್ರಬೇಧ ಎಂದರೆ ತನ್ನಂತಿರುವ ಜೀವಿಯೊಡನಷ್ಟೆ ಸಂತಾನೋತ್ಪತ್ತಿ ಮಾಡಬಲ್ಲ ಜೀವಿ ಎಂದರ್ಥ. ಈ ಅರ್ಥದಲ್ಲಿ ರಾಗಿ ಮತ್ತು ನವಣೆ ಹುಲ್ಲಿನ ಜಾತಿಗೇ ಸೇರಿದರೂ, ಅವೆರಡೂ ಒಂದರೊಡನೊಂದು ಕೂಡಿ ಸಂತಾನವನ್ನು ಹುಟ್ಟಿಸವು. ಹಾಗೆಯೇ ಕತ್ತೆ ಮತ್ತು ಕುದುರೆ. ಇವುಗಳು ಕೂಡಿದರೂ ಮ್ಯೂಲ್ ಎನ್ನುವ ಪ್ರಾಣಿ ಹುಟ್ಟುತ್ತದೆ. ಆದರೆ ಅದಕ್ಕೆ ಸಂತಾನೋತ್ಪತ್ತಿಯ ಸೌಭಾಗ್ಯವಿರುವುದಿಲ್ಲ. ಮ್ಯೂಲ್ ಮತ್ತೊಂದು ಮ್ಯೂಲಿಗೆ ಜನ್ಮ ನೀಡುವುದಿಲ್ಲ. ಆದ್ದರಿಂದ ಕತ್ತೆ ಮತ್ತು ಕುದುರೆಯನ್ನು ಬೇರೆ ಬೇರೆ ಪ್ರಬೇಧಗಳು ಎಂದು ವಿಜ್ಞಾನಿಗಳು ಗುರುತಿಸುತ್ತಾರೆ.

ಸಮುದ್ರದಲ್ಲಿ ವಾಸಿಸುವ ಹಾವುಗಳಲ್ಲಿ ಹೀಗೊಂದು ಹೊಸ ಪ್ರಬೇಧ ಉಗಮವಾಗಿದೆ ಎಂದು ಕಳೆದ ತಿಂಗಳು ಕರೆಂಟ್ ಬಯಾಲಜಿ ಪತ್ರಿಕೆ ವರದಿ ಮಾಡಿದೆ.

ಆಸ್ಟ್ರೇಲಿಯಾದ ಸಮೀಪವಿರುವ ಕೆಲಡೋನಿಯ ದ್ವೀಪಗಳ ಸಮೀಪ ಈ ವಿದ್ಯಮಾನವನ್ನು ವಿಜ್ಞಾನಿಗಳು ಕಂಡಿದ್ದಾರೆ. ಈ ದ್ವೀಪದ ಸಮೀಪವಿರುವ ಹಲವು ಲಗೂನುಗಳಲ್ಲಿ ಇತ್ತೀಚೆಗೆ ಸಂಪೂರ್ಣ ಕರಿ ಬಣ್ಣದ ಹುರುಪೆಗಳಿರುವ ಹಾವುಗಳು ಕಾಣಿಸಲಾರಂಭಿಸಿವೆ. ಲಗೂನುಗಳನ್ನು ಸಮುದ್ರದೊಳಗಿರುವ ದ್ವೀಪದಂತಹ ನೀರಿನ ಕೊಳಗಳೆನ್ನಬಹುದು. ಸಮುದ್ರದೊಳಗೇ ಇದ್ದರೂ ಇವು ಸಮುದ್ರದ ನೀರಿನ ಜೊತೆ ಸದಾ ಸಂಪರ್ಕದಲ್ಲಿರುವುದಿಲ್ಲ.

ವಿಕಾಸವಾದವನ್ನು ಜನಮನದ ಆಳಕ್ಕೆ ಇಳಿಸಿದ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್ ತನ್ನ ತರ್ಕಗಳಿಗೆ ಪುಷ್ಟಿಯನ್ನು ಕಂಡುಕೊಂಡಿದ್ದು ನಡುಗಡ್ಡೆಗಳಲ್ಲಿರುವ ವಿಶಿಷ್ಟ ಜೀವಿಗಳ ಅಧ್ಯಯನದಿಂದ ಎನ್ನುವುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬೇಕು. ಗ್ಯಾಲಪಗೋಸ್ ಎನ್ನುವ ದ್ವೀಪ ಸಮೂಹದಲ್ಲಿರುವ ನೂರಾರು ದ್ವೀಪಗಳಲ್ಲಿ ಇರುವ ಹಕ್ಕಿಗಳು ಒಂದಕ್ಕಿಂದ ಒಂದು ವಿಭಿನ್ನವಾಗಿದ್ದುದನ್ನು ಡಾರ್ವಿನ್ ಕಂಡಿದ್ದ. ಇವು ಆಫ್ರಿಕಾ ಖಂಡದಿಂದ ವಲಸೆ ಬಂದ ಹಕ್ಕಿಗಳು ಎನ್ನುವುದರಲ್ಲಿ ಅನುಮಾನವಿರಲಿಲ್ಲ. ಆದರೆ ಒಂದು ದ್ವೀಪದಲ್ಲಿರುವಂತ ಹಕ್ಕಿ ಮತ್ತೊಂದರಲ್ಲಿ ಯಾಕಿಲ್ಲ ಎನ್ನುವುದೇ ಇವನಿಗೆ ಪ್ರಶ್ನೆಯಾಗಿ ಕಾಡಿತ್ತು. ಅದರ ಬೆಂಬತ್ತಿ ಹೋದವನು ಆಯಾ ದ್ವೀಪದ ಪರಿಸರಕ್ಕೆ ಹೊಂದಿಕೊಳ್ಳಬಲ್ಲಂತಹ ಗುಣವಿರುವ ಬಗೆಯಷ್ಟೆ ಅಲ್ಲಿ ಉಳಿದಿದೆ. ಉಳಿದವು ಮರೆಯಾಗಿವೆ. ಹೀಗೆ ಪ್ರತಿಯೊಂದು ದ್ವೀಪದಲ್ಲೂ ಅದರದ್ದೇ ಆದ ವಿಶಿಷ್ಟ ಪಕ್ಷಿ ಪ್ರಬೇಧವಿದೆ ಎಂದು ತರ್ಕಿಸಿದ. ನಿಸರ್ಗವೇ ಆಯ್ದು ಹೀಗೆ ವಿಕಾಸವನ್ನುಂಟು ಮಾಡಿದೆ ಎನ್ನುವ ಹೊಸ ವಾದವನ್ನು ಸೃಷ್ಟಿಸಿದ.

melaninseasnake

ಮೆಲಾನಿನ್ ಭರಿತ ಕರಿಹಾವು ಹಾಗೂ ಪಟಾಪಟಿ ಹಾವು

ಕೆಲಡೋನಿಯಯಾದ ಲಗೂನುಗಳಲ್ಲಿರುವ ಹಾವುಗಳಲ್ಲಿಯೂ ಇಂತಹದ್ದೇ ವಿಕಾಸ ನಡೆಯುತ್ತಿದೆಯಂತೆ. ಇಲ್ಲಿನ ಸಮುದ್ರದಲ್ಲಿ ಟರ್ಟಲ್ ಹೆಡೆಡ್ (ಆಮೆತಲೆಯ) ಹಾವುಗಳು (ಎಮಿಡೊಕೆಫಾಲಸ್ ಆನ್ಯುಲೇಟಸ್ – Emydocephalus annulatus) ಇವೆ. ನಮ್ಮೂರಿನ ಕಟ್ಟುಹಾವುಗಳಂತೆ ಇವುಗಳೂ ಬಣ್ಣದ ಉಂಗುರುಗಳಿರುವ ದೇಹದವು. ದೇಹದುದ್ದಕ್ಕೂ ಬಿಳಿ, ಕಪ್ಪು ಪಟ್ಟೆಗಳು ಇರುತ್ತವೆ. ಆದರೆ ಇತ್ತೀಚೆಗೆ ಇಲ್ಲಿನ ಲಗೂನುಗಳಲ್ಲಿ ಸಂಪೂರ್ಣ ಕಪ್ಪು ದೇಹದ ಹಾವುಗಳೂ ಕಂಡು ಬಂದಿದ್ದುವು. ಇವು ಬೇರೆಲ್ಲಿಂದಲಾದರೂ ವಲಸೆ ಬಂದ ಜೀವಿಗಳೋ? ಅಥವಾ ಇಲ್ಲಿಯೇ ಹುಟ್ಟಿದ ಹೊಸ ಪ್ರಬೇಧವೋ ಎನ್ನುವ ಅನುಮಾನವಿತ್ತು. ಈ ಕರಿ ಹಾವುಗಳ ಬಣ್ಣವನ್ನು ರಾಸಾಯನಿಕವಾಗಿ ವಿಶ್ಲೇಷಿಸುವುದರ ಜೊತೆಗೆ ಈ ಹಾವುಗಳ ದಟ್ಟಣೆ ಎಲ್ಲೆಲ್ಲಿ ಹೆಚ್ಚಿದೆ ಎನ್ನುವುದನ್ನು ಗುರುತಿಸಿರುವ ವಿಜ್ಞಾನಿಗಳು ಈ ಪಟ್ಟೆ ರಹಿತ ಹಾವುಗಳು ಲಗೂನುಗಳಲ್ಲಿ ಆಗುತ್ತಿರುವ ಮಾಲಿನ್ಯದಿಂದಾಗಿ ಉದ್ಭವವಾದ ಹೊಸ ಪ್ರಬೇಧಗಳು ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಅರ್ಥಾತ್, ಇಲ್ಲಿ ನಡೆದಿರುವ ಮಾಲಿನ್ಯವೇ ಹೊಸ ಜೀವಿಯ ವಿಕಾಸಕ್ಕೆ ಕಾರಣವಾಗಿದೆ.

ಅದು ಹೇಗೆ ಎಂದಿರಾ? ನಮ್ಮ ಚರ್ಮದಲ್ಲಿರುವ ಬಣ್ಣಕ್ಕೆ ಮೆಲಾನಿನ್ ಎನ್ನುವ ರಾಸಾಯನಿಕ ಕಾರಣವಷ್ಟೆ. ಇದೇ ಬಣ್ಣ ಹಾವಿನ ಮೈಯಲ್ಲೂ ಇದೆ. ನಮ್ಮ ಮೈ ಬಿಸಿಲಿಗೆ ಒಗ್ಗಿಕೊಳ್ಳುವುದಕ್ಕೆ ಇದು ಮೂಲ. ಆದರೆ ಹಾವಿಗೆ, ಅದರಲ್ಲೂ ನೀರಿನಲ್ಲಿರುವ ಹಾವಿಗೆ ಹೀಗೆ ಬಿಸಿಯಿಂದ ಕಾಯ್ದುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಜೊತೆಗೆ ಹಾವಿನ ಮೈ ಶೀತದ ಮೈ. ಅರ್ಥಾತ್, ಅದು ತನ್ನ ಪರಿಸರದಲ್ಲಿರುವ ಉಷ್ಣತೆಗೆ ತಕ್ಕಂತೆ ತನ್ನ ಮೈಯ ತಾಪಮಾನವನ್ನೂ ಬದಲಿಸಿಕೊಳ್ಳಬಲ್ಲದು. ಇಂತಹ ಜೀವಿಯಲ್ಲಿ ಇಷ್ಟೊಂದು ಮೆಲಾನಿನ್ ಬಂದದ್ದೇತಕ್ಕೆ ಎನ್ನುವ ಪ್ರಶ್ನೆ ಎದುರಾಗುತ್ತದೆ. ಇದರಿಂದೇನು ಪ್ರಯೋಜನ ಎನ್ನುವ ಪ್ರಶ್ನೆಯೂ ಜೊತೆಗೂಡುತ್ತದೆ. ಇವೆಲ್ಲಕ್ಕೂ ವಿಜ್ಞಾನಿಗಳ ಉತ್ತರ: ಮೆಲಾನಿನ್ ಪರಿಸರದಲ್ಲಿರುವ ಮಾಲಿನ್ಯ ವಸ್ತುಗಳು ದೇಹದಲ್ಲಿ ಕೂಡಿಕೊಳ್ಳದಂತೆ ಕಾಪಾಡುತ್ತದೆ.

ಹೌದು. ಕೈಗಾರಿಕಾ ಪ್ರದೇಶಗಳು ಸಮೀಪದಲ್ಲಿರುವ ಲಗೂನುಗಳಲ್ಲಿಯಷ್ಟೆ ಇಂತಹ ಕರಿಹಾವುಗಳು ಹೆಚ್ಚು ಎನ್ನುವುದನ್ನು ಸಿಡ್ನಿ ವಿಶ್ವವಿದ್ಯಾನಿಲಯದ ಜೀವಿವಿಜ್ಞಾನಿ ಕ್ಲೇರ್ ಗೋಯ್ರಾನ್ ಮತ್ತು ತಂಡ ಗುರುತಿಸಿದೆ. ಕೈಗಾರಿಕೆಗಳಿಂದ ಲಗೂನುಗಳಿಗೆ ಹರಿದು ಬರುವ ತ್ಯಾಜ್ಯಗಳು ಇದಕ್ಕೆ ಕಾರಣವಿರಬಹುದೇ ಎನ್ನುವ ಗುಮಾನಿಯಿಂದ  ಆ ನಿಟ್ಟಿನಲ್ಲಿ ಪರೀಕ್ಷೆ ನಡೆಸಿದ್ದಾರೆ. ಲಗೂನುಗಳಿಗೆ ಹರಿದು ಬರುವ ತ್ಯಾಜ್ಯಗಳಲ್ಲಿ ಸಾಕಷ್ಟು ಲೋಹದ ಅಂಶ, ಮುಖ್ಯವಾಗಿ ಸತುವಿನ ಅಂಶ ಹೆಚ್ಚಿದೆ. ತಮ್ಮ ಮೈಗೆ ಕೂಡಿಕೊಂಡ ಇಂತಹ ತ್ಯಾಜ್ಯಗಳನ್ನು ಬಿಸಾಡಲು ಹಾವುಗಳಿಗೆ ಇರುವ ದಾರಿ ಎಂದರೆ ಪೊರೆ ಬಿಡುವುದು. ಮೆಲಾನಿನ್ ಬಣ್ಣ ಲೋಹದಣುಗಳ ಜೊತೆಗೆ ಭದ್ರವಾಗಿ ಬೆಸೆದುಕೊಳ್ಳಬಲ್ಲುದು ಎನ್ನುವುದೂ ಗೊತ್ತಿರುವ ಸತ್ಯ. ಅಂದರೆ ಈ ಮಾಲಿನ್ಯ ಭರಿತ ನೀರಿನಲ್ಲಿರುವ ತ್ಯಾಜ್ಯ ಮೈಸೇರಿದರೂ ತಮ್ಮಲ್ಲಿರುವ ಮೆಲಾನಿನ್ನಿನಿಂದಾಗಿ ಅದು ಮೈಗೂಡದಂತೆ ತಪ್ಪಿಸಿಕೊಳ್ಳುವುದು ಕರಿ ಮೈಯ ಹಾವುಗಳಿಗೆ ಸರಾಗ. ಪಟ್ಟೆ, ಪಟ್ಟೆ ಹಾವುಗಳ ಮೈಗೆ ಈ ಲೋಹಗಳು ಸ್ವಲ್ಪವಾದರೂ ಕೂಡಿಕೊಳ್ಳುತ್ತವೆ. ಹೀಗಾಗಿ ಇಂತಹ ರಕ್ಷಣೆಯೊದಗಿಸುವ ಮೈಯಿರುವ ಹಾವುಗಳು ಇಲ್ಲಿ ಹೆಚ್ಚೆಚ್ಚು ಉಳಿದು, ಅವೇ ಹೊಸ ಪ್ರಬೇಧವಾಗಿವೆ ಎಂದು ಇವರು ಊಹಿಸಿದ್ದಾರೆ.

ಹೌದು. ಕರಿಬಣ್ಣ ಹಾಗೂ ಕೈಗಾರಿಕೆಯ ತ್ಯಾಜ್ಯಕ್ಕಿರುವ ಸಂಬಂಧ ಕಾಕತಾಳೀಯವಲ್ಲ. ಇಂಗ್ಲೆಂಡಿನ ಕೆಲವು ಪತಂಗಗಳು ಮಾಲಿನ್ಯ ಹೆಚ್ಚಿರುವ ನಗರಗಳಲ್ಲಿ ಕಪ್ಪಾಗಿಯೂ, ಗ್ರಾಮಗಳಲ್ಲಿ ಬಿಳಿಯಾಗಿಯೂ ಇದ್ದದ್ದು ಹಲವು ದಶಕಗಳ ಹಿಂದೆಯೇ ವರದಿಯಾಗಿತ್ತು. ಹಾಗೆಯೇ ಹಕ್ಕಿಗಳೂ ತಾವುಂಡ ಆಹಾರದಲ್ಲಿರುವ ಲೋಹವಸ್ತುಗಳನ್ನು ಪುಕ್ಕಗಳಲ್ಲಿ ಸಂಗ್ರಹಿಸಿ ಬಿಸಾಡುವುದೂ ಜೀವಿವಿಜ್ಞಾನಿಗಳಿಗೆ ತಿಳಿದ ವಿಷಯವೇ. ಇವನ್ನೆಲ್ಲ ತಾಳೆ ಹಾಕಿದಾಗ  ಈ ಕರಿಬಣ್ಣದ ಸಮುದ್ರದ ಹಾವುಗಳು ಕೈಗಾರಿಕಾ ಮಾಲಿನ್ಯದಿಂದಾಗಿಯೇ ಹೊಸದಾಗಿ ಉದ್ಭವಿಸಿವೆ ಎನ್ನುವುದು ಸ್ಪಷ್ಟ ಎನ್ನುತ್ತಾರೆ ವಿಜ್ಞಾನಿಗಳು.

ವಿಕಾಸವನ್ನು ಹೀಗೆ ನಾವು ಕಾಣಲಾಗಿದೆ. ಅಷ್ಟೇ ಅಲ್ಲ. ಮಾಲಿನ್ಯವನ್ನು ಸೃಷ್ಟಿಸಿದ ನಾವೇ ಇದರ ನಿಯಾಮಕರೂ ಆಗಿದ್ದೇವೆ ಎನ್ನೋಣವೇ?

______

 Reference:

1. Goiran et al., Indusrial melanism in the seasnake Emydocephalus annulatus, Current Biology (2017), online publication, August 10, 2017,  http://dx.doi.org/10.1016/j.cub.2017.06.073

Published in: on ಆಗಷ್ಟ್ 20, 2017 at 5:08 ಅಪರಾಹ್ನ  Comments (1)  

ಅಂತರಿಕ್ಷಯಾನಿ ವೀರ್ಯ

ಅಂತರಿಕ್ಷ ಯಾನ ಮಾಡಿ ಮರಳಿದ ವೀರ ಅಂತ ಓದಿಕೊಂಡಿರಾ? ಇದು ಅಕ್ಷರ ದೋಷವಲ್ಲ. ವೀರನಲ್ಲ. ವೀರ್ಯವೇ. ಒಂಭತ್ತು ತಿಂಗಳು ಅಂತರಿಕ್ಷ ವಾಸ ಮುಗಿಸಿ ಭೂಮಿಗೆ ಮರಳಿದ ವೀರ್ಯದ ಕಥೆ. ಸುಮಾರು 300 ದಿನಗಳು ಭೂಮಿಯ ಹೊರಗೆ ಅಂತರಿಕ್ಷದಲ್ಲಿ ಅಲೆದಾಡಿ ಮರಳಿದ ವೀರ್ಯದ ಕಥೆ. ಜಪಾನಿನ ವಿಜ್ಞಾನಿಗಳು ಗಂಡಿಲಿಗಳ ಶೈತ್ಯೀಕರಿಸಿದ್ದ ವೀರ್ಯವನ್ನು ಅಂತರಿಕ್ಷಯಾನಕ್ಕೆ ಕಳಿಸಿದ್ದರು. ಅದರ ಪರೀಕ್ಷೆಯ ಫಲಿತಾಂಶಗಳು ಪ್ರೊಸೀಡಿಂಗ್ಸ್ ಆಫ್ ನ್ಯಾಶನಲ್ ಅಕಾಡೆಮಿ ಆಫ್ ಸೈನ್ಸಸ್ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಇದರ ಪ್ರಕಾರ ಒಂಭತ್ತು ತಿಂಗಳಿಗೂ ಹೆಚ್ಚು ಕಾಲ ಅಂತರಿಕ್ಷದಲ್ಲಿದ್ದ ಶೈತ್ಯೀಕರಿಸಿದ ವೀರ್ಯಾಣುಗಳ ಫಲವತ್ತತೆ ಕುಂದಿರಲಿಲ್ಲವಂತೆ. ಅರ್ಥಾತ್, ಅಂತರಿಕ್ಷದಲ್ಲೂ ಕೃತಕ ಗರ್ಭಧಾರಣೆ ಸಾಧ್ಯ.

ಅಂತರಿಕ್ಷದಲ್ಲೇಕೆ ಕೃತಕ ಗರ್ಭಧಾರಣೆ ಎನ್ನಬೇಡಿ. ‘ಯಾನ’ ಕಾದಂಬರಿಯಲ್ಲಿದ್ದಂತೆ ಗಂಡು-ಹೆಣ್ಣು ಇಬ್ಬರನ್ನೂ ಒಟ್ಟಿಗೇ ಪ್ರವಾಸ ಕಳಿಸಿಬಿಟ್ಟರೆ ಸಾಕಲ್ಲ. ಸಂತಾನೋತ್ಪತ್ತಿ ಸಹಜವಾಗಿಯೇ ಆಗುತ್ತದಲ್ಲವೇ? ಇದು ಸರಳ ಉಪಾಯವೇನೋ ಸರಿ. ಆದರೆ ಅಂತರಿಕ್ಷ ಯಾನದ ದುಬಾರಿ ಖರ್ಚು, ಅದಕ್ಕೆ ಬೇಕಾದ ತಯಾರಿ ಹಾಗೂ ಅಂತರಿಕ್ಷದಲ್ಲಿ ಎದುರಾಗುವ ಹಲವು ಅಡ್ಡಿ ಆತಂಕಗಳು ಅಂತಹ ಸಂದರ್ಭಗಳಲ್ಲಿ ಸಂತಾನೋತ್ಪತ್ತಿ ಸುಗಮವಾಗಿರುವುದೇ ಎನ್ನುವ ಆತಂಕವನ್ನು ಉಂಟು ಮಾಡುತ್ತವೆ. ಈ ಆತಂಕ ನಿವಾರಣೆಗಾಗಿ ವಿಜ್ಞಾನಿಗಳು ಅಂತರಿಕ್ಷದಲ್ಲಿರುವ ಸ್ಪೇಸ್ ಸ್ಟೇಶನ್ನಿನಲ್ಲಿ ಹಲವು ಪ್ರಯೋಗಗಳನ್ನು ಕೈಗೊಂಡಿದ್ದುಂಟು. ಹಲ್ಲಿ, ಮೀನು, ಸಸ್ಯ ಹಾಗೂ ಬ್ಯಾಕ್ಟೀರಿಯಾಗಳನ್ನೂ ಬೆಳೆಸಿ ಪರೀಕ್ಷಿಸಿದ್ದಾರೆ. ಗುರುತ್ವಾಕರ್ಷಣೆಯೇ ಇಲ್ಲದ ಅಂತರಿಕ್ಷದಲ್ಲಿ ಸಹಜವಾಗಿ ಗರ್ಭಧಾರಣೆ ಸಾಧ್ಯವೆನ್ನುವುದೂ ಸ್ಪಷ್ಟವಾಗಿದೆ. ಆದರೆ ಇಲಿ, ನಾಯಿ (ಹಾಗೂ ಮಾನವ) ಮುಂತಾದ ಸ್ತನಿಗಳಲ್ಲಿ ಇದರ ಪರೀಕ್ಷೆ ಇನ್ನು ನಡೆಯಬೇಕಷ್ಟೆ.  

ಶೈತ್ಯೀಕರಿಸಿ ಒಣಗಿಸಿ ಅಂತರಿಕ್ಷದ ಲ್ಲಿ ನವಮಾಸಗಳಿದ್ದು ಮರಳಿದ ವೀರ್ಯಗಳಿಂದ ಫಲಿತವಾದ ಭ್ರೂಣಗಳು ಸಹಜವಾಗಿ ಬೆಳೆಯುತ್ತಿರುವ ಚಿತ್ರ. ಕೃಪೆ:ಪಿಎನ್ಎಎಸ್

ಅಂತರಿಕ್ಷವೆಂದರೆ ಸೊಗಸಾದ ಮಧುಚಂದ್ರದ ತಾಣವೇನಲ್ಲ. ಅತಿ ಶೀತಲ ಪ್ರದೇಶ. ಭೂಮಿಯ ಮೇಲಿನ ಧ್ರುವ ಪ್ರದೇಶಗಳಿಗಿಂತಲೂ ಬಲು ಶೀತಲವಾದ ವಾತಾವರಣವಿರುತ್ತದೆ. ಅಲ್ಲಿನ ವಾತಾವರಣದಲ್ಲಿ ಹೆಚ್ಚೂ ಕಡಿಮೆ ಎಲ್ಲ ಅನಿಲಗಳೂ ಕಬ್ಬಿಣದಷ್ಟು ಗಟ್ಟಿಯಾಗಿಬಿಡಬಹುದು. ಯಾವ ದ್ರವವೂ ಹರಿಯಲಿಕ್ಕಿಲ್ಲ. ದ್ರವ ನೈಟ್ರೊಜನ್ನಿಗಿಂತ ಸುಮಾರು 200 ಡಿಗ್ರಿ ಸೆಂಟಿಗ್ರೇಡ್ ಕಡಿಮೆ ಇರುತ್ತದೆ. ಇದು ಸ್ಪೇಸ್ ಸ್ಟೇಶನ್ನಿನ ಹೊರಗೆ. ಒಳಗೆ ನಮಗೆ ಹಿತವಾದ ವಾತಾವರಣವನ್ನು ಕೃತಕವಾಗಿ ಸೃಷ್ಟಿಸಿರುತ್ತೇವಷ್ಟೆ. ಜೊತೆಗೆ ಅಲ್ಲಿರುವ ವಿಕಿರಣಗಳ ಪ್ರಮಾಣವೂ ಭೂಮಿಯ ಮೇಲಿನದ್ದಕ್ಕಿಂತ ನೂರು ಪಟ್ಟು ಹೆಚ್ಚು. ನೂರು ಪಟ್ಟು ಹೆಚ್ಚೆಂದರೆ ನಮ್ಮನ್ನು ಕೊಲ್ಲುವಷ್ಟಲ್ಲ, ಆದರೆ ನಮ್ಮೊಳಗೆ ಇರುವ ಸೂಕ್ಷ್ಮ ಪ್ರಕೃತಿಯ ಜೀವಕೋಶಗಳಿಗೆ ಘಾಸಿ ತರುವಷ್ಟು ಹೆಚ್ಚು. ಇವು ತಾಕಿದರೆ ಜೀವಕೋಶಗಳಲ್ಲಿರುವ ಡಿಎನ್ಎ ಶಿಥಿಲಗೊಳ್ಳುತ್ತದೆ. ಡಿಎನ್ಎ ಶಿಥಿಲಗೊಂಡಿತು ಎಂದರೆ ಜೀವ ಕಳೆಯಿತು ಎಂದೇ ಅರ್ಥ.

ಪುಣ್ಯಕ್ಕೆ ದೇಹದಲ್ಲಿ ಇಂತಹ ಅಪಾಯಗಳನ್ನು ಎದುರಿಸುವ ಸವಲತ್ತುಗಳಿವೆ. ಉದಾಹರಣೆಗೆ, ಡಿಎನ್ಎ ಶಿಥಿಲಗೊಂಡಾಗ ಅದು ತನ್ನಂತಾನೇ ರಿಪೇರಿಯಾಗುವಂತಹ ವ್ಯವಸ್ಥೆ ಜೀವಕೋಶಗಳಲ್ಲಿರುತ್ತದೆ. ಆದ್ದರಿಂದ ಅಂತರಿಕ್ಷದಲ್ಲಿ ಭ್ರೂಣ ಬೆಳೆಯಲು ಆತಂಕ ಪಡಬೇಕಿಲ್ಲ. (ಬೆಳವಣಿಗೆ ಎಂದರೆ ಜೀವಕೋಶಗಳು ಒಡೆದು ಎರಡಾಗುವುದು, ಹಾಗೂ ಆ ವೇಳೆ ಡಿಎನ್ಎ ಕೂಡ ದ್ವಿಗುಣಗೊಳ್ಳಬೇಕಾಗುತ್ತದೆ.) ಈ ಸಂದರ್ಭದಲ್ಲಿ ಡಿಎನ್ಎಯಲ್ಲಿನ ದೋಷಗಳು ತನ್ನಂತಾನೇ ದುರಸ್ತಿಯಾಗಬಲ್ಲವು. ಹಾಗೆಯೇ ವೀರ್ಯವು ದೇಹದೊಳಗೆ ಇರುವವರೆಗೂ ಆತಂಕ ಕಡಿಮೆಯೇ. ದೇಹದ ಹೊರಗೆ ಅದನ್ನು ಕೂಡಿಟ್ಟಾಗ ಶಿಥಿಲಗೊಳ್ಳುವ ಡಿಎನ್ಎಗೆ ದುರಸ್ತಿಗೊಳ್ಳಲು ಅವಕಾಶವಿರುವುದಿಲ್ಲ.

ಇದಕ್ಕೆ ಕಾರಣವಿದೆ. ಹೊಸ ಹುಟ್ಟಿಗೆ ಗಂಡು ಮತ್ತು ಹೆಣ್ಣು ಎರಡೂ ಅವಶ್ಯವಷ್ಟೆ. ಜೀವಕೋಶದ ಮಟ್ಟದಲ್ಲಿ ಗಂಡನ್ನು ವೀರ್ಯವೂ, ಹೆಣ್ಣನ್ನು ಅಂಡವೂ (ಮೊಟ್ಟೆ) ಪ್ರತಿನಿಧಿಸುತ್ತವೆ. ಇವೆರಡರ ಮಿಲನದಿಂದ ಹುಟ್ಟುವ ಭ್ರೂಣವೇ ಮುಂದೆ ಹೊಸ ಜೀವವಾಗಿ ಬೆಳೆಯುತ್ತದೆ. ಇವೆರಡರಲ್ಲೂ ವೀರ್ಯದ್ದು ಬಲು ಸೂಕ್ಷ್ಮ ಪ್ರಕೃತಿ. ಅದಷ್ಟೇ ಅಲ್ಲ.. ದೇಹದಲ್ಲಿರುವ ಬೇರೆಲ್ಲ ಜೀವಕೋಶಗಳಿಂದಲೂ ವೀರ್ಯಾಣು ಆಕಾರ ಹಾಗೂ ಚರ್ಯೆಯಲ್ಲಿ ಭಿನ್ನವಾದುವು. ಉದಾಹರಣೆಗೆ, ಎಲ್ಲ ಜೀವಕೋಶಗಳಲ್ಲೂ ತಮ್ಮ ಬದುಕಿಗೆ ಅವಶ್ಯಕವಾದ ಶಕ್ತಿಯನ್ನು ಒದಗಿಸಿಕೊಳ್ಳಲು ಜೀವರಸವೂ, ಜೊತೆಗೆ ಆಹಾರ ಸೇವಿಸುವ ವ್ಯವಸ್ಥೆಯೂ ಇರುತ್ತದೆ. ಆದರೆ ವೀರ್ಯಕ್ಕೆ ಆ ಅನುಕೂಲತೆ ಇಲ್ಲ. ಅದರಲ್ಲಿ ಇರುವುದೆಲ್ಲವೂ ಭ್ರೂಣದ ಹುಟ್ಟಿಗೆ ಅವಶ್ಯಕವಾದ ಮಾಹಿತಿ. ಅದನ್ನು ಅಂಡದ ಕಡೆಗೆ ದೂಡುವ ಒಂದು ಬಾಲ.  ಅಂಡದ ಜೊತೆಗೆ ಮಿಲನವಾಗದಿದ್ದರೆ ವೀರ್ಯಾಣುವಿನ ಡಿಎನ್ಎ ಯಲ್ಲಿ ಆಗುವ ದೋಷಗಳು ದುರಸ್ತಿಯಾಗಲಾರವು.

ಅಂತರಿಕ್ಷದಲ್ಲಿ ವೀರ್ಯ ಯಾನದ ಸಮಸ್ಯೆಯ ಮೂಲವೇ ಇದು. ಅಲ್ಲಿನ ಅತಿ ಶೀತಲ, ವಿಕಿರಣ ಶೀಲ ವಾತಾವರಣದಲ್ಲಿ ದೀರ್ಘಕಾಲವಿದ್ದರೆ ವೀರ್ಯಾಣು ಎಂದಿನಂತಿರುವುವೇ? ಅಥವಾ ಅವುಗಳಲ್ಲಿರುವ ಡಿಎನ್ಎ ಶಿಥಿಲವಾಗಿ ಕೆಡುವುದೇ? ಇಂತಹ ವೀರ್ಯವನ್ನು ಬಳಸಿ ಸೃಷ್ಟಿಸಿದ ಭ್ರೂಣಗಳು ವಿಕೃತಿಗಳಾಗಿ ಹುಟ್ಟುವುವೇ? ಇವೆಲ್ಲ ಅನುಮಾನಗಳನ್ನು ಪರಿಹರಿಸಿಕೊಳ್ಳುವುದಕ್ಕಾಗಿ ಜಪಾನಿನ ಯಮನಶಿ ವಿಶ್ವವಿದ್ಯಾನಿಲಯದ ವಿಜ್ಞಾನಿ ತೆರುಹಿಕೊ ವಕಾಯಾಮ ನೇತೃತ್ವದ ತಂಡ ಇಲಿಗಳಿಂದ ತೆಗೆದ ವೀರ್ಯವನ್ನು ಶೈತ್ಯೀಕರಿಸಿ, ತೇವಾಂಶವಿಲ್ಲದಂತೆ ಶುಷ್ಕವಾಗಿಸಿ, ನಾಲ್ಕು ವರ್ಷಗಳ (ಆಗಸ್ಟ್ 4, 2013) ಹಿಂದೆ ಸ್ಪೇಸ್ ಸ್ಟೇಶನ್ನಿಗೆ ಕಳಿಸಿತ್ತು. ಶೈತ್ಯೀಕರಿಸಿ ಒಣಗಿಸುವ ವಿಧಾನದಿಂದ ವೀರ್ಯವನ್ನು ನೈಟ್ರೊಜನ್ ದ್ರವದಲ್ಲಿ ಕೂಡಿಡುವುದಕ್ಕಿಂತಲೂ ಹೆಚ್ಚು ಕಾಲ ಇಡಬಹುದು ಎನ್ನುವ ಆಸೆ. ಜೊತೆಗೆ ಭಾರಿಯಾದ ನೈಟ್ರೊಜನ್ ಸಿಲಿಂಡರನ್ನೂ ಹೊತ್ತೊಯ್ಯುವ ಅವಶ್ಯಕತೆಯೂ ಇರುವುದಿಲ್ಲ. ಹೀಗೆ ವೀರ್ಯವನ್ನು 288 ದಿನಗಳ ಕಾಲ ಅಂತರಿಕ್ಷದಲ್ಲಿಟ್ಟ ನಂತರ ಅದನ್ನು ಮರಳಿ ತಂದು ಪ್ರಯೋಗಾಲಯದಲ್ಲಿ ಪರೀಕ್ಷಿಸಿದರು. ಇಷ್ಟು ಸೂಕ್ಷ್ಮದ ಜೀವಾಣುವನ್ನು ನೀರೇ ಇಲ್ಲದಂತೆ ಒಣಗಿಸಿಬಿಟ್ಟರೆ ಜೀವವುಳಿಯುವುದೇ? ಇದೇ ಪರೀಕ್ಷೆಯ ಮೂಲ.

ಸ್ಪೇಸ್ ಸ್ಟೇಶನ್ನಿಗೆ ವೀರ್ಯವನ್ನು ಕಳಿಸಿದ ಸಂದರ್ಭದಲ್ಲಿಯೇ ಭೂಮಿಯಲ್ಲೂ ಅದರ ಒಂದು ಪಾಲನ್ನು ಅಷ್ಟೇ ಉಷ್ಣತೆಯಲ್ಲಿ ಉಳಿಸಿದ್ದರು. ಅಂತರಿಕ್ಷದಿಂದ ಬಂದ ವೀರ್ಯದ ಜೊತೆಗೇ ಭೂಮಿಯಲ್ಲಿದ್ದ ಇವುಗಳನ್ನೂ ಪರೀಕ್ಷಿಸಲಾಯಿತು. ಹಾಗೆಯೇ ಇವನ್ನು ಕಳಿಸುವ ಮುನ್ನ ಶೈತ್ಯೀಕರಿಸಿದ್ದ ಆದರೆ ಒಣಗಿಸದ ವೀರ್ಯವನ್ನೂ ಪರೀಕ್ಷೆಗೆ ಒಡ್ಡಲಾಗಯಿತು.  ಪರೀಕ್ಷೆಯ ವೇಳೆ ಈ ವೀರ್ಯಗಳನ್ನು ಸಹಜ ಉಷ್ಣತೆಗೆ ಮರಳಿಸಿ, ಹೆಣ್ಣಿಲಿಗಳಿಗೆ ಕೃತಕವಾಗಿ ಗರ್ಭಧಾರಣೆ ಮಾಡಿದರು. ತದನಂತರ ಹುಟ್ಟಿದ ಮರಿಗಳ ಸಂಖ್ಯೆ ಹಾಗೂ ಅವುಗಳ ಆರೋಗ್ಯದಲ್ಲಿ ಏನಾದರೂ ವ್ಯತ್ಯಾಸಗಳಿವೆಯೋ ಎಂದು ಗಮನಿಸಿದರು. ಜೊತೆಗೆ ಹುಟ್ಟಿದ ಮರಿಗಳ ಡಿಎನ್ಎ ಮತ್ತು ಮೂಲ ವೀರ್ಯಾಣುವಿನಲ್ಲಿದ್ದ ಡಿಎನ್ಎಯಲ್ಲಿಯೂ ಏನಾದರೂ ವ್ಯತ್ಯಾಸಗಳಿವೆಯೋ ಎಂದೂ ನೋಡಿದ್ದಾರೆ.

ಈ ಪರೀಕ್ಷೆಗಳ ಫಲಿತಾಂಶ ಸಿಹಿ ಸುದ್ದಿಯೇ ಎನ್ನಬೇಕು. ಏಕೆಂದರೆ ಮೂರೂ ಬಗೆಯ ವೀರ್ಯಾಣುಗಳಿಂದಲೂ ಹುಟ್ಟಿದ ಮರಿಗಳ ಸಂಖ್ಯೆ, ಆರೋಗ್ಯದಲ್ಲಿ ಗಮನಾರ್ಹ ವ್ಯತ್ಯಾಸಗಳೇನೂ ಇರಲಿಲ್ಲ. ಅಂತರಿಕ್ಷಕ್ಕೆ ಹೋಗಿದ್ದ ವೀರ್ಯದ ಜೊತೆಗೆ ವಿಕಿರಣದ ಪ್ರಮಾಣವನ್ನು ಅಳೆಯುವ ರಾಸಾಯನಿಕಗಳನ್ನೂ ಕೂಡಿಸಲಾಗಿತ್ತು. ಹೀಗಾಗಿ ಈ ವೀರ್ಯದ ಮಾದರಿಗಳಿಗೆ ಎಷ್ಟು ವಿಕಿರಣ ತಾಕಿರಬಹುದೆನ್ನುವ ಅಂದಾಜು ದೊರಕಿದೆ. ಅವುಗಳಿಗೆ ಒಟ್ಟು ಸುಮಾರು 178 ಮಿಲಿಸೀವರ್ಟ್ ವಿಕಿರಣ ತಾಕಿತ್ತು. ಇದು ಭೂಮಿಯ ಮೇಲಿರುವುದಕ್ಕಿಂತಲೂ (ವಾರ್ಷಿಕ 1.6 ಮಿಲಿಸೀವರ್ಟ್) ನೂರು ಪಟ್ಟು ಹೆಚ್ಚು.

ಇಷ್ಟಾದರೂ ಹುಟ್ಟಿದ ಮರಿಗಳ ಸಂಖ್ಯೆಯಲ್ಲಾಗಲಿ ಅವುಗಳ ಆರೋಗ್ಯದಲ್ಲಾಗಲಿ ಯಾವುದೇ ವ್ಯತ್ಯಾಸಗಳೂ ಇರಲಿಲ್ಲ. ಅಂದರೆ ಶೈತ್ಯದಲ್ಲಿಟ್ಟ ವೀರ್ಯಾಣುಗಳು ಅಂತರಿಕ್ಷದಲ್ಲಿರುವ ಆತಂಕಗಳನ್ನೂ ನಿವಾರಿಸಿಕೊಂಡು ಬದುಕಬಲ್ಲವು ಎಂದಾಯಿತು. ಅಥವಾ ಅವುಗಳಲ್ಲಿ ದೋಷಗಳುಂಟಾಗಿದ್ದರೂ, ಅಂಡಗಳ ಜೊತೆಗೆ ಬೆರೆತು ಭ್ರೂಣವಾಗುವಾಗ ಸರಿ ಹೋಗಿರಬೇಕು ಎಂದು ವಕಾಯಾಮ ತಂಡ ತರ್ಕಿಸಿದೆ.

ಅಂತೂ ಮಂಗಳಗ್ರಹದ ಮೇಲೆ ಹೋಗುವ ಕನಸು ಕಾಣುತ್ತಿರುವ ಸಂದರ್ಭದಲ್ಲಿ ಹೀಗೊಂದು ಸುದ್ದಿ ಬಂದಿರುವುದು ಸಿಹಿಯೇ ಸರಿ. ಈಗಿನ್ನು ಮಂದೆ, ಮಂದೆ ಪ್ರಾಣಿಗಳನ್ನು ಕೊಂಡೊಯ್ಯಬೇಕಿಲ್ಲ. ಒಂದಿಷ್ಟು ಶೈತ್ಯೀಕರಿಸಿದ ಒಣ ವೀರ್ಯ, ಶೈತ್ಯೀಕರಿಸಿದ ಭ್ರೂಣ ಹಾಗೂ ಇವುಗಳಿಂದ ಹುಟ್ಟಿದ ಭ್ರೂಣಗಳನ್ನು ಬೆಳೆಸಲು ಕೆಲವು ಪ್ರಾಣಿಗಳಾದರೆ ಸಾಕು. ಹೊಸದೊಂದು ವಸಾಹತನ್ನು ಸ್ಥಾಪಿಸಬಹುದು ಎನ್ನುವ ಕನಸು ಗಟ್ಟಿಯಾಗುತ್ತಿದೆ. ಹಾಂ. ಹೀಗೇ ಬೇರಾವುದೋ ಪ್ರಪಂಚದಿಂದ ಸೂಕ್ಷ್ಮಜೀವಿಗಳು ಪ್ರವಾಸ ಬಂದು ಬಂದು ಭೂಮಿಯಲ್ಲಿ ಜೀವವನ್ನು ಬಿತ್ತಿರಬಹುದಾದ ಸಾಧ್ಯತೆಗೂ ಈ ಸಂಶೋಧನೆ ಇಂಬು ಕೊಡುತ್ತಿದೆ. ಅಂತರಿಕ್ಷದಲ್ಲಿರುವ ವಿಕಿರಣದ ಹೊಡೆತವನ್ನೂ ಅವು ತಾಳಿಕೊಂಡು ಬದುಕಿ ಉಳಿದಿರಬಹುದಲ್ಲವೇ?

__________

ಆಕರ: Sayaka Wakayama et al.,Healthy offspring from freeze-dried mouse spermatozoa held on the International Space Station for 9 months, PNAS, Vol. 114, No. 23, Pp 5988-5993, 6 June, 2017

http://www.pnas.org/content/114/23/5988.full.pdf

 

Published in: on ಜೂನ್ 21, 2017 at 5:57 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ