ಭವಿಷ್ಯದ ತಿಜೋರಿಯಲ್ಲಿ ಭಾರತದ ಬೀಜಗಳು!

ಉತ್ತರ ಧ್ರುವ ಪ್ರದೇಶದಲ್ಲಿ ಸ್ವಾಲ್‌ಬಾರ್ಡ್‌ ಗ್ಲೋಬಲ್‌ ಸೀಡ್‌ ವಾಲ್ಟ್‌ ಯೋಜನೆ ನಿರ್ಮಿಸುತ್ತಿರುವ “ಶೀತಲ ಬೀಜ ತಿಜೋರಿ”ಯಲ್ಲಿ ಭಾರತದ ಕೃಷಿ ಪೈರುಗಳ ಮೂರು ತಳಿಗಳ ಬೀಜಗಳು ಭದ್ರತೆಗಾಗಿ ಸೇರ್ಪಡೆಯಾಗಿವೆ. ಭತ್ತದ ಐಆರ್‌-೩೬, ಐಆರ್‌-೬೪ ತಳಿಗಳ ಬೀಜಗಳು ಮತ್ತು ಗೋಧಿಯ ಲೆರ್ಮಾ ರೋಜೊ, ಸೊನೊರೊ-೬೪ ಮತ್ತಿ ರಿಡ್ಲಿ ತಳಿಗಳ ಬೀಜಗಳನ್ನು ಕಳೆದ ಜೂನ್‌ ೧೯, ೨೦೦೮ರಂದು ನಾರ್ವೆ ದೇಶದ ಉತ್ತರ ತುದಿಯಲ್ಲಿ ಹಿಮಾಚ್ಛಾದಿತ ಬೆಟ್ಟವೊಂದರ ಅಡಿಯಲ್ಲಿ ಕೊರೆದಿರುವ ಬೀಜ ತಿಜೋರಿಯಲ್ಲಿ ಇಡಲಾಯಿತು. ಈ ಸಂದರ್ಭದಲ್ಲಿ ಭಾರತದ ಕೇಂದ್ರ ಸರಕಾರದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿರುವ ಶ್ರೀ ಕಪಿಲ್‌ ಸಿಬಲ್‌ರವರೂ ಅಲ್ಲಿ ಉಪಸ್ಥಿತರಿದ್ದರು ಎಂದು ಜುಲೈ ೧, ೨೦೦೮ರಂದು ಪ್ರೆಸ್‌ ಇನ್‌ಫರ್ಮೇಶನ್‌ ಬ್ಯೂರೊ ಬಿಡುಗಡೆ ಮಾಡಿದ ಪ್ರಕಟಣೆಯೊಂದು ತಿಳಿಸಿದೆ.

ಆಧುನಿಕ ಕೃಷಿ ಪದ್ಧತಿಯಿಂದಾಗಿ ಮರೆಯಾಗುತ್ತಿರುವ ಧಾನ್ಯಗಳ ಸ್ಥಳೀಯ ಹಾಗೂ ವಿಶಿಷ್ಟ ತಳಿಗಳು ಸಂಪೂರ್ಣ ಕಾಣೆಯಾಗುವ ಮುನ್ನವೇ ಅವುಗಳ ತಳಿಗುಣಗಳನ್ನು ಕಾದಿಡುವ ಹಂಬಲದಿಂದ ಹಲವಾರು ರಾಷ್ಟ್ರಗಳು ಒಟ್ಟಾಗಿ ಸ್ವಾಲ್‌ಬಾರ್ಡ್‌ ಗ್ಲೋಬಲ್‌ ಸೀಡ್‌ ವಾಲ್ಟ್‌ ಎನ್ನುವ ಯೋಜನೆಯನ್ನು ಹಮ್ಮಿಕೊಂಡಿವೆ. ಅತಿ ಶೀತಲವಾಗಿರುವ ನೆಲದಲ್ಲಿ ತಿಜೋರಿ ಕೊರೆದು ಅಲ್ಲಿ ಬೀಜಗಳನ್ನು ಕಾದಿಡುವುದರಿಂದ, ಅವು ಸಹಸ್ರಾರು ವರ್ಷಗಳ ಕಾಲ ಸಾಯದಂತೆ ಉಳಿಸಬಹುದು ಎನ್ನುವ ಆಶಯ ಈ ಯೋಜನೆಗಿದೆ. ವರ್ಷವೆಲ್ಲವೂ ಹಿಮ ಕವಿದಿರುವ ಲೋಂಗಿಯೆರ್‌ಬಿಯೆನ್‌ ಎನ್ನುವ ಸ್ಥಳದಲ್ಲಿ ತಿಜೋರಿ ನಿರ್ಮಾಣ ಕಾರ್ಯವೂ ಸಾಗಿದೆ. ಇಲ್ಲಿ ವರ್ಷವೆಲ್ಲವೂ ಉಷ್ಣತೆ -೨೦ರಿಂದ -೩೦ ಡಿಗ್ರಿ ಸೆಲ್ಶಿಯಸ್‌ ಇರುತ್ತದೆಯಂತೆ.  ಒಂದು ವೇಳೆ ಹಸಿರುಮನೆ ಪರಿಣಾಮದಿಂದಾಗಿ ಭೂಮಿಯ ಮೇಲೆ ಕವಿದಿರುವ ಹಿಮದ ಬೆಟ್ಟವೆಲ್ಲ ಕರಗಿದರೂ, ಇಲ್ಲಿನ ಉಷ್ಣತೆ -೩ ಡಿಗ್ರಿ ತಲುಪಲು ಹಲವಾರು ವಾರಗಳೇ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಇಲ್ಲಿಟ್ಟ ಬೀಜಗಳ ನಿಧಿ ಭದ್ರವಾಗಿರುತ್ತದೆ ಎನ್ನುವ ಆಶಯವಿದೆ.

ಬಿಲ್‌ ಗೇಟ್ಸ್‌ ದತ್ತಿ ನಿಧಿಯ ಜೊತೆಗೆ ಬ್ರಿಟನ್‌, ನಾರ್ವೆ, ಆಸ್ಟ್ರೇಲಿಯಾ, ಸ್ವಿಟ್ಜರ್ಲಂಡ್‌, ಸ್ವೀಡನ್‌ ಗಳಲ್ಲದೆ ಭಾರತ, ಬ್ರೆಜಿಲ್‌, ಕೊಲಂಬಿಯಾ, ಇಥಿಯೋಪಿಯಾಗಳೂ ಈ ಕಾರ್ಯದಲ್ಲಿ ಕೈಗೂಡಿಸಿವೆ. ಈ ತಿಜೋರಿಯ ಪ್ರಪ್ರಥಮ ಶಿಲಾನ್ಯಾಸವನ್ನು ಮೊನ್ನೆ ನಡೆಸಲಾಯಿತು. ಅದೇ ಸಂದರ್ಭದಲ್ಲಿ ಭಾರತದ ಈ ಐದು ತಳಿಗಳನ್ನು ಕಾದಿಡಲು ತಿಜೋರಿಗೆ ಸಲ್ಲಿಸಲಾಯಿತು.

ಈ ಬಗ್ಗೆ ಸರಕಾರಿ ನೀಡಿರುವ ಪತ್ರಿಕಾ ಪ್ರಕಟಣೆ ಇಲ್ಲಿದೆ.

ಬೀಜವನ್ನೇನೋ ಉಳಿಸಬಹುದು. ಆದರೆ ಬೀಜವನ್ನು ಉತ್ತು, ಬಿತ್ತು, ಅನ್ನ ಬೆಳೆವವರನ್ನು ಉಳಿಸುವುದು ಹೇಗೆ ಎನ್ನುವುದಕ್ಕೂ ವಿಜ್ಞಾನಿಗಳು ಉಪಾಯ ಹುಡುಕಬೇಕು ಎನ್ನೋಣವೆ!

Published in: on ಜುಲೈ 4, 2008 at 6:59 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ