ಅವಿಭಾಜ್ಯ ಸಂಖ್ಯೆಗಳ ಜೋಡಿ ಸವಾರಿ

ಅವಿಭಾಜ್ಯ ಸಂಖ್ಯೆಗಳೆಂದರೆ ವಿವರಿಸಬೇಕಿಲ್ಲವಷ್ಟೆ. ತಾವಲ್ಲದೆ ಬೇರೆ ಯಾವ ಸಂಖ್ಯೆಯಿಂದಲೂ ಭಾಗಿಸಲಾಗದ ಸಂಖ್ಯೆಯನ್ನು ಅವಿಭಾಜ್ಯ ಸಂಖ್ಯೆ ಎನ್ನುತ್ತೇವೆ. ಇವಕ್ಕೆ ಉದಾಹರಣೆಗಳೆಂದರೆ, 1, 3, 5, 7, 11, 13… ಈಗ ನೀವು ಕೇಳುವ ಪ್ರಶ್ನೆ ಬಹಳ ಸರಳವಾದದ್ದು. ಮುಂದಿನ ಅವಿಭಾಜ್ಯ ಸಂಖ್ಯೆ ಯಾವುದು? ಇದಕ್ಕೆ ಸದ್ಯಕ್ಕೆ 17 ಎನ್ನುವ ಉತ್ತರವನ್ನು ನಾನು ಹೇಳಬಹುದು. ಆದರೆ ಇಷ್ಟರಿಂದಲೇ ಮುಂದಿನ ಸಂಖ್ಯೆಯನ್ನು ಊಹಿಸಬಹುದು ಎನ್ನುವುದು ಕಷ್ಟ.  ಏಕೆಂದರೆ ಈ ಸಂಖ್ಯೆಗಳ ಸರಣಿಯಲ್ಲಿ ನಿರ್ದಿಷ್ಟವಾದ ಯಾವ ವಿನ್ಯಾಸವೂ ಇಲ್ಲ. ಈ ಕಾರಣದಿಂದಲೇ ಅವಿಭಾಜ್ಯ ಸಂಖ್ಯೆಗಳು ಗಣಿತಜ್ಞರಿಗೆ ಒಂದು ನಿಗೂಢ ಖಜಾನೆ ಇದ್ದಂತೆ. ಇದರಿಂದ ಹೆಕ್ಕಿದಷ್ಟೂ ವಿಸ್ಮಯದ ಅಂಶಗಳು ಬಯಲಾಗುತ್ತಲೇ ಇರುತ್ತವೆ.

ಇದಕ್ಕೊಂದು ಸರಳ ಉದಾಹರಣೆಯನ್ನು ತೆಗೆದುಕೊಳ್ಳಿ. ಸಮ ಸಂಖ್ಯೆಗಳ ಸರಣಿಯನ್ನು ತೆಗೆದುಕೊಳ್ಳಿ.  ಒಂದರನಂತರ ಇನ್ನೊಂದರಂತೆ ಬರುವ ಎರಡು ಸಮ ಸಂಖ್ಯೆಗಳ ನಡುವೆ ಕನಿಷ್ಟ ವ್ಯತ್ಯಾಸ 2 ಅನ್ನಬಹುದು. ಇದರಿಂದಾಗಿ ಮುಂದಿನ ಸಂಖ್ಯೆ ಯಾವುದು ಎನ್ನುವುದನ್ನು ಊಹಿಸಬಹುದು. ಹಾಗೆಯೇ ಬೆಸ ಸಂಖ್ಯೆಯ ಸರಣಿಯಲ್ಲಿಯೂ ಅಷ್ಟೆ! ಎರಡು ಅಕ್ಕಪಕ್ಕದ ಬೆಸ ಸಂಖ್ಯೆಗಳ ವ್ಯತ್ಯಾಸ 2. ಆದ್ದರಿಂದ ಕೊನೆಯ ಸಂಖ್ಯೆಗೆ 2 ಸೇರಿಸಿದರೆ ಮತ್ತೊಂದು ಬೆಸ ಸಂಖ್ಯೆ ದೊರೆತೇ ದೊರೆಯುತ್ತದೆ.  ಆದರೆ ಅವಿಭಾಜ್ಯ ಸಂಖ್ಯೆಯಲ್ಲಿ ಮುಂದಿನ ಸಂಖ್ಯೆ ಯಾವುದು ಎಂದು ಊಹಿಸಲು ಸಾಧ್ಯವಿಲ್ಲ.

ಅವಿಭಾಜ್ಯ ಸಂಖ್ಯೆಗಳೆಷ್ಟಿರಬಹುದು? ಅವಿಭಾಜ್ಯ ಸಂಖ್ಯೆಗಳ ಸರಣಿಗೆ ಕೊನೆಯೇ ಇಲ್ಲ. ಕೊನೆಯಿದೆ ಎಂದುಕೊಂಡಿರೆನ್ನಿ, ಅದರ ಮುಂದೆ ಇನ್ನೊಂದು ಅವಿಭಾಜ್ಯ ಸಂಖ್ಯೆ ಇರಲೇ ಬೇಕು ಎಂದು ಸುಮಾರು 2300 ವರ್ಷಗಳ ಹಿಂದೆಯೇ ಗ್ರೀಕ್ ಗಣಿತಜ್ಞ, ಜ್ಯಾಮಿತಿಯ ಜನಕನೆಂದು ಸುಪ್ರಸಿದ್ಧನಾದ ಯೂಕ್ಲೀಡ್ ಸಾಧಿಸಿದ್ದ. ಅವನ ತರ್ಕ ಹೀಗಿತ್ತು.

ಒಟ್ಟಾರೆ ಇರುವ ಅವಿಭಾಜ್ಯ ಸಂಖ್ಯೆಗಳನ್ನು ತೆಗೆದುಕೊಳ್ಳೋಣ. ಅವಕ್ಕೆ ಬೇರೆ ಹೆಸರಿಡೋಣ. ಮೊದಲನೆಯದಕ್ಕೆ ಅ1 ಅಂತ ಇಟ್ಟುಕೊಳ್ಳೋಣ. ಕೊನೆಯದಕ್ಕೆ ಅn ಎಂತಿಟ್ಟುಕೊಳ್ಳೋಣ. ಈಗ ಇವೆಲ್ಲವನ್ನೂ ಗುಣಿಸೋಣ. ಇದು (ಅ1 ´ ಅ2 ´ ಅ3 ´ ….. ಅn) ಎಂದಾಗುತ್ತದಷ್ಟೆ. ಈಗ ಇದಕ್ಕೆ 1 ನ್ನು ಕೂಡಿಸೋಣ.  ಈ ಸಂಕಲನದ ಉತ್ತರ (ಅ1 ´ ಅ2 ´ ಅ3 ´ ….. ಅn)  + 1, ಅಲ್ಲವೇ? ಈಗ ಈ ಉತ್ತರವನ್ನು ಅ1 ರಿಂದ (ಅ1 ´ ಅ2 ´ ಅ3 ´ ….. ಅn) ವರೆಗೆ ಯಾವುದೇ ಸಂಖ್ಯೆಯಿಂದಲೂ ಇದನ್ನು ಭಾಗಿಸಬಹುದು. ಭಾಗಿಸಿದಾಗ 1 ಎಂಬ ಶೇಷ ಉಳಿದೇ ಉಳಿಯುತ್ತದೆ. ಅರ್ಥಾತ್ ಈ ಹೊಸ ಸಂಖ್ಯೆಯೂ ಅವಿಭಾಜ್ಯ ಸಂಖ್ಯೆ. ಆದ್ದರಿಂದ ನಾವು ಯಾವುದೇ ದೊಡ್ಡ ಸಂಖ್ಯೆಯನ್ನು ಊಹಿಸಿಕೊಂಡರೂ ಅದನ್ನೂ ಮೀರಿದ ಇನ್ನೊಂದು ಅವಿಭಾಜ್ಯ ಸಂಖ್ಯೆ ಇದ್ದೇ ಇರಬೇಕು. ಅಂದರೆ ಅವಿಭಾಜ್ಯ ಸಂಖ್ಯೆಗಳ ಸಂಖ್ಯೆಗೆ ಕೊನೆಯೇ ಇಲ್ಲ. ಈ ಅವಿಭಾಜ್ಯ ಸಂಖ್ಯೆಗಳ ಸರಣಿ ಅನಂತ.

list-of-prime-numbers

ಸಾವಿರಕ್ಕಿಂತ ಕಡಿಮೆ ಬೆಲೆಯ ಅವಿಭಾಜ್ಯ ಸಂಖ್ಯೆಗಳು

 

ಅವಿಭಾಜ್ಯ ಸಂಖ್ಯೆಗಳು ಸಾಂತವಲ್ಲ, ಅನಂತ ಎನ್ನುವುದಕ್ಕೆ ಯೂಕ್ಲೀಡನಷ್ಟೆ ಪುರಾವೆ ಒದಗಿಸಿಲ್ಲ. ಬೇರೆ ಪುರಾವೆಗಳೂ ಇವೆ. ರೋಹಿತ್ ಚಕ್ರತೀರ್ಥರು ಬರೆದ ಲೇಖನದಲ್ಲಿರುವ  ಈ ಮಾತುಗಳು ಇದನ್ನು ಸುಂದರವಾಗಿ ವಿವರಿಸುತ್ತವೆ.

“ಅವಿಭಾಜ್ಯಗಳ ಅನಂತ ಸಾಮ್ರಾಜ್ಯದ ಬಗ್ಗೆ ಈ ಪುರಾತನ ವ್ಯಕ್ತಿ ಕೊಟ್ಟ ಸಾಧನೆ ಸಾಕಾಗಲಿಲ್ಲವೆಂದು ಇದುವರೆಗೆ ಆಗಿ ಹೋದ ಕೆಲ ಗಣಿತಜ್ಞರು ತಮ್ಮ ಸಾಧನೆಗಳನ್ನೂ ಈ ಮಾಲೆಗೆ ಕಟ್ಟಿದ್ದಾರೆ. ಅದರಲ್ಲಿ ಏರ್ಡಿಶ್ ರಂತಹ ಆಧುನಿಕ ಯುಗದ ರಸಋಷಿಗಳೂ ತಮ್ಮ ಒಂದೆರಡು ಗುಲಾಬಿ ಹೂವುಗಳನ್ನು ಪೋಣಿಸಿದ್ದಾರೆ. ನನಗೆ ಇವುಗಳಲ್ಲೆಲ್ಲ ವಿಶೇಷವಾದದ್ದು ಎನ್ನಿಸುವುದು ಕುಮ್ಮರ್ ಎನ್ನುವ ಗಣಿತಜ್ಞ 1878ರಲ್ಲಿ ಕೊಟ್ಟ ಒಂದು ಪುಟ್ಟ ಸಾಧನೆ. ಬೆಚ್ಚಿಬೀಳಿಸುವ ಸರಳತೆ ಮತ್ತು ಹೃದಯದ ಕಣ್ಣು ತೆರೆಸುವ ಅನುಪಮ ಸೌಂದರ್ಯಗಳಿಂದಾಗಿ ಇದು ಯೂಕ್ಲಿಡ್ ನ ಬುದ್ಧಿಮತ್ತೆಗೆ ಸವಾಲು ಹಾಕುವಂತಿದೆ. ನೋಡಿ. ಅವಿಭಾಜ್ಯಗಳ ಸಂಖ್ಯೆ ಸಾಂತ ಅಂದುಕೊಳ್ಳೋಣ. ಸಾಂತ ಅಂದರೆ finite ಮಿತವಾದ ಎಂದು ಅರ್ಥ. ಅ1, ಅ2, ಅ3… ಅn , ಇವು ನಮಗೆ ಗೊತ್ತಿರುವ ಅವಿಭಾಜ್ಯಗಳು. ಇವುಗಳಾಚೆ ಬೇರೆ ಅವಿಭಾಜ್ಯವೇ ಇಲ್ಲ ಎಂದಿಟ್ಟುಕೊಳ್ಳಿ. ಈಗ ಇವೆಲ್ಲವನ್ನೂ ಗುಣಿಸಿ ಬರುವ ಉತ್ತರವನ್ನು t  ಎಂದು ಕರೆಯೋಣ.  ಈ ಸಂಖ್ಯೆಯಿಂದ ಒಂದೇ ಒಂದು ಬೆಲೆ ಕಡಿಮೆಯಿರುವ t-1 ಕೂಡ ಅn ಗಿಂತ ದೊಡ್ಡದು ಎಂಬುದು ಸ್ಪಷ್ಟ. ಅದೇ ಕಾರಣಕ್ಕೇ ಅದು ಅವಿಭಾಜ್ಯವಲ್ಲ. ಏಕೆಂದರೆ, ನಾವೀಗಾಗಲೇ ಅn ಅತಿ ದೊಡ್ಡ ಅವಿಭಾಜ್ಯವೆಂದು ಒಪ್ಪಿಕೊಂಡಾಗಿದೆ. ಹಾಗಾಗಿ ಅದರಾಚೆ ಸಿಗುವ ಸಂಖ್ಯೆಗಳೆಲ್ಲ ಭಾಜ್ಯಗಳೇ ಆಗಿರಬೇಕು ತಾನೆ? ಭಾಜ್ಯ ಎಂದ ಮೇಲೆ ಅದನ್ನು ಭೇದಿಸುವ, ತುಂಡರಿಸುವ ಒಂದಾದರೂ ಸಂಖ್ಯೆ ಇರಲೇಬೇಕಲ್ಲ? ಅದನ್ನು ಸುಮ್ಮನೆ ‘p’ ಎಂದು ಕರೆಯೋಣ. p ಬೇರೆಲ್ಲಿಂದಲೋ ಬಂದ ಬೆಲೆ ಅಲ್ಲ. ನಮ್ಮ ಬಳಿ ಇರುವ ಅ1, ಅ2, ಅ3… ಅn ಗಳ ಮಧ್ಯದಿಂದಲೇ ಎದ್ದು ಬಂದಿರುವ ಸಂಖ್ಯೆ ಅದು. ಅಂದರೆ p  ಎಂಬ ಸಂಖ್ಯೆ t ಮತ್ತು t-1 ಎರಡನ್ನೂ ಭಾಗಿಸುತ್ತದೆ ಎಂದಾಯಿತು. ಹಾಗಾದರೆ ಆ ಸಂಖ್ಯೆ t – (t-1) = 1 ನ್ನು ಕೂಡ ಭಾಗಿಸಬೇಕು! (x ಎಂಬ ಸಂಖ್ಯೆ a ಮತ್ತು b ಗಳನ್ನು ಭಾಗಿಸುತ್ತದಾದರೆ, a+b ಮತ್ತು a-b ಗಳನ್ನು ಕೂಡ ಅದು ಭಾಗಿಸುತ್ತದೆ ಎನ್ನುವುದು ಗಣಿತದ ಒಂದು ಸರಳ ನಿಯಮ). 1ನ್ನು ಭಾಗಿಸುವ ಅವಿಭಾಜ್ಯ ಅಂದರೆ ಏನರ್ಥ? ಆ ಭಾಜಕ 1ಕ್ಕಿಂತಲೂ ಚಿಕ್ಕದಾಗಿರಬೇಕಲ್ಲವೆ? 1ಕ್ಕಿಂತ ಚಿಕ್ಕ (ಅರ್ಥಾತ್ ಋಣವೋ, ಭಿನ್ನರಾಶಿಯೋ ಆಗಿರುವ) ಸಂಖ್ಯೆ. ಅವಿಭಾಜ್ಯ ಎಂದು ಕರೆಸಿಕೊಳ್ಳುವುದು ಹೇಗೆ? ಈ ವಿರೋಧಾಭಾಸ ಬರಲು ಕಾರಣವೇನೆಂದರೆ,ನಾವು ಅವಿಭಾಜ್ಯಗ ಸಂಖ್ಯೆ ಸೀಮಿತ, ಪರಿಮಿತ ಎನ್ನುವ ತಪ್ಪು ಕಲ್ಪನೆಯಿಂದ ಹೊರಟಿದ್ದೇವೆ. ಹಾಗಾಗಿ  ಅವಿಭಾಜ್ಯಗಳ ಸಂಖ್ಯೆ ಸಾಂತವಲ್ಲ. ಅನಂತ – ಎಂದೇ ಹೇಳಬಹುದು ಹಾಗೂ ಧಾರಾಳವಾಗಿ ಒಪ್ಪಬಹುದು.”

ಅನಂತವೇನೋ ಸರಿ. ಆದರೆ ಸ್ವಾಭಾವಿಕ ಸಂಖ್ಯೆಗಳಲ್ಲಿ ಇರುವಂತೆ ಯಾವುದಾದರೂ ವಿನ್ಯಾಸವಿರಲೇ ಬೇಕಲ್ಲವೇ? ಏಕೆಂದರೆ ಗಣಿತ ಎನ್ನುವುದು ಸಂಖ್ಯೆಗಳಲ್ಲಿರುವ ವಿನ್ಯಾಸವನ್ನು ಗುರುತಿಸುವ ಹಂಬಲದಿಂದ ಹುಟ್ಟಿದ್ದಷ್ಟೆ. ಸಹಜ ಸಂಖ್ಯೆಗಳಲ್ಲಿ ಅಕ್ಕಪಕ್ಕದ ಸಂಖ್ಯೆಯ ನಡುವೆ ಇರುವ ವ್ಯತ್ಯಾಸ 1. ಹತ್ತು ಸಂಖ್ಯೆಗಳ ಆಚೆಗೆ ಇರುವ ಸಂಖ್ಯೆಯನ್ನು ಹತ್ತನ್ನು ಕೂಡಿಸಿ ಹುಡುಕಬಹುದು. ಯಾವುದೇ ಸಂಖ್ಯೆಯ ಮೌಲ್ಯವನ್ನು ತೆಗೆದುಕೊಂಡರೆ ಅದರ ಹತ್ತು ಪಟ್ಟು ಹೆಚ್ಚಿನ ಮೌಲ್ಯವಿರುವ ಸಂಖ್ಯೆಯ ಮೌಲ್ಯ ಹತ್ತರ ಗುಣಲಬ್ಧವಾಗಿರುತ್ತದೆ. ಹೀಗೆ ಸಹಜ ಸಂಖ್ಯೆಗಳಲ್ಲಿ ವಿನ್ಯಾಸಗಳನ್ನು ಗುರುತಿಸಬಹುದು. ಆದರೆ ಅವಿಭಾಜ್ಯ ಸಂಖ್ಯೆಗಳ ಸರಣಿಯಲ್ಲಿನ ಗುಟ್ಟು ಗಣಿತಜ್ಞರಿಗೆ ಇಷ್ಟು ಸುಲಭವಾಗಿ ಒಗ್ಗಿಲ್ಲವಾದ್ದರಿಂದ ಅದರ ಬಗ್ಗೆ ಗಣಿತಜ್ಞರಿಗೆ ತೀರದ, ಅನಂತ ಕುತೂಹಲ.  ಹೀಗಾಗಿ ಅವಿಭಾಜ್ಯ ಸಂಖ್ಯೆಗಳ ಸರಣಿಯಲ್ಲಿ ವಿನ್ಯಾಸಗಳನ್ನು ಗುರುತಿಸುವ ಪ್ರಯತ್ನಗಳು ಸಾವಿರಾರು ವರ್ಷಗಳಿಂದ ನಡೆದಿದೆ. ನಡೆಯುತ್ತಿವೆ. ಇಂತಹ ಮತ್ತೊಂದು ಪ್ರಯತ್ನ ಈಗ ಸುದ್ದಿ ಮಾಡುತ್ತಿದೆ.

ಅಮೆರಿಕೆಯ ಸ್ಟಾನ್ ಫರ್ಡ್ ವಿಶ್ವವಿದ್ಯಾನಿಲಯದಲ್ಲಿರುವ ಭಾರತೀಯ ಗಣಿತಜ್ಞ ಕಣ್ಣನ್ ಸೌಂದರರಾಜನ್ ಅವಿಭಾಜ್ಯ ಸಂಖ್ಯೆಗಳ ಸರಣಿಯಲ್ಲಿ ಹೊಸದೊಂದು ವಿನ್ಯಾಸವನ್ನು ಗುರುತಿಸಿದ್ದಾರೆ. ಇವರ ಪ್ರಕಾರ ಅವಿಭಾಜ್ಯ ಸಂಖ್ಯೆಯ ಕೊನೆಯ ಅಂಕೆಗಳನ್ನು ಗಮನಿಸಿದರೆ, ಎರಡು ಅಕ್ಕಪಕ್ಕದ ಅವಿಭಾಜ್ಯ ಸಂಖ್ಯೆಗಳ ಕೊನೆಯ ಅಂಕೆ ಯಾವಾಗಲೂ ಭಿನ್ನವಾಗಿರುತ್ತದೆ. ಒಂದೇ ಆಗಿರುವುದಿಲ್ಲ. ಇದು ಹೇಗೆ ಎಂದಿರಾ? ಅವಿಭಾಜ್ಯ ಸಂಖ್ಯೆಗಳ ಸರಣಿಯನ್ನು ಗಮನಿಸಿ. ಯಾವುದೇ ಸಂಖ್ಯೆಯಾದರೂ ಅದು 1,3 7 ಅಥವಾ 9 ಈ ಯಾವುದಾದರೂ ನಾಲಕ್ಕು ಅಂಕೆಗಳಿಂದಲೇ ಕೊನೆಯಾಗಬೇಕು. 5 ರಿಂದ ಕೊನೆಯಾಗುವ ಸಂಖ್ಯೆಗಳೆಲ್ಲವನ್ನೂ 5 ರಿಂದ ಭಾಗಿಸಬಹುದಾದ್ದರಿಂದ ಅಂತಹ ಸಂಖ್ಯೆಗಳು ಅವಿಭಾಜ್ಯವೆನ್ನಿಸುವುದಿಲ್ಲ. ಹಾಗಿದ್ದರೆ ಅಕ್ಕಪಕ್ಕದ ಅವಿಭಾಜ್ಯ ಸಂಖ್ಯೆಗಳಲ್ಲಿ ಈ ನಾಲ್ಕು ಸಂಖ್ಯೆಗಳಲ್ಲಿ ಯಾವುದಾದರೂ ಒಂದು ಅಂಕೆ ಇರುವ ಸಂಖ್ಯೆಗಳಿರಬಹುದಲ್ಲವೇ? ಅವು ನಿಶ್ಚಿತ ಅಂತರದಲ್ಲಿ ಮರುಕಳಿಸಬಹುದೇ?

ಅನಂತ ಸಂಖ್ಯೆಗಳ ನಡುವೆ ಇಂತಹ ವಿನ್ಯಾಸವನ್ನು ಹುಡುಕುವುದು ಹೇಗೆ? ಇಂತಹ ಸಮಸ್ಯೆಗಳಿಗೆ ಗಣಿತಜ್ಞರು ಸಾಮಾನ್ಯವಾಗಿ ಗಣಕಯಂತ್ರಗಳ ನೆರವು ಪಡೆಯುತ್ತಾರೆ. ಏಕೆಂದರೆ ಅವಿಭಾಜ್ಯ ಸಂಖ್ಯೆಗಳೆಲ್ಲವನ್ನೂ ಬರೆದು ಅವುಗಳ ಮಧ್ಯದಲ್ಲಿರುವ ಸಂಖ್ಯೆಗಳನ್ನು ಹೆಕ್ಕುವುದು ಸುಲಭವಲ್ಲ. ಕೆಲವೊಂದು ಗಣಕ ಸೂತ್ರಗಳ ಮೂಲಕ ಇಂತಿಷ್ಟು ಸಂಖ್ಯೆಯೊಳಗೆ ಇರಬಹುದಾದ ಅವಿಭಾಜ್ಯ ಸಂಖ್ಯೆಗಳೆಷ್ಟು ಎಂದು ಕೇಳಬಹುದು. ಉದಾಹರಣೆಗೆ, ಒಂದು ಲಕ್ಷ ಸಂಖ್ಯೆಯೊಳಗೆ ಒಟ್ಟು ಎಷ್ಟು ಅವಿಭಾಜ್ಯ ಸಂಖ್ಯೆಗಳಿವೆ? ಅವುಗಳಲ್ಲಿ 1 ಅಂಕೆಯಿಂದ ಕೊನೆಯಾಗುವ ಸಂಖ್ಯೆಗಳು ಎಷ್ಟಿವೆ ಎಂದೆಲ್ಲಾ ಪ್ರಶ್ನೆ ಕೇಳಬಹುದು?  1,3,7,9 ಅಂಕೆಗಳಿಂದ ಕೊನೆಯಾಗುವ ಸಂಖ್ಯೆಗಳ ನಡುವೆ ಯಾವುದೇ ವಿನ್ಯಾಸವಿಲ್ಲದಿದ್ದರೆ ಅವೆಲ್ಲವುಗಳ ಸಂಖ್ಯೆ ಸರಿಸಮನಾಗಿ ಇರಬೇಕಷ್ಟೆ.

ಇದನ್ನು ಹೀಗೂ ಹೇಳಬಹುದು. ಅಕ್ಕಪಕ್ಕದಲ್ಲಿರುವ ಅವಿಭಾಜ್ಯ ಸಂಖ್ಯೆಗಳಲ್ಲಿ ಒಂದರ ಕೊನೆ ಅಂಕೆ 1 ಹಾಗೂ ಮತ್ತೊಂದರ ಕೊನೆ ಅಂಕೆ 3 ಎಂದಿಟ್ಟುಕೊಳ್ಳೋಣ.  ಇಂತಹ ಜೋಡಿಗಳು ಎಷ್ಟಿರಬಹುದು? ಹಾಗೆಯೇ ಕೊನೆಯ ಅಂಕೆ 1 ಮತ್ತು ಕೊನೆಯ ಅಂಕೆ 7 ಇರುವ ಅಕ್ಕಪಕ್ಕದ ಜೋಡಿ ಅವಿಭಾಜ್ಯ ಸಂಖ್ಯೆಗಳು ಎಷ್ಟಿರಬಹುದು? 1 ಮತ್ತು 1 ಕೊನೆಯ ಅಂಕೆಗಳಾಗಿರುವ ಜೋಡಿ ಅಂಕೆಗಳು ಎಷ್ಟಿರಬಹುದು ಎಂದು ಗಣಿಸಬಹುದು. ಈ ರೀತಿಯ ಜೋಡಿ ಸಂಖ್ಯೆಗಳು ಎಷ್ಟಿರಬಹುದು? ಅವಿಭಾಜ್ಯ ಸಂಖ್ಯೆಗಳ ರಾಜ್ಯದಲ್ಲಿ ಅವು ಒಂದಿನ್ನೊಂದರ ನೆರೆಹೊರೆಯಲ್ಲಿಯೇ ಇರುತ್ತವೆಯೋ ಅಥವಾ ಚೆಲ್ಲಾಪಿಲ್ಲಿಯಾಗಿ ಎಲ್ಲೆಲ್ಲೋ ಇರುತ್ತವೆಯೋ? ಕೊನೆಯ ಅಂಕೆ ಯಾವುದೇ ಇರಲಿ, ಅವಿಭಾಜ್ಯ ಸಂಖ್ಯೆಗಳ ವಿತರಣೆಯಲ್ಲಿ ಯಾವುದೇ ವಿನ್ಯಾಸವೂ ಇಲ್ಲವೆನ್ನಿ. ಅರ್ಥಾತ್, ತಮ್ಮ ರಾಜ್ಯದಲ್ಲಿ ಇವುಗಳು ತಮ್ಮಂತವರ ಜೊತೆಯೇ ಸೇರಿ ಕಾಲೊನಿ ಕಟ್ಟಿಕೊಂಡಿಲ್ಲವೆಂದರೆ ಇವುಗಳ ವಿತರಣೆ ಸರಿ ಸಮಾನವಾಗಿರಬೇಕು. ಅಂದರೆ 1,3; 1,7; 1,9 ಇವು ಹಾಗೂ 1,1 ಕೊನೆಯಂಕೆಗಳಾಗಿರುವ ಜೋಡಿ ಸಂಖ್ಯೆಗಳು ಸರಿಸಮವಾಗಿ ಸಂಖ್ಯೆಯಲ್ಲಿ ಕಾಣಿಸಬೇಕು. ಉದಾಹರಣೆಗೆ, ಒಂದು ಲಕ್ಷದೊಳಗೆ 1,3 ಕೊನೆಯಂಕೆ ಇರುವ ಜೋಡಿ ಸಂಖ್ಯೆಗಳು ನೂರಿರುತ್ತವಾದರೆ, 1,7, 1,9, ಹಾಗೂ 1,1 ಕೂಡ ಅಷ್ಟೇ ಇರಬೇಕು. ಅವಿಭಾಜ್ಯ ಸಂಖ್ಯೆಗಳಲ್ಲಿ ಈ ನಾಲ್ಕು ಅಂಕೆಗಳು ಕೊನೆಯದಾಗಿ ಬರುವುದಕ್ಕೆ ಯಾವುದೇ ವಿಶಿಷ್ಟ ಕಾರಣವಿಲ್ಲದಿರುವುದರಿಂದ ಇವು ಸರಿ ಸಮಾನ ಸಂಖ್ಯೆಯಲ್ಲಿ ಕಾಣಿಸಬೇಕು. ಇದನ್ನು ರಾಂಡಮ್ ನೆಸ್ ಎನ್ನುತ್ತಾರೆ.

ಇದೇ ತರ್ಕದ ಬೆನ್ನು ಹತ್ತಿದ ಸೌಂದರರಾಜನ್, 1,1; 3,3; 7,7 ಹಾಗೂ 9,9 ಈ ಕೊನೆಯಂಕಿ ಜೋಡಿಗಳಿಗೂ ಇತರೆ ಕೊನೆಯಂಕಿಗಳ ಜೋಡಿಗಳಿಗೂ ವ್ಯತ್ಯಾಸವಿದೆಯೇ ಎಂದು ಲೆಕ್ಕ ಹಾಕಿದ್ದಾರೆ. ಇವರ ಲೆಕ್ಕದ ಪ್ರಕಾರ 1,1; 3,3; 7,7; ಹಾಗೂ 9,9 ಎಂದು ಕೊನೆಯಂಕೆಯಿರುವ ಅಕ್ಕಪಕ್ಕದಲ್ಲಿರುವ ಅವಿಭಾಜ್ಯ ಜೋಡಿ ಸಂಖ್ಯೆಗಳ ಸಂಖ್ಯೆ, 1,7; 1,3; 1,9, 3,1; 3,7; 3,9;, 7,1;, 7,3; 7,9; 9,1; 9,3; 9,7; ಎಂಬ ಕೊನೆಯಂಕೆಗಳಿರುವ ಅವಿಭಾಜ್ಯ ಜೋಡಿ ಸಂಖ್ಯೆಗಳ ಸಂಖ್ಯೆಗಿಂತ ಹೆಚ್ಚು. ಅಂದರೆ ಅವಿಭಾಜ್ಯ ಸಂಖ್ಯೆಯ ಸರಣಿಯಲ್ಲಿ ಒಂದೇ ಅಂಕೆಯಿಂದ ಕೊನೆಗೊಳ್ಳುವ ಅಕ್ಕಪಕ್ಕದ ಎರಡು ಸಂಖ್ಯೆಗಳು ತುಸು ಕಡಿಮೆ.

ಇದೇಕೆ ಹೀಗೆ ಎಂದು ಕೇಳಬೇಡಿ? ಇದು ಹಾಗೇ! ಅಷ್ಟೆ. ಹಾಗಿದ್ದರೆ ಇದನ್ನ ಯಾಕೆ ತಿಳಿದುಕೊಳ್ಳಬೇಕು ಎಂದೂ ಪ್ರಶ್ನಿಸಬೇಡಿ. ಅವಿಭಾಜ್ಯ ಸಂಖ್ಯೆಗಳು ಗಣಿತಜ್ಞರಿಗೆ ಒಂದು ಆಟದ ವಸ್ತು. ಎಷ್ಟೇ ಆಡಿದರೂ ಮುಗಿಯದ ಆಟ ಇದು.  ಹಾಗಾಗಿ ಇಂತಹ ಆಟಗಳನ್ನು ಅವರು ಆಡುತ್ತಲೇ ಇರುತ್ತಾರೆ. “ಅದರ ಬಗ್ಗೆ ಯಾಕೆ ನಿಮಗೆ ಇಷ್ಟು ಆಸಕ್ತಿ ಎಂದರೆ ಅದು ಇದೆಯಲ್ಲ ಅದಕ್ಕೇ” ಎಂದು ಯಾರೋ ವಿಜ್ಞಾನಿ ಹೇಳಿದ್ದು ನೆನಪಿದೆಯಲ್ಲ. ಇದೂ ಹಾಗೆಯೇ! ಅವಿಭಾಜ್ಯ ಸಂಖ್ಯೆಗಳ ಸರಣಿಯಲ್ಲಿ ಎಷ್ಟೋ ವಿನ್ಯಾಸಗಳಿರಬಹುದು. ಅದು ಇದ್ದರೆ ಅದನ್ನು ತಿಳಿದುಕೊಳ್ಳುವುದಷ್ಟೆ ಉದ್ದೇಶ. “ಅವಿಭಾಜ್ಯ ಸಂಖ್ಯೆಗಳ ಸರಣಿಯಲ್ಲಿ ಎಲ್ಲಾ ಸಂಖ್ಯೆಗಳೂ ರಾಂಡಮ್ ಆಗಿ ಇರಲಿಕ್ಕಿಲ್ಲ, ಕೆಲವು ವಿನ್ಯಾಸಗಳ ಮರುಕಳಿಕೆ ಹೆಚ್ಚು,” ಎನ್ನುವುದು ಸೌಂದರರಾಜನ್ ಅವರ ಶೋಧಧ ಹೂರಣ. “ಇದರಿಂದ ಏನು ಪ್ರಯೋಜನ ಅನ್ನುವುದು ನನಗೂ ಗೊತ್ತಿಲ್ಲ,” ಎಂದಿದ್ದಾರೆ ಸೌಂದರರಾಜನ್. ನಿಮಗೇನಾದರೂ ಉಪಯೋಗವಾಗುತ್ತದೆಯೋ ನೋಡಿ ಹೇಳಿ!

_______________________

ಟಿಪ್ಪಣಿ: ರೋಹಿತ್ ಚಕ್ರತೀರ್ಥರ ಬರೆಹವನ್ನು ಅವರ  ಒಪ್ಪಿಗೆಯೊಂದಿಗೆ ಕೂಡಿಸಿಕೊಂಡಿದ್ದೇನೆ. ಆದರೆ ಅದರಲ್ಲಿರುವ ಸಂಕೇತಗಳನ್ನಷ್ಟೆ ನನ್ನ ಬರೆಹದಲ್ಲಿರುವ ಸಂಕೇತಗಳ ಜೊತೆಗೆ ಹೊಂದುವಂತೆ ಬದಲಿಸಿಕೊಂಡಿದ್ದೇನೆ. ಚಕ್ರತೀರ್ಥರು ಅವಿಭಾಜ್ಯ ಗಳಿಗೆ ಪರಮೇಯವೆಂದೂ ಬಳಸಿದ್ದಾರೆ. ಅದನ್ನೆಲ್ಲ ಗೊಂದಲವಾಗದಿರಲಿ ಎಂದು ಅವಿಭಾಜ್ಯ ಎಂದೇ ಟಂಕಿಸಿದ್ದೇನೆ.

 

ಆಕರ:

1. Nature doi:10.1038/nature.2016.19550 (17.3.2016)

2. ROBERT J. LEMKE OLIVER AND KANNAN SOUNDARARAJAN, UNEXPECTED BIASES IN THE DISTRIBUTION OF CONSECUTIVE PRIMES, arXiv:1603.03720 [math.NT] (15.3.2016)

 

 

 

 

 

Published in: on ಮಾರ್ಚ್ 20, 2016 at 7:34 ಅಪರಾಹ್ನ  Comments (1)  

ಗುರುತ್ವದ ಅಲೆಗಳ ಪತ್ತೆ ಹೇಗೆ?

ligocombinedpickan

ನೇಚರ್ ಪತ್ರಿಕೆಯಲ್ಲಿ ಇಂದು ಪ್ರಕಟವಾದ ವಿವರಣಾತ್ಮಕ ಚಿತ್ರದ ಕನ್ನಡ ರೂಪ. 

Published in: on ಫೆಬ್ರವರಿ 17, 2016 at 5:31 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಜಿರಲೆ ರೋಬೋ!

ಒಂದು ವಾಟ್ಸಪ್ ಜೋಕು ಗಂಡಂದಿರನ್ನು ತಮಾಷೆ ಮಾಡುತ್ತದೆ. ಗಂಡ ಕೊಲ್ಲಲು ಹೊರಟ ಜಿರಲೆ ಅವನಿಗೆ ಸವಾಲು ಹಾಕುತ್ತದಂತೆ. ‘ನೀನು ನನ್ನನ್ನು ಕೊಲ್ಲುವುದಿಲ್ಲ. ಏಕೆಂದರೆ ನಾನು ನಿನಗಿಂತ ಬಲಶಾಲಿ. ನಿನಗೆ ಹೆದರದ ಹೆಂಡತಿ ನನಗೆ ಹೆದರುತ್ತಾಳೆ,’ ಅಂತ. ಜೋಕು ಕೇಳಿ ಹೊಟ್ಟೆ ಹುಣ್ಣಾಗುವಷ್ಟು ನಕ್ಕ ಮೇಲೆ ತುಸು ಯೋಚಿಸಿ. ಜಿರಲೆ ಎನ್ನುವ ಈ ಯಃಕಶ್ಚಿತ್ ಕೀಟ ಹೇಳಿದ್ದರಲ್ಲಿ ನ್ಯಾಯವಿದೆ. ತುಸು ಸತ್ಯವಿದೆ. ಸಿಕ್ಕದ್ದನ್ನು ಉಂಡು ಬದುಕುವ ಈ ಕೀಟ ಮನುಷ್ಯನನ್ನು ಕೊಲ್ಲುವ ವಿಕಿರಣಗಳನ್ನೂ ತಾಳಿಕೊಳ್ಳಬಲ್ಲುದು.

ಅದಷ್ಟೆ ಅಲ್ಲ. ಇನ್ನೂ ಅದ್ಭುತ ಸಾಮರ್ಥ್ಯಗಳಿವೆ. ಬೂಟುಕಾಲಿನಿಂದ ತುಳಿದು ಹೊಸಕಿ ಹಾಕುವಷ್ಟು ಪುಟ್ಟದಲ್ಲವೇ ಎನ್ನಬೇಡಿ. ಜಿರಲೆ ನಿಮ್ಮ ದೇಹದ ಭಾರವನ್ನು ತಡೆದುಕೊಂಡು ಅಪ್ಪಚ್ಚಿಯಾಗದೆ ಬದುಕುಳಿಯಬಲ್ಲುದು. ಇದರ ಸಾಮರ್ಥ್ಯಗಳಿಗೆ ಇನ್ನೊಂದನ್ನು ಕೂಡಿಸಿದ್ದಾರೆ ಅಮೆರಿಕೆಯ ಕಾರ್ನೆಲ್ ವಿಶ್ವವಿದ್ಯಾನಿಲಯದ ರಾಬರ್ಟ್ ಫುಲ್ ಮತ್ತು ಕೌಶಿಕ್ ಜಯರಾಮ್. ಇವರು ಇತ್ತೀಚಿನ ಪ್ರೊಸೀಡಿಂಗ್ಸ್ ಆಫ್ ನ್ಯಾಶನಲ್ ಅಕಾಡೆಮಿ ಆಫ್ ಸೈನ್ಸಸ್ ಪತ್ರಿಕೆಯಲ್ಲಿ ಪ್ರಕಟಿಸಿರುವ ಪ್ರಬಂಧವೊಂದು ಜಿರಲೆ ಎನ್ನುವ ಜೀವಿ ಹೊಸತೊಂದು ಬಗೆಯ ರೋಬೋ ಸೃಷ್ಟಿಗೆ ಪ್ರೇರಣೆಯಾಗಬಲ್ಲುದು ಎಂದು ತಿಳಿಸಿದೆ.

ಜಿರಲೆ ರೋಬೋವೇ? ಅದೇನು ವಿಶೇಷ ಎಂದಿರಾ? ಉಗುರು ನುಸುಳದಷ್ಟು ಇಕ್ಕಟ್ಟಾದ ಸಂದಿಯಲ್ಲಿಯೂ ಹೆಬ್ಬೆರಳು ಗಾತ್ರದ ಜಿರಲೆ ಇರುವುದನ್ನು ಕಂಡಿದ್ದೀರಲ್ಲ? ಇಷ್ಟು ಇಕ್ಕಟ್ಟಿನಲ್ಲಿ ಈ ಜೀವಿ ಹೇಗೆ ಬದುಕುತ್ತದೆ? ಕೈ ಕಾಲು ಆಡಿಸಲೂ ಆಗದಷ್ಟು ಇಕ್ಕಟ್ಟಾದ ಜಾಗೆಯಲ್ಲಿ ಇದು ಹೇಗೆ ನಡೆಯಬಲ್ಲುದು? ಆ ಇಕ್ಕಟ್ಟಿನಲ್ಲಿ ಅಷ್ಟು ದಪ್ಪ ದೇಹ ಹೇಗೆ ಉಳಿಯಬಲ್ಲುದು? ಇವೆಲ್ಲ ಕೌಶಿಕ್ ಮತ್ತು ಫುಲ್ ಅವರಿಗೆ ಬಲು ಕೌತುಕವೆನ್ನಿಸಿದೆ. ಇದೇ ಬಗೆಯ ಗುಣಗಳಿರುವ ರೋಬೋಗಳು ಸಿಗುವುದಾದರೆ ಕುಸಿದ ಕಟ್ಟಡಗಳ ಅವಶೇಷಗಳ ಸಂದಿಗೊಂದಿಗಳಲ್ಲಿ ನುಸುಳಿ ಅಲ್ಲಿರುವವರಿಗೆ ನೆರವು ನೀಡಬಹುದು ಎನ್ನುವುದು ಇವರ ಆಶಯ.

ಈ ಆಸೆಯ ಬೆನ್ನು ಹತ್ತಿದ ಕೌಶಿಕ್ ಮತ್ತು ಫುಲ್ ಜಿರಲೆಗಳನ್ನು ಇರುಕಿನಲ್ಲಿ ಇರಿಸಿ ಅಧ್ಯಯನ ಮಾಡಿದ್ದಾರೆ. ಅವು ಇಕ್ಕಟ್ಟಾದ ಸಂಧಿಗಳಲ್ಲಿ ನಡೆದಾಡುವ ರೀತಿ, ಅವು ತಾಳಿಕೊಳ್ಳಬಲ್ಲ ಗರಿಷ್ಟ ಒತ್ತಡದ ಪ್ರಮಾಣ, ಅಪ್ಪಚ್ಚಿಯಾಗುವ ಸ್ಥಿತಿಯಲ್ಲಿದ್ದರೂ ನಡೆದಾಡುವ ವೇಗ ಇತ್ಯಾದಿಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ್ದಾರೆ. ವೀಡಿಯೋ ಚಿತ್ರಗಳನ್ನು ತೆಗೆದಿದ್ದಾರೆ. ಇವೆಲ್ಲದರ ಪ್ರೇರಣೆ ಪಡೆದು ಜಿರಲೆಯಂತೆಯೇ ವಿನ್ಯಾಸವಿರುವ ರೋಬೋವನ್ನೂ ಸೃಷ್ಟಿಸಿದ್ದಾರೆ.

ಜಿರಲೆಗಳು ನಮ್ಮಷ್ಟು ಗಟ್ಟಿ ಜೀವಿಗಳಲ್ಲ. ಮೃದು. ಒತ್ತಿದರೆ ಇರುಕಿಕೊಳ್ಳಬಲ್ಲುವು. ಇದಕ್ಕೆ ಕಾರಣ ಅವುಗಳ ಹೊರಕವಚ. ಬಹುತೇಕ ಕೀಟಗಳ ರಚನೆ ಹೀಗೇ ಇರುತ್ತದಾದರೂ, ಜಿರಲೆಗಳಲ್ಲಿ ಇವು ವಿಶೇಷ. ತೆಳುವಾದ ಪಟ್ಟಿಗಳನ್ನು ಒಂದರ ಹಿಂದೆ ಒಂದಾಗಿ ಜೋಡಿಸಿದಂತಿದೆ ದೇಹ. ಈ ಪಟ್ಟಿಗಳು ಗಟ್ಟಿಯಾಗಿದ್ದರೂ ಸುಲಭವಾಗಿ ಬಾಗಬಲ್ಲವು. ಜೊತೆಗೆ ಇವುಗಳ ಉದ್ದುದ್ದ ಕಾಲುಗಳು. ಈ ಕಾಲುಗಳು ದೇಹದ ಉದ್ದದ ಒಂದೂವರೆ ಪಟ್ಟು ಉದ್ದವಿದ್ದರೂ, ಸಂಧಿಪಾದಗಳಾಗಿದ್ದರಿಂದ ಅತಿ ಪುಟ್ಟದಾಗಿ ಮಡಿಚಿಕೊಳ್ಳಲು ಸಾಧ್ಯವಾಗುತ್ತದೆ. ಇದು ತಿಳಿದ ವಿಷಯ. ಆದರೆ ಎಷ್ಟರ ಮಟ್ಟಿಗೆ ಈ ಸಾಮರ್ಥ್ಯವನ್ನು ಜಿರಲೆ ಬಳಸಿಕೊಳ್ಳಬಲ್ಲುದು ಎನ್ನುವುದನ್ನು ಫುಲ್ ಮತ್ತು ಕೌಶಿಕ್ ಪರೀಕ್ಷಿಸಿದ್ದಾರೆ.

ಇದಕ್ಕಾಗಿ ಇವರು ಜಿರಲೆಗಳನ್ನು ಅತಿ ಇಕ್ಕಟ್ಟಾದ ಸಂಧಿಗಳೊಳಗೆ ಹೋಗುವಂತೆ ಮಾಡಿದ್ದಾರೆ. ತಮ್ಮ ಸುತ್ತಲಿನ ಪರಿಸರವನ್ನು ಪರಿಶೀಲಿಸಿ ಅಲ್ಲಿಂದ ತಪ್ಪಿಸಿಕೊಳ್ಳುವುದರಲ್ಲಿ ಜಿರಲೆಗಳು ನಿಷ್ಣಾತವಷ್ಟೆ. ಒಳಗಿನದೆಲ್ಲವೂ ಕಾಣುವ ಪಾರದರ್ಶಕ ಡಬ್ಬಿಯೊಳಗೆ ಜಿರಲೆಯನ್ನು ಇಟ್ಟು ನಿಧಾನವಾಗಿ ಡಬ್ಬಿಯ ಮುಚ್ಚಳವನ್ನು ಒಳದೂಡಿದ್ದಾರೆ. ಹೀಗೆ ಮಾಡಿದಾಗ ಜಾಗ ಇಕ್ಕಟ್ಟಾಗಿ ಜಿರಲೆ ಹೇಗೆ ಪ್ರತಿಕ್ರಯಿಸುತ್ತದೆ ಎನ್ನುವುದನ್ನು ಗಮನಿಸಿದ್ದಾರೆ. (ಚಿತ್ರ 1 ನೋಡಿ). ಅಷ್ಟು ಇಕ್ಕಟ್ಟಾದ ಜಾಗೆಯಲ್ಲಿ ಜಿರಲೆ ನಡೆಯುವಾಗ ವೀಡಿಯೋ ಚಿತ್ರಿಸಿದ್ದಾರೆ. ಅನಂತರ ವೀಡಿಯೋದ ನೆರವಿನಿಂದ ಜಿರಲೆಯ ನಡಿಗೆಯ ವೇಗ, ವಿಧಾನವನ್ನು ಲೆಕ್ಕ ಹಾಕಿದ್ದಾರೆ.

cockroachsqueeze

ಜಿರಲೆಯನ್ನು ಸಣ್ಣ ಸೀಳಿನ ಮೂಲಕ ಹಾಯಲು ಬಿಟ್ಟಾಗ ಅಚ್ಚರಿಯ ಚಿತ್ರಗಳು ದಾಖಲಾಗಿದ್ದುವು. ತನ್ನ ದೇಹಕ್ಕಿಂತಲೂ ನಾಲ್ಕು ಪಟ್ಟು ಕಿರಿದಾಗಿದ್ದ ಸಂದಿನೊಳಗೆ ತೂರಬೇಕೆಂದಾಗ ಜಿರಲೆ ಮೊದಲಿಗೆ ಸಂದಿನಾಚೆ ಏನಾದರೂ ಇದೆಯೋ ಎಂದು ತನ್ನ ಮೀಸೆಯನ್ನು ಚಾಚಿ ಹುಡುಕಾಡುತ್ತದೆ. ಅನಂತರ ತಲೆಯನ್ನು ತೂರಿಸುತ್ತದೆ. ತಲೆಯಾದ ಮೇಲೆ ಮುಂಗಾಲುಗಳನ್ನು ಹೊರ ಹಾಕುತ್ತದೆ. ತದನಂತರ ಎದೆ, ಉದರ ಭಾಗವನ್ನು ಸೀಳಿನೊಳಗೆ ತೂರಿಸುತ್ತದೆ. ತೆವಳುತ್ತಾ ಮುಂದೆ ಸಾಗಿ ಇಡೀ ಉದರ ಭಾಗವನ್ನು ಮತ್ತೊಂದು ಬದಿಗೆ ಎಳೆದುಕೊಳ್ಳುತ್ತದೆ.

ವೀಡಿಯೋ ಚಿತ್ರಗಳಲ್ಲಿ ಈ ಚಲನೆಗಳು ಸುಸ್ಪಷ್ಟವಾಗಿ ಕಂಡುವು. ಇವೆಲ್ಲವನ್ನೂ ಕಣ್ಣೆವೆಯಿಕ್ಕುವುದರೊಳಗೆ ಮಾಡಿ ಮುಗಿಸುತ್ತದೆ ಈ ಕೀಟ. ಕಣ್ಣೆವೆ ಮುಚ್ಚುವಷ್ಟರೊಳಗೆ ಎಂದರೆ ಎಷ್ಟು ಸೆಕೆಂಡು ಎಂದುಕೊಂಡಿರಿ – ಅರ್ಧದಿಂದ ಮುಕ್ಕಾಲು ಸೆಕೆಂಡುಗಳೊಳಗೆ ಇದು ತನ್ನ ಇಡೀ ದೇಹವನ್ನು ಸಂದಿಯೊಳಗಿನಿಂದ ಹೊರ ತಂದು ಬಿಟ್ಟಿರುತ್ತದೆ. ಇದರಂತೆ ಮನುಷ್ಯನಿಗೂ ಮಾಡಲು ಸಾಧ್ಯವಾಗುವುದಿದ್ದಿದ್ದರೆ. ಬಹುಶಃ ಯಾವ ಜೈಲಿನ ಕಿಟಕಿಗಳೂ ಬಂಧಿಗಳನ್ನು ಸೆರೆಯಾಗಿಡಲು ಶಕ್ತವಲ್ಲ. ಹಾಗೆಯೇ ಈ ಸಾಮರ್ಥ್ಯವಿದ್ದಿದ್ದರೆ ದೇಹಕ್ಕಿಂತಲೂ ಕಿರಿದಾದ ಕೊಳವೆಬಾವಿಯಲ್ಲಿ ಬಿದ್ದ ಮಕ್ಕಳು ಹೊರ ಬಂದು ಬದುಕುವ ಸಾಧ್ಯತೆಗಳೂ ಇರುತ್ತಿದ್ದುವೇನೋ?

ಹೀಗೆನ್ನಲು ಕಾರಣವಿದೆ. ಜಿರಲೆ ಸುಮಾರು 12 ಮಿಮೀ ಎತ್ತರವಿರುವ ತನ್ನ ದೇಹವನ್ನು ನಾಲ್ಕು ಮಿಮೀಟರಿಗಿಂತಲೂ ಕಡಿಮೆ ಎತ್ತರಕ್ಕೆ ಸಪಾಟಾಗಿಸಿಕೊಂಡು ಮುನ್ನುಗ್ಗಬಲ್ಲುದಂತೆ. ಈ ಲೆಕ್ಕದಲ್ಲಿ ಒಂದಡಿ ದಪ್ಪವಿರುವ ಮನುಷ್ಯ ನಾಲ್ಕಿಂಚು ದಪ್ಪದ ಸಂದಿನೊಳಗೆ ಸಲೀಸಾಗಿ ನುಸುಳಬಹುದಾಗಿತ್ತು. ಜಿರಲೆಗೆ ಇದು ಸಾಧ್ಯವಾಗುವುದಕ್ಕೆ ಕಾರಣ ಅದು ತನ್ನ ಕಾಲುಗಳನ್ನು ಉದ್ದುದ್ದಕ್ಕೆ ಚಾಚಿಕೊಂಡ ನೆಲವನ್ನೇ ಆತುಕೊಂಡಂತೆ ಸಪಾಟಾಗಿ ಬಿಡಬಲ್ಲುದು. ನಮಗೆ ಇದು ಸಾಧ್ಯವಿಲ್ಲ. ಜಿರಲೆಯ ಬೆನ್ನ ಮೇಲಿನಂಚಿಗೂ ನೆಲಕ್ಕೂ ಇರುವ ಕೋನ ಇದೆಷ್ಟು ಸಪಾಟಾಗಬಲ್ಲುದು ಎಂದು ತೋರಿಸುತ್ತದೆ. ಸಂದಿನೊಳಗೆ ತೂರುವಾಗ ಈ ಕೋನ ಸುಮಾರು ನಾಲ್ಕು ಮಡಿ ಹೆಚ್ಚಾಗುತ್ತದಂತೆ.

ಅದೇನೋ ಸರಿ. ಆದರೆ ಕಾಲನ್ನು ಹೀಗೆ ಚಾಚಿಕೊಂಡು ಬಿಟ್ಟರೆ ಮುನ್ನಡೆಯುವುದು ಹೇಗೆ ಎಂದು ಯೋಚಿಸಿದಿರಲ್ಲವಾ? ನಿಮ್ಮ ಆಲೋಚನೆ ಸರಿಯೇ. ಕೌಶಿಕ್ ಮತ್ತು ಫುಲ್ ಇದನ್ನೂ ಪರಿಶೀಲಿಸಿದ್ದಾರೆ. ಜಿರಲೆಯ ಬೆನ್ನಿನ ಮೇಲೆ ಮೇಲ್ಚಾವಣಿಯುಂಟು ಮಾಡುವ ತಡೆ ಹಾಗೂ ಅದರ ಕಾಲುಗಳ ಮುಂದೂಡುವ ಬಲವನ್ನು ಲೆಕ್ಕ ಹಾಕಿದ್ದಾರೆ. ತಡೆಗಿಂತಲೂ ಮುಂದೂಡುವ ಬಲ ಹೆಚ್ಚಾಗಿದ್ದಷ್ಟೂ ಮುನ್ನಡೆ ಸುಲಭವಷ್ಟೆ. ನಾವು ನೀರಿನಲ್ಲಿ ಈಜುವಂತೆ, ಅಥವಾ ಹಕ್ಕಿಗಳು ಗಾಳಿಯಲ್ಲಿ ಹಾರುವಾಗ ಮಾಡುವಂತೆ ಜಿರಲೆಯೂ ತನ್ನ ದೇಹದ ಎಡಭಾಗವನ್ನು, ಇನ್ನೊಮ್ಮೆ ಬಲಭಾಗವನ್ನು ತೆವಳಿಸಿ ಮುಂದೆ ಸಾಗುತ್ತದೆ. ಇರುಕಿನ ಸಂದಿನೊಳಗೆ ಕಾಲುಗಳ ನೆರವೇ ಇಲ್ಲದೆ ತೆವಳುತ್ತದೆ.

ಹೀಗೆ ಕಾಲುಗಳನ್ನು ಮಡಚಿಕೊಳ್ಳುವ ಸಾಮರ್ಥ್ಯವಿರುವುದರಿಂದಲೇ ಜಿರಲೆಯನ್ನು ಹೊಸಕಿ ಹಾಕುವುದು ಕಷ್ಟ. ಫುಲ್-ಕೌಶಿಕ್ ಜಿರಲೆಗಳ ಮೇಲೆ ವಿವಿಧ ಮಟ್ಟದ ಭಾರವನ್ನು ಹೇರಿ ಅವು ಎಷ್ಟು ತಾಳಿಕೊಳ್ಳಬಲ್ಲುವು ಎಂದು ಲೆಕ್ಕ ಹಾಕಿದ್ದಾರೆ. ಈ ಪುಟಾಣಿ ಕೀಟ ತನ್ನ ದೇಹ ತೂಕಕ್ಕಿಂತ 300 ರಿಂದ 900 ಪಟ್ಟು ಭಾರವನ್ನು ತಾಳಬಲ್ಲುದು. ನಮ್ಮ ಬೆನ್ನ ಮೇಲೆ 21 ರಿಂದ 60 ಟನ್ನು ತೂಕ ಬಿದ್ದ ಹಾಗೆ. ಅರ್ಥಾತ್ ಹೆಚ್ಚೂ ಕಡಿಮೆ ಎರಡರಿಂದ ಆರು ಲೋಡ್ ಆದ ಟ್ರಕ್ಕುಗಳು ಬೆನ್ನ ಮೇಲೆ ನಿಂತ ಹಾಗೆ. ಇಷ್ಟಾದರೂ ಜಿರಲೆಗೆ ಏನೂ ಆಗುವುದಿಲ್ಲ. ಭಾರವನ್ನು ತೆಗೆದ ಕೂಡಲೇ ಎಂದಿನ ಗತ್ತಿನಿಂದ ಹರಿದಾಡಿ, ಹಾರುತ್ತದಂತೆ. ಇಷ್ಟು ಭಾರ ಬಿದ್ದರೂ ಅದರ ದೇಹಕ್ಕೆ ಕಿಂಚಿತ್ತೂ ತೊಂದರೆಯಾಗದಿರುವುದಕ್ಕೆ ಕಾರಣ, ಅವುಗಳ ಬೆನ್ನ ಮೇಲಿರುವ ಹಾಳೆಗಳು ಬಾಗುವುದಲ್ಲ. ಈ ಹಾಳೆಗಳನ್ನು ಜೋಡಿಸುವ ಸ್ನಾಯುಗಳ ರಚನೆ ಎಂದು ವೀಡಿಯೋ ಮೂಲಕ ಕೌಶಿಕ್ ಮತ್ತು ಫುಲ್ ಗಮನಿಸಿದ್ದಾರೆ

ಸಂದಿಯೊಳಗಿನ ತೆವಳಾಟ ಜಿರಲೆಯ ಸಾಧಾರಣ ಓಟಕ್ಕಿಂತ ನಿಧಾನವೇನೋ ಹೌದು. ಆದರೆ ಗತಿಯೇನೂ ಕಡಿಮೆಯಲ್ಲವಂಎ. ತನ್ನ ದೇಹದ ಆರು ಮಡಿ ಉದ್ದದ ಸಂದಿಯನ್ನು ಸೆಕೆಂಡಿನೊಳಗೆ ಇದು ಕ್ರಮಿಸಿಬಿಟ್ಟಿರುತ್ತದೆ. ಆರಡಿ ಮನುಷ್ಯ ತನ್ನ ದೇಹದ ಉದ್ದಕ್ಕೆ ಅನುಗುಣವಾಗಿ ಈ ವೇಗದಲ್ಲಿ ತೆವಳಿದರೆ ನಿಮಿಷದೊಳಗೆ ಎಂಟೂವರೆ ಕಿಲೋಮೀಟರು ದೂರವನ್ನು ತೆವಳಿಕೊಂಡೇ ಸಾಗಬಲ್ಲ! ಆ ವೇಗದಲ್ಲಿ ತೆವಳಲು ಜಿರಲೆಗೆ ಮೇಲ್ಚಾವಣಿ ಒದಗಿಸುವ ಘರ್ಷಣೆಯೂ ನೆರವಾಗುತ್ತದೆ. ಈ ಘರ್ಷಣೆಯನ್ನು ಕಡಿಮೆ ಮಾಡಿದರೆ (ಮೇಲ್ಛಾವಣಿಯನ್ನು ನುಣುಪಾಗಿಸಿದರೆ ಅಥವಾ ನೆಲವನ್ನು ನುಣುಪಾಗಿಸಿದರೆ) ಏನಾಗಬಹುದೆಂದೂ ಇವರು ಪರೀಕ್ಷಿಸಿದ್ದಾರೆ. ಮೇಲ್ಛಾವಣಿ ನುಣುಪಾಗಿದ್ದಷ್ಟೂ ಸಂದಿನೊಳಗೆ ಜಿರಲೆಯ ಚಲನೆ ವೇಗವಾಗುತ್ತದೆ. ನೆಲ ನುಣಪಾಗಿದ್ದಷ್ಟೂ ನಿಧಾನವಾಗುತ್ತದೆ. ಇದೇನೂ ವಿಶೇಷವಲ್ಲ ಎಂದಿರಾ? ಕೌಶಿಕ್-ಫುಲ್ ಅವರ ಪ್ರಕಾರ ಇದೊಂದು ವಿಶೇಷ ನಡಿಗೆ. ಎರಡು ಮೇಲ್ಮೈಗಳ ಘರ್ಷಣೆಯನ್ನೇ ಬಳಸಿಕೊಂಡು ಮುಂದೆ ಸಾಗುವ ವಿಶೇಷ ನಡಿಗೆ.

ಇರಬಹುದು. ಇದರಿಂದ ನಮಗೇನು ಲಾಭ? ಜಿರಲೆಯನ್ನಂತೂ ಹಿಡಿಯಲು ಆಗುವುದಿಲ್ಲ. ಎಂತಹ ಕಿರಿದಾದ ಸಂದಿನಲ್ಲೂ ಅದು ನುಸುಳಬಹುದು ಅಂದರೆ ಅದನ್ನು ಮನೆಯಿಂದ ಸಂಪೂರ್ಣವಾಗಿ ನಿವಾರಿಸಲು ಆಗುವುದಿಲ್ಲ. ಮತ್ತೇನು ಪ್ರಯೋಜನ ಎಂಬ ನಿರಾಸೆ ಬೇಡ.  ಕಿರಿದಾದ ಸಂದುಗಳೊಳಗೆ ನುಸುಳುವ ರೋಬೋಗಳಿಗೆ ಇವು ಪ್ರೇರಣೆಯಾಗುತ್ತವೆ. ಜಿರಲೆಯ ಬೆನ್ನ ಮೇಲಿನ ಫಲಕಗಳ ರಚನೆ, ಅವು ಬಾಗುವ ಹಾಗೂ ಸಪಾಟಾಗುವ ರೀತಿ, ಮೇಲ್ಮೈಗಳನ್ನು ಬಳಸಿಕೊಂಡು ತೆವಳುವ ಪರಿ, ಇವೆಲ್ಲವನ್ನೂ ಗಮನಿಸಿದ ನಂತರ ಫುಲ್ ಮತ್ತು ಕೌಶಿಕ್ ಅಂಗೈಮೇಲಿಟ್ಟುಕೊಳ್ಳಬಹುದಾದಂತಹ ಪುಟ್ಟ ರೊಬೋವೊಂದನ್ನು ರೂಪಿಸಿದ್ದಾರೆ.

compressiblerobot.jpg

ಇದು ಕೂಡ ಸಂದಿಗಳೊಳಗೆ ನುಸುಳುವಾಗ ತನ್ನೆತ್ತರವನ್ನು ನಾಲ್ಕು ಪಟ್ಟು ಕಡಿಮೆ ಮಾಡಿಕೊಳ್ಳಬಹುದು. ಇದರ ಕಾಲುಗಳಿಗೆ ಜಿರಲೆಯ ಉದ್ದದ ಸಂಧಿಪಾದಗಳೇ ಸ್ಪೂರ್ತಿ. ಜಿರಲೆಯೂ ಅದ್ಭುತ. ಅದನ್ನು ಅಣಕಿಸುವ ರೋಬೋವೂ ಅದ್ಭುತ. ಅಲ್ಲವೇ?

ಜಿರಲೆ ರೋಬೋದ ವೀಡಿಯೋ ಇಲ್ಲಿದೆ :

ಆಕರ:

Kaushik Jayaram and Robert J. Full, Cockroaches traverse crevices, crawl rapidly in confined spaces, and inspire a soft, legged robot PNAS | doi/10.1073/pnas.1514591113,   ( Early edition, dated 4.2.2016)

Published in: on ಫೆಬ್ರವರಿ 10, 2016 at 4:32 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಕೀಟವೋಡಿಸುವ ಕೆಸುವಿನ ಗೆಡ್ಡೆ

ಕೀಟವೋಡಿಸುವ ಕೆಸುವಿನ ಗೆಡ್ಡೆ

ಹೌದು. ಬೇವಿನ ನಂತರ ಈಗ ಮತ್ತೊಂದು ಹಿತ್ತಲ ಗಿಡ ಕೀಟನಾಶಕಗಳ ಸಮಸ್ಯೆಗೆ ಪರಿಹಾರ ಒದಗಿಸಲಿದೆಯೇ? ಹೀಗೊಂದು ಸುದ್ದಿಯನ್ನು ಸೈಂಟಿಫಿಕ್ ರಿಪೋರ್ಟ್ಸ್ ಪತ್ರಿಕೆ ನಿನ್ನೆ ಪ್ರಕಟಿಸಿದೆ. ಇಂಫಾಲದ ಜೈವಿಕ ಸಂಪನ್ಮೂಲ ಹಾಗೂ ಸುಸ್ಥಿರ ಅಭಿವೃದ್ಧಿ ಸಂಶೋಧನಾಲಯದ ವಿಜ್ಞಾನಿ ಯಲ್ಲಪ್ಪ ರಾಜಶೇಖರ್ ಮತ್ತು ಸಂಗಡಿಗರ ಪ್ರಕಾರ ಕರ್ನಾಟಕದಲ್ಲಿ ಬೆಳೆಯುವ ಕೆಸವಿನ ದಂಟಿನ ಗೆಡ್ಡೆಗಳಲ್ಲಿ ಕೀಟಗಳನ್ನು ದೂರವಿಡುವ ಶಕ್ತಿಯಿದೆ.

colocasia

ಕೆಸುವಿನ ದಂಟು

ಕರಾವಳಿಯಲ್ಲಿ ಹೆಚ್ಚು ಬಳಕೆಯಾಗುವ ಕೆಸುವಿನ ದಂಟು ಹಾಗೂ ಕೆಸುವಿನ ಗೆಡ್ಡೆಗಳ ಆಹಾರ ಗುಣಗಳ ಬಗ್ಗೆ ಹೇಳಬೇಕಿಲ್ಲ. ಕರಾವಳಿಗರು ಇದರ ಎಲೆಯಿಂದ ಮಾಡುವ ‘ಪತ್ರೊಡೆ’ ಆ ಪ್ರದೇಶವನ್ನು ಪ್ರತಿನಿಧಿಸುವ ತಿನಿಸು. ಹಾಗೆಯೇ ಗೆಡ್ಡೆಗಳೂ ವಿಶೇಷ ಆಹಾರ. ಗೆಡ್ಡೆಗಳಲ್ಲಿರುವ ಪಿಷ್ಠ ಮಧುಮೇಹಿಗಳ ರಕ್ತದಲ್ಲಿ ಸಕ್ಕರೆಯನ್ನು ಉಲ್ಬಣಿಸದೆಯೇ ಶಕ್ತಿಯೂಡಿಸುತ್ತದೆ ಎನ್ನುವುದು ಪೌಷ್ಠಿಕ ತಜ್ಞರ ಅಭಿಪ್ರಾಯ. ವಿಜ್ಞಾನಿಗಳು ಕೊಲೊಕೇಶಿಯ ಎಸ್ಕುಲೆಂಟಾ ಎಂದು ಹೆಸರಿಸಿರುವ  ಈ ಗಿಡದಲ್ಲಿ ಕೀಟಗಳನ್ನು ದೂರವಿಡುವ ರಾಸಾಯನಿಕಗಳೂ ಇವೆ ಎನ್ನುತ್ತಾರೆ ರಾಜಶೇಖರ್.

ಸಸ್ಯಮೂಲದ ಹಲವು ರಾಸಾಯನಿಕಗಳನ್ನು ಕೀಟನಾಶ ಮಾಡಲು ಬಳಸಲಾಗುತ್ತಿದೆ. ಉದಾಹರಣೆಗೆ, ಬೇವಿನಲ್ಲಿರುವ ಅಜಾಡಿರಾಕ್ಟಿನ್. ಇದನ್ನು ಇತರೆ ವಸ್ತುಗಳ ಜೊತೆಗೆ ಬೆರೆಸಿ ಕೀಟಗಳನ್ನು ನಿಯಂತ್ರಿಸಲು ಉಪಯೋಗಿಸುತ್ತಿದ್ದಾರೆ. ಅದೇ ರೀತಿಯಲ್ಲಿ ಕರ್ನಾಟಕದ ಬಯಲುಗಾಡುಗಳಲ್ಲಿ ಕಾಣಬರುವ ಮಾಕಳಿಬೇರಿ (ಡೆಕಾಲೆಪಿಸ್ ಹ್ಯಾಮಿಲ್ಟೋನಿ) ನಲ್ಲಿಯೂ ಕೀಟಗಳನ್ನು ಬೆದರಿಸುವ ರಾಸಾಯನಿಕಗಳಿವೆಯೆಂದು ಗುರುತಿಸಲಾಗಿದೆ. ಸಾಧಾರಣ ಸೊಳ್ಳೆಗಳನ್ನು ದೂರವಿಡಲು ಬಳಸುವ ಸ್ಪ್ರೇಗಳಲ್ಲಿ ಚೆಂಡುಮಲ್ಲಿಗೆ ಹೂವಿನಲ್ಲಿರುವ ಪೈರೆತ್ರಿನ್ ರಾಸಾಯನಿಕವನ್ನು ಉಪಯೋಗಿಸುತ್ತಾರೆ.

ಇವೆಲ್ಲವೂ ಇರುವಾಗ ಹೊಸ ರಾಸಾಯನಿಕವೇಕೆ? ರಾಜಶೇಖರ್ ಅವರ ಪ್ರಕಾರ ಆಹಾರ ಪದಾರ್ಥಗಳನ್ನು ಶೇಖರಿಸಿಡಲು ಇವ್ಯಾವುವೂ ಉಪಯುಕ್ತವಲ್ಲ.  ಪೈರೆತ್ರಿನ್ ಆಹಾರ ವಸ್ತುಗಳಲ್ಲಿ ಬಳಸಲು ಯೋಗ್ಯವಲ್ಲ. ಬೇವಿನ ರಾಸಾಯನಿಕ ಗಾಳಿಯಲ್ಲಿ ಆವಿಯಾಗದೆ ಇರುವುದರಿಂದ ಧಾನ್ಯಗಳಲ್ಲಿ ಬೆರೆಸಿಟ್ಟರೂ ನಿಷ್ಪ್ರಯೋಜಕ. ಹೀಗಾಗಿ ಧಾನ್ಯಗಳನ್ನು ಕೂಡಿಡುವುದಕ್ಕೆ ಸುಲಭವಾಗಿ ಆವಿಯಾಗುವಂತಹ ಕೀಟನಾಶಿಯ ಅವಶ್ಯಕತೆ ಇದೆ. ಇದಕ್ಕಾಗಿ ನಡೆದಿರುವ ಶೋಧಗಳಲ್ಲಿ ಕೆಸುವಿನ ದಂಟಿನ ರಾಸಾಯನಿಕವೂ ಕೂಡಿದೆ.

colocasia_esculenta_dsc07801

ಕೆಸುವಿನ ಗೆಡ್ಡೆ

ಕೆಸುವಿನ ಗೆಡ್ಡೆಯಿಂದ ವಿವಿಧ ರಾಸಾಯನಿಕಗಳನ್ನು ಬಳಸಿ ಪ್ರತ್ಯೇಕಿಸಿದ ಘಟಕಗಳಲ್ಲಿ ಮೆಥನಾಲ್ ನಲ್ಲಿ ಕರಗುವ ವಸ್ತುವೊಂದು ಅತಿ ಹೆಚ್ಚಿನ ಕೀಟಾಹಾರಿ ಗುಣವನ್ನು ತೋರಿಸಿತು. ಇದನ್ನು ಪ್ರತ್ಯೇಕಿಸಿ, ಶುದ್ಧಗೊಳಿಸಿದ ರಾಜಶೇಖರ್ ತಂಡ ಅದರ ರಚನೆಯನ್ನೂ ಪತ್ತೆ ಮಾಡಿ, ಅದು 2,3-ಡೈಮೀಥೈಲ್ ಮ್ಯಾಲೆಯಿಕ್ ಅನ್ ಹೈಡ್ರೈಡ್ ಎಂದು ಗುರುತಿಸಿದೆ. ಇದು ಕೂಡಿಟ್ಟ ಧಾನ್ಯಗಳನ್ನು ಸಾಮಾನ್ಯವಾಗಿ ಕಾಡುವ ನೊಣ, ಜಿರಲೆ, ಹಿಟ್ಟಿನ ಹುಳಗಳನ್ನು ಕೃತಕ ರಾಸಾಯನಿಕ ಮೀಥೈಲ್ ಬ್ರೋಮೈಡ್ ಹಾಗೂ ಫಾಸ್ಫೀನ್ ನಷ್ಟೆ ಸಮರ್ಥವಾಗಿ ಕೊಲ್ಲಬಲ್ಲದು. ಒಂದೇ ರಾಸಾಯನಿಕ ಹಲವು ಕೀಟಗಳನ್ನು ಕೊಲ್ಲುವುದು ನಿಜಕ್ಕೂ ಲಾಭಕಾರಿ. ಕೆಸುವಿನ ಗೆಡ್ಡೆಯ  ಈ ಅಂಶವನ್ನು ಪ್ರಯೋಗಿಸಿದ ಎರಡೇ ದಿನಗಳಲ್ಲಿ ಧಾನ್ಯಗಳಲ್ಲಿದ್ದ ಕೀಟಗಳ ಸಂಖ್ಯೆ ಅರೆಪಾಲಾಯಿತು. ಹಾಗೆಯೇ, ಇದು ಕೀಟಗಳ ಮರಿ (ಹುಳು) ಗಳನ್ನೂ ಬೆಳೆಯಗೊಡಲಿಲ್ಲವಂತೆ. ಇಷ್ಟಾದರೂ, ಈ ರಾಸಾಯನಿಕ ಬೆರೆಸಿದ ಬೀಜಗಳು ಯಾವುದೇ ಆತಂಕವಿಲ್ಲದೆ ನೂರಕ್ಕೆ ತೊಂಬತ್ತು ಪಾಲು ಮೊಳೆತವು. ಅರ್ಥಾತ್, ಕೀಟಗಳನ್ನು ಕೊಲ್ಲುವುದಲ್ಲದೆ, ಬೀಜಗಳಿಗೆ ಇದರಿಂದ ಯಾವ ಹಾನಿಯೂ ಇಲ್ಲ.

ಮೆಕ್ಕೆಜೋಳವನ್ನು ಕಾಡುವ ಹುಳು, ಗೋದಿಹಿಟ್ಟನ್ನು ಹಾಳುಗೆಡವುವ ಹುಳು, ನೊಣ ಮತ್ತು ಜಿರಲೆಗಳ ಕಾಟವನ್ನು ತಡೆಯಲು ಇದು ಶಕ್ತವೇನೋ ಹೌದು. ಆದರೆ ಆಹಾರದಲ್ಲಿ ಉಪಯೋಗಿಸಿದರೆ ಅಪಾಯವಿಲ್ಲವೇ? ಎಂದಿರಾ. ಇದನ್ನು ಪಡೆದ ಗೆಡ್ಡೆಯನ್ನು ನಾವು ಆಹಾರವಾಗಿ ಬಳಸುವುದು ಇದ್ದೇ ಇದೆ. ಹೀಗಾಗಿ ಆ ಗೆಡ್ಡೆಯಲ್ಲಿರುವ ರಾಸಾಯನಿಕ ನಮಗಂತೂ ಅಪಾಯಕಾರಿಯಾಗಿರಲಿಕ್ಕಿಲ್ಲ ಎನ್ನುವುದು ಸಾಮಾನ್ಯ ಅಭಿಪ್ರಾಯ.

ಹಾಗಿದ್ದರೆ ಇದು ಯಾವಾಗ ಬಳಕೆಗೆ ಸಿಗಬಹುದು ಎನ್ನುವುದು ಮುಂದಿನ ಪ್ರಶ್ನೆ. ಇನ್ನು ಇದರ ಕ್ಷಮತೆ ಹಾಗೂ ಬಳಕೆಯ ವಿಧಾನಗಳು ಹದಗೊಳ್ಳಬೇಕು. ಅನಂತರವಷ್ಟೆ ಇದರ ಸಾರ್ವತ್ರಿಕೆ ಬಳಕೆಯ ಸುದ್ದಿ. ಅದಕ್ಕೆ ಇನ್ನೂ ಹಲವು ತಿಂಗಳೋ, ವರ್ಷಗಳೋ ಕಾಯಬೇಕಷ್ಟೆ.

ಆಕರ:

Rajashekar, Y. et al. 2, 3-Dimethylmaleic anhydride (3, 4-Dimethyl-2, 5-furandione): A

plant derived insecticidal molecule from Colocasia esculenta var. esculenta (L.) Schott. Sci. Rep. 6, 20546; published 3rd February 2016.  doi: 10.1038/srep20546 (2016).

 

Published in: on ಫೆಬ್ರವರಿ 4, 2016 at 5:30 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಜೀಕಾ ವೈರಸ್. ಏನಿದು?

ಜೀಕಾ ಎನ್ನುವ ಹೆಸರು ಕೇಳಿ ಟಾಟಾ ಕಂಪೆನಿ ತನ್ನ ಹೊಸ ಕಾರಿಗೆ ಇಟ್ಟಿದ್ದ  ಇದೇ ಹೆಸರನ್ನು ಬದಲಿಸಲಿದೆ. ಬ್ರೆಜಿಲ್್ ದೇಶದಲ್ಲಿ ಹರಡಿರುವ ಜೀಕಾ ವೈರಸ್ ಉಂಟು ಮಾಡಿರುವ ಭೀತಿ ಇದು. ವಿಶ್ವ ಆರೋಗ್ಯ ಸಂಸ್ಥೆ ಈ ವೈರಸ್ ಸೋಂಕನ್ನು ಜಾಗತಿಕ ಸಾಂಕ್ರಾಮಿಕ ರೋಗ  ಎಂದು ವರ್ಗೀಕರಿಸಿದೆ. ಹಾಗೆಯೇ ಭಾರತವೂ ಕೂಡ ಸದ್ಯಕ್ಕೆ ಜೀಕಾ ಧಾಂದಲೆ ನಡೆಸುತ್ತಿರುವ ರಾಷ್ಟ್ರಗಳಿಗೆ ಪ್ರವಾಸ ಹೋಗುವ ಬಗ್ಗೆ, ವಿಶೇಷವಾಗಿ ಗರ್ಭಿಣಿ ಮಹಿಳೆಯರಿಗೆ, ಎಚ್ಚರಿಕೆಯ ಸೂಚನೆಯನ್ನು ನೀಡಿದೆ. ಜೀಕಾ ಸೋಂಕು ಹತ್ತಿದ ಬಸುರಿಯರಿಗೆ ಹುಟ್ಟುವ ಮಗು ಮೈಕ್ರೊಕೆಫಾಲಿ ಎನ್ನುವ ದೋಷವನ್ನು ಹೊತ್ತು ಜನಿಸಬಹುದೆನ್ನುವುದೂ ಈ ಭೀತಿಗೆ ಕಾರಣ. ಮೈಕ್ರೊಕೆಪಾಲಿ ಮಾರಕವಲ್ಲ. ಮಗು ಬದುಕು ಉಳಿಯುತ್ತದೆ. ಆದರೆ ಅದರ ಮಿದುಳಿನ ಕ್ಷಮತೆ ಕಡಿಮೆಯಾಗಬಹುದು. ಸಾಮಾನ್ಯ ಬದುಕಿಗೆ ತೊಂದರೆ ಆಗದಿದ್ದರೂ, ಬೌದ್ಧಿಕ ಕೊರತೆ ಕಾಣಿಸಬಹುದು. ಇದೋ ಈ ಭೀತಿಯನ್ನುಂಟು ಮಾಡಿದ ಜೀಕಾ ವೈರಸ್ ಬಗ್ಗೆ ಇತ್ತೀಚೆಗೆ ಸೈನ್ಸ್ ಪತ್ರಿಕೆಯಲ್ಲಿ ಪ್ರಕಟವಾದ ಲೇಖನವೊಂದರ ಅನುವಾದ  ನಿಮಗಾಗಿ.

ಜೀಕಾ ವೈರಸ್ ಎಲ್ಲಿಂದ ಬಂತು?

zika-virus

ಜೀಕಾ ವೈರಸ್ ಸ್ವರೂಪ

1947ನೇ ಇಸವಿಯಲ್ಲಿ ಜೀಕಾ ವೈರಸ್ ಶೋಧವಾಯಿತು. 1952ರಲ್ಲಿ ಮೊತ್ತ ಮೊದಲ ಬಾರಿಗೆ ಇದರ ವಿವರಗಳನ್ನು ಪ್ರಕಟಿಸಲಾಗಿತ್ತು. ಈ ವೈರಸ್ ಆಫ್ರಿಕಾ ಹಾಗೂ ಆಗ್ನೇಯ ಏಶಿಯಾದಲ್ಲಿ ಇದ್ದದ್ದು ತಿಳಿದಿದ್ದರೂ, ಕಳೆದ ದಶಕದ ವರೆಗೆ ಕೇವಲ ಹದಿನೈದು ಕೇಸುಗಳ ಉಲ್ಲೇಖವಷ್ಟೆ ಇದ್ದುವು. 2007ರಲ್ಲಿ ಮೈಕ್ರೊನೇಶಿಯಾ ಸಂಯುಕ್ತ ಸಂಸ್ಥಾನದ ದ್ವೀಪಗಳಲ್ಲೊಂದಾದ ಯಾಪ್ ನಲ್ಲಿ ಇದು ಸಾಂಕ್ರಾಮಿಕವಾಗಿ ಕಾಣಿಸಿಕೊಂಡಿತು. ಅಂದಿನಿಂದ ಶಾಂತಸಾಗರದ ವಿವಿಧ ದ್ವೀಪಗಳಲ್ಲಿ ಪಯಣಿಸಿದ  ಇದು ಕೊನೆಗೆ ಬ್ರೆಜಿಲ್ ತಲುಪಿತು. ಇಲ್ಲಿಂದ ಈ ವೈರಸ್ ಅತಿ ಶೀಘ್ರವಾಗಿ ದಕ್ಷಿಣ ಅಮೆರಿಕಾ, ಮಧ್ಯ ಅಮೆರಿಕ, ಮೆಕ್ಸಿಕೋ ಹಾಗೀ ಕೆರಿಬಿಯನ್ ದ್ವೀಪ ಸಮೂಹಗಳಿಗೆ ಹರಡಿದೆ.

ಈಗ ಇದು ಹೀಗೆ ವಿಸ್ಫೋಟಿಸಲು ಕಾರಣವೇನು?

ಈ ಹಿಂದೆಯೂ ಆಫ್ರಿಕಾ ಹಾಗೂ ಏಶಿಯಾದಲ್ಲಿ ಜೀಕಾ ವೈರಸ್ ನ ರೋಗ ಹರಡಿದ್ದಿರಬಹುದಾದರೂ ಅವು ಗಮನಕ್ಕೆ ಬಾರದೇ ಹೋದುವು. ವಿಜ್ಞಾನಿಗಳೂ ಇದರತ್ತ ಗಮನ ಹರಿಸಲಿಲ್ಲ. ಇಂದು ಕಾಣಿಸಿಕೊಂಡ ಬೃಹತ್ ಸೋಂಕು ಎಂದಾದರೊಂದು ದಿನ ಆಗಲೇಬೇಕಿತ್ತು. ಲ್ಯಾಟಿನ್ ಅಮೆರಿಕದಲ್ಲಿ ಹಳದಿ ಜ್ವರದ ಸೊಳ್ಳೆ ಎಂದೇ ಹೆಸರಾದ ಹಾಗೂ ಜೀಕಾ ವೈರಸ್ ಹರಡುವ ಪ್ರಮುಖ ಕೀಟ ಏಡಿಸ್ ಈಜಿಪ್ಟಿ ವ್ಯಾಪಕವಾಗಿದೆ. (ಇತ್ತೀಚೆಗೆ ಪ್ರಪಂಚದ ಹಲವೆಡೆ ಸಂಖ್ಯೆಯಲ್ಲಿ ಹೆಚ್ಚುತ್ತಿರುವ ಏಶಿಯಾದ ಟೈಗರ್ ಸೊಳ್ಳೆ ಏಡಿಸ್ ಆಲ್ಬೊಪಿಕ್ಟಸ್ ಕೂಡ ಇದರ ವಾಹಕವಿರಬಹುದೆಂಬ ಊಹೆ ಇದೆ). ಜೊತೆಗೆ ಅಮೆರಿಕದಲ್ಲಿ ಯಾರಿಗೂ ಇದನ್ನೆದುರಿಸುವ ರೋಗನಿರೋಧಕತೆ ಇರಲಿಲ್ಲ. ಪ್ರವಾಸಗಳು ಇದು ಹರಡಲು ನೆರವಾದವು. ಏಡಿಸ್ ಸೊಳ್ಳೆಗಳು ಕೆಲವು ನೂರು ಮೀಟರುಗಳಷ್ಟು ದೂರವಷ್ಟೆ ಪಯಣಿಸಬಲ್ಲುವು. ಆದರೆ ಜೀಕಾ ಸೋಂಕಿರುವ ಮನುಷ್ಯರು ಕಾರು, ಬಸ್ಸು, ರೈಲು, ವಿಮಾನಗಳನ್ನು ಹತ್ತಿ ಪ್ರವಾಸ ಮಾಡಿದಂತೆಲ್ಲ, ಇದು ದೇಶ ವಿದೇಶಗಳಿಗೆ ಹರಡುತ್ತಿದೆ. ಇವೆಲ್ಲ ಕಾರಣಗಳಿಂದಾಗಿ ವೈರಸ್ ದೂರ, ದೂರಕ್ಕೂ ಹರಡಿದೆ.

ಜೀಕಾ ಯುರೋಪು ಮತ್ತು ಅಮೆರಿಕಾದಲ್ಲೂ ಹರಡೀತೇ?

ಯುರೋಪು ಹಾಗೂ ಅಮೇರಿಕದಲ್ಲಿ ಈಗಾಗಲೇ ಕೆಲವು ‘ಆಮದಾದ’ ಕೇಸುಗಳಿವೆ. ಈ ರೋಗಿಗಳು ಜೀಕಾ ಸೋಂಕಿರುವ ದೇಶಗಳಿಂದ ಪ್ರವಾಸ ಬಂದವರು. ಲ್ಯಾಟಿನ್ ಅಮೆರಿಕದಲ್ಲಿ ಈ ರೋಗದ ವ್ಯಾಪ್ತಿಯನ್ನು ಗಮನಿಸಿದರೆ ಇದು ನಿರೀಕ್ಷಿಸಿದ ಫಲಿತಾಂಶವೇ ಸರಿ.  ಸ್ಥಳೀಯವಾಗಿ ಏನಾದರೂ ಸೋಂಕು ಹರಡಬಹುದೇ? ವ್ಯಕ್ತಿಯಿಂದ ವ್ಯಕ್ತಿಗೆ ಸೊಳ್ಳೆಗಳು ಇದನ್ನು ಹರಡುತ್ತಿರಬಹುದೇ ಎನ್ನುವುದೇ ಪ್ರಮುಖ ಪ್ರಶ್ನೆ. ಈ ಸಾಧ್ಯತೆ ಖಂಡಿತ ಇದೆ. ದಕ್ಷಿಣ ಯುರೋಪಿನ ಹಲವು ರಾಷ್ಟ್ರಗಳಲ್ಲಿ ಏಡಿಸ್ ಆಲ್ಬೊಪಿಕ್ಟಸ್ ಇದೆ. ಇದು ಉತ್ತರ ಯುರೋಪಿಗೂ ವಿಸ್ತರಿಸಬಹುದು. ಅಮೆರಿಕೆ ಸಂಯುಕ್ತ ಸಂಸ್ಥಾನದ ದಕ್ಷಿಣ ಹಾಗೂ ಪೂರ್ವ ರಾಜ್ಯಗಳಲ್ಲಿಯೂ ಏಡಿಸ್ ಈಜಿಪ್ಟಿ ಹಾಗೂ ಏಡಿಸ್ ಆಲ್ಬೊಪಿಕ್ಟಸ್ ಸೊಳ್ಳೆಗಳನ್ನು ಕಾಣಬಹುದು.

ಸೊಳ್ಳೆಗಳಿಂದ ಹರಡುವ ರೋಗಗಳ ಬಗೆಗಿನ ಈ ಹಿಂದಿನ ಅನುಭವಗಳ ಆಧಾರದ ಮೇಲೆ ಉಳಿದೆಡೆಗಳಿಗಿಂತ ಈ ಪ್ರದೇಶಗಳಲ್ಲಿ ಸಾಂಕ್ರಾಮಿಕತೆ ಕಡಿಮೆಯಿರುತ್ತದೆಯೆಂದು ವಿಜ್ಞಾನಿಗಳ ನಿರೀಕ್ಷೆ. ಇತ್ತೀಚೆಗೆ ಫ್ಲಾರಿಡಾ, ಟೆಕ್ಸಾಸ್ ಹಾಗೂ ಹವಾಯಿ ರಾಜ್ಯಗಳಲ್ಲಿ ಕಾಣಿಸಿಕೊಂಡ ಡೆಂಘೀ ಜ್ವರ ಕೆಲವು ನೂರು ಜನರಿಗೆ ಖಾಯಿಲೆ ತಂದಿದೆಯಷ್ಟೆ. ಉತ್ತರ ಇಟಲಿಯಲ್ಲಿ 2007 ರಲ್ಲಿ ಕಾಣಿಸಿಕೊಂಡ ಸೊಳ್ಳೆಯಿಂದ ಹರಡುವ ಚಿಕುನ್ ಗುನ್ಯ ಖಾಯಿಲೆ (ಈ ಸೋಂಕನ್ನು ಭಾರತೀಯನೊಬ್ಬ ಹೊತ್ತು ತಂದಿದ್ದ) ಸುಮಾರು 197 ಜನರನ್ನು ತಾಕಿತಷ್ಟೆ. ಈ ದೇಶಗಳಲ್ಲಿ ಸೋಂಕಿನ ವ್ಯಾಪ್ತಿ ಕಡಿಮೆ ಇರುವುದಕ್ಕೆ ಒಂದು ಕಾರಣ ಇಲ್ಲಿಯ ಜನತೆ ದಿನದಲ್ಲಿ ಅತಿ ಕಡಿಮೆ ಸಮಯವನ್ನು ಮನೆಯಿಂದ ಹೊರಗಡೆ ಕಳೆಯುತ್ತಿರುವುದು ಇರಬಹುದು.

ಜೀಕಾ ಹುಟ್ಟಿನಿಂದಲೇ ಬರುವ ದೋಷಗಳನ್ನು ಹೆಚ್ಚಿಸುತ್ತಿದೆ ಎನ್ನುವುದು ಖಾತ್ರಿಯಾಗಿದೆಯೇ?

original_microcephaly

ಮೈಕ್ರೊಕೆಫಾಲಿ ಎಂದರೇನು?

ಇಲ್ಲ. ಆದರೆ ಜೀಕಾ ವೈರಸ್ ಬಾಧೆ ತೀವ್ರವಾಗಿರುವ ಬ್ರೆಜಿಲ್ ನಲ್ಲಿ ಇದಕ್ಕೆ ಪೂರಕವಾಗಿ ಸಾಂದರ್ಭಿಕ ಪುರಾವೆಗಳಿವೆ. ಇಲ್ಲಿ ಮೈಕ್ರೊಕೆಫಾಲಿ (ಸಣ್ಣತಲೆ) ಎನ್ನುವ ದೋಷವಿರುವ ಮಕ್ಕಳ ಹುಟ್ಟು ಹೆಚ್ಚಾಗಿದೆ. ಈ ದೋಷದಲ್ಲಿ ಮಿದುಳಿನ ಬೆಳವಣಿಗೆ ಕುಂಠಿತವಾಗುವುದರಿಂದ ಸಾಮಾನ್ಯಕ್ಕಿಂತಲೂ ಕಡಿಮೆ ಗಾತ್ರದ ತಲೆ ಬೆಳೆಯುತ್ತದೆ. ಇದನ್ನು ಖಾತ್ರಿ ಮಾಡಿಕೊಳ್ಳಲು ಗರ್ಭಿಣಿ ಮಹಿಳೆಯರ ಮೇಲೆ ಕೈಗೊಂಡಿರುವ ಅಧ್ಯಯನದ ಫಲಿತಾಂಶಗಳು ಸಿಗಲು ಇನ್ನೂ ಹಲವು ತಿಂಗಳುಗಳಾಗಬಹುದು. ಕಳೆದ ಜೂನ್ ಮತ್ತು ಜುಲೈನಲ್ಲಿ ಇಲ್ಲಿನ ಗರ್ಭಿಣಿ ಮಹಿಳೆಯರನ್ನು ಅಲ್ಟ್ರಾಸೌಂಡ್ ಬಳಸಿ ಪರೀಕ್ಷಿಸುತ್ತಿದ್ದಾಗ ಮೈಕ್ರೊಕೆಫಾಲಿ ಸಂಖ್ಯೆ ಹೆಚ್ಚಿದ್ದದ್ದನ್ನು ಬ್ರೆಜಿಲ್ಲಿನ ವೈದ್ಯರು ಗಮನಿಸಿದ್ದರು. ಇದು ಇದ್ದಕ್ಕಿದ್ದ ಹಾಗೆ ಜೀಕಾ ರೋಗ ಹೆ್ಚ್ಚಾದ ಕೆಲವು ತಿಂಗಳ ನಂತರವಷ್ಟೆ. ಇಲ್ಲಿನ ಬಾಹಿಯಾದಲ್ಲಿರುವ ರಾಷ್ಟ್ರೀಯ ವಿವಿಯ ಗರ್ಭವಿಜ್ಞಾನ ತಜ್ಞ ಮಾನೋಯಿಲ್ ಸಾರ್ನೋ ಹೇಳುವ ಪ್ರಕಾರ ಈಗ ಕಾಣಿಸಿಕೊಳ್ಳುತ್ತಿರುವ ಮಿದುಳಿನ ದೋಷಗಳು ಸೈಟೊಮೆಗಾಲೊ ವೈರಸ್ ಹಾಗೂ ರುಬೆಲ್ಲಾ ವೈರಸ್ಸಿನಂತಹ ಇತರೆ ಸೋಂಕುಗಳುಂಟು ಮಾಡುವುದರಿಂದ ಭಿನ್ನವಾಗಿವೆ. ಕಳೆದ ಆಗಸ್ಟ್ ನಲ್ಲಿ ಈತನ ತಂಡ ಜೀಕಾ ಸೋಂಕಿರುವ ಗರ್ಭಿಣಿಯರ ಅಧ್ಯಯನವನ್ನು ಆರಂಭಿಸಿದೆ. ಇದರ ಫಲಿತಾಂಶ ಮುಂದಿನ ಬೇಸಗೆಯ ವೇಳೆಗೆ ದೊರೆಯಬಹುದು. ಬ್ರೆಜಿಲ್ ಮತ್ತು ಕೊಲಂಬಿಯಾದಲ್ಲಿ ಬೇರೆ ಕಡೆಗಳಲ್ಲಿಯೂ ಇಂತಹುದೇ ಅಧ್ಯಯನಗಳು ಆರಂಭವಾಗಿವೆ.

ವಿಜ್ಞಾನಿಗಳಿಗೆ ಈ ಬಗ್ಗೆ ಇರುವ ಇತರೆ ಪ್ರಶ್ನೆಗಳು ಯಾವುವು?

ಬಹಳಷ್ಟು ಪ್ರಶ್ನೆಗಳಿವೆ. ಯಾರಿಗೆ ಸೋಂಕಿದೆ, ಯಾರಿಗೆ ಇಲ್ಲ ಎನ್ನುವುದನ್ನು ಪತ್ತೆ ಮಾಡುವುದು ಕಷ್ಟವಾಗಿದೆ. ಏಕೆಂದರೆ ವೈರಸ್ ಪತ್ತೆ ಮಾಡುವ ವಿಧಾನಗಳು ಪಕ್ವವಾಗಿಲ್ಲ. ರೋಗಿಯ ರಕ್ತದಲ್ಲಿ ವೈರಸ್ಸಿನ ಆರ್ ಎನ್ ಎ ಯ ಅವಶೇಷಗಳನ್ನು ಹುಡುಕುವುದು ಅತಿ ಖಚಿತವಾದ ಪತ್ತೆ ಪರೀಕ್ಷೆ. ಆದರೆ ಇವು ರೋಗಲಕ್ಷಣಗಳು ಕಾಣಿಸಿಕೊಂಡ ಒಂದು ವಾರದೊಳಗೆ ನಡೆದರೆ ಮಾತ್ರ ಫಲ ನೀಡುತ್ತವೆ. ಅನಂತರ ರಕ್ತದಲ್ಲಿರುವ ಪ್ರತಿಕಾಯ (ಆಂಟಿಬಾಡಿ) ಗಳನ್ನು ಪತ್ತೆ ಮಾಡಬಹುದು. ಆದರೆ ಸದ್ಯಕ್ಕೆ ಜೀಕಾ ವೈರಸ್ಸಿನ ಆಂಟಿಬಾಡಿಗಳನ್ನು ಪತ್ತೆ ಮಾಡುವ ಪರೀಕ್ಷೆಗಳು ಬ್ರೆಜಿಲ್ ಹಾಗೂ ಲ್ಯಾಟಿನ್ ಅಮೆರಿಕದ ಬಹುತೇಕ ಪ್ರದೇಶದಲ್ಲಿ ವ್ಯಾಪಕವಾಗಿ ಹರಡಿರುವ ಡೆಂಘೀ ವೈರಸ್ಸಿನ ಆಂಟಿಬಾಡಿಗಳ ಜೊತೆಗೂ ಪ್ರತಿಕ್ರಿಯಿಸುತ್ತದೆ. ಈ ಪ್ರದೇಶಗಳ ಬಹುತೇಕ ವಯಸ್ಕರ ದೇಹದಲ್ಲಿ ಡೆಂಘೀ ಆಂಟಿಬಾಡಿಗಳು ಇದ್ದೇ ಇವೆ. ಹೀಗಾಗಿ ಮೈಕ್ರೊಕೆಫಾಲಿ ಇರುವ ಮಗುವಿಗೆ ಜನ್ಮ ನೀಡಿದ ತಾಯಿ ಬಸುರಿಯಾಗಿದ್ದಾಗ ಜೀಕಾದ ಸೋಂಕೇ ಇತ್ತೇ ಎನ್ನುವುದನ್ನು ತಿಳಿಯುವುದು ಕಷ್ಟವಾಗಿದೆ.

ಲೈಂಗಿಕ ಸಂಪರ್ಕದಿಂದ ಜೀಕಾ ಹರಡುತ್ತದೆಯೋ ಎನ್ನುವುದನ್ನು ಸಂಶೋಧಕರು ತಿಳಿಯಬೇಕಿದೆ. 2008ರಲ್ಲಿ ಆಫ್ರಿಕಾದಲ್ಲಿ ಈ ಸೋಂಕನ್ನು ಪಡೆದ ಅಮೆರಿಕೆಯ ವೈದ್ಯನೊಬ್ಬ ಅನಂತರ ತನ್ನ ಮಡದಿಗೆ ಇದನ್ನು ಸೋಂಕಿಸಿದ್ದ. ಇದೇ ಬಗೆಯಲ್ಲಿ ಲೈಂಗಿಕ ಸಂಪರ್ಕದಿಂದ ಸೋಂಕುಂಟಾಗಿರುವ ಮತ್ತೊಂದು ಘಟನೆ ಪಾಲಿನೇಶಿಯಾ ದ್ವೀಪಗಳಲ್ಲಿ 2013 ರಲ್ಲಿ ವರದಿಯಾಗಿದೆ. ಇದರಿಂದಾಗಬಹುದಾದ ಅಪಾಯಗಳ ಅರಿವು ಸದ್ಯಕ್ಕೆ ವೈದ್ಯರಿಗಿಲ್ಲ. (ನನಗೇನಾದರೂ ವೈರಸ್ ಸೋಂಕಿದರೆ, ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಮುನ್ನ ಒಂದೆರಡು ತಿಂಗಳಾದರೂ ಕಾಯುತ್ತೇನೆ ಎಂದು ನ್ಯೂ ಯಾರ್ಕ್ ಟೈಮ್ಸ್ ಗೆ ತಿಳಿಸಿದ್ದಾರೆ ಅಮೆರಿಕೆಯ ಗ್ಯಾಲ್ವೆಸ್ಟನ್ನಿನಲ್ಲಿರುವ ಟೆಕ್ಸಾಸ್ ವಿವಿಯ ವೈರಸ್ ತಜ್ಞ ಸ್ಕಾಟ್ ವೀವರ್)

ಜೀಕಾ ಚಿಕಿತ್ಸೆಗೆ ಯಾವ ಔಷಧಗಳು ಲಭ್ಯವಿವೆ?

ಯಾವುದೂ ಇಲ್ಲ. ಕಳೆದ ವರ್ಷದವರೆಗೂ ಜೀಕಾ ಎಷ್ಟು ಅಪರೂಪವಾದ ಸೋಂಕಾಗಿತ್ತೆಂದರೆ ಅದು ಇಷ್ಟು ಗಂಭೀರವೆಂದು ಯಾರೂ ಊಹಿಸಿರಲಿಲ್ಲ. ಹೀಗಾಗಿ ಅದಕ್ಕಾಗಿ ಔಷಧಗಳನ್ನು ಹುಡುಕಲು ಯಾರೂ ಪ್ರಯತ್ನಿಸಿರಲೂ ಇಲ್ಲ. ಈಗಲೂ ಈ ವೈರಸ್ ಹೀಗೆ ದಾಳಿ ನಡೆಸಿರುವಾಗಲೂ ಅದನ್ನು ಎದುರಿಸುವ ಔಷಧಗಳಿಗೆ ಬೃಹತ್ ಮಾರುಕಟ್ಟೆ ದೊರೆಯಬಹುದೆಂಬ ಖಾತ್ರಿ ಇಲ್ಲ. ಏಕೆಂದರೆ ಇದರ ಸೋಂಕಿರುವ ಬಹುತೇಕ ಜನರಲ್ಲಿ ಸೋಂಕಿರಬಹುದಾದ ಯಾವುದೇ ಲಕ್ಷಣಗಳೂ ಕಾಣುವದಿಲ್ಲ, ಕಂಡರೂ ಅತ್ಯಲ್ಪ. ಜೊತೆಗೆ ಔಷಧಗಳು ಬಸುರಿನಲ್ಲಿ ಜೀಕಾ ಸೋಂಕಿದಾಗ ಹುಟ್ಟುವ ಮಕ್ಕಳಲ್ಲಿ ಕಾಣುವ ದೋಷಗಳನ್ನು ತಡೆಯಬಲ್ಲುವು ಎನ್ನುವುದೂ ಸ್ಪಷ್ಟವಾಗಿಲ್ಲ. ಸೋಂಕುಂಟಾಗಿ ಅವರಲ್ಲಿ ಲಕ್ಷಣಗಳು ಕಾಣಿಸಿಕೊಳ್ಳುವ ಹೊತ್ತಿಗೆ ಬಹಳ ತಡವಾಗಿಬಿಟ್ಟಿರುತ್ತದೆ. ಮೈಕ್ರೊಕೆಫಾಲಿಯನ್ನು ತಡೆಯಲು ಜೀಕಾ ವಿರುದ್ಧದ ಲಸಿಕೆಯೊಂದೇ ಹಾದಿ.

ಲಸಿಕೆ ಯಾವಾಗ ಸಿದ್ಧವಾಗಬಹುದು?

ಅದಕ್ಕೆ ವರ್ಷಗಳೇ ಬೇಕಾಗುತ್ತದೆ. ಜೀಕಾ ಲಸಿಕೆಗಳ ಶೋಧದಲ್ಲಿ ಹಲವರು ತೊಡಗಿಕೊಂಡಿದ್ದಾಋಎ. ಕನಿಷ್ಟ ಹತ್ತಾರು ತಿಂಗಳಾದರೂ ಬೇಕು. ಇವೆಲ್ಲವೂ ಸದ್ಯದಲ್ಲಿ ಲಭ್ಯವಿರುವ ಲಸಿಕೆಗಳ ತಂತ್ರವನ್ನೇ ಅವಲಂಬಿಸಿವೆ. ಉದಾಹರಣೆಗೆ, ರೋಗಜೀವಿಯಲ್ಲಿರುವ ಪ್ರೊಟೀನುಗಳನ್ನು ಅಪಾಯಕಾರಿಯಲ್ಲದ ಇತರೆ ವೈರಸ್ ಜೊತೆಗೆ ಕೂಡಿಸಿ ಹಲವು ರೋಗಗಳಿಗೆ ಲಸಿಕೆಗಳನ್ನು ತಯಾರಿಸುತ್ತಾರೆ. ಇಂತಹ ವೈರಸ್ಗಳನ್ನೇ ಉಪಯೋಗಿಸಿಕೊಂಡು ಜೀಕಾಗೂ ಲಸಿಕೆಯನ್ನು ತಯಾರಿಸುವ ಪ್ರಯತ್ನಗಳು ನಡೆದಿವೆ. ಹೀಗೆ ಫಲ ನೀಡಬಲ್ಲ ಲಸಿಕೆಯೊಂದು ಸಿದ್ಧವಾದ ಮೇಲೆ ಅದನ್ನು ಪ್ರಾಣಿಗಳಲ್ಲಿ ಮೊದಲು ಪರೀಕ್ಷಿಸಿ ಅನಂತರ ಮನುಷ್ಯರಲ್ಲಿ ಪ್ರಯೋಗಿಸಬೇಕು. ಮನುಷ್ಯರಲ್ಲು ಮೊದಲಿಗೆ ಅವುಗಳ ಸುರಕ್ಷತೆಯ ಬಗ್ಗೆ ಸಣ್ಣ ಪರೀಕ್ಷೆಗಳನ್ನು ನಡೆಸಿ ಅನಂತರ ಲಸಿಕೆಗಳು ನಿಜವಾಗಿಯೂ ಫಲಕಾರಿಯೇ ಎನ್ನುವುದರ ಪರೀಕ್ಷೆಯನ್ನು ದೊಡ್ಡ ಮಟ್ಟದಲ್ಲಿ ಮಾಡಬೇಕಾಗುತ್ತದೆ. ಇವೆಲ್ಲಕ್ಕೂ ಕನಿಷ್ಟವೆಂದರೂ ಹತ್ತರಿಂದ ಹದಿನೈದು ತಿಂಗಳುಗಳು ಬೇಕು. ಈಗಿನ ತುರ್ತು ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತುಸು ಶೀಘ್ರವಾಗಿ ಕೆಲಸ ಮಾಡಬಹುದು. ಹಾಗಿದ್ದರೂ ಜೀಕಾ ವೈರಸ್ ಮಾರುಕಟ್ಟೆಯಲ್ಲಿ ದೊರೆಯಬೇಕಂದರೆ ಕನಿಷ್ಟ ಐದರಿಂದ ಏಳು ವರ್ಷಗಳು ಬೇಕು ಎನ್ನುತ್ತಾರೆ ಅಮೆರಿಕೆಯ ರಾಷ್ಟ್ರೀಯ ಅಲರ್ಜಿ ಹಾಗೂ ಸೋಂಕು ರೋಗಗಳ ಸಂಸ್ಥೆಯ ನಿರ್ದೇಶಕರಾದ ಆಂತೊನಿ ಫಾಸಿ.

ಹಾಗಿದ್ದರೆ ಈ ವೈರಸ್ ಹರಡುವುದನ್ನು ನಾವು ತಡೆಯುವುದು ಹೇಗೆ?

ಸೊಳ್ಳೆಗಳು ಮನುಷ್ಯರನ್ನು ಕಚ್ಚದಂತೆ ನೋಡಿಕೊಳ್ಳುವುದು. ಹೂದಾನಿಗಳು, ಖಾಲಿ ಬಾಟಲ್ಲುಗಳು ಹಾಗೂ ಬಿಸಾಡಿದ ಟಯರುಗಳೇ ಮುಂತಾದ ಏಡಿಸ್ ಸೊಳ್ಳೆಗಳು ಬೆಳೆಯುವಂತಹ ಸಣ್ಣ ಪು್ಟ್ಟ ನಿಂತ ನೀರಿನ ಸೆಲೆಗಳನ್ನು ಕಡಿಮೆ ಮಾಡಿ  ಸೊಳ್ಳೆಗಳ ಸಂಖ್ಯೆಯನ್ನು ಕುಗ್ಗಿಸಲು ಪ್ರಯತ್ನಿಸಬಹುದು. ಸೊಳ್ಳೆ ನುಸುಳದ ಹಾಗೆ ಕಿಟಕಿಗಳನ್ನು ಪರದೆಯಿಂದ ಮುಚ್ಚುವುದು, ಮೈ ಮುಚ್ಚುವಂತೆ ಬಟ್ಟೆ ಧರಿಸುವುದು, ಸೊಳ್ಳೆ ದೂರವಿಡುವ ಕ್ರೀಮ್ ಗಳನ್ನು ಬಳಸುವುದು ಮುಂತಾದ ಕ್ರಮಗಳಿಂದ ವೈಯಕ್ತಿಕವಾಗಿಯೂ ಸೊಳ್ಳೆ ಕಡಿಯದಂತೆ ನೋಡಿಕೊಳ್ಳಬೇಕು. ಬಸುರಿ ಹೆಂಗಸರಿಗಂತು ಇದು ಬಲು ಮುಖ್ಯ  ಆದರೆ ಈ ರೀತಿ ಸೊಳ್ಳೆ ನಿಯಂತ್ರಣದಿಂದಾಗುವ ಫಲಿತಾಂಶಗಳು ಸಾಧಾರಣವಷ್ಟೆ ಎಂದು ಹಿಂದಿನ ಪ್ರಯತ್ನಗಳು ಪಾಠ ಕಲಿಸಿವೆ ಜೊತೆಗೆ ಇವನ್ನು ನಿರಂತರವಾಗಿ ಮುಂದುವರೆಸುವುದು ಕಷ್ಟ.

ಸೊಳ್ಳೆಗಳ ನಿಯಂತ್ರಣಕ್ಕೆ ಬೇರೆ ವಿಧಾನಗಳಿರಬಹುದೇ?

ಸದ್ಯಕ್ಕೆ ಇಲ್ಲ. ಆದರೆ ಕೆಲವು ಮುಂದೆ ದೊರೆಯಬಹುದು. ಆಕ್ಸಿಟೆಕ್ ಎನ್ನುವ ಬ್ರಿಟಿಷ್ ಜೈವಿಕ ತಂತ್ರಜ್ಞಾನ ಕಂಪೆನಿ ಏಡಿಸ್ ಈಜಿಪ್ಟಿ ಸೊಳ್ಳೆಗಳ ಮರಿಗಳು ಬೆಳೆಯದಂತೆ ಹುಟ್ಟುವ ಮೊದಲೇ ಕೊಲ್ಲುವ ಜೀನ್ ಒಂದರ ವಿನ್ಯಾಸ ಮಾಡಿದೆ. ಈ ತಳಿಯ ಗಂಡು ಸೊಳ್ಳೆಗಳನ್ನು ಬೃಹತ್ ಸಂಖ್ಯೆಯಲ್ಲಿ ಬಿಡುಗಡೆ ಮಾಡಿದರೆ, ಅವು ಸ್ಥಳೀಯ ಹೆಣ್ಣು ಸೊಳ್ಳೆಗಳ ಜೊತೆ ಕೂಡುವುವು. ಇದರಿಂದ ಹುಟ್ಟುವ ಸಂತಾನಗಳು ಬೆಳೆಯದೇ ಸಾಯುವುದರಿಂದ ಸೊಳ್ಳೆಯ ಸಂಖ್ಯೆ ಕಡಿಮೆಯಾಗುವುದು. ಇದರ ಪರೀಕ್ಷೆಗಳನ್ನು ನಡೆಸಲಾಗಿದೆ.

ಮತ್ತೊಂದೆಡೆ ಏಡಿಸ್ ಈಜಿಪ್ಟಿ ಸೊಳ್ಳೆಗಳಿಗೆ ವೋಲ್ಬಾಚಿಯ ಎನ್ನುವ ಬೆಕ್ಟೀರಿಯಾವನ್ನು ವಿಜ್ಞಾನಿಗಳು ಸೋಂಕಿಸುತ್ತಿದ್ದಾರೆ. ಇದು ರೋಗಗಳನ್ನು ಹರಡುವ ಸೊಳ್ಳೆಗಳ ಸಾಮರ್ಥ್ಯವನ್ನು ಕಡಿಮೆ ಮಾಡುವುದು. ಇದನ್ನೆಲ್ಲ ಡೆಂಘೀ ರೋಗವನ್ನು ನಿಯಂತ್ರಿಸಲೆಂದು ಸಂಶೋಧಕರು ಮಾಡುತ್ತಿದ್ದರು. ಆದರೆ ಜೀಕಾದ ಈ ದಾಂಧಲೆ ಈ ಪ್ರಯತ್ನಗಳಿಗೆ ಇನ್ನಷ್ಟು ಒತ್ತು ನೀಡಿವೆ.  ಇವೆಲ್ಲವೂ ಸಿದ್ಧವಾಗಬೇಕಾದರೆ ಇನ್ನೂ ಹಲವು ವರ್ಷಗಳು ಬೇಕೆನ್ನುವುದಂತೂ ನಿಜ.

—————

ಸೈನ್ಸ್ ಪತ್ರಿಕೆಯಲ್ಲಿ 29.1.2016 ರಂದು ಪ್ರಕಟವಾದ ಗ್ರೆಚೆನ್ ವೋಗೆಲ್, ಜಾನ್ ಕೋಹೆನ್ ಹಾಗೂ ಮಾರ್ಟಿನ್ ಎನ್ಸೆರಿಂಕ್ ಅವರ ಲೇಖನದ ಅನುವಾದ

Published in: on ಫೆಬ್ರವರಿ 4, 2016 at 7:04 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ನಾಯಿಪಾಡು

ನಾಯಿ ಮನುಷ್ಯನ ಅತ್ಯುತ್ತಮ ಗೆಳೆಯ ಅಂತ ಹೇಳಿಕೆ ಇದೆ. ಇದು ಮನುಷ್ಯನೇ ಹೇಳಿದ್ದು. ನಾಯಿಗಳಿಗೇನಾದರೂ ತಮ್ಮ ಅನಿಸಿಕೆಗಳನ್ನು ಹೇಳಿಕೊಳ್ಳುವುದಕ್ಕೆ ಆಗಿದ್ದರೆ ಬಹುಶಃ ಅವು ಮನುಷ್ಯ ನಮ್ಮ ಬದ್ಧ ವೈರಿ ಅಂದು ಬಿಡುತ್ತಿದ್ದವೇನೋ? ಹೀಗೊಂದು ಆಲೋಚನೆಯನ್ನುಂಟು ಮಾಡಿದೆ ಕೊಲ್ಕತ್ತಾದ ಬೀದಿನಾಯಿಗಳ ಮೇಲೆ ನಡೆದ ಒಂದು ಸಂಶೋಧನೆ.

ನಗರದ ಜನ ನಾಯಿಗಳೆಂದರೆ ಬೆಚ್ಚಿ ಬೀಳುತ್ತಾರಷ್ಟೆ! ಸವಿನಿದ್ರೆ ಸವಿಯುವ ಹೊತ್ತಿನಲ್ಲಿ ಎಚ್ಚರವಾಗಿ ಬೊಗಳುವ ಇವುಗಳು ರಾತ್ರಿಪಾಳಿಯಲ್ಲೇ ಬದುಕುವವರಿಗೂ ಅಸಹನೀಯವೆನ್ನಿಸುತ್ತವೆ. ಕೊಲ್ಕತ್ತಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈಂಟಿಫಿಕ್ ಅಂಡ್ ಎಜ್ಯುಕೇಶನಲ್ ರೀಸರ್ಚ್ (ಐಐಎಸ್ಇಆರ್) ನ ಜೀವವಿಜ್ಞಾನಿ ಅನಿಂದಿತಾ ಭದ್ರ ಮತ್ತು ಸಂಗಡಿಗರು ಹೇಳುವ ಪ್ರಕಾರ ಬೆಚ್ಚಿ ಬೀಳಬೇಕಾದ್ದು ಮನುಷ್ಯರಲ್ಲ ಬೀದಿನಾಯಿಗಳು. ಏಕೆಂದರೆ ತನ್ನ ಅತ್ಯುತ್ತಮ ಗೆಳೆಯರ ಸಾವಿಗೆ ಮಾನವನೇ ಹೇತುವಂತೆ.

ಬೀದಿನಾಯಿಗಳು ಬೀದಿಗೆ ಬೀಳುವ ಮುನ್ನ ಮಾನವನ ಜೊತೆಗಾರರಾಗಿದ್ದವೆಂಬುದಂತೂ ಸತ್ಯ. ಮೂಲತಃ ಕಾಡಿನ ತೋಳಗಳು. ಇವು ಮಾನವನ ಸಹವಾಸಕ್ಕೆ ಬಂದು ಅವನಿಂದ ಕಲಿತವೋ, ಅವನಿಗೆ ಬಾಗಿದುವೋ, ಒಟ್ಟಾರೆ ತೋಳಗಳಂತಲ್ಲದೆ ಸೌಮ್ಯಜೀವಿಗಳಾಗಿ ಬದುಕಿವೆ. ಸೌಮ್ಯಜೀವಿಗಳಾದರೂ, ಮನುಷ್ಯರಿಗೆ ಇವನ್ನು ಕಂಡರೆ ಹೆದರಿಕೆಯೇ ಸರಿ. ಏಕೆಂದರೆ ಜಾಗತಿಕವಾಗಿ ಪ್ರತಿವರ್ಷ ರೇಬೀಸ್ ಖಾಯಿಲೆಯಿಂದ ಸಾಯುವ ಜನರಲ್ಲಿ ಶೇಕಡ ತೊಂಬತ್ತೊಂಬತ್ತು ಜನ ಬೀದಿನಾಯಿ ಕಡಿತದಿಂದಲೇ ಸಾಯುತ್ತಾರಂತೆ. ಅದೂ ಈ ಬೀದಿನಾಯಿಗಳನ್ನು ನಿಯಂತ್ರಿಸದ ಅಭಿವೃದ್ಧಶೀಲ ರಾಷ್ಟ್ರಗಳಲ್ಲಿ ಇದು ಹೆಚ್ಚು.

ಭಾರತ ಎಷ್ಟೇ ಅಭಿವೃದ್ಧಿಯಾಗಿದೆ ಎಂದುಕೊಂಡರೂ, ಬೀದಿನಾಯಿಗಳ ಸಂಖ್ಯೆ ಹೆಚ್ಚಿರುವುದೂ ಸತ್ಯವೇ! ನಗರಗಳಲ್ಲಂತೂ ಬೀದಿನಾಯಿಗಳನ್ನು ನಿಯಂತ್ರಿಸಲು ಹಲವು ಉಪಾಯಗಳನ್ನು ಹುಡುಕಿದ್ದಾರೆ. ಯಾವುದೂ ಸಫಲವಾಗುತ್ತಿಲ್ಲ ಎನ್ನುವುದು ಬೇರೆ ಮಾತು. ಗಂಡು ನಾಯಿಗಳ ಬೀಜವೊಡೆಯುವುದು, ಲಸಿಕೆ ಹಾಕಿ ಗಂಡಸತ್ವ ಕಳೆಯುವುದೇ ಮೊದಲಾದ ವಿಧಾನಗಳಿಂದ ಆರಂಭಿಷಿ ವಿಷ ಹಾಕುವುದು, ತಲೆ ಒಡೆಯುವಂತಹ ವಿಧಾನಗಳನ್ನೂ ಬಳಸಿ ಬೀದಿನಾಯಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ಎಲ್ಲ ಮುನಿಸಿಪಾಲಿಟಿಗಳೂ ಪ್ರಯತ್ನಿಸುತ್ತಿವೆ.

ಈ ಪ್ರಯತ್ನಗಳ ಸುದ್ದಿಯನ್ನು ಓದಿದವರಿಗೆ ಇದೆಂಥ ನಾಯಿಪಾಡು ಮನುಷ್ಯರದ್ದು ಎನ್ನಿಸಬಹುದು. ಎಷ್ಟೇ ಪ್ರಯತ್ನಿಸಿದರೂ ಈ ಬೀದಿನಾಯಿಗಳನ್ನು ಮೆಟ್ಟಲಾಗುತ್ತಿಲ್ಲವಲ್ಲ!  ಭದ್ರ ಅವರ ಪ್ರಕಾರ ಇದಕ್ಕೆ ಕಾರಣ ನಮಗೆ ಬೀದಿನಾಯಿಗಳ ಸಂಸಾರದ ಬಗ್ಗೆ ತಿಳುವಳಿಕೆ ಇಲ್ಲ. ಅರ್ಥಾತ್, ಬೀದಿನಾಯಿಗಳು ಎಷ್ಟು ಕಾಲ ಬದುಕುತ್ತವೆ? ಹೇಗೆ ಬದುಕುತ್ತವೆ? ಹೇಗೆ ಸಾಯುತ್ತವೆ? ಇವೆಲ್ಲದರ ಬಗ್ಗೆ ಮಾಹಿತಿ ಇಲ್ಲ.

ಅದಕ್ಕೆ ಭದ್ರ ಮತ್ತು ಸಂಗಡಿಗರು ಕೊಲ್ಕತ್ತಾದ ಬೀದಿ, ಬೀದಿಗಳನ್ನು ಪದಶಃ ಅಲೆದು ನೂರೆಂಟು ನಾಯಿ ಕುಟುಂಬಗಳ ಚರಿತ್ರೆಯನ್ನು ದಾಖಲಿಸಿದ್ದಾರೆ. ಒಬ್ಬೊಬ್ಬ ವ್ಯಕ್ತಿಯೂ ಒಂದು ಚದರ ಕಿಲೋಮೀಟರು ಫಾಸಲೆಯಲ್ಲಿ ಓಡಾಡಿ ಅಲ್ಲಿರುವ ನಾಯಿಗಳ ಕುಟುಂಬಗಳು, ಅವುಗಳಲ್ಲಿರುವ ಮರಿ, ಮರಿಗಳ ಅಂದಾಜು ವಯಸ್ಸು, ಇವುಗಳನ್ನು ಗಮನಿಸಿ ದಾಖಲಿಸಿದ್ದಾರೆ. ಅನಂತರ ಈ ನಾಯಿ ಸಮಾಜದಲ್ಲಿ ಸಾಯದೇ, ಮನುಷ್ಯರ ಕೈಗೆ ಸಿಕ್ಕದೆ ಉಳಿದವುಗಳೆಷ್ಟು ಎಂದು ಲೆಕ್ಕ ಹಾಕಲು ಪ್ರಯತ್ನಿಸಿದ್ದಾರೆ.

ನಾಯಿಮರಿಗಳು ಸುಮಾರು ಮೂರು ತಿಂಗಳವರೆಗೂ ತಾಯ ಆಸರೆಯಲ್ಲಿಯೇ ಬೆಳೆಯುತ್ತವೆ. ಅನಂತರ ತಾಯಿ ಯಾರೋ, ತಾವು ಯಾರೋ ಎನ್ನುವಂತೆ ಸ್ವತಂತ್ರ ಜೀವಿಗಳಾಗುತ್ತವೆ. ಸುಮಾರು ಆರು ತಿಂಗಳ ವೇಳೆಗೆ ಈ ಬಿಡಾಡಿಗಳೂ ವಯಸ್ಸಿಗೆ ಬಂದು ಯುವಮರಿಗಳಾಗುತ್ತವೆ. ಇಷ್ಟು ಆಗುವವರೆಗೂ ಅವು ಸಮಾಜದಲ್ಲುಳಿದರೆ ಆ ಸಮಾಜದ ಬೆಳವಣಿಗೆಗೆ ಕಾರಣವಾಗುತ್ತವಷ್ಟೆ?

ಆದ್ದರಿಂದ ಏಳುತಿಂಗಳ ವಯಸ್ಸಾಗುವವರೆಗೆ ಈ ನೂರೆಂಟು ಕುಟುಂಬದಲ್ಲಿ ಮರಿಗಳೆಷ್ಟು ಉಳಿದುವು ಎನ್ನುವುದೇ ಇವರ ಸಂಶೋಧನೆಯ ಸಾರಾಂಶ. ಅನಂತರ ಮರಿಗಳು ಸಾವಿಗೀಡಾದರೆ ಆ ಸಾವಿನ ಕಾರಣವನ್ನೂ ದಾಖಲಿಸಿದ್ದಾರೆ. ಉದಾಹರಣೆಗೆ, ಅಪಘಾತ, ಮನುಷ್ಯರ ಕಾಟದಿಂದ ಸಾವು ಅಥವಾ ಮನುಷ್ಯರು ಹೊತ್ತೊಯ್ದದ್ದನ್ನೂ ಸಾವೆಂದು ಪರಿಗಣಿಸಿದ್ದಾರೆ.

ಮರಿಗಳು ಮೂರು ತಿಂಗಳಾಗುವವರೆಗೂ ಸಹಜ ಸಾವೇ ಹೆಚ್ಚಂತೆ. ಮನುಷ್ಯನಿಂದಾಗಿ ಸಾಯುವ ಮೂರು ತಿಂಗಳೊಳಗಿನ ವಯಸ್ಸಿನ ಮರಿಗಳ ಪ್ರಮಾಣ ಕೇವಲ ಶೇಕಡ 3. ಆದರೆ ಅದೇ ಮೂರರಿಂದ ಏಳು ತಿಂಗಳಾಗುವವುದರೊಳಗೆ ಇವುಗಳಲ್ಲಿ ಬಹುತೇಕ ಮರಿಗಳು ಮನುಷ್ಯರ ವಾಹನಕ್ಕೆ ಸಿಕ್ಕೋ, ಅವರು ಉಣ್ಣಿಸಿದ ವಿಷದಿಂದಲೋ ಅಥವಾ ಮುನಿಸಿಪಾಲಿಟಿಯವರ ಬಡಿಗೆಗೆ ಸಿಕ್ಕೋ ಸಾವನ್ನಪ್ಪುತ್ತವೆ. ಇಂತಹ ಮರಿಗಳ ಪ್ರಮಾಣ ಸುಮಾರು ಶೇಕಡ 56 ರಷ್ಟು. ಅಂದರೆ ಸಮಾಜದಿಂದ ಅಳಿದು ಹೋಗುವ ಯುವಮರಿಗಳಿಗೆ ಮನುಷ್ಯನೇ ಯಮ!

ಮತ್ತೊಂದು ವಿಚಿತ್ರವೆಂದರೆ ಇವುಗಳಲ್ಲಿ ಹೆಣ್ಣು ಮರಿಗಳು ಹೆಚ್ಚೆಚ್ಚು ವಾಹನ ಅಪಘಾತಗಳಲ್ಲಿ ಸಾವನ್ನಪ್ಪಿದ್ದು. ‘ಇದು ನಿಜವೋ ಅಥವಾ ಗಂಡುಗಳನ್ನು ಸಮೂಹದಿಂದ ಮೊದಲೇ ತೆಗೆದುಕೊಂಡು ಹೋಗಿದ್ದರಿಂದ ಈ ರೀತಿ ತೋರುತ್ತಿದೆಯೋ ಗೊತ್ತಿಲ್ಲ” ಎನ್ನುವ ಭದ್ರ, ಅದನ್ನು ಪರಿಶೀಲಿಸಲು ಕಂಪ್ಯೂಟರ್ ಸಿಮ್ಯುಲೇಶನ್ (ಅಣಕ ಅಧ್ಯಯನ) ಪರೀಕ್ಷೆಯನ್ನೂ ಮಾಡಿದ್ದಾರೆ. ಇದೂ ಕೂಡ, ಏಳು ತಿಂಗಳೊಳಗಿನ ಮರಿಗಳಲ್ಲಿ ಹೆಣ್ಣುಗಳೇ ಸಾವನ್ನಪ್ಪುವುದು ಹೆಚ್ಚು ಎಂದು ತಿಳಿಸಿದೆ.

ಇದರಿಂದ ಬೀದಿನಾಯಿಗಳ ಸಂಖ್ಯೆ ಕಡಿಮೆಯಾಗಬೇಕಲ್ಲವೇ? ಹೌದು. ಆದರೆ ಏಳು ತಿಂಗಳ ನಂತರ ಬದುಕುಳಿದ ನಾಯಿಗಳಲ್ಲಿ ಈ ಅಸಮತೋಲನ ಹೇಗೋ ಸರಿ ಹೋಗಿ ಬಿಡುತ್ತಿದೆ. ಬಹುಶಃ ಈ ವಯಸ್ಸಿನಲ್ಲಿ ಸಾವಿನ ರೀತಿ ಬದಲಾಗುತ್ತಿರಬಹುದು ಎನ್ನುತ್ತಾರೆ ಭದ್ರ.

ಏನೇ ಇರಲಿ. ಸನ್ಮಿತ್ರನಿಗೆ ಸಾವು ತರುವಂತಹ ಮಾನವರು ನಾವು ಎನ್ನುವುದು ಮಾತ್ರ ನಿಜ.

Manabi Paul, Sreejani Sen Majumder, Shubhra Sau, Anjan K. Nandi & Anindita Bhadra, High early life mortality in freeranging dogs is largely influenced by humans , Scientific RepoRts | 6:19641 | DOI: 10.1038/srep19641, 2016, published 25 Jan. 2016

Published in: on ಜನವರಿ 25, 2016 at 8:29 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಕಾಫಿ, ಕಾಫಿ!

ಕಾಫಿ ಕುಡಿಯದ ದಕ್ಷಿಣ ಕರ್ನಾಟಕದ ಮನೆ ಉಂಟೆ. ಹೇಳಿ, ಕೇಳಿ ಮದ್ರಾಸಿನ ಅಯ್ಯರ್‌ ಪೀಳಿಗೆಗೆ ಸೇರಿದವ. ಕಾಫಿ ಮಾಮಿ ಅಂತಲೇ ಹೆಸರು ಪಡೆದ ಮಹಿಳೆಯರ ಸಂತಾನ. ಅಂತಹವನಿಗೆ ಕಾಫಿ ಎಂದರೆ ಹೇಳಬೇಕೆ! ಕಾಫಿ ನಮ್ಮ ನಾಡಿನ ಬೆಳೆಯಲ್ಲದಿರಬಹುದು, ಆದರೆ ನಮ್ಮ ನರನಾಡಿಗಳಲ್ಲಿ ಒಂದಾಗಿಬಿಟ್ಟಿದೆ ಎಂದರೆ ತಪ್ಪೇನಲ್ಲ! ಕಾಲೇಜಿನಲ್ಲಿ ಓದುತ್ತಿದ್ದಾಗ ಕ್ಯಾಂಪಸ್‌ನ ಮೂಲೆಯಲ್ಲಿ ತಳ್ಳುಗಾಡಿಯಿಟ್ಟುಕೊಂಡು ಕಾಫಿ ಮಾಡಿಕೊಡುತ್ತಿದ್ದ ಚಿಕ್ಕಣ್ಣನ ನೆನಪಾಗುತ್ತದೆ. ನಾನು ಹೋದ ಕೂಡಲೇ ಕಾಫಿ ಬೀಜವನ್ನೇ ತಿಂದಂತೆ ಕಹಿ ಮುಖ ಮಾಡಿಕೊಂಡು ಸ್ಟ್ರಾಂಗ್‌ ಕಾಫಿ ಮಾಡಿ ಕೊಡುತ್ತಿದ್ದ. ಕಹಿ ಮುಖ ಏಕೆಂದರೆ ಮೂವರಿಗೆ ಉಪಯೋಗಿಸಬಹುದಾದ ಡಿಕಾಕ್ಷನ್‌ ನನಗೊಬ್ಬನಿಗೇ ಹಾಕಬೇಕಾಗುತ್ತಿತ್ತು. ಇಲ್ಲದಿದ್ದರೆ ಬಿಡುತ್ತಿರಲಿಲ್ಲವೆನ್ನಿ. ಗೆಳೆಯ ಸಂಪತ್ತುವಿನ ಅಮ್ಮನಂತೂ ನನಗಾಗಿ ವಿಶೇಷ ಕಾಫಿ ಮಾಡಿ ಕೊಡುತ್ತಿದ್ದರು. ಏಕೆಂದರೆ ನನ್ನಷ್ಟು ಸ್ಟ್ರಾಂಗ್‌ ಕಾಫಿ ಕುಡಿಯುವವರು ಅವರ ಮನೆಯಲ್ಲಿ ಅವರೊಬ್ಬರೇ! ’ನಿನಗೆ ಕಾಫಿ ಕುಡಿಯುವುದು ರಕ್ತದಲ್ಲೇ ಬಂದಿದೆ,’ ಅಂತ ಲೇವಡಿ ಮಾಡುತ್ತಿದ್ದರು ಕೂಡ. ಆದರೆ ಮೂವತ್ತು ವರ್ಷಗಳ ನಂತರ ಈಗ ಕಾಫಿ ಕುಡಿಯುವುದಿರಲಿ ಅದರ ಪರಿಮಳವನ್ನೂ ಮೂಸುವಿದಿಲ್ಲ. ಏಕೆಂದರೆ ಕಾಫಿ ಕುಡಿದರೆ ಅಸಿಡಿಟಿ ಹೆಚ್ಚಾಗುತ್ತದೆ. ತೇಗು ಬರುತ್ತದೆ. ತಲೆನೋವು ಗ್ಯಾರಂಟಿ. ನನ್ನ ಮಗಳೂ ತಲೆನೋವಿನ ಕಾರಣದಿಂದಲೇ ಕಾಫಿ ಕುಡಿಯುವುದನ್ನು ಬಿಟ್ಟಿದ್ದಾಳೆ. ನನ್ನವಳು ಕೆಲವು ದಿನ ಕಾಫಿ ಪುಡಿ ಮಾರಾಟ ಮಾಡಿದಳಾದರೂ ಕಾಫಿ ಕುಡಿಯುವುದಿಲ್ಲ. ಮಗನಂತೂ ಆ ಬಗ್ಗೆ ಚಿಂತೆ ಮಾಡಿದವನೇ ಅಲ್ಲ. ಈಗ ಚಿಕ್ಕಮಗಳೂರಿನ ಗೆಳೆಯರು ಬಿಟ್ಟಿ ಕಾಫಿ ಬೀಜ ತಂದು ಕೊಟ್ಟರೂ ಸಂಕೋಚದಿಂದ ಬೇಡ ಅನ್ನುವ ಪರಿಸ್ಥಿತಿ ಮನೆಯಲ್ಲಿ. ಕಾಫಿ ಹಿಡಿಸದಿರುವುದಕ್ಕೆ ಕಾರಣವೇನು ಅಂತ ಎಷ್ಟೋ ಬಾರಿ ಯೋಚಿಸಿದ್ದೇನೆ. ಉದ್ಯೋಗನಿಮಿತ್ತ ದೂರದ ದೆಹಲಿಗೆ ಹೋಗಿದ್ದಾಗ ಅಲ್ಲಿ ಒಳ್ಳೆಯ ಕಾಫಿ ಹುಡಿ ದೊರೆಯದ್ದು ಕಾರಣವೋ? ಅಥವಾ ಏಕಾಂಗಿಯಾಗಿದ್ದಾಗ ಕಾಫಿ ಕಷಾಯ ಮಾಡಿಕೊಳ್ಳುವ ರೇಜಿಗೆಯನ್ನು ತಪ್ಪಿಸಿಕೊಳ್ಳಲು ಟೀ ಮೊರೆ ಹೋದೆನೋ? ಅಥವಾ ನಿಜವಾಗಿಯೂ ಕಾಫಿ ನನಗೆ ಒಗ್ಗುವುದಿಲ್ಲವೋ? ಗೊಂದಲವಾಗಿತ್ತು. ಈವತ್ತು ಪಿಎಲ್‌ಓಎಸ್‌ ಜೆನೆಟಿಕ್ಸ್‌ ಓದುತ್ತಿದ್ದಾಗ ನನ್ನ ಸಮಸ್ಯೆಗೆ ಕಾರಣ ಸಿಕ್ಕಿದೆ. ಪಿಎಲ್‌ಓಎಸ್‌ ಜೆನೆಟಿಕ್ಸ್‌ ಪತ್ರಿಕೆಯಲ್ಲಿ ಪ್ರಕಟವಾಗಿರುವ ಪ್ರಬಂಧವೊಂದು ಕಾಫಿಯನ್ನು ಕುಡಿಯುವುದು ನಮ್ಮ ರಕ್ತದಲ್ಲಿ ಅಲ್ಲ, ಅನುವಂಶೀಯ ಗುಣಗಳಲ್ಲೇ ಇರಬಹುದು ಎನ್ನುವ ಉತ್ತೇಜಕರ ಸುದ್ದಿಯನ್ನು ವರದಿ ಮಾಡಿದೆ.

ಅಮೆರಿಕೆಯ ಬ್ರಿಘಾಮ್‌ ನಲ್ಲಿರುವ ಹಾರ್ವರ್ಡ್‌ ಮೆಡಿಕಲ್‌ ಸ್ಕೂಲ್‌ ಮತ್ತು ಮಹಿಳೆಯರ ಆಸ್ಪತ್ರೆ ಹಾಗೂ ನಾರ್ತ್‌ ಕೆರೋಲಿನಾ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಪ್ರಕಟಿಸಿರುವ ಈ ಪ್ರಬಂಧದ ಪ್ರಕಾರ ಯಾರು ಎಷ್ಟು ಕಾಫಿ ಕುಡಿಯುತ್ತಾರೆ ಎನ್ನುವುದಕ್ಕೆ ಅವರಲ್ಲಿರುವ ಎರಡು ಜೀನ್‌ಗಳು ಕಾರಣವಿರಬಹುದಂತೆ. ಜೀನ್‌ ಎಂದರೆ ನಮ್ಮ ಗುಣಗಳನ್ನು ನಿರ್ದೇಶಿಸುವ ರಾಸಾಯನಿಕ ಘಟಕಗಳು ಅನ್ನೋದು ಗೊತ್ತಲ್ಲ. ಒಟ್ಟು ೩೦,೦೦೦ ಜೀನ್‌ಗಳು ನಮ್ಮಲ್ಲಿ ಇವೆಯಂತೆ. ಇವು ಗುಣಗಳನ್ನು ನಿರ್ದೇಶಿಸುವಂಥವು. ಇದಲ್ಲದೆ ಇನ್ನೂ ಲಕ್ಷಾಂತರ ಕೆಲಸವಿಲ್ಲದ ಜೀನ್‌ಗಳೂ ಇವೆಯಂತೆ. ಇವೆಲ್ಲವನ್ನೂ ಒಟ್ಟಾಗಿ ಜೀನೋಮ್‌ ಅನ್ನುತ್ತಾರೆ. ಇತ್ತೀಚೆಗೆ ಈ ’ಓಂ’ಕಾರದಲ್ಲಿಯೇ ಹಸಿವು, ಹುಟ್ಟು, ಸಾವು, ನಿದ್ರೆ, ಊಟ ಮತ್ತು ಸೆಕ್ಸ್‌ ಎಲ್ಲವಕ್ಕೂ ಕಾರಣ ಹುಡುಕುತ್ತಿದ್ದಾರೆ. ಮೂವತ್ತುಮೂರು ಜನರ ಈ ತಂಡ ಮಾಡಿದ್ದೂ ಅದನ್ನೇ!

ಕಾಫಿ ನಿದ್ರೆ ಓಡಿಸಿ, ಎಚ್ಚರಿಸುವುದಕ್ಕೆ ಅದರಲ್ಲಿರುವ ಕೆಫೀನ್‌ ಕಾರಣ ಅಂತ ಮೇಷ್ಟರು ಹೇಳಿಕೊಟ್ಟಿದ್ದು ಮರೆತಿಲ್ಲ. ಆದರೆ ಈ ಕೆಫೀನ್‌ ಅನ್ನು ಎಲ್ಲರ ದೇಹವೂ ಒಂದೇ ಸಮನಾಗಿ ಅರಗಿಸಿಕೊಳ್ಳುವುದಿಲ್ಲ ಅನ್ನುವುದು ಇತ್ತೀಚಿನ ಸುದ್ದಿ. ಕೆಲವರಿಗೆ ನಿದ್ರೆ ಬಾರದಿರಬೇಕಾದರೆ ಅತಿ ಹೆಚ್ಚು ಕೆಫೀನ್‌ ಬೇಕಂತೆ. ಇನ್ನು ಕೆಲವರಿಗೆ ಕಾಫಿ ಮೂಸಿದರೂ ಸಾಕು ನಿದ್ರೆ ಹಾರಿ ಹೋಗುತ್ತದಂತೆ. ಕೆಫೀನ್‌ನ ಈ ಉತ್ತೇಜಕ ಗುಣ ಒಬ್ಬೊಬ್ಬರಲ್ಲಿ ಒಂದೊಂದು ತೆರನಾಗಿರುವುದಕ್ಕೆ ಅವರವರ ಜೀನೋಮ್‌ಗಳೇ ಕಾರಣವಿರಬಹುದು ಎನ್ನುವುದು ಒಂದು ಗುಮಾನಿ.

ಇದಕ್ಕಾಗಿ ಈ ತಂಡ ದೇಹದಲ್ಲಿ ಕೆಫೀನ್‌ ಅರಗಿಸಲು ನೆರವಾಗುತ್ತದೆಂದು ಈ ಹಿಂದೆ ಗಮನಿಸಿದ್ದ CYP1A2 ಎನ್ನುವ ಜೀನ್‌ ಅನ್ನೂ, ಅದನ್ನು ಎಚ್ಚರಿಸುವ AHR  ಎನ್ನುವ ಮತ್ತೊಂದು ಜೀನ್‌ ಗಳ ಅಧ್ಯಯನ ಮಾಡಿದ್ದಾರೆ. ಸುಮಾರು ೪೭೦೦೦ ಅಮೆರಿಕನ್ನರ ಜೀನೋಮ್‌ಗಳನ್ನು ಒಬ್ಬರಿನ್ನೊಬ್ಬರದರ ಜೊತೆಗೆ ತಾಳೆ ಹಾಕಿದ್ದಾರೆ. ಜೊತೆಗೆ ಅವರು ಎಷ್ಟೆಷ್ಟು ಕಾಫಿ ಕುಡಿದು, ಎಷ್ಟೆಷ್ಟು ಕೆಫೀನ್‌ ದೇಹಕ್ಕೆ ಕೂಡಿಸಿಕೊಳ್ಳುತ್ತಾರೆ ಎಂದೂ ದಾಖಲಿಸಿದ್ದಾರೆ. ಇವೆರಡನ್ನೂ ತಾಳೆ ನೋಡಿದಾಗ CYP1A2 ಮತ್ತು AHR ಗಳು ಎರಡೂ ಇದ್ದವರು ಸಾಮಾನ್ಯವಾಗಿ ದಿನಕ್ಕೆ ಉಳಿದವರಿಗಿಂತಲೂ ಸುಮಾರು ೪೦ ಮಿಲಿಗ್ರಾಂನಷ್ಟು ಹೆಚ್ಚು ಕೆಫೀನ್‌ ಕೂಡಿಸಿಕೊಳ್ಳುತ್ತಾರಂತೆ.  ಒಂದು ದೊಡ್ಡ ಬಾಟಲಿ ಕೋಲಾದಲ್ಲಿ ಒಂದೆರಡು ಮಿಲಿಗ್ರಾಂನಷ್ಟು ಕೆಫೀನ್‌ ಅಷ್ಟೆ ಇರುತ್ತದೆ ಅನ್ನುವುದನ್ನು ನೆನಪಿಡಿ. ಈ ಎರಡೂ ಜೀನ್‌ಗಳು ಇಲ್ಲದವರು ಅತಿ ಕಡಿಮೆ ಕಾಫಿ ಕುಡಿಯುತ್ತಾರಂತೆ.

ಅಂದರೆ ಕಾಫಿ ಕುಡಿಯುವುದು ಚಟವಲ್ಲ, ಅನುವಂಶೀಯ ಗುಣ ಅಂದಾಯಿತಲ್ಲ. ಕಾಫಿ (ಕೆಫೀನ್‌)ಗೂ ಕೆಲವರ ನಡವಳಿಕೆಗೂ ಏನಕೇನ ಸಂಬಂಧವಿದೆ. ಅತಿ ನಿದ್ರೆ, ನಿದ್ರಾಹೀನತೆ, ಚುರುಕುತನ, ಬೌದ್ಧಿಕ ಹಾಗೂ ದೈಹಿಕ ಸಾಮರ್ಥ್ಯವೆಲ್ಲವಕ್ಕೂ ಕಾಫಿ ಸೇವನೆಗೂ ಸಂಬಂಧವಿದೆ. ಹಾಗಿದ್ದ ಮೇಲೆ ಕಾಫಿ ಸೇವನೆ ರಕ್ತಗುಣ ಎನ್ನುವುದರಲ್ಲಿ ತಪ್ಪೇನಿದೆ?

ಏನಿಲ್ಲ. ಆದರೆ ಇದುವರೆವಿಗೂ ಕೇವಲ ಖಾಯಿಲೆಗಳಿಗೂ, ಜೀನೋಮ್‌ಗೂ ತಳುಕು ಹಾಕುತ್ತಿದ್ದರಷ್ಟೆ. ಆದರೆ ಈಗ ಕಾಫಿ ಸೇವನೆಯಂತ ನಿತ್ಯಕರ್ಮಕ್ಕೂ, ಅನುವಂಶೀಯತೆಯೇ ಕಾರಣ ಎನ್ನುತ್ತಿದ್ದಾರಲ್ಲ! ಅದೇ ಪ್ರಶ್ನೆ. ಹಾಗಿದ್ದರೆ ಕಾಫಿಯ ಜೊತೆಗೆ ಪೇಪರ್‌ ಓದುವುದಕ್ಕೂ, ಕಾಫಿ ಕುಡಿಯದೆಯೇ ಶೌಚಕ್ಕೆ ಹೋಗದಿರುವುದಕ್ಕೂ, ಕಛೇರಿಯಲ್ಲಿ ಕೆಲಸ ಮಾಡಲು ಸೋಮಾರಿತನ ಬಂದಾಗಲೆಲ್ಲ ಕಾಫಿ ಕುಡಿಯುವುದೂ ಅನುವಂಶೀಯವೇ ಇರಬಹುದೇ?

ಕಾಫಿ ಮಾಡುವ ಯಂತ್ರವನ್ನು ಹಾಸಿಗೆಯ ಪಕ್ಕದಲ್ಲಿಯೇ ಇಟ್ಟುಕೊಂಡು ಮಲಗುವ ಅಮೆರಿಕನ್ನರಿಗೆ ಇಂತಹ ಆಲೋಚನೆ ಬಂದಿರುವುದು ಸಹಜವೇ. ನಮ್ಮ ಮದ್ರಾಸ್‌ ಮಾಮಿ ಇದಕ್ಕೆ ಏನು ಹೇಳುತ್ತಾರೋ ಕೇಳಬೇಕು!

Published in: on ಏಪ್ರಿಲ್ 7, 2011 at 7:51 ಅಪರಾಹ್ನ  Comments (3)  

ಭವಿಷ್ಯದ ತಿಜೋರಿಯಲ್ಲಿ ಭಾರತದ ಬೀಜಗಳು!

ಉತ್ತರ ಧ್ರುವ ಪ್ರದೇಶದಲ್ಲಿ ಸ್ವಾಲ್‌ಬಾರ್ಡ್‌ ಗ್ಲೋಬಲ್‌ ಸೀಡ್‌ ವಾಲ್ಟ್‌ ಯೋಜನೆ ನಿರ್ಮಿಸುತ್ತಿರುವ “ಶೀತಲ ಬೀಜ ತಿಜೋರಿ”ಯಲ್ಲಿ ಭಾರತದ ಕೃಷಿ ಪೈರುಗಳ ಮೂರು ತಳಿಗಳ ಬೀಜಗಳು ಭದ್ರತೆಗಾಗಿ ಸೇರ್ಪಡೆಯಾಗಿವೆ. ಭತ್ತದ ಐಆರ್‌-೩೬, ಐಆರ್‌-೬೪ ತಳಿಗಳ ಬೀಜಗಳು ಮತ್ತು ಗೋಧಿಯ ಲೆರ್ಮಾ ರೋಜೊ, ಸೊನೊರೊ-೬೪ ಮತ್ತಿ ರಿಡ್ಲಿ ತಳಿಗಳ ಬೀಜಗಳನ್ನು ಕಳೆದ ಜೂನ್‌ ೧೯, ೨೦೦೮ರಂದು ನಾರ್ವೆ ದೇಶದ ಉತ್ತರ ತುದಿಯಲ್ಲಿ ಹಿಮಾಚ್ಛಾದಿತ ಬೆಟ್ಟವೊಂದರ ಅಡಿಯಲ್ಲಿ ಕೊರೆದಿರುವ ಬೀಜ ತಿಜೋರಿಯಲ್ಲಿ ಇಡಲಾಯಿತು. ಈ ಸಂದರ್ಭದಲ್ಲಿ ಭಾರತದ ಕೇಂದ್ರ ಸರಕಾರದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿರುವ ಶ್ರೀ ಕಪಿಲ್‌ ಸಿಬಲ್‌ರವರೂ ಅಲ್ಲಿ ಉಪಸ್ಥಿತರಿದ್ದರು ಎಂದು ಜುಲೈ ೧, ೨೦೦೮ರಂದು ಪ್ರೆಸ್‌ ಇನ್‌ಫರ್ಮೇಶನ್‌ ಬ್ಯೂರೊ ಬಿಡುಗಡೆ ಮಾಡಿದ ಪ್ರಕಟಣೆಯೊಂದು ತಿಳಿಸಿದೆ.

ಆಧುನಿಕ ಕೃಷಿ ಪದ್ಧತಿಯಿಂದಾಗಿ ಮರೆಯಾಗುತ್ತಿರುವ ಧಾನ್ಯಗಳ ಸ್ಥಳೀಯ ಹಾಗೂ ವಿಶಿಷ್ಟ ತಳಿಗಳು ಸಂಪೂರ್ಣ ಕಾಣೆಯಾಗುವ ಮುನ್ನವೇ ಅವುಗಳ ತಳಿಗುಣಗಳನ್ನು ಕಾದಿಡುವ ಹಂಬಲದಿಂದ ಹಲವಾರು ರಾಷ್ಟ್ರಗಳು ಒಟ್ಟಾಗಿ ಸ್ವಾಲ್‌ಬಾರ್ಡ್‌ ಗ್ಲೋಬಲ್‌ ಸೀಡ್‌ ವಾಲ್ಟ್‌ ಎನ್ನುವ ಯೋಜನೆಯನ್ನು ಹಮ್ಮಿಕೊಂಡಿವೆ. ಅತಿ ಶೀತಲವಾಗಿರುವ ನೆಲದಲ್ಲಿ ತಿಜೋರಿ ಕೊರೆದು ಅಲ್ಲಿ ಬೀಜಗಳನ್ನು ಕಾದಿಡುವುದರಿಂದ, ಅವು ಸಹಸ್ರಾರು ವರ್ಷಗಳ ಕಾಲ ಸಾಯದಂತೆ ಉಳಿಸಬಹುದು ಎನ್ನುವ ಆಶಯ ಈ ಯೋಜನೆಗಿದೆ. ವರ್ಷವೆಲ್ಲವೂ ಹಿಮ ಕವಿದಿರುವ ಲೋಂಗಿಯೆರ್‌ಬಿಯೆನ್‌ ಎನ್ನುವ ಸ್ಥಳದಲ್ಲಿ ತಿಜೋರಿ ನಿರ್ಮಾಣ ಕಾರ್ಯವೂ ಸಾಗಿದೆ. ಇಲ್ಲಿ ವರ್ಷವೆಲ್ಲವೂ ಉಷ್ಣತೆ -೨೦ರಿಂದ -೩೦ ಡಿಗ್ರಿ ಸೆಲ್ಶಿಯಸ್‌ ಇರುತ್ತದೆಯಂತೆ.  ಒಂದು ವೇಳೆ ಹಸಿರುಮನೆ ಪರಿಣಾಮದಿಂದಾಗಿ ಭೂಮಿಯ ಮೇಲೆ ಕವಿದಿರುವ ಹಿಮದ ಬೆಟ್ಟವೆಲ್ಲ ಕರಗಿದರೂ, ಇಲ್ಲಿನ ಉಷ್ಣತೆ -೩ ಡಿಗ್ರಿ ತಲುಪಲು ಹಲವಾರು ವಾರಗಳೇ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಇಲ್ಲಿಟ್ಟ ಬೀಜಗಳ ನಿಧಿ ಭದ್ರವಾಗಿರುತ್ತದೆ ಎನ್ನುವ ಆಶಯವಿದೆ.

ಬಿಲ್‌ ಗೇಟ್ಸ್‌ ದತ್ತಿ ನಿಧಿಯ ಜೊತೆಗೆ ಬ್ರಿಟನ್‌, ನಾರ್ವೆ, ಆಸ್ಟ್ರೇಲಿಯಾ, ಸ್ವಿಟ್ಜರ್ಲಂಡ್‌, ಸ್ವೀಡನ್‌ ಗಳಲ್ಲದೆ ಭಾರತ, ಬ್ರೆಜಿಲ್‌, ಕೊಲಂಬಿಯಾ, ಇಥಿಯೋಪಿಯಾಗಳೂ ಈ ಕಾರ್ಯದಲ್ಲಿ ಕೈಗೂಡಿಸಿವೆ. ಈ ತಿಜೋರಿಯ ಪ್ರಪ್ರಥಮ ಶಿಲಾನ್ಯಾಸವನ್ನು ಮೊನ್ನೆ ನಡೆಸಲಾಯಿತು. ಅದೇ ಸಂದರ್ಭದಲ್ಲಿ ಭಾರತದ ಈ ಐದು ತಳಿಗಳನ್ನು ಕಾದಿಡಲು ತಿಜೋರಿಗೆ ಸಲ್ಲಿಸಲಾಯಿತು.

ಈ ಬಗ್ಗೆ ಸರಕಾರಿ ನೀಡಿರುವ ಪತ್ರಿಕಾ ಪ್ರಕಟಣೆ ಇಲ್ಲಿದೆ.

ಬೀಜವನ್ನೇನೋ ಉಳಿಸಬಹುದು. ಆದರೆ ಬೀಜವನ್ನು ಉತ್ತು, ಬಿತ್ತು, ಅನ್ನ ಬೆಳೆವವರನ್ನು ಉಳಿಸುವುದು ಹೇಗೆ ಎನ್ನುವುದಕ್ಕೂ ವಿಜ್ಞಾನಿಗಳು ಉಪಾಯ ಹುಡುಕಬೇಕು ಎನ್ನೋಣವೆ!

Published in: on ಜುಲೈ 4, 2008 at 6:59 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ