ಕೀಟವೋಡಿಸುವ ಕೆಸುವಿನ ಗೆಡ್ಡೆ

ಕೀಟವೋಡಿಸುವ ಕೆಸುವಿನ ಗೆಡ್ಡೆ

ಹೌದು. ಬೇವಿನ ನಂತರ ಈಗ ಮತ್ತೊಂದು ಹಿತ್ತಲ ಗಿಡ ಕೀಟನಾಶಕಗಳ ಸಮಸ್ಯೆಗೆ ಪರಿಹಾರ ಒದಗಿಸಲಿದೆಯೇ? ಹೀಗೊಂದು ಸುದ್ದಿಯನ್ನು ಸೈಂಟಿಫಿಕ್ ರಿಪೋರ್ಟ್ಸ್ ಪತ್ರಿಕೆ ನಿನ್ನೆ ಪ್ರಕಟಿಸಿದೆ. ಇಂಫಾಲದ ಜೈವಿಕ ಸಂಪನ್ಮೂಲ ಹಾಗೂ ಸುಸ್ಥಿರ ಅಭಿವೃದ್ಧಿ ಸಂಶೋಧನಾಲಯದ ವಿಜ್ಞಾನಿ ಯಲ್ಲಪ್ಪ ರಾಜಶೇಖರ್ ಮತ್ತು ಸಂಗಡಿಗರ ಪ್ರಕಾರ ಕರ್ನಾಟಕದಲ್ಲಿ ಬೆಳೆಯುವ ಕೆಸವಿನ ದಂಟಿನ ಗೆಡ್ಡೆಗಳಲ್ಲಿ ಕೀಟಗಳನ್ನು ದೂರವಿಡುವ ಶಕ್ತಿಯಿದೆ.

colocasia

ಕೆಸುವಿನ ದಂಟು

ಕರಾವಳಿಯಲ್ಲಿ ಹೆಚ್ಚು ಬಳಕೆಯಾಗುವ ಕೆಸುವಿನ ದಂಟು ಹಾಗೂ ಕೆಸುವಿನ ಗೆಡ್ಡೆಗಳ ಆಹಾರ ಗುಣಗಳ ಬಗ್ಗೆ ಹೇಳಬೇಕಿಲ್ಲ. ಕರಾವಳಿಗರು ಇದರ ಎಲೆಯಿಂದ ಮಾಡುವ ‘ಪತ್ರೊಡೆ’ ಆ ಪ್ರದೇಶವನ್ನು ಪ್ರತಿನಿಧಿಸುವ ತಿನಿಸು. ಹಾಗೆಯೇ ಗೆಡ್ಡೆಗಳೂ ವಿಶೇಷ ಆಹಾರ. ಗೆಡ್ಡೆಗಳಲ್ಲಿರುವ ಪಿಷ್ಠ ಮಧುಮೇಹಿಗಳ ರಕ್ತದಲ್ಲಿ ಸಕ್ಕರೆಯನ್ನು ಉಲ್ಬಣಿಸದೆಯೇ ಶಕ್ತಿಯೂಡಿಸುತ್ತದೆ ಎನ್ನುವುದು ಪೌಷ್ಠಿಕ ತಜ್ಞರ ಅಭಿಪ್ರಾಯ. ವಿಜ್ಞಾನಿಗಳು ಕೊಲೊಕೇಶಿಯ ಎಸ್ಕುಲೆಂಟಾ ಎಂದು ಹೆಸರಿಸಿರುವ  ಈ ಗಿಡದಲ್ಲಿ ಕೀಟಗಳನ್ನು ದೂರವಿಡುವ ರಾಸಾಯನಿಕಗಳೂ ಇವೆ ಎನ್ನುತ್ತಾರೆ ರಾಜಶೇಖರ್.

ಸಸ್ಯಮೂಲದ ಹಲವು ರಾಸಾಯನಿಕಗಳನ್ನು ಕೀಟನಾಶ ಮಾಡಲು ಬಳಸಲಾಗುತ್ತಿದೆ. ಉದಾಹರಣೆಗೆ, ಬೇವಿನಲ್ಲಿರುವ ಅಜಾಡಿರಾಕ್ಟಿನ್. ಇದನ್ನು ಇತರೆ ವಸ್ತುಗಳ ಜೊತೆಗೆ ಬೆರೆಸಿ ಕೀಟಗಳನ್ನು ನಿಯಂತ್ರಿಸಲು ಉಪಯೋಗಿಸುತ್ತಿದ್ದಾರೆ. ಅದೇ ರೀತಿಯಲ್ಲಿ ಕರ್ನಾಟಕದ ಬಯಲುಗಾಡುಗಳಲ್ಲಿ ಕಾಣಬರುವ ಮಾಕಳಿಬೇರಿ (ಡೆಕಾಲೆಪಿಸ್ ಹ್ಯಾಮಿಲ್ಟೋನಿ) ನಲ್ಲಿಯೂ ಕೀಟಗಳನ್ನು ಬೆದರಿಸುವ ರಾಸಾಯನಿಕಗಳಿವೆಯೆಂದು ಗುರುತಿಸಲಾಗಿದೆ. ಸಾಧಾರಣ ಸೊಳ್ಳೆಗಳನ್ನು ದೂರವಿಡಲು ಬಳಸುವ ಸ್ಪ್ರೇಗಳಲ್ಲಿ ಚೆಂಡುಮಲ್ಲಿಗೆ ಹೂವಿನಲ್ಲಿರುವ ಪೈರೆತ್ರಿನ್ ರಾಸಾಯನಿಕವನ್ನು ಉಪಯೋಗಿಸುತ್ತಾರೆ.

ಇವೆಲ್ಲವೂ ಇರುವಾಗ ಹೊಸ ರಾಸಾಯನಿಕವೇಕೆ? ರಾಜಶೇಖರ್ ಅವರ ಪ್ರಕಾರ ಆಹಾರ ಪದಾರ್ಥಗಳನ್ನು ಶೇಖರಿಸಿಡಲು ಇವ್ಯಾವುವೂ ಉಪಯುಕ್ತವಲ್ಲ.  ಪೈರೆತ್ರಿನ್ ಆಹಾರ ವಸ್ತುಗಳಲ್ಲಿ ಬಳಸಲು ಯೋಗ್ಯವಲ್ಲ. ಬೇವಿನ ರಾಸಾಯನಿಕ ಗಾಳಿಯಲ್ಲಿ ಆವಿಯಾಗದೆ ಇರುವುದರಿಂದ ಧಾನ್ಯಗಳಲ್ಲಿ ಬೆರೆಸಿಟ್ಟರೂ ನಿಷ್ಪ್ರಯೋಜಕ. ಹೀಗಾಗಿ ಧಾನ್ಯಗಳನ್ನು ಕೂಡಿಡುವುದಕ್ಕೆ ಸುಲಭವಾಗಿ ಆವಿಯಾಗುವಂತಹ ಕೀಟನಾಶಿಯ ಅವಶ್ಯಕತೆ ಇದೆ. ಇದಕ್ಕಾಗಿ ನಡೆದಿರುವ ಶೋಧಗಳಲ್ಲಿ ಕೆಸುವಿನ ದಂಟಿನ ರಾಸಾಯನಿಕವೂ ಕೂಡಿದೆ.

colocasia_esculenta_dsc07801

ಕೆಸುವಿನ ಗೆಡ್ಡೆ

ಕೆಸುವಿನ ಗೆಡ್ಡೆಯಿಂದ ವಿವಿಧ ರಾಸಾಯನಿಕಗಳನ್ನು ಬಳಸಿ ಪ್ರತ್ಯೇಕಿಸಿದ ಘಟಕಗಳಲ್ಲಿ ಮೆಥನಾಲ್ ನಲ್ಲಿ ಕರಗುವ ವಸ್ತುವೊಂದು ಅತಿ ಹೆಚ್ಚಿನ ಕೀಟಾಹಾರಿ ಗುಣವನ್ನು ತೋರಿಸಿತು. ಇದನ್ನು ಪ್ರತ್ಯೇಕಿಸಿ, ಶುದ್ಧಗೊಳಿಸಿದ ರಾಜಶೇಖರ್ ತಂಡ ಅದರ ರಚನೆಯನ್ನೂ ಪತ್ತೆ ಮಾಡಿ, ಅದು 2,3-ಡೈಮೀಥೈಲ್ ಮ್ಯಾಲೆಯಿಕ್ ಅನ್ ಹೈಡ್ರೈಡ್ ಎಂದು ಗುರುತಿಸಿದೆ. ಇದು ಕೂಡಿಟ್ಟ ಧಾನ್ಯಗಳನ್ನು ಸಾಮಾನ್ಯವಾಗಿ ಕಾಡುವ ನೊಣ, ಜಿರಲೆ, ಹಿಟ್ಟಿನ ಹುಳಗಳನ್ನು ಕೃತಕ ರಾಸಾಯನಿಕ ಮೀಥೈಲ್ ಬ್ರೋಮೈಡ್ ಹಾಗೂ ಫಾಸ್ಫೀನ್ ನಷ್ಟೆ ಸಮರ್ಥವಾಗಿ ಕೊಲ್ಲಬಲ್ಲದು. ಒಂದೇ ರಾಸಾಯನಿಕ ಹಲವು ಕೀಟಗಳನ್ನು ಕೊಲ್ಲುವುದು ನಿಜಕ್ಕೂ ಲಾಭಕಾರಿ. ಕೆಸುವಿನ ಗೆಡ್ಡೆಯ  ಈ ಅಂಶವನ್ನು ಪ್ರಯೋಗಿಸಿದ ಎರಡೇ ದಿನಗಳಲ್ಲಿ ಧಾನ್ಯಗಳಲ್ಲಿದ್ದ ಕೀಟಗಳ ಸಂಖ್ಯೆ ಅರೆಪಾಲಾಯಿತು. ಹಾಗೆಯೇ, ಇದು ಕೀಟಗಳ ಮರಿ (ಹುಳು) ಗಳನ್ನೂ ಬೆಳೆಯಗೊಡಲಿಲ್ಲವಂತೆ. ಇಷ್ಟಾದರೂ, ಈ ರಾಸಾಯನಿಕ ಬೆರೆಸಿದ ಬೀಜಗಳು ಯಾವುದೇ ಆತಂಕವಿಲ್ಲದೆ ನೂರಕ್ಕೆ ತೊಂಬತ್ತು ಪಾಲು ಮೊಳೆತವು. ಅರ್ಥಾತ್, ಕೀಟಗಳನ್ನು ಕೊಲ್ಲುವುದಲ್ಲದೆ, ಬೀಜಗಳಿಗೆ ಇದರಿಂದ ಯಾವ ಹಾನಿಯೂ ಇಲ್ಲ.

ಮೆಕ್ಕೆಜೋಳವನ್ನು ಕಾಡುವ ಹುಳು, ಗೋದಿಹಿಟ್ಟನ್ನು ಹಾಳುಗೆಡವುವ ಹುಳು, ನೊಣ ಮತ್ತು ಜಿರಲೆಗಳ ಕಾಟವನ್ನು ತಡೆಯಲು ಇದು ಶಕ್ತವೇನೋ ಹೌದು. ಆದರೆ ಆಹಾರದಲ್ಲಿ ಉಪಯೋಗಿಸಿದರೆ ಅಪಾಯವಿಲ್ಲವೇ? ಎಂದಿರಾ. ಇದನ್ನು ಪಡೆದ ಗೆಡ್ಡೆಯನ್ನು ನಾವು ಆಹಾರವಾಗಿ ಬಳಸುವುದು ಇದ್ದೇ ಇದೆ. ಹೀಗಾಗಿ ಆ ಗೆಡ್ಡೆಯಲ್ಲಿರುವ ರಾಸಾಯನಿಕ ನಮಗಂತೂ ಅಪಾಯಕಾರಿಯಾಗಿರಲಿಕ್ಕಿಲ್ಲ ಎನ್ನುವುದು ಸಾಮಾನ್ಯ ಅಭಿಪ್ರಾಯ.

ಹಾಗಿದ್ದರೆ ಇದು ಯಾವಾಗ ಬಳಕೆಗೆ ಸಿಗಬಹುದು ಎನ್ನುವುದು ಮುಂದಿನ ಪ್ರಶ್ನೆ. ಇನ್ನು ಇದರ ಕ್ಷಮತೆ ಹಾಗೂ ಬಳಕೆಯ ವಿಧಾನಗಳು ಹದಗೊಳ್ಳಬೇಕು. ಅನಂತರವಷ್ಟೆ ಇದರ ಸಾರ್ವತ್ರಿಕೆ ಬಳಕೆಯ ಸುದ್ದಿ. ಅದಕ್ಕೆ ಇನ್ನೂ ಹಲವು ತಿಂಗಳೋ, ವರ್ಷಗಳೋ ಕಾಯಬೇಕಷ್ಟೆ.

ಆಕರ:

Rajashekar, Y. et al. 2, 3-Dimethylmaleic anhydride (3, 4-Dimethyl-2, 5-furandione): A

plant derived insecticidal molecule from Colocasia esculenta var. esculenta (L.) Schott. Sci. Rep. 6, 20546; published 3rd February 2016.  doi: 10.1038/srep20546 (2016).

 

Published in: on ಫೆಬ್ರವರಿ 4, 2016 at 5:30 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಕಾಫಿ, ಕಾಫಿ!

ಕಾಫಿ ಕುಡಿಯದ ದಕ್ಷಿಣ ಕರ್ನಾಟಕದ ಮನೆ ಉಂಟೆ. ಹೇಳಿ, ಕೇಳಿ ಮದ್ರಾಸಿನ ಅಯ್ಯರ್‌ ಪೀಳಿಗೆಗೆ ಸೇರಿದವ. ಕಾಫಿ ಮಾಮಿ ಅಂತಲೇ ಹೆಸರು ಪಡೆದ ಮಹಿಳೆಯರ ಸಂತಾನ. ಅಂತಹವನಿಗೆ ಕಾಫಿ ಎಂದರೆ ಹೇಳಬೇಕೆ! ಕಾಫಿ ನಮ್ಮ ನಾಡಿನ ಬೆಳೆಯಲ್ಲದಿರಬಹುದು, ಆದರೆ ನಮ್ಮ ನರನಾಡಿಗಳಲ್ಲಿ ಒಂದಾಗಿಬಿಟ್ಟಿದೆ ಎಂದರೆ ತಪ್ಪೇನಲ್ಲ! ಕಾಲೇಜಿನಲ್ಲಿ ಓದುತ್ತಿದ್ದಾಗ ಕ್ಯಾಂಪಸ್‌ನ ಮೂಲೆಯಲ್ಲಿ ತಳ್ಳುಗಾಡಿಯಿಟ್ಟುಕೊಂಡು ಕಾಫಿ ಮಾಡಿಕೊಡುತ್ತಿದ್ದ ಚಿಕ್ಕಣ್ಣನ ನೆನಪಾಗುತ್ತದೆ. ನಾನು ಹೋದ ಕೂಡಲೇ ಕಾಫಿ ಬೀಜವನ್ನೇ ತಿಂದಂತೆ ಕಹಿ ಮುಖ ಮಾಡಿಕೊಂಡು ಸ್ಟ್ರಾಂಗ್‌ ಕಾಫಿ ಮಾಡಿ ಕೊಡುತ್ತಿದ್ದ. ಕಹಿ ಮುಖ ಏಕೆಂದರೆ ಮೂವರಿಗೆ ಉಪಯೋಗಿಸಬಹುದಾದ ಡಿಕಾಕ್ಷನ್‌ ನನಗೊಬ್ಬನಿಗೇ ಹಾಕಬೇಕಾಗುತ್ತಿತ್ತು. ಇಲ್ಲದಿದ್ದರೆ ಬಿಡುತ್ತಿರಲಿಲ್ಲವೆನ್ನಿ. ಗೆಳೆಯ ಸಂಪತ್ತುವಿನ ಅಮ್ಮನಂತೂ ನನಗಾಗಿ ವಿಶೇಷ ಕಾಫಿ ಮಾಡಿ ಕೊಡುತ್ತಿದ್ದರು. ಏಕೆಂದರೆ ನನ್ನಷ್ಟು ಸ್ಟ್ರಾಂಗ್‌ ಕಾಫಿ ಕುಡಿಯುವವರು ಅವರ ಮನೆಯಲ್ಲಿ ಅವರೊಬ್ಬರೇ! ’ನಿನಗೆ ಕಾಫಿ ಕುಡಿಯುವುದು ರಕ್ತದಲ್ಲೇ ಬಂದಿದೆ,’ ಅಂತ ಲೇವಡಿ ಮಾಡುತ್ತಿದ್ದರು ಕೂಡ. ಆದರೆ ಮೂವತ್ತು ವರ್ಷಗಳ ನಂತರ ಈಗ ಕಾಫಿ ಕುಡಿಯುವುದಿರಲಿ ಅದರ ಪರಿಮಳವನ್ನೂ ಮೂಸುವಿದಿಲ್ಲ. ಏಕೆಂದರೆ ಕಾಫಿ ಕುಡಿದರೆ ಅಸಿಡಿಟಿ ಹೆಚ್ಚಾಗುತ್ತದೆ. ತೇಗು ಬರುತ್ತದೆ. ತಲೆನೋವು ಗ್ಯಾರಂಟಿ. ನನ್ನ ಮಗಳೂ ತಲೆನೋವಿನ ಕಾರಣದಿಂದಲೇ ಕಾಫಿ ಕುಡಿಯುವುದನ್ನು ಬಿಟ್ಟಿದ್ದಾಳೆ. ನನ್ನವಳು ಕೆಲವು ದಿನ ಕಾಫಿ ಪುಡಿ ಮಾರಾಟ ಮಾಡಿದಳಾದರೂ ಕಾಫಿ ಕುಡಿಯುವುದಿಲ್ಲ. ಮಗನಂತೂ ಆ ಬಗ್ಗೆ ಚಿಂತೆ ಮಾಡಿದವನೇ ಅಲ್ಲ. ಈಗ ಚಿಕ್ಕಮಗಳೂರಿನ ಗೆಳೆಯರು ಬಿಟ್ಟಿ ಕಾಫಿ ಬೀಜ ತಂದು ಕೊಟ್ಟರೂ ಸಂಕೋಚದಿಂದ ಬೇಡ ಅನ್ನುವ ಪರಿಸ್ಥಿತಿ ಮನೆಯಲ್ಲಿ. ಕಾಫಿ ಹಿಡಿಸದಿರುವುದಕ್ಕೆ ಕಾರಣವೇನು ಅಂತ ಎಷ್ಟೋ ಬಾರಿ ಯೋಚಿಸಿದ್ದೇನೆ. ಉದ್ಯೋಗನಿಮಿತ್ತ ದೂರದ ದೆಹಲಿಗೆ ಹೋಗಿದ್ದಾಗ ಅಲ್ಲಿ ಒಳ್ಳೆಯ ಕಾಫಿ ಹುಡಿ ದೊರೆಯದ್ದು ಕಾರಣವೋ? ಅಥವಾ ಏಕಾಂಗಿಯಾಗಿದ್ದಾಗ ಕಾಫಿ ಕಷಾಯ ಮಾಡಿಕೊಳ್ಳುವ ರೇಜಿಗೆಯನ್ನು ತಪ್ಪಿಸಿಕೊಳ್ಳಲು ಟೀ ಮೊರೆ ಹೋದೆನೋ? ಅಥವಾ ನಿಜವಾಗಿಯೂ ಕಾಫಿ ನನಗೆ ಒಗ್ಗುವುದಿಲ್ಲವೋ? ಗೊಂದಲವಾಗಿತ್ತು. ಈವತ್ತು ಪಿಎಲ್‌ಓಎಸ್‌ ಜೆನೆಟಿಕ್ಸ್‌ ಓದುತ್ತಿದ್ದಾಗ ನನ್ನ ಸಮಸ್ಯೆಗೆ ಕಾರಣ ಸಿಕ್ಕಿದೆ. ಪಿಎಲ್‌ಓಎಸ್‌ ಜೆನೆಟಿಕ್ಸ್‌ ಪತ್ರಿಕೆಯಲ್ಲಿ ಪ್ರಕಟವಾಗಿರುವ ಪ್ರಬಂಧವೊಂದು ಕಾಫಿಯನ್ನು ಕುಡಿಯುವುದು ನಮ್ಮ ರಕ್ತದಲ್ಲಿ ಅಲ್ಲ, ಅನುವಂಶೀಯ ಗುಣಗಳಲ್ಲೇ ಇರಬಹುದು ಎನ್ನುವ ಉತ್ತೇಜಕರ ಸುದ್ದಿಯನ್ನು ವರದಿ ಮಾಡಿದೆ.

ಅಮೆರಿಕೆಯ ಬ್ರಿಘಾಮ್‌ ನಲ್ಲಿರುವ ಹಾರ್ವರ್ಡ್‌ ಮೆಡಿಕಲ್‌ ಸ್ಕೂಲ್‌ ಮತ್ತು ಮಹಿಳೆಯರ ಆಸ್ಪತ್ರೆ ಹಾಗೂ ನಾರ್ತ್‌ ಕೆರೋಲಿನಾ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಪ್ರಕಟಿಸಿರುವ ಈ ಪ್ರಬಂಧದ ಪ್ರಕಾರ ಯಾರು ಎಷ್ಟು ಕಾಫಿ ಕುಡಿಯುತ್ತಾರೆ ಎನ್ನುವುದಕ್ಕೆ ಅವರಲ್ಲಿರುವ ಎರಡು ಜೀನ್‌ಗಳು ಕಾರಣವಿರಬಹುದಂತೆ. ಜೀನ್‌ ಎಂದರೆ ನಮ್ಮ ಗುಣಗಳನ್ನು ನಿರ್ದೇಶಿಸುವ ರಾಸಾಯನಿಕ ಘಟಕಗಳು ಅನ್ನೋದು ಗೊತ್ತಲ್ಲ. ಒಟ್ಟು ೩೦,೦೦೦ ಜೀನ್‌ಗಳು ನಮ್ಮಲ್ಲಿ ಇವೆಯಂತೆ. ಇವು ಗುಣಗಳನ್ನು ನಿರ್ದೇಶಿಸುವಂಥವು. ಇದಲ್ಲದೆ ಇನ್ನೂ ಲಕ್ಷಾಂತರ ಕೆಲಸವಿಲ್ಲದ ಜೀನ್‌ಗಳೂ ಇವೆಯಂತೆ. ಇವೆಲ್ಲವನ್ನೂ ಒಟ್ಟಾಗಿ ಜೀನೋಮ್‌ ಅನ್ನುತ್ತಾರೆ. ಇತ್ತೀಚೆಗೆ ಈ ’ಓಂ’ಕಾರದಲ್ಲಿಯೇ ಹಸಿವು, ಹುಟ್ಟು, ಸಾವು, ನಿದ್ರೆ, ಊಟ ಮತ್ತು ಸೆಕ್ಸ್‌ ಎಲ್ಲವಕ್ಕೂ ಕಾರಣ ಹುಡುಕುತ್ತಿದ್ದಾರೆ. ಮೂವತ್ತುಮೂರು ಜನರ ಈ ತಂಡ ಮಾಡಿದ್ದೂ ಅದನ್ನೇ!

ಕಾಫಿ ನಿದ್ರೆ ಓಡಿಸಿ, ಎಚ್ಚರಿಸುವುದಕ್ಕೆ ಅದರಲ್ಲಿರುವ ಕೆಫೀನ್‌ ಕಾರಣ ಅಂತ ಮೇಷ್ಟರು ಹೇಳಿಕೊಟ್ಟಿದ್ದು ಮರೆತಿಲ್ಲ. ಆದರೆ ಈ ಕೆಫೀನ್‌ ಅನ್ನು ಎಲ್ಲರ ದೇಹವೂ ಒಂದೇ ಸಮನಾಗಿ ಅರಗಿಸಿಕೊಳ್ಳುವುದಿಲ್ಲ ಅನ್ನುವುದು ಇತ್ತೀಚಿನ ಸುದ್ದಿ. ಕೆಲವರಿಗೆ ನಿದ್ರೆ ಬಾರದಿರಬೇಕಾದರೆ ಅತಿ ಹೆಚ್ಚು ಕೆಫೀನ್‌ ಬೇಕಂತೆ. ಇನ್ನು ಕೆಲವರಿಗೆ ಕಾಫಿ ಮೂಸಿದರೂ ಸಾಕು ನಿದ್ರೆ ಹಾರಿ ಹೋಗುತ್ತದಂತೆ. ಕೆಫೀನ್‌ನ ಈ ಉತ್ತೇಜಕ ಗುಣ ಒಬ್ಬೊಬ್ಬರಲ್ಲಿ ಒಂದೊಂದು ತೆರನಾಗಿರುವುದಕ್ಕೆ ಅವರವರ ಜೀನೋಮ್‌ಗಳೇ ಕಾರಣವಿರಬಹುದು ಎನ್ನುವುದು ಒಂದು ಗುಮಾನಿ.

ಇದಕ್ಕಾಗಿ ಈ ತಂಡ ದೇಹದಲ್ಲಿ ಕೆಫೀನ್‌ ಅರಗಿಸಲು ನೆರವಾಗುತ್ತದೆಂದು ಈ ಹಿಂದೆ ಗಮನಿಸಿದ್ದ CYP1A2 ಎನ್ನುವ ಜೀನ್‌ ಅನ್ನೂ, ಅದನ್ನು ಎಚ್ಚರಿಸುವ AHR  ಎನ್ನುವ ಮತ್ತೊಂದು ಜೀನ್‌ ಗಳ ಅಧ್ಯಯನ ಮಾಡಿದ್ದಾರೆ. ಸುಮಾರು ೪೭೦೦೦ ಅಮೆರಿಕನ್ನರ ಜೀನೋಮ್‌ಗಳನ್ನು ಒಬ್ಬರಿನ್ನೊಬ್ಬರದರ ಜೊತೆಗೆ ತಾಳೆ ಹಾಕಿದ್ದಾರೆ. ಜೊತೆಗೆ ಅವರು ಎಷ್ಟೆಷ್ಟು ಕಾಫಿ ಕುಡಿದು, ಎಷ್ಟೆಷ್ಟು ಕೆಫೀನ್‌ ದೇಹಕ್ಕೆ ಕೂಡಿಸಿಕೊಳ್ಳುತ್ತಾರೆ ಎಂದೂ ದಾಖಲಿಸಿದ್ದಾರೆ. ಇವೆರಡನ್ನೂ ತಾಳೆ ನೋಡಿದಾಗ CYP1A2 ಮತ್ತು AHR ಗಳು ಎರಡೂ ಇದ್ದವರು ಸಾಮಾನ್ಯವಾಗಿ ದಿನಕ್ಕೆ ಉಳಿದವರಿಗಿಂತಲೂ ಸುಮಾರು ೪೦ ಮಿಲಿಗ್ರಾಂನಷ್ಟು ಹೆಚ್ಚು ಕೆಫೀನ್‌ ಕೂಡಿಸಿಕೊಳ್ಳುತ್ತಾರಂತೆ.  ಒಂದು ದೊಡ್ಡ ಬಾಟಲಿ ಕೋಲಾದಲ್ಲಿ ಒಂದೆರಡು ಮಿಲಿಗ್ರಾಂನಷ್ಟು ಕೆಫೀನ್‌ ಅಷ್ಟೆ ಇರುತ್ತದೆ ಅನ್ನುವುದನ್ನು ನೆನಪಿಡಿ. ಈ ಎರಡೂ ಜೀನ್‌ಗಳು ಇಲ್ಲದವರು ಅತಿ ಕಡಿಮೆ ಕಾಫಿ ಕುಡಿಯುತ್ತಾರಂತೆ.

ಅಂದರೆ ಕಾಫಿ ಕುಡಿಯುವುದು ಚಟವಲ್ಲ, ಅನುವಂಶೀಯ ಗುಣ ಅಂದಾಯಿತಲ್ಲ. ಕಾಫಿ (ಕೆಫೀನ್‌)ಗೂ ಕೆಲವರ ನಡವಳಿಕೆಗೂ ಏನಕೇನ ಸಂಬಂಧವಿದೆ. ಅತಿ ನಿದ್ರೆ, ನಿದ್ರಾಹೀನತೆ, ಚುರುಕುತನ, ಬೌದ್ಧಿಕ ಹಾಗೂ ದೈಹಿಕ ಸಾಮರ್ಥ್ಯವೆಲ್ಲವಕ್ಕೂ ಕಾಫಿ ಸೇವನೆಗೂ ಸಂಬಂಧವಿದೆ. ಹಾಗಿದ್ದ ಮೇಲೆ ಕಾಫಿ ಸೇವನೆ ರಕ್ತಗುಣ ಎನ್ನುವುದರಲ್ಲಿ ತಪ್ಪೇನಿದೆ?

ಏನಿಲ್ಲ. ಆದರೆ ಇದುವರೆವಿಗೂ ಕೇವಲ ಖಾಯಿಲೆಗಳಿಗೂ, ಜೀನೋಮ್‌ಗೂ ತಳುಕು ಹಾಕುತ್ತಿದ್ದರಷ್ಟೆ. ಆದರೆ ಈಗ ಕಾಫಿ ಸೇವನೆಯಂತ ನಿತ್ಯಕರ್ಮಕ್ಕೂ, ಅನುವಂಶೀಯತೆಯೇ ಕಾರಣ ಎನ್ನುತ್ತಿದ್ದಾರಲ್ಲ! ಅದೇ ಪ್ರಶ್ನೆ. ಹಾಗಿದ್ದರೆ ಕಾಫಿಯ ಜೊತೆಗೆ ಪೇಪರ್‌ ಓದುವುದಕ್ಕೂ, ಕಾಫಿ ಕುಡಿಯದೆಯೇ ಶೌಚಕ್ಕೆ ಹೋಗದಿರುವುದಕ್ಕೂ, ಕಛೇರಿಯಲ್ಲಿ ಕೆಲಸ ಮಾಡಲು ಸೋಮಾರಿತನ ಬಂದಾಗಲೆಲ್ಲ ಕಾಫಿ ಕುಡಿಯುವುದೂ ಅನುವಂಶೀಯವೇ ಇರಬಹುದೇ?

ಕಾಫಿ ಮಾಡುವ ಯಂತ್ರವನ್ನು ಹಾಸಿಗೆಯ ಪಕ್ಕದಲ್ಲಿಯೇ ಇಟ್ಟುಕೊಂಡು ಮಲಗುವ ಅಮೆರಿಕನ್ನರಿಗೆ ಇಂತಹ ಆಲೋಚನೆ ಬಂದಿರುವುದು ಸಹಜವೇ. ನಮ್ಮ ಮದ್ರಾಸ್‌ ಮಾಮಿ ಇದಕ್ಕೆ ಏನು ಹೇಳುತ್ತಾರೋ ಕೇಳಬೇಕು!

Published in: on ಏಪ್ರಿಲ್ 7, 2011 at 7:51 ಅಪರಾಹ್ನ  Comments (3)  

ಬೂಸಾ ಮಾಂಸ!

ಭಾರತದ ಮಂದಿ ಹೆಚ್ಚೆಚ್ಚು ಉಂಡು ತಮಗೆ ಆಹಾರವಿಲ್ಲದಂತೆ ಮಾಡಿದ್ದಾರೆಂದು ದೂರಿದ ಅಮೆರಿಕನ್ನರು ಹೊಟ್ಟೆ ತುಂಬಿಸಿಕೊಳ್ಳಲು ಹೊಸ ಉಪಾಯ ಹೂಡಿದ್ದಾರೆ. ನಮ್ಮೂರಿನ ಬೂಸಾವನ್ನೇ ಆಹಾರವನ್ನಾಗಿ ಬಳಸಲು ಸಿದ್ಧರಾಗಿದ್ದಾರೆ. ಅಮೆರಿಕೆಯ ಆಹಾರ ಮತ್ತು ಔಷಧ ಪ್ರಾಧಿಕಾರ ಅಕ್ಕಿ ತೌಡನ್ನು ಮಾಂಸದ ಉತ್ಪನ್ನಗಳಲ್ಲಿ ಸೇರಿಸಿಕೊಳ್ಳಲು ಅನುಮತಿ ನೀಡಿದೆಯಂತೆ. ಅಕ್ಕಿ ತೌಡನ್ನು ಆಹಾರವನ್ನಾಗಿ ಬಳಸಲು ಹಲವು ಉಪಾಯಗಳನ್ನು ಹೂಡುತ್ತಿರುವ ಅಮೆರಿಕೆಯ ನ್ಯೂಟ್ರಸಿಯ ಎನ್ನುವ ಸಂಸ್ಥೆ ತಿಳಿಸಿದೆ.

ಅಕ್ಕಿ ತೌಡಿನ ಬಗ್ಗೆ ಭಾರತೀಯರಿಗೆ ತಿಳಿಯದ್ದು ಏನಿಲ್ಲ. ಸಹಸ್ರಾರು ವರುಷಗಳಿಂದ ಅದನ್ನು ದನಕರುಗಳಿಗೆ ಆಹಾರವನ್ನಾಗಿ ನೀಡಿ, ಬೂಸಾ ಎನ್ನುವ ಹೆಸರನ್ನೂ ನೀಡಿದ್ದೇವೆ. ಇತ್ತೀಚೆಗೆ ಈ ತ್ಯಾಜ್ಯಕ್ಕೂ ಬೆಲೆ ಬಂದಿರುವುದು ವಿಶೇಷ. ತೌಡು ಬಲು ಬೇಗನೆ ಹಾಳಾಗಲು ಅದರಲ್ಲಿರುವ ಎಣ್ಣೆ ಕಾರಣ. ಈ ಎಣ್ಣೆಯಲ್ಲಿ ಒರೈಜನಾಲ್‌ ಎನ್ನುವ ಪ್ರತ್ಯಾಕ್ಸಿಕಾರಕ ಅಂಶ ಇದೆ. ದೇಹದಲ್ಲಿ ಉತ್ಪತ್ತಿಯಾಗುವ ಕೆಲವು ಅತಿ ವರ್ತನೆಯ ರಾಸಾಯನಿಕಗಳ ಕ್ರಿಯೆಯನ್ನು ಇಂತಹ ಪ್ರತ್ಯಾಕ್ಸಿಕಾರಕಗಳು ಶಮನಗೊಳಿಸುತ್ತವೆ. ಇದರಿಂದ ಮುಪ್ಪು, ವಯಸ್ಸಾಗುವುದರಿಂದ ಹಾಗೂ ಅಪಥ್ಯಾಹಾರದಿಂದ ಉಂಟಾಗುವ ಖಾಯಿಲೆಗಳನ್ನು ದೂರವಿಡಬಹುದು ಎಂದು ಪೋಷಣಾ ತಜ್ಞರ ಅಂಬೋಣ. ಹೀಗಾಗಿ ಪ್ರತ್ಯಾಕ್ಸೀಕಾರಕ (ಆಂಟಿಆಕ್ಸಿಡಂಟು)ಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು. ಹಲವು ಕೋಟಿ ರೂಪಾಯಿಗಳ ವ್ಯವಹಾರಕ್ಕೆ ಪ್ರತ್ಯಾಕ್ಸೀಕಾರಕಗಳು ಈಗ ಮೂಲ. ಒರೈಜನಾಲ್‌ ಇಂತಹ ಆಹಾರೌಷಧಗಳಲ್ಲಿ ಒಂದು. ಒರೈಜನಾಲ್‌ ಭರಿತ ಅಕ್ಕಿ ತೌಡಿನ ಎಣ್ಣೆ ಈಗ ಆಹಾರವಾಗಿ ಬಳಕೆಯಾಗುತ್ತಿದೆ. ಇದುವರೆವಿಗೂ ಅದನ್ನು ಸಾಬೂನಿನಂತಹ ಸೌಂದರ್ಯ ಸಾಧನಗಳಲ್ಲಿ ಬಳಸಲಾಗುತ್ತಿತ್ತು. ಒರೈಜನಾಲ್‌ನಿಂದಾಗಿ ಈಗ ತೌಡಿಗೂ ಬೆಲೆ ಬಂದಿದೆ. ಇನ್ನು ನ್ಯೂಟ್ರಸಿಯದ ಪ್ರಯತ್ನದಿಂದಾಗಿ ಎಣ್ಣೆ ಹಿಂಡಿದ ಬೂಸಾ ಇನ್ನಷ್ಟು ದುಬಾರಿಯಾದರೆ ಅಚ್ಚರಿಯೇನಿಲ್ಲ.

ಅಕ್ಕಿ ತೌಡನ್ನೇ ನೇರ ಆಹಾರವನ್ನಾಗಿ ಬಳಸಿಕೊಳ್ಳಲು ಆಗದು. ಏಕೆಂದರೆ ಅದರಲ್ಲಿರುವ ಎಣ್ಣೆಯಿಂದಾಗಿ ಅದು ಬಹು ಬೇಗನೆ ಮುಗ್ಗಲಾಗುತ್ತದೆ. ಅಸಹ್ಯ ವಾಸನೆ ಬೀರುತ್ತದೆ. ಇದರೊಟ್ಟಿಗೆ ತೌಡಿನಲ್ಲಿರುವ ಲೈಪೇಸ್‌ ಎನ್ನುವ ಕಿಣ್ವ ಜೀರ್ಣಕ್ರಿಯೆಗೂ ತೊಡಕಾಗಿರುತ್ತದೆ. ಹೀಗಾಗಿ ಮುಗ್ಗಲಾಗುವ ಮೊದಲೇ ತೌಡನ್ನು ಉಂಡರೂ ಆರೋಗ್ಯಕ್ಕೆ ಒಳ್ಳೆಯದಾಗದು. ಈ ಕಿಣ್ವದ ಚಟುವಟಿಕೆಯನ್ನು ತಡೆಗಟ್ಟುವಂತೆ ತೌಡನ್ನು ಸಂಸ್ಕರಿಸಿದರೆ ಅದನ್ನು ಆಹಾರ ಪದಾರ್ಥಗಳಲ್ಲಿ ಬಳಸಲಾದೀತು ಎನ್ನುತ್ತಾರೆ ವಿಜ್ಞಾನಿಗಳು. ನ್ಯೂಟ್ರಸಿಯ ಮಾಡಿರುವುದೂ ಇದನ್ನೇ! ಎಣ್ಣೆ ಹಿಂಡಿ ಉಳಿದ ತೌಡಿನ ನಾರಿನ ಅಂಶವನ್ನು ರಾಸಾಯನಿಕ ಕ್ರಿಯೆಯಿಂದ ಸ್ಥಿರಗೊಳಿಸಿ, ಲೈಪೇಸ್‌ ಚಟುವಟಿಕೆ ಇಲ್ಲವಾಗಿಸಿದೆ.  ಇದನ್ನೇ ಮಾಂಸದ ಉಂಡೆ, ಮಾಂಸದ ಪ್ಯಾಟಿಗಳಲ್ಲಿ ಕೂಡಿಸಿದ್ದಾರೆ.

ಅಕ್ಕಿ ತೌಡಿನಿಂದ ಲಾಭವಿದೆ. ಸಾಮಾನ್ಯವಾಗಿ ಇಂತಹ ಪದಾರ್ಥಗಳಲ್ಲಿ ಬಳಸುವ ಸೋಯ ಹಿಟ್ಟಿಗಿಂತಲೂ ಇದು ಅಗ್ಗ. ಒಂದು ಕಿಲೋ ಸೋಯಾ ಹಿಟ್ಟಿಗೆ ೨.೫೦ ಡಾಲರು ಬೆಲೆ. ಅಷ್ಟೇ ಪ್ರಮಾಣದ ಅಕ್ಕಿ ತೌಡಿನ ಬೆಲೆ ಕೇವಲ ಅರ್ಧ ಡಾಲರು. ಇದಷ್ಟೆ ಅಲ್ಲ! ಎಣ್ಣೆ ಹಿಂಡಿದ ಅಕ್ಕಿ ತೌಡು ಉತ್ತಮ ನಾರಿನ ಅಂಶದ ಆಕರ. ಆಹಾರದಲ್ಲಿ ನಾರಿನ ಅಂಶ ಕಡಿಮೆಯಾಗುತ್ತಿರುವುದರಿಂದಲೇ ಮಧುಮೇಹ, ಮಲಬದ್ಧತೆಯಂತಹ ಹಲವು ತೊಂದರೆಗಳನ್ನು ಎದುರಿಸಬೇಕಾಗಿದೆ. ನಾರಿನ ಅಂಶ ಅತಿಕಡಿಮೆ ಇರುವ ಮಾಂಸಾಹಾರದಲ್ಲಿ ಅಕ್ಕಿ ತೌಡನ್ನು ಕೂಡಿಸುವುದರಿಂದ ನಾರಿನ ಅಂಶವನ್ನು ಹೆಚ್ಚಿಸಿದಂತೆಯೂ ಆಯಿತು, ಬೆಲೆ ಅಗ್ಗವಾಗಿಸಿದಂತೆಯೂ ಆಯಿತು ಎನ್ನುವುದು ನ್ಯೂಟ್ರಸಿಯದ ಆಲೋಚನೆ.  ಹೆಚ್ಚಿನ ವರದಿಗೆ ಫುಡ್‌ ನಾವಿಗೇಟರ್‌ ಯುಎಸ್‌ಎ ನೋಡಿ. 

ಈ ಸುದ್ದಿ ಕೇಳಿ ನಮ್ಮೂರ ದನಗಳು ತಮ್ಮ ಆಹಾರಕ್ಕೆ ಸಂಚಕಾರ ಬರುತ್ತವೆಂದು ಅಧ್ಯಕ್ಷ ಜಾರ್ಜ್‌ ಬುಷ್‌ಗೆ ದೂರು ಸಲ್ಲಿಸಿವೆ ಎನ್ನುವುದು ಗಾಳಿ ಸುದ್ದಿ!

 

Published in: on ಮೇ 27, 2008 at 5:43 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಗೋಮಾಂಸ ಭಕ್ಷಕರೇ ಎಚ್ಚರಿಕೆ!

ತಲೆಬರೆಹ ಓದಿ ತಲೆಯನ್ನು ಕುಟ್ಟಿದಂತಾಯಿತೇ? ಅಲ್ಲ ಸ್ವಾಮಿ, ವಿಜ್ಞಾನದ ಬ್ಲಾಗ್‌ನಲ್ಲಿ ರಾಜಕೀಯ ಬಂದಂತಿದೆಯಲ್ಲ, ಎಂದಿರಾ? ಇಲ್ಲ, ಸ್ವಾಮಿ. ಖಂಡಿತ ಇಲ್ಲ. ನಮ್ಮ ಹಿಂದುತ್ವವಾದಿಗಳು ಅಮೆರಿಕನ್ನರನ್ನು ಇನ್ನು ಜರೆಯುವುದು ಬಿಟ್ಟು ಹೊಗಳಲು ಆರಂಭಿಸಬೇಕು, ಅಷ್ಟೆ. ಏಕೆಂದರೆ ಮೊನ್ನೆ ತಾನೆ ಅಲ್ಲಿನ ರಾಜ್ಯದ ಸಂಸತ್ತು ಒಂದರಲ್ಲಿ ವೇದಪಠಣ ಆಗಿತ್ತು. ಈಗ ಅಮೆರಿಕೆಯ ರೋಚೆಸ್ಟರ್‌ವೈದ್ಯಕೀಯ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಗೋಮಾಂಸ ಭಕ್ಷಕರಿಗೆ ಎಚ್ಚರಿಕೆ ನೀಡಿದ್ದಾರೆ. ಗೋಮಾಂಸ ತಿನ್ನುವ ತಾಯಂದಿರ ಗಂಡು ಮಕ್ಕಳು ವೀರ್ಯಹೀನರಾಗುವ ಸಾಧ್ಯತೆಗಳಿವೆ ಎಂದು ನಿನ್ನೆ ಬಿಡುಗಡೆಯಾದ ವಿಶ್ವವಿದ್ಯಾನಿಲಯದ ಪ್ರಕಟಣೆ ತಿಳಿಸಿದೆ.

ಇಲ್ಲಿನ ರಿಪ್ರೊಡಕ್ಟಿವ್‌ ಎಪಿಡೆಮಿಯೊಲಜಿ ಸೆಂಟರ್‌ನ ನಿರ್ದೇಶಕರಾದ ಶಾನ್ನ ಎಚ್‌. ಸ್ವಾನ್‌ ತಮ್ಮ ಸಂಗಡಿಗರ ಜೊತೆಗೂಡಿ ಈ ಪ್ರಮುಖ ಸಂಶೋಧನೆ ಮಾಡಿದ್ದಾರೆ. ಇದರ ವಿವರಗಳನ್ನು ಜರ್ನಲ್‌ ಆಫ್‌ ಹ್ಯೂಮನ್‌ ರಿಪ್ರೊಡಕ್ಷನ್‌ನ ಮಾರ್ಚ್‌ ೨೮ ರ ಸಂಚಿಕೆಯಲ್ಲಿ ವರದಿ ಮಾಡಲಾಗಿದೆ.

ಗರ್ಭಿಣಿ ಹೆಂಗಸರು ದನದ ಮಾಂಸ ತಿನ್ನುವುದರಿಂದ ಅಪಾಯವೇನಾದರೂ ಇದೆಯೇ ಎನ್ನುವ ನಿಟ್ಟಿನಲ್ಲಿ ಈ ಸಂಶೋಧನೆ ನಡೆದಿತ್ತು. ಒಟ್ಟು ೩೮೭ ಗಂಡಸರ ವೀರ್ಯ, ವೀರ್ಯಾಣು, ಸಂತಾನ ಸಾಮರ್ಥ್ಯ ಇತ್ಯಾದಿಗಳನ್ನು ಒಟ್ಟು ಮಾಡಿ, ಅವರ ತಾಯಂದಿರು ಗರ್ಭಿಣಿಯಾಗಿದ್ದಾಗ ತಿಂದಿದ್ದ ದನದ ಮಾಂಸದ ಪ್ರಮಾಣದ ಜೊತೆಗೆ ತಾಳೆ ಹಾಕಲಾಯಿತು. ಉಳಿದೆಲ್ಲ ವಿಷಯಗಳೂ ಸಮಾನವಾಗಿದ್ದಾಗ, ತಾಯಂದಿರ ದನದ ಮಾಂಸ ಸೇವನೆಯ ಪ್ರಮಾಣದಿಂದಾಗಿ ಈ ಗಂಡಸರ ವೀರ್ಯದಲ್ಲಿನ ವೀರ್ಯಾಣುಗಳ ಪ್ರಮಾಣ ಸಾಮಾನ್ಯಕ್ಕಿಂತಲೂ ಕಡಿಮೆ ಇತ್ತು ಎಂದು ಸ್ವಾನ್‌ ತಂಡ ಹೇಳಿದೆ.

ವೀರ್ಯೋತ್ಪಾದನೆಯ ಪ್ರಮುಖ ಘಟ್ಟ ಮೀಸೆ ಬಲಿತಾಗ ಆಗುವುದಿಲ್ಲ. ಭ್ರೂಣಾವಸ್ಥೆಯಲ್ಲಿಯೇ ಆಗುತ್ತದೆ ಎನ್ನುವುದು ವೈದ್ಯರ ಅಭಿಪ್ರಾಯ. ತಾಯ ಗರ್ಭದಲ್ಲಿ ಇರುವಾಗಲೇ ವೀರ್ಯ ಜನಕಾಂಗದಲ್ಲಿನ ವೀರ್ಯಜನಕ ಕೋಶಗಳ ಸಂಖ್ಯೆ ನಿರ್ಣಯಿಸಲ್ಪಡುತ್ತದೆ. ಇದರಲ್ಲಿ ಹೆಚ್ಚು, ಕಡಿಮೆ ಆದಲ್ಲಿ, ಪರಿಣಾಮ ಪ್ರಾಯ ಬಂದ ಮೇಲೆ ತೋರುತ್ತದೆ.

ವೀರ್ಯಾಣುಗಳ ಸರಾಸರಿ ಸಂಖ್ಯೆ ಸ್ವಾನ್‌ ತಂಡ ಅಧ್ಯಯನ ಮಾಡಿದ ಗಂಡಸರಲ್ಲಿ ಶೇಕಡ ೧೮ರಷ್ಟು ಮಂದಿಯಲ್ಲಿ ಬಲು ಕಡಿಮೆ ಇತ್ತು. ಅದೇ ತಾಯಂದಿರು ಅತಿ ಗೋಮಾಂಸ ಭಕ್ಷಕರಾಗಿಲ್ಲದ ಗಂಡಸರಲ್ಲಿ ಕೇವಲ ಶೇಕಡ ೫ರಷ್ಟು ಮಂದಿಯಷ್ಟೆ ವೀರ್ಯಾಣುಗಳ ಕೊರತೆಯನ್ನು ಅನುಭವಿಸಿದ್ದರು.

ಹಾಗೆಂದು, ಈ ಗಂಡಸರೆಲ್ಲ ಸಂತಾನ ಹೀನರಾದರೆಂದುಕೊಳ್ಳಬೇಡಿ. ವೀರ್ಯಾಣುಗಳ ಸಂಖ್ಯೆ ಕಡಿಮೆ ಇದ್ದರೂ, ಫಲವತ್ತೆಯೇನೂ ಕಡಿಮೆ ಆಗಲಿಲ್ಲ. ಹೀಗಾಗಿ, ಗೋಮಾಂಸ ತಿನ್ನುವವರ ಸಂಖ್ಯೆ ಕಡಿಮೆ ಆಗುತ್ತದೆ ಎಂದು ದನದ ಮಾಂಸ ರುಚಿಸದವರು ಖುಷಿ ಪಡುವ ಹಾಗೂ ಇಲ್ಲ.

ಈ ಬಗ್ಗೆ ಹೆಚ್ಚಿನ ವಿವರಗಳನ್ನು ಯುರೇಕಾ ಅಲರ್ಟ್‌ ನಲ್ಲಿ ನೋಡಿ.

Published in: on ಮಾರ್ಚ್ 21, 2007 at 10:26 ಫೂರ್ವಾಹ್ನ  Comments (1)