ತೋಳ ಬಂತು ತೋಳ. ತೋಳ ಹೋಯ್ತು ತೋಳ!

ಇ-ಪತ್ರಿಕೆ ಡಾಟ್ ಕಾಮ್ ನಲ್ಲಿ ಪ್ರಪಂಚದ ಸುದೀರ್ಘವಾದ ಅಧ್ಯಯನವೊಂದರ ವರದಿಯನ್ನು ಪ್ರಕಟಿಸಿದೆ. ಅದು ಇಲ್ಲಿದೆ. ಈ ಲೇಖನಕ್ಕೆ ಪೂರಕವಾದ ಹಲವು ಅಂಶಗಳು ಹಾಗೂ ಸಂಪಾದಿಸದ ಪೂರ್ಣ ಪಾಠವನ್ನು ಇಲ್ಲಿ ಲಗತ್ತಿಸಿದ್ದೇನೆ ಓದುಗರ ಖುಷಿಗಾಗಿ.


ಕುರಿ ಮಂದೆಯ ನಡುವೆ ತೋಳವನ್ನು ಬಿಟ್ಟಂತೆ ಎನ್ನುವ ಮಾತಿದೆ. ಇದರ ಅರ್ಥ ಇಷ್ಟೆ. ಕುರಿ ಮಂದೆಯ ನಡುವೆ ತೋಳವೊಂದನ್ನು ಬಿಟ್ಟರೆ ಕುರಿ ಮಂದೆಗೆ ಉಳಿಗಾಲವಿಲ್ಲ. ಬೇಟೆಗಾರನಾದ ತೋಳ ತನ್ನ ಬೇಟೆಯನ್ನು ಸುಮ್ಮನೆ ಬಿಡುತ್ತದೆಯೇ ಎನ್ನುವ ಸೂಚ್ಯಾರ್ಥದ ಮಾತಿದು. ಗಾದೆ ಮಾತುಗಳೆಲ್ಲ ನಿಜವಾಗಬೇಕಿಲ್ಲವಷ್ಟೆ! ಹಾಗೆಯೇ ಈ ಮಾತೂ ಸುಳ್ಳಿರಬಹುದೇ ಎನ್ನುವ ಸುದ್ದಿಯೊಂದು ವಿಜ್ಞಾನ ಜಗತ್ತಿನಿಂದ ವರದಿಯಾಗಿದೆ. ಪ್ರಪಂಚದ ಅತಿ ದೀರ್ಘವಾದ ಪ್ರಯೋಗವೊಂದರ ಫಲಿತಾಂಶವೊಂದು ಕುರಿಮಂದೆಯೊಳಗೆ ಇದ್ದರೂ ತೋಳ ಬದುಕುಳಿಯದೆ ಇರಬಹುದು ಎಂದು ನಿರೂಪಿಸಿದೆ.

ಹೌದು. ಇದು ಅಂತಿಂಥ ಪ್ರಯೋಗವಲ್ಲ. ಸುಮಾರು 60 ವರ್ಷಗಳಿಂದ ನಡೆಯುತ್ತಿರುವ ಪ್ರಯೋಗ. ಹಾಗೆಯೇ ಇದು ಯಾವುದೇ ಪ್ರಯೋಗಶಾಲೆಯೊಳಗೆ ಬಂಧಿಯಾಗಿರುವ ಪ್ರಯೋಗವೂ ಅಲ್ಲ. ಮುಕ್ತವಾಗಿ, ನಿಸರ್ಗದಲ್ಲಿಯೇ ನಡೆಯುತ್ತಿರುವ ಪ್ರಯೋಗ. ಕೆನಡಾದ ಅತಿ ದೊಡ್ಡ ಸಿಹಿನೀರಿನ ಸರೋವರ ಲೇಕ್ ಸುಪೀರಿಯರ್ ಬಳಿಯಲ್ಲಿರುವ ಪುಟ್ಟ ನಡುಗಡ್ಡೆಯೇ ಈ ಪ್ರಯೋಗಶಾಲೆ. ಸುಮಾರು 540 ಚದರ ಕಿಲೋಮೀಟರು ಅಂದರೆ ನಮ್ಮ ಬೆಂಗಳೂರಿಗಿಂತಲೂ ಚಿಕ್ಕದಾದೊಂದು ನಡುಗಡ್ಡೆ ರಾಯೇಲ್ ನಡುಗಡ್ಡೆ. ಈ ದ್ವೀಪವು ಸರೋವರದ ನಡುವೆ ನಾಡಿನಿಂದ ಸುಮಾರು 17 ಕಿಲೋಮೀಟರು ದೂರದಲ್ಲಿ ಇದೆ.  ಹೆಚ್ಚಾಗಿ ಫರ್ ಮರಗಳೇ ಇರುವ ಈ ದ್ವೀಪದಲ್ಲಿ ತೊರೆಗಳೂ, ಸಣ್ಣ ಪುಟ್ಟ ಕೊಳಗಳೂ ಇವೆ. ನಡುಗಡ್ಡೆಯಲ್ಲಿ ವಾಸಿಸುವ ಪ್ರಾಣಿಗಳಲ್ಲಿ ತೋಳ, ಅಲ್ಲಿಯವರು ಮೂಸ್ ಎನ್ನುವ ಸಾರಂಗದಂಥಹ ಪ್ರಾಣಿ , ಬೀವರ್ ಇಲಿಗಳು, ಅಳಿಲುಗಳಂತಹ ಪ್ರಾಣಿಗಳು ಪ್ರಮುಖವಾದಂಥವು.

ನೂರಿಪ್ಪತ್ತು ವರ್ಷಗಳ ಹಿಂದೆ ಈ ದ್ವೀಪದಲ್ಲಿ ದೊಡ್ಡ ಪ್ರಾಣಿಗಳೇ ಇರಲಿಲ್ಲ. ಆದರೆ 1900 ರ ಸುಮಾರಿಗೆ ಇಲ್ಲಿಗೆ ಕೆಲವು ಸಾರಂಗಗಳು ಬಂದು ಕೂಡಿಕೊಂಡವು. ಹೇಗೆ ಬಂತು ಎನ್ನಬೇಡಿ. ಛಳಿಗಾಲ ಬಂತೆಂದರೆ ಇಡೀ ಸರೋವರವೇ ಹೆಪ್ಪುಗಟ್ಟಿ, ನಡುಗಡ್ಡೆಗೂ, ನಾಡಿಗೂ ಹಿಮದ ಸೇತುವೆಗಳು ನಿರ್ಮಾಣವಾಗಿಬಿಡುತ್ತವೆ. ಕೆಲವೊಮ್ಮೆ ಪ್ರಾಣಿಗಳು ಇವನ್ನು ಹಾದು ಹೊಸ ಜಾಗೆಯಲ್ಲಿ ನೆಲೆಯಾಗುವುದುಂಟು. ಒಂದಾನೊಮ್ಮೆ ಆಫ್ರಿಕಾದಲ್ಲಿದ್ದ ಮಾನವ ಜಗತ್ತಿನೆಲ್ಲೆಡೆ ಪಸರಿಸಿದ್ದೂ ಇದೇ ರೀತಿಯೇ. ನಡುಗಡ್ಡೆಗೆ ಬಂದ ಸಾರಂಗಗಳು ಅಲ್ಲಿಯೇ ನೆಲೆಯಾಗಿ ಸಮೃದ್ಧಿಯಾಗಿ ಬೆಳೆಯತೊಡಗಿದವು. ಇದರ ಪರಿಣಾಮ ನಡುಗಡ್ಡೆಯಲ್ಲಿದ್ದ ಕಾಡು ನಶಿಸುವುದು ಕಂಡು ಬಂದಿತು. ಸುಮಾರು ನಾಲ್ಕು ದಶಕಗಳ ಕಾಲ ಕಾಲ ಹಾಗೂ ಕಾಯಿಲೆಗಳಷ್ಟೆ ಇವುಗಳ ಸಂಖ್ಯೆಯನ್ನು ನಿಯಂತ್ರಿಸುತ್ತಿದ್ದುವು. ಬರಗಾಲ ಬಂದ ವರ್ಷದಲ್ಲಿಯಷ್ಟೆ ಸಂಖ್ಯೆ ಕಡಿಮೆಯಾಗುತ್ತಿತ್ತು.

1949ರ ಛಳಿಗಾಲದಲ್ಲಿ ಅದು ಹೇಗೋ ಕೆಲವು ತೋಳಗಳು ಇಲ್ಲಿಗೆ ವಲಸೆ ಬಂದವು. ತದನಂತರ ದ್ವೀಪದ ಗತಿಯೇ ಬದಲಾಯಿತು. ಇದೇ ಸುಸಮಯವೆಂದು ಪರಿಗಣಿಸಿದ ವಿಜ್ಞಾನಿಗಳು ಅಂದಿನಿಂದ ಈ ದ್ವೀಪದಲ್ಲಿ ತೋಳ ಮತ್ತು ಸಾರಂಗಗಳ ಸಂಖ್ಯೆ, ನಡವಳಿಕೆ ಹಾಗೂ ದ್ವೀಪದ ಪರಿಸರದ ಮೇಲೆ ಅವುಗಳ ಪ್ರಭಾವವೇನಿರಬಹುದೆನ್ನುವುದನ್ನು ಗಮನಿಸುತ್ತಾ ಬಂದಿದ್ದಾರೆ. ನಾಡಿನಿಂದ ದೂರವಿರುವುದರಿಂದಲೂ, ಮಾನವ ಯಾವುದೇ ರೀತಿಯಲ್ಲಿಯೂ ಮೂಗು ತೂರಿಸದೇ ಇರುವುದರಿಂದಲೂ, ಈ ಪ್ರಾಣಿಗಳ ಅಳಿವು, ಉಳಿವು ನಿಸರ್ಗದ ನಿಯಮಗಳ ಅನುಸಾರವಷ್ಟೆ ನಡೆಯಬೇಕು. ಹೀಗಾಗಿ, ವಿಜ್ಞಾನಿಗಳಿಗೆ ಕುತೂಹಲ.

ಇದೀಗ ಈ ಪ್ರಯೋಗ ಕೊನೆಗೊಳ್ಳುವ ಸಮಯ ಬಂದಿದೆ ಎನ್ನಿಸುತ್ತಿದೆಯಂತೆ. ಇತ್ತೀಚಿಗೆ ಪ್ರಕಟವಾಗಿರುವ ಫಲಿತಾಂಶ ಗಳ ಪ್ರಕಾರ ದ್ವೀಪದಲ್ಲಿ ಉಳಿದಿರುವುದು ಎರಡೇ ತೋಳಗಳು. ಒಂದು ಗಂಡು ಮತ್ತೊಂದು ಹೆಣ್ಣು. ಇಷ್ಟಿದ್ದರೆ ಸಾಕು. ಮರಿಗಳು ಹುಟ್ಟುತ್ತವೆ ಎನ್ನಬೇಡಿ. ಗಂಡು ಎಷ್ಟೇ ಪ್ರಯತ್ನಿಸಿದರೂ ಹೆಣ್ಣು ಹತ್ತಿರ ಬರಗೊಡುತ್ತಿಲ್ಲವಂತೆ. ಜೊತೆಗೆ ಇವೆರಡೂ ಬಲು ಒಂದೇ ತಾಯಿಯ ಮಕ್ಕಳು. ಗಂಡು ಹೆಣ್ಣಿಗೆ ತಂದೆಯೂ ಹೌದು ಅಣ್ಣನೂ ಹೌದು. ತೋಳನಂತಹ ಬೇಟೆಗಾರನಿಗೆ ಸಮೃದ್ಧಿಯಾಗಿ ಬೇಟೆ ದೊರೆಯುವ ಅವಕಾಶದಲ್ಲಿಯೂ ಇಂತಹ ಸಂದಿಗ್ಧ ಬಂದೊದಗಿದ್ದು ಹೇಗೆ?

mooseandwolves

ಸಾರಂಗ (ಮೂಸ್) ಮತ್ತು ಕೊನೆಗುಳಿದಿರುವ ತೋಳಗಳ ಜೋಡಿ

ಬಹುಶಃ ನಿಸರ್ಗ ನಮಗೆ ಕಲಿಸುತ್ತಿರುವ ಪರಿಸರವಿಜ್ಞಾನದ ಪಾಠವಿದು. ನಮ್ಮೂರಲ್ಲಿ ಗುಬ್ಬಿಗಳು ಮರೆಯಾಗಿದ್ದು ಅವುಗಳಿಗೆ ವಾಸಿಸಲು ಅವಶ್ಯಕವಾದ ನೆಲೆಗಳು ನಾಶವಾಗಿದ್ದರಿಂದ ಎಂದು ಪರಿಸರ ವಿಜ್ಞಾನಿಗಳು ಬೊಂಬಿಟ್ಟರೂ ನಮ್ಮ ಕಿವಿಗೆ ಬೀಳುವುದಿಲ್ಲ. ರಾಯೆಲ್ ನಡುಗಡ್ಡೆಯಲ್ಲಿ ಒಂದು ಕಾಲಕ್ಕೆ ತೋಳಗಳು ಬೇಕಾಬಿಟ್ಟಿ ತಿಂದು ಬೆಳೆದಿದ್ದುವು. ಮೂರು ದಶಕಗಳ ಕಾಲದಲ್ಲಿ ಪ್ರಪಂಚದಲ್ಲಿಯೇ ತೋಳಗಳ ದಟ್ಟಣೆ ಅತಿ ಹೆಚ್ಚೆನಿಸಿದ್ದ ಪ್ರದೇಶವಾಗಿತ್ತು ರಾಯೇಲ್. ನಾಲ್ಕು ಹೆಜ್ಜೆ ಹಾಕುವುದರೊಳಗೆ ಒಂದು ತೋಳ ಸಿಗುವಂತಿತ್ತು. ಆದರೆ ಸಂಬಂಧಿಗಳೊಳಗೇ ಸಂಬಂಧ ಬೆಳೆಯಬೇಕಾದ ಅನಿವಾರ್ಯತೆಯೇ ಅವಕ್ಕೆ ಮುಳುವಾಯಿತು. ಅಕಸ್ಮಾತ್ತಾಗಿ ದ್ವೀಪದೊಳಗೆ ನುಸುಳಿದ ನಾಯಿಯೊಂದು ಹೊತ್ತು ತಂದ ವೈರಸ್ ತೋಳವನ್ನು ವಿನಾಶದತ್ತ ದೂಡಿತು. ಪರಿಣಾಮ: ಸಾರಂಗಗಳ ಸಂಖ್ಯೆಯಲ್ಲಿ ವೃದ್ಧಿ. ಹಾಗಂತ ಅವೂ ಏನೂ ಖುಷಿಯಿಂದ ಇರಲಿಲ್ಲ. ಒಮ್ಮೆ ಬಂದ ತೀವ್ರ ಛಳಿಗಾಲವನ್ನು ತಾಳಲಾರದೆ ಬಹುತೇಕ ಸಾರಂಗಗಳು ಸಾವನ್ನಪ್ಪಿದ್ದುವು

wolfandmooseonroyaleisland

ತೋಳ ಮತ್ತು ಮೂಸ್ ಗಳ ಸಂಖ್ಯೆಯಲ್ಲಿ ಅಪ್ಪಾಲೆ-ತಿಪ್ಪಾಲೆ. ತೋಳಗಳು ಕಡಿಮೆಯಾದಾಗ ಮೂಸ್ ಗಳು ಹೆಚ್ಚಾಗಿರುವುದನ್ನು ಗಮನಿಸಿ.

ಈ ಬಗೆಯಲ್ಲಿ ಬೇಟೆ ಹಾಗೂ ಬೇಟೆಗಾರರ ಸಂಖ್ಯೆಯಲ್ಲಿನ ಅಪ್ಪಾಲೆ-ತಿಪ್ಪಾಲೆ ಆಟದಲ್ಲಿ ಕೊನೆಗೂ ಸೋತಿದ್ದು ತೋಳವೇ. ಇದಕ್ಕೆ ಕಾರಣ ಸಂಬಂಧಿಗಳೊಳಗಿನ ಸಂಬಂಧ ಇರಬಹುದು ಎನ್ನುತ್ತಾರೆ ವಿಜ್ಞಾನಿಗಳು. ತಂದೆ-ತಾಯಿ-ಅಕ್ಕ-ತಮ್ಮಂದಿರೊಳಗೇ ಸಂಬಂಧ ಕೂಡುವುದು ಅನಿವಾರ್ಯವಾಗಿದ್ದರಿಂದ ಅದುವರೆಗೆ ಮರೆಯಾಗಿದ್ದ ಹಲವು ಅನುವಂಶೀಯ ದೋಷಗಳು ಬಯಲಾದುವು. ಕುರುಡು ತೋಳಗಳು, ಸತ್ತಮರಿಗಳ ಹುಟ್ಟು ಸಾಮಾನ್ಯವಾಯಿತು. ಒಂದು ಕಾಲದಲ್ಲಿ ಅರವತ್ತಕ್ಕೂ ಹೆಚ್ಚು ತೋಳಗಳು ಅಲ್ಲಿದ್ದುವು.

ಇದರ ಮಧ್ಯೆ ವಿಜ್ಞಾನಿಗಳು ಮುದಿ ತೋಳವೊಂದನ್ನು ಅಲ್ಲಿ ಬಿಟ್ಟು ಪರೀಕ್ಷಿಸಿದ್ದಾರೆ. ಈ ಮುದಿತೋಳ ಬಂದ ನಂತರ ತೋಳಗಳ ಸಂಖ್ಯೆ ತುಸು ವೃದ್ಧಿಯಾದರೂ ಅನಂತರದ ದಿನಗಳಲ್ಲಿ ಅದು ಕ್ರಮೇಣ ಕ್ಷೀಣಿಸಿತು. ಕಳೆದ ವರ್ಷ ನಾಲ್ಕು ತೋಳಗಳಿದ್ದದ್ದು ಈಗ ಕೇವಲ ಎರಡೇ ಉಳಿದಿವೆ. ಇವುಗಳಿಗೆ ಸಂತಾನೋತ್ಪತ್ತಿಯಲ್ಲಿ ಆಸಕ್ತಿಯೇ ಇಲ್ಲವಾದ್ದರಿಂದ ಬಹುಶಃ ಬೇಗನೇ ತೋಳದ ಸಂತತಿ ಇಲ್ಲಿ ಸಂಪೂರ್ಣ ನಾಶವಾಗುತ್ತದೆ. ಅನಂತರ ಏನಿದ್ದರೂ ಸಾರಂಗದ್ದೇ ಸಾಮ್ರಾಜ್ಯ ಎಂದು ವಿಜ್ಞಾನಿಗಳು ಊಹಿಸಿದ್ದಾರೆ. ಸಾರಂಗಗಳು ಹೆಚ್ಚಾದರೆ ಅಲ್ಲಿನ ಕಾಡಿಗೆ ಉಳಿಗಾಲವಿಲ್ಲ ಎನ್ನುವುದೂ ಸ್ಪಷ್ಟ. ಏಕೆಂದರೆ ಸಾರಂಗಗಳ ಸಂಖ್ಯೆ ಕ್ಷೀಣಿಸಿದ್ದ ಸಮಯದಲ್ಲಿ ಮೊಳೆತ ಗಿಡಗಳು ಬೆಳೆದಷ್ಟು ದೊಡ್ಡದಾಗಿ ಇನ್ಯಾವ ಕಾಲದಲ್ಲಿ ಮೊಳೆತ ಗಿಡಗಳೂ ಬೆಳೆಯಲಿಲ್ಲ.

ರಾಯೇಲ್ ನಡುಗಡ್ಡೆಯಂತಹ ಪ್ರತ್ಯೇಕ ನೆಲೆಯಲ್ಲಿ ನೆಲೆಗೊಂಡ ಜೀವಿಗಳಲ್ಲಿ ವಿಕಾಸ ಸ್ಪಷ್ಟವಾಗಿ ಕಾಣುತ್ತದೆ ಎಂದು ಡಾರ್ವಿನ್ ತಿಳಿಸಿದ್ದನೇನೋ ಸರಿ. ಇಂತಹ ನೆಲೆಗಳಲ್ಲಿ ವಿಕಾಸದ ಮತ್ತೊಂದು ಮುಖವಾದ ವಿನಾಶವೂ ಅಷ್ಟೇ ಸ್ಪಷ್ಟ ಎಂದು ಈ ಸುದೀರ್ಘ ಪ್ರಯೋಗ ತಿಳಿಸುತ್ತಿದೆ.

_____________

 

ಆಕರ:

  1. Christine Mlot. (2013) Are Isle Royale’s Wolves Chasing Extinction?. Science | VOL 340 | 2 4 May 2 0 1 3,Pp 919-921, doi:10.1126/science.340.6135.919
  2. Christian Mlot, Two Wolves Survive in the Worlds Longest Prey-Predator Study, Science, 18 April 2017 DOI: 10.1126/science.aal1061
  3. Rolf O. Peterson and John A. Vucetich, Wolves: Ecological Studies of Wolves on Royale Islands, Annual Report 2016-2017,  http://isleroyalewolf.org/sites/default/files/annual-report-pdf/Annual%20Report%202016-2017_0.pdf
Published in: on ಮೇ 9, 2017 at 5:50 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ